Friday, October 21, 2011

ಸ್ಪೀಡ್‌ ಜಮಾನ!
ಸೂರ್ಯನಿಂದ ಭೂಮಿ 14,95,97,890 ಕಿಮೀ ದೂರವಿದೆ ಎಂದು ಮಿಡ್‌ಟರ್ಮ್‌ ಎಕ್ಸಾಮ್‌ಗೆ ಹುಡುಗರು ಉರು ಹೊಡೆಯುತ್ತಿರುವಾಗಲೇ ಜಿನೀವಾದಿಂದ ಸುದ್ದಿಯೊಂದು ಬೆಳಕಿನಷ್ಟೇ ವೇಗವಾಗಿ ಬಂದು ಅಪ್ಪಳಿಸಿದೆ. ಅದೇನಾದರೂ ನಿಜವಾಗಿಬಿಟ್ಟರೆ ನಾವು ಈವರೆಗೆ ಓದಿದ ಭೌತ ವಿಜ್ಞಾನವನ್ನೆಲ್ಲ ಮರೆಯಬೇಕಾಗುತ್ತದೆ.
ಭೌತವಿಜ್ಞಾನದ  ಜಗತ್ತಿನ ಅತಿ ದೊಡ್ಡ  ಪ್ರಯೋಗಾಲಯ ಯುರೋಪಿಯನ್‌ ಅರ್ಗನೈಸೇಷನ್‌ ಫಾರ್‌ ನ್ಯೂಕ್ಲಿಯರ್‌ ರೀಸರ್ಚ್‌ (ಸಿಇಆರ್‌ಎನ್‌)ನಿಂದ ಕಳೆದ ವಾರ ಬಂದ ಸುದ್ದಿ ಇದಾಗಿತ್ತು. ನಾವು ಈವರೆಗೆ ಜಗತ್ತಿನಲ್ಲಿ ಅತಿ ವೇಗದಲ್ಲಿ ಚಲಿಸುವ ವಸ್ತು ಬೆಳಕು  ಎನ್ನುವುದನ್ನು ನಂಬಿಕೊಂಡಿದ್ದೆವು. ಆದರೆ ಈ ಹೊಸ ಸುದ್ದಿ ಪ್ರಕಾರ, ಬೆಳಕಿಗಿಂತ ವೇಗವಾಗಿ ನ್ಯೂಟ್ರಿನೋ ಎಂಬ ಕಣ ಚಲಿಸುತ್ತದೆ.
ಅಂದರೆ, 1905ರಲ್ಲಿ ಆಲ್ಬರ್ಟ್‌ ಐನ್‌ಸ್ಟೀನ್‌ ಮಂಡಿಸಿದ್ದ ವಿಶೇಷ ಸಾಪೇಕ್ಷ ಸಿದ್ಧಾಂತವನ್ನೇ ಸಿಇಆರ್‌ಎನ್‌ ವಿಜ್ಞಾನಿಗಳು ಪ್ರಶ್ನಿಸಿದಂತಾಗಿದೆ. ಬೆಳಕು ಪ್ರತಿ ಸೆಕೆಂಡ್‌ಗೆ ಮೂರು ಲಕ್ಷ ಕಿಮೀ ವೇಗವಾಗಿ ಚಲಿಸುತ್ತದೆ ಎಂದು ಐನ್‌ಸ್ಟೀನ್‌ ಹೇಳಿದ್ದ.  ಆದರೆ, ಈ ಪ್ರಯೋಗದಲ್ಲಿ ನ್ಯೂಟ್ರಿನೋ ಎಂಬ ಪುಟ್ಟ ಕಣ ಬೆಳಕಿಗಿಂತ 60 ನ್ಯಾನೊ ಸೆಕೆಂಡ್‌ಗಳಷ್ಟು ಬೇಗ ಚಲಿಸುತ್ತದೆ ಎಂಬುದು ಶ್ರುತಪಡಿಟ್ಟಿದೆ.

ಹಾಗೆಂದು ಇದು ರಾತ್ರೋರಾತ್ರಿ `ಬೆಳಕಿಗೆ' ಬಂದ ವಿಚಾರವಲ್ಲ. ಕಳೆದ ಮೂರು ವರ್ಷಗಳಿಂದ ನಡೆಸಲಾದ ಪ್ರಯೋಗದ ಫಲ. ಇಟಲಿ ಮತ್ತು ಫ್ರಾನ್ಸ್‌ ಸರ್ಕಾರದ ನೆರವಿನಲ್ಲಿ ನಡೆದ ಈ ಪ್ರಯೋಗದಲ್ಲಿ 11 ದೇಶಗಳ 160 ವಿಜ್ಞಾನಿಗಳು ಭಾಗವಹಿಸಿದ್ದರು.
ಜಿನೆವಾದ ಸಿಇಆರ್‌ಎನ್‌ನಿಂದ ಇಟಲಿಯ ಗ್ರಾನ್‌ಸ್ಯಾಸೊ ಎಂಬಲ್ಲಿಗೆ 730 ಕಿಮೀ ದೂರದ ನಿರ್ವಾತ ಪ್ರದೇಶದಲ್ಲಿ ಈ ಪರೀಕ್ಷೆ ನಡೆದಿದೆ. ಸಿಇಆರ್‌ಎನ್‌ನಲ್ಲಿ ಸಿದ್ಧಪಡಿಸಲಾದ ನ್ಯೂಟ್ರಿನೋ ಕಣಗಳನ್ನು ಆಕ್ಸಿಲೇಟರ್‌ ಉಪಕರಣದ ಮೂಲಕ ಬಲವಾಗಿ ದೂಡಲಾಯಿತು.  ಅತ್ತ ಕಡೆ ಗ್ರಾನ್‌ಸ್ಯಾಸೊನಲ್ಲಿ ಇದನ್ನು ಪತ್ತೆ ಹಚ್ಚಲು ಆಸಿಲೇಷನ್‌ ಪ್ರೊಜೆಕ್ಟರ್‌  ವಿತ್‌ ಎಮಲ್ಷನ್‌ ಟ್ರಾಕಿಂಗ್‌ ಆಪರೇಟಸ್‌ (ಅಪೇರಾ) ಎಂಬ ವಿಶೇಷ ಡಿಟೆಕ್ಟರ್‌ನ್ನು ಭೂಮಿಯಡಿ ಹುದುಗಿಸಿಡಲಾಗಿತ್ತು. ಈ ಕಣಗಳು ಎಷ್ಟು ಸೆಕೆಂಡ್‌ನಲ್ಲಿ ಗ್ರಾನ್‌ಸ್ಯಾಸೊ ತಲುಪಿದವು ಎಂದು ಲೆಕ್ಕ ಹಾಕಲಾಯಿತು. ಇಂಥ ಪ್ರಯೋಗ ಮಾಡಿದ್ದು ಒಂದೆರಡು ಸಲ ಅಲ್ಲ. ಸಾವಿರಾರು ಸಲ. ಕೊನೆಗೂ ನ್ಯೂಟ್ರಿನೋ ಕಣ ಬೆಳಕಿಗಿಂತ ಶೇ 0.0025ರಷ್ಟು ಬೇಗ ಚಲಿಸುತ್ತದೆ ಎನ್ನುವ ವಿಚಾರ ಸ್ಪಷ್ಟವಾಯಿತು.
ಬರುವ ಪ್ರತಿಯೊಂದು ಫಲಿತಾಂಶಗಳು ನಿರೀಕ್ಷೆಯಂತೆಯೇ ಇವೆ ಎನ್ನುವುದು ವಿಜ್ಞಾನಿಗಳಿಗೆ ಗೊತ್ತಾಗಿಬಿಟ್ಟಿತು. ಹಾಗೆಂದು ಅವರು ಅದನ್ನು ತರಾತುರಿಯಲ್ಲಿ ಪ್ರಕಟಿಸುವ ಧೈರ್ಯವನ್ನೂ ಮಾಡಲಿಲ್ಲ. ಏಕೆಂದರೆ, ಈ ಫಲಿತಾಂಶ ಭೌತವಿಜ್ಞಾನದ ಬುಡವನ್ನೇ ಅಲ್ಲಾಡಿಸಿಬಿಡುತ್ತದೆ; ಟೀಕೆಗಳ ಮಹಾಪೂರ ಹರಿದುಬರುತ್ತದೆ ಎಂದು ಅರಿವೂ ಅವರಿಗೆ ಇತ್ತು. ಆ ಕಾರಣಕ್ಕಾಗಿಯೇ ಪ್ರಯೋಗದ ನೇತೃತ್ವ ವಹಿಸಿದ್ದ ಡೇರಿಯೋ ಅಟೆರಿಯೊ, `ಈ ಬಗ್ಗೆ ಇನ್ನಷ್ಟು ಪರೀಕ್ಷೆ ನಡೆಯಬೇಕು' ಎಂದು ಹೇಳಿ ನಿರೀಕ್ಷಣಾ ಜಾಮೀನು ಪಡೆದುಕೊಂಡುಬಿಟ್ಟರು.
2007ರಲ್ಲಿ ಚಿಕಾಗೋದ ಫರ್ಮಿಲ್ಯಾಬ್‌ನಲ್ಲೂ ಇಂಥದ್ದೊಂದು ಪ್ರಯೋಗ ನಡೆದಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಆದರ ಜಿನೆವಾದ ಸುದ್ದಿ ಕೇಳಿ ಫರ್ಮಿಲ್ಯಾಬ್‌ನವರೂ ಗರಿಗೆದರಿದ್ದಾರಂತೆ. ದೂಳು ತುಂಬಿದ್ದ  ಯಂತ್ರೋಪಕರಣಗಳನ್ನು ಮತ್ತೆ ಅಣಿಗೊಳಿಸಲು ಹೊರಟಿದ್ದಾರೆ.
ಕಂಪನ
ಅಟೆರಿಯೋ ಪ್ರಯೋಗದ ಫಲಶ್ರುತಿಯನ್ನು ಪ್ರಕಟಿಸುತ್ತಿರುವಂತೆಯೇ ವಿಜ್ಞಾನ ಲೋಕದಲ್ಲಿ ಕಂಪನ ಶುರುವಾಗಿಬಿಟ್ಟಿದೆ. ಇದೇನು ಮಕ್ಕಳಾಟ ಎಂದು ಹಲವರು ಪ್ರಶ್ನಿಸಿದರೆ, ಇದು ಹಾರುವ ಚಾಪೆ ಇದ್ದ ಹಾಗೆ ಗೇಲಿ ಮಾಡಿದವರು ಇದ್ದಾರೆ. ನಿಜ, ಹಾಗೊಂದು ವೇಳೆ ಇದನ್ನು ವೈಜ್ಞಾನಿಕ ಲೋಕ ಒಪ್ಪಿಕೊಂಡುಬಿಟ್ಟರೆ ಫಿಜಿಕ್ಸ್‌ನ ಮೂಲತಳಹದಿಯೇ ಅಲುಗಾಡಿಬಿಡುತ್ತದೆ. ವಿಶ್ವದ ಉಗಮ, ವಿಕಾಸದಿಂದ ಹಿಡಿದು ಕಾಲದ ಗಣನೆಯವರೆಗೂ ಎಲ್ಲವನ್ನೂ ಮಾಡಿದ್ದು ಐನ್‌ಸ್ಟೀನ್‌ ಸಾಪೇಕ್ಷ ಸಿದ್ಧಾಂತವನ್ನು (ಥಿಯರಿ ಆಫ್‌ ರಿಲೇಟಿವಿಟಿ) ಆಧರಿಸಿಯೇ. 
ನಕ್ಷತ್ರ, ಗ್ಯಾಲಕ್ಸಿಗಳ ದೂರ ಅಳೆಯುತ್ತಿದ್ದುದು ಐನ್‌ಸ್ಟೀನ್‌ನ ಇದೇ ಪರಿಕಲ್ಪನೆ ಮೂಲಕ. ನಾವು ಪ್ರಸಕ್ತ ನೋಡುತ್ತಿರುವ ನಕ್ಷತ್ರ ಎಷ್ಟೋ ಸಾವಿರ ವರ್ಷಗಳ ಹಿಂದೆ ಚೆಲ್ಲಿದ ಬೆಳಕು. ಬಹುಶಃ ಈಗ ಆ ನಕ್ಷತ್ರ ಸತ್ತೇ ಹೋಗಿದ್ದಿರಬಹುದು ಎಂಬ ನಮ್ಮ ವಿಜ್ಞಾನಿಗಳ ವಾದವನ್ನೆಲ್ಲ ಮರುಪರಿಶೀಲಿಸಬೇಕಾಗಬಹುದು. ಫಿಜಿಕ್ಸ್‌ ಪಠ್ಯಪುಸ್ತಕವೇ ಬದಲಾಗಿಬಿಡುತ್ತದೆ.
ಇದಕ್ಕೂ ಮಿಗಿಲಾಗಿ, ಕಾಲದ ಪರಿಕಲ್ಪನೆ  ಬಗ್ಗೆ ಆಲೋಚಿಸೋಣ. ಕಾಲದ ಮೇಲಿನ ಸವಾರಿ ಬಗ್ಗೆ ಸಾಕಷ್ಟು ಸಿನೆಮಾ, ಧಾರಾವಾಹಿಗಳು ಬಂದಿವೆ. ಖ್ಯಾತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಟೈಮ್‌ ಮತ್ತು ಸ್ಪೇಸ್‌ ಪರಿಕಲ್ಪನೆ ಕುರಿತು ಮನೋಜ್ಞವಾಗಿ ಬರೆದಿದ್ದಾರೆ. ಲಾಸ್ಟ್‌ ಎಂಬ ಟಿವಿ ಧಾರಾವಾಹಿಯಲ್ಲಿ  ಗೆಳೆಯರ ತಂಡವೊಂದು ಬೆಳಕಿಗಿಂತ ವೇಗವಾಗಿ ಚಲಿಸಿ ದಶಕಗಳ ಹಿಂದೆ ಹೋಗಿ ನಿಂತುಕೊಂಡ ಸ್ವಾರಸ್ಯಕರ ಕಥೆ ಇತ್ತು. ಬಹುಶಃ ಅದೇ ನಿಜವಾಗಿಬಿಟ್ಟರೆ..?
ನ್ಯೂಟ್ರಿನೋ ಕಣದ ಮೂಲಕ ನಾವು ಮುಂದಿನ ದಿನಗಳಲ್ಲಿ ಇ ಮೇಲ್‌ನಂತೆ ಯಾವುದಾದರೂ ಸಂದೇಶ ಕಳುಹಿಸಲು ಸಾಧ್ಯವಾಯಿತು ಎಂದಿಟ್ಟುಕೊಳ್ಳಿ. ಅಂಥ ಸಂದರ್ಭದಲ್ಲಿ ನಮ್ಮ ಸಂದೇಶ  ಭೂತ ಕಾಲಕ್ಕೆ ಹೋಗಿನಿಂತುಕೊಂಡು ಬಿಡುತ್ತದೆ. ಅಂದರೆ, ಬೆಳಕಿಗಿಂತ ವೇಗವಾಗಿ ಈ ಕಣಗಳು ಸಂದೇಶವನ್ನು  ಹೊತ್ತೊಯ್ದಿರುತ್ತವೆ!
ಐನ್‌ಸ್ಟೀನ್‌ ಹೇಳಿದ, ವಿಶ್ವ ಒಪ್ಪಿಕೊಂಡ ಇ=ಎಂಸಿ2 (ಇಲ್ಲಿ ಇ ಎಂದರೆ ಶಕ್ತಿ, ಎಂ ಎಂದರೆ ದ್ರವ್ಯರಾಶಿ ಹಾಗೂ ಸಿ ಎನ್ನುವುದು ಬೆಳಕಿನ ವೇಗದ ಸ್ಥಿರಾಂಕ) ಇಲ್ಲಿ ಅರ್ಥ ಕಳೆದುಕೊಳ್ಳಬಹುದು. ಈ ನಿಯಮದ ಪ್ರಕಾರ ಬೆಳಕಿಗಿಂತ ವೇಗವಾಗಿ ಚಲಿಸುವ ಯಾವುದಾದರೂ ವಸ್ತುಗಳಿದ್ದರೆ ಅವುಗಳ ದ್ರವ್ಯರಾಶಿ(ಮಾಸ್‌) ಅನಂತವಾಗಿರಬೇಕು. ಸಾಧಾರಣ ದ್ರವ್ಯರಾಶಿ ಇರುವ ಯಾವುದೇ ವಸ್ತು ಬೆಳಕಿಗಿಂತ ಬೇಗ ಚಲಿಸಲಾರವು. ಇಲ್ಲಿ ಬೆಳಕಿನ ಕಣಕ್ಕೆ  (ಫೋಟಾನ್‌) ದ್ರವ್ಯರಾಶಿ ಇಲ್ಲ. ಹೀಗಾಗಿ ಐನ್‌ಸ್ಟೀನ್‌ ಆಲೋಚನೆ ಕತೆ ಏನು? ಯಾವುದು ನಿಜ? ಎಷ್ಟು ನಿಜ?
ಆ್ಯಂಟಿ ರಿಲೇಟಿವಿಸಂ
ಐನ್‌ಸ್ಟೀನ್‌ ಸಿದ್ಧಾಂತವನ್ನು ಒಪ್ಪದವರು, ತಿರಸ್ಕರಿಸಿದವರು ಒಬ್ಬಿಬ್ಬರಲ್ಲ. ಅವರು ಥಿಯರಿ ಮಂಡಿಸುತ್ತಿರುವಾಗಲೇ ವಿರೋಧ ಸಾಕಷ್ಟು ವ್ಯಕ್ತವಾಗಿದ್ದವು.  ಗ್ರಹಣದ ವೇಳೆ, ಬಾಹ್ಯಾಕಾಶ ನೌಕೆಯಲ್ಲಿ  ಹೀಗೆ ಬೇರೆ ಬೇರೆ ಸನ್ನಿವೇಶದಲ್ಲಿ ಐನ್‌ಸ್ಟೀನ್‌ನ ನಿಲುವನ್ನು ಪರೀಕ್ಷಿಸಲಾಗಿದೆ. ಮ್ಯಾಕ್ಸ್‌ವೆಲ್‌ನ ಎಲೆಕ್ಟ್ರೋಮ್ಯಾಗ್ನೆಟಿಸಂ ನಿಯಮ ಹಾಗೂ ಮೈಕೆಲ್ಸನ್‌ ಮೋರೆ ಪ್ರಯೋಗಗಳು ಐನ್‌ಸ್ಟೀನ್‌ ನಿಲುವಿಗೆ ಸವಾಲು ಒಡ್ಡಿದ್ದವು. ಲಾರೆಂಟ್ಜ್‌ ಎಂಬಾತ ಸಾಪೇಕ್ಷ  ಥಿಯರಿಯನ್ನು ಪ್ರಶ್ನಿಸಲು ಪ್ರಯತ್ನಿಸಿ ಸೋತಿದ್ದ.
ಐನ್‌ಸ್ಟೀನ್‌ ಇದ್ದಾಗಲೇ ಆತನ ಸಿದ್ಧಾಂತವನ್ನು ಮುರಿಯುವ ಪ್ರಯತ್ನ ನಡೆಯುತ್ತಲೇ ಇತ್ತು. ಅಂಥ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಬರೆದ ಪ್ರಬಂಧವನ್ನು ಕ್ರೋಡೀಕರಿಸಿ `100 ಆಥರ್ಸ್‌ ಎಗೆನೆಸ್ಟ್‌ ಐನ್‌ಸ್ಟೀನ್‌' ಎಂಬ ಪುಸ್ತಕವೇ ಬಂದಿತ್ತು. ಇದನ್ನು ಓದಿ ಐನ್‌ಸ್ಟೀನ್‌ ಏನು ಹೇಳಿದ್ದ ಗೊತ್ತೇ? `ಸುಳ್ಳಿದ್ದರೆ ಸುಳ್ಳೆಂದು ಹೇಳಲು ನೂರು ಜನ ಏಕೆ? ಒಬ್ಬ ಸಾಕಲ್ಲವೇ?' ಎಂದು.
ಈಗಲೂ ಐನ್‌ಸ್ಟೀನ್‌ ನಿಲುವನ್ನು ಪ್ರಶ್ನಿಸುತ್ತಲೇ ಇರುವ ವರ್ಗ ಒಂದಿದೆ. ಅವರನ್ನು ಆ್ಯಂಟಿ ರಿಲೇಟಿವಿಸ್ಟ್‌ ಎಂದು ಕರೆಯಲಾಗುತ್ತದೆ.  ಈ ವಿಜ್ಞಾನಿಗಳ ಗುಂಪು ಒಂದಲ್ಲ ಒಂದು ರೀತಿಯಲ್ಲಿ ಒಗ್ಗೂಡಿ, ಪ್ರಯೋಗ ನಡೆಸಿ ಐನ್‌ಸ್ಟೀನ್‌ ಪಾರಮ್ಯವನ್ನು ಮುರಿಯಲು ಪ್ರಯತ್ನಿಸುತ್ತಲೇ ಇದೆ.

ನ್ಯೂಟ್ರಿನೋ ಎಂದರೇನು?
ಸಬ್‌ ಅಟಾಮಿಕ್‌ ಕಣವಾಗಿರುವ ಇದು ಕೊಂಚ ಎಲೆಕ್ಟ್ರಾನ್‌ ಥರದ ಗುಣಲಕ್ಷಣಹೊಂದಿದೆ. ಆದರೆ, ಇದಕ್ಕೆ ಎಲೆಕ್ಟ್ರಾನ್‌ನಂತೆ ಯಾವುದೇ ವಿದ್ಯುತ್‌ ಚಾರ್ಜ್‌ ಹೊಂದಿರುವುದಿಲ್ಲ. ಇದರಿಂದ ಯಾವುದೇ ವಿದ್ಯುತ್‌ಕಾಂತೀಯ ಬಲ ಇದರ ಮೇಲೆ ಪರಿಣಾಮ ಬೀರುವುದಿಲ್ಲ.  ಹಾಗಾಗಿ ಯಾರ ಅಡ್ಡಿ ಇಲ್ಲದೆಯೂ ಬಲುದೂರವನ್ನು ಕ್ರಮಿಸಿಬಿಡುತ್ತದೆ. ಟ್ರಾಫಿಕ್‌ ಸಿಗ್ನಲ್‌ ಇದ್ದರೂ ಸೈಕಲ್‌ ಸವಾರ ಹೋಗುತ್ತಾನಲ್ಲ ಹಾಗೆ. ಕೆಲವು ಸಲ ಘನವಸ್ತುಗಳ ಒಳಗೂ ಇದು ಹೊಕ್ಕುಬಿಡುತ್ತದೆ. ಗೋಡೆಗಳನ್ನೂ ಕ್ರಮಿಸಿ ಮುಂದೆ ಹೋಗುವ ಛಾತಿ ಇದಕ್ಕಿದೆಯಂತೆ.
1931ರಲ್ಲಿ ಇಂಥದ್ದೊಂದು ಕಣದ ಅಸ್ತಿತ್ವದ ಬಗ್ಗೆ ತಿಳಿದುಬಂತು. 1968ರಲ್ಲಿ ಸೂರ್ಯನ ಕಿರಣಗಳಿಂದ ಹೊರಹೊಮ್ಮಿದ ಎಲೆಕ್ಟ್ರಾನ್‌ನ ಜತೆಗೆ ಈ ನ್ಯೂಟ್ರಿನೋ ಇರುವುದು ಗೊತ್ತಾಯಿತು. 1987ರಲ್ಲಿ  ಸೂಪರ್‌ನೋವಾದಿಂದ ಹೊರಬಂದ ನ್ಯೂಟ್ರಿನೋ ವೇಗವನ್ನು ನೋಡಿ ವಿಜ್ಞಾನಿಗಳಿಗೆ ಅಚ್ಚರಿಯಾಯಿತಂತೆ.
ಇದರ ದ್ರವ್ಯರಾಶಿ ಭಾರಿ ಕಡಿಮೆ. ಇವು ಕ್ರಮಿಸುತ್ತಿರುವಾಗಲೇ ವೇಷ ಬದಲಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆಯಂತೆ.  ಇವುಗಳಿಗೆ ಒಂದು ಬಗೆಯ ವಾಸನೆಯೂ ಇದೆ. ವಾಸನೆಯನ್ನೂ ಬದಲಾಯಿಸಿಕೊಳ್ಳುತ್ತಾ ಇರುತ್ತವೆ. ಎಲೆಕ್ಟ್ರಾನ್‌, ಮ್ಯೂವಾನ್‌ ಅಥವಾ ಟಾವೊ ಜತೆಗೆ ನ್ಯೂಟ್ರಿನೋ ಲಿವ್‌ ಇನ್‌ ರಿಲೇಷನ್‌ಶಿಪ್‌ ನಡೆಸುವುದೇ ಹೆಚ್ಚು.

Wednesday, September 7, 2011

ಮೈ ಎಕ್ಸ್‌ಪೆರಿಮೆಂಟ್‌ ವಿತ್‌ ಮೈನಿಂಗ್‌ 
(ವೆರಿ ವೆರಿ ಸ್ಸಾರಿ... ಇನ್ನೊಬ್ಬರ ಖಾಸಗಿ ವಿಷಯಕ್ಕೆ ತಲೆಹಾಕುವುದು ನಮ್ಮ ಉದ್ದೇಶ ಅಲ್ಲ. ಆದ್ರೂನೂ... ನಮ್ಮ ಮಾಜಿಗಳಿಬ್ಬರ ಪರ್ಸನಲ್‌ ಡೈರಿಯ ಒಂದೆರಡು ಹಾಳೆಗಳು ನಮಗೆ ಸಿಕ್ಕಿಬಿಟ್ಟಿವೆ. ಸಿಕ್ಕಮೇಲೆ ಓದದೆ ಇರೋದು ಹೆಂಗೆ ಅಂತ ಕದ್ದುಮುಚ್ಚಿ ಓದಿಬಿಟ್ಟಿದ್ದೀವಿ. ನಿಮ್ಮ ಮುಂದೆನೂ ಹಂಗೆನೇ ಇಡ್ತಿದ್ದೀವಿ. ಬೇರೊಬ್ಬರ ಪರ್ಸನಲ್‌ ವಿಷ್ಯ ಬೇಡ ಅಂತಿದ್ದರೆ ಸುಮ್ನಿದ್ದುಬಿಡಿ. ಓದಿದ್ರೂನೂ ಯಾರಿಗೂ ಹೇಳ್ಬೇಡಿ!)
ಇದಿಷ್ಟು  ನಮ್ಮ ಮಾಜಿ ಮುಖ್ಯಮಂತ್ರಿಗಳ ಹಾಗೆ ನಾವು ತೆಗೆದುಕೊಳ್ಳುತ್ತಿರುವ ನಿರೀಕ್ಷಣಾ ಜಾಮೀನು.

1. ರೆಡ್ಡೀರಪ್ಪ ಪುಟಗಳಿಂದ..

ಮೊದಲೆಲ್ಲ ಡೈರಿ ಬರೆಯುವ ಅಭ್ಯಾಸ ನನಗಿರಲಿಲ್ಲ. ಪ್ರಾಮಾಣಿಕವಾಗಿ ಹೇಳ್ತೀನಿ- ಡೈರಿ ಅಂದ್ರೆ ನಂಗೆ ಗೊತ್ತಿದ್ದದ್ದು ಕೆಎಂಎಫ್‌ ಮಾತ್ರ. ಆದ್ರೆ ಮೊನ್ನೆ ಅಧಿಕಾರ ಕಳಕೊಂಡ ಮೇಲೆ ಟೈಮ್‌ ಪಾಸ್‌ ಆಗ್ತಾನೇ ಇಲ್ಲ. ಕಣ್ಣು ಮುಚ್ಚಿದರೆ ಕರಿಕೋಟ್‌, ಅಗ್ರಹಾರ.. ಹೀಗೆ ಏನೇನೋ ಕನಸು ಬೀಳುತ್ತಿದೆ. ಅದ್ಕೆ ಇರಲಿ ಅಂತ ಡೈರಿ ಬರೆಯೋಕೆ ಶುರು ಮಾಡಿದ್ದೇನೆ. ಮೊನ್ನೆ ಝಿಂದಗಿ ನ ಮಿಲೇಗಿ ದುಬಾರಾ ಎಂಬ ಸಿನಿಮಾ ನೋಡೋಕೆ ಹೋಗಿದ್ದೆ. ಯಾಕೋ ಕಿರಿಕಿರಿಯಾಗಿ ಅರ್ಧದಲ್ಲೇ ಎದ್ದು ಬಂದೆ. ಅಲ್ಲಿ  ಹೃತಿಕ್‌ ರೋಷನ್‌ ಹೇಗಾದರೂ ಮಾಡಿ ಹಣ ಮಾಡಬೇಕೆಂದು ಹೊರಡುತ್ತಾನೆ. ಜನ ಅವನನ್ನು ಹೀರೋ ಅಂತಾರೆ, ವಿಷಲ್‌ ಹಾಕ್ತಾರೆ. ಅಷ್ಟಕ್ಕೂ ಇಲ್ಲಿ  ನಾನು ಮಾಡಿದ್ದೇನು? ಆದರೆ ನಂಗೆ ವಿಲನ್‌ ಪಟ್ಟ! ಜನ ರಿಯಲ್‌ ಸ್ಟೋರಿ ಇಷ್ಟಪಡಲ್ಲ. ಇರಲಿ ಬಿಡಿ, ಇದೆಲ್ಲ ಆ ಅಪ್ಪ ಮಕ್ಕಳ ಕುತಂತ್ರ ಅನ್ನೋದು ನಂಗೆ ಗೊತ್ತು. ಇಷ್ಟಕ್ಕೂ ಯಾರು ಮಾಡಬಾರದ ಅಪರಾಧ ನಾನೇನು ಮಾಡಲಿಲ್ಲವಲ್ಲ. ಅದಾವುದೋ ಮೈನಿಂಗ್‌ ಕಂಪೆನಿಯಿಂದ ನಮ್‌ ಕಾಲೇಜಿಗೆ ಡೊನೇಷನ್‌ ಪಡಕೊಂಡೆ ಅನ್ನುವುದೇ ಕ್ರೈಮ್ಮಾ? ಈ ನೇಷನ್‌ ನಡೀತಾ ಇರೋದೇ ಡೊನೇಷನ್‌ನಿಂದ ಅನ್ನೋದು ಯಾರಿಗೆ ಗೊತ್ತಿಲ್ಲ ಹೇಳಿ? ಮೊನ್ನೆ ಕೋರ್ಟಿಗೆ ಹೋಗಿ ಮುಕ್ಕಾಲು ಗಂಟೆ ನಿಂತ್ಕೊಂಡೆನಲ್ಲ. ಆಗ ಹೇಗನ್ನಿಸಿತು ಗೊತ್ತಾ? ಕಾಲು ಸುಸ್ತಾಯಿತು. ನಮ್ಮ ರಾಜ್ಯದಲ್ಲಿ ಎಷ್ಟೋ ಮಂದಿ ಕಾರ್ಮಿಕರು ಶ್ರಮದಿಂದ ಕೆಲಸ ಮಾಡುತ್ತಾರಲ್ಲ. ಅವರೆಲ್ಲರ ನೆನಪಾಯಿತು. ನನಗೆ ಇನ್ನೂ ಕೊಂಚ ಕಾಲ ಅವಕಾಶ ಸಿಕ್ಕಿದ್ದರೆ ಈ ಶ್ರಮಿಕ ವರ್ಗಕ್ಕೆ ಅನುಕೂಲ ಮಾಡಿಕೊಡುತ್ತಿದ್ದೆ. ಇರಲಿ, ಇನ್ನೂ ಕಾಲ ಮಿಂಚಿಲ್ಲ. ಆರು ತಿಂಗಳು ಬಿಟ್ಟು ನೋಡ್ತೀನಿ. 


2. ಸುಮಾರಣ್ಣ  ಪುಟಗಳಿಂದ.. 

ಯಾವುದೋ ಮೈನಿಂಗ್‌ ಕಂಪೆನಿಗೆ ಸಹಾಯ ಮಾಡಿದ್ದೀನಿ ಅಂತ ಹೇಳಿ ಸಂತೋಷ ಹೆಗಡೆಯವರು ನನಗೆ ಕಪ್ಪು ಚುಕ್ಕೆ ಹಾಕಿದ್ದಾರೆ. ಅಷ್ಟಕ್ಕೆ ನಿಲ್ಸಿದ್ರೆ ಪರವಾಗಿರಲಿಲ್ಲ. ಅವರು ನನ್ನ ಎರಡನೇ ಮನೆ ಬಗ್ಗೆ ಮಾತಾಡಿದ್ದಾರೆ. ನನ್ನ ಮೊದಲನೇ ಮನೆ ಬಗ್ಗೆ  ಮಾತಾಡಿದ್ರೆ ನಂಗೆ ಇಷ್ಟೊಂದು ಸಿಟ್ಟು ಬರುತ್ತಿರಲಿಲ್ಲ. ಅವರು ಮಾತಾಡಿದ್ದು 2ನೇ ಮನೆ ಬಗ್ಗೆ! ಅದೇಕೋ ಏನೋ ನಂಗೆ ಮನೆ, ಮನಿ, ಮೈನಿಂಗು.. ಎಲ್ಲ ಒಂದೇ ಥರ ಕೇಳಿಸುತ್ತೆ ಈಚೆಗೆ. ರಾಜಕಾರಣಿಗಳಿಗೆ ಮನೆ ಮತ್ತು ಮನಿ ಎರಡೂ ಹೆಚ್ಚಿದಷ್ಟೂ ಅನುಕೂಲ. ಮನಿ ಕಡಿಮೆ ಇದ್ದರೆ ಗೆಲ್ಲೋದೆಂಗೆ? ಮನೆ ಒಂದೇ ಇದ್ರೆ ಪ್ರೈಮ್‌ ಮಿನಿಷ್ಟ್ರುಆಗೋದೆಂಗೇ? ಅದೆಲ್ಲ ಎಲ್ಲಿ ಇವರಿಗೆ ಗೊತ್ತಾಗುತ್ತೆ ಬಿಡಿ. ಎಲ್ಲದ್ದಕ್ಕೂ ಕಾಲ ಉತ್ತರ ಹೇಳುತ್ತೆ. ನಾನು ಬೆಳೆಸಿದವರೇ ನನಗೆ ದ್ರೋಹ ಮಾಡ್ತಿದ್ದಾರೆ. ಯಡಿಯೂರಪ್ಪ ಅವರನ್ನ  ಡೆಪ್ಯುಟಿ ಸಿಎಂ, ಸಿಎಂ ಮಾಡಿದ್ದಾರು? ಹೋಗಲಿ, ಹೆಗಡೆಯವರನ್ನು ಲೋಕಾಯುಕ್ತ ಮಾಡಿದ್ದು ಯಾರು? ಇವರೇ ಈಗ ನನ್ನ ವಿರುದ್ಧ ನಿಂತಿದ್ದಾರೆ. ಇದೊಂದು ಥರಾ ಮಣ್ಣಿಗೆ ಮಾಡ್ದ ದ್ರೋಹ. ಯಾಕೆ ಗೊತ್ತಾ- ನಾನು ಮಣ್ಣಿನ ಮೊಮ್ಮಗ ಅಲ್ವಾ?  (ಉಳಿದ ಪುಟಗಳು ಸಿಕ್ಕಿಲ್ಲ. ಈ ಎರಡೂ ಡೈರಿಗಳ ಎಲ್ಲ ಪುಟ ಸಿಕ್ಕದ ನಂತರ ಮೈ ಎಕ್ಸ್‌ಪೆರಿಮೆಂಟ್‌ ವಿತ್‌ ಮೈನಿಂಗ್‌ ಅನ್ನೋ ಪುಸ್ತಕ ತರೋ ಆಲೋಚನೆ ಇದೆ)

Saturday, August 27, 2011

gani


ಅಧಿಕಾರಿಗಳು ಗಣಿ ತನಿಖೆ ನಡೆಸಿದ ರೋಚಕ ಕತೆ
ಎಲ್ಲರ ಮೈಪೂರ್ತಿ ಕೆಂಪು. ದೂಳಿನ ಮಧ್ಯೆ ಕಣ್ಣರಳಿಸಿ ನೋಡಿದರೆ ಮಾತ್ರ ಕಾಣುತ್ತಿದ್ದ ಆ ಜನರಿಗೋ ವಿಪರೀತ ಗಡಿಬಿಡಿ. ಜೆಸಿಬಿಗಳಿಗೂ ತನ್ನ ಆರ್ಭಟ ಯಾರಿಗೂ ಕೇಳಿಸದು ಎಂಬ ಅಹಮಿಕೆ. ಶಬ್ದ ಹತ್ತು ಮೈಲಾಚೆ ಕೇಳಿಸುತ್ತಿದ್ದರೂ, ಇದು ಜಗದ ಮೋಸ್ಟ್‌ ಸೀಕ್ರೆಟ್‌ ಎನ್ನುವ ಭ್ರಮೆ ಆ ಮ್ಯಾನೇಜರನಿಗೆ..
-ಹೇಳಿ ಕೇಳಿ ಅದು ಅರಳಿಕಟ್ಟೆಯ ಅಕ್ರಮ ಗಣಿ. ಸದ್ದಿಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ಹಾಗೇನಾದರೂ ಮೈನ್‌ನವರೋ, ಫಾರೆಸ್ಟ್‌ನವರೋ ಬಂದರೆ ಒಂದಷ್ಟು ಅದಿರು ಮುಕ್ಕಿಸಿದರಾಯಿತು ಎನ್ನುವ ಭಂಡತನ ಇದ್ದೇ ಇದೆ.
ಅರಳಿಕಟ್ಟೆ ಇರುವುದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ. ಎಂದಿನಂತೆ ಅವತ್ತೂ ಉರಿಬಿಸಿಲಿನಲ್ಲಿ ಕಾರ್ಮಿಕರೆಲ್ಲರೂ ಕಾರ್ಯಮಗ್ನರಾಗಿದ್ದರು. ಆ ವೇಳೆ, ಅಷ್ಟರಲ್ಲಿ ಆರಡಿ ಉದ್ದದ ವ್ಯಕ್ತಿಯೊಬ್ಬರು ಗಣಿಭಾಗದತ್ತ ನಡೆದುಕೊಂಡು ಬಂದರು. ದೂಳಿನಿಂದ ಪೈಜಾಮದ ನಿಜಬಣ್ಣ ಕೆಟ್ಟಿತ್ತು. ಕೆಂಪು ರುಮಾಲು ತೊಟ್ಟುಕೊಂಡಿದ್ದರು. ನೋಡಿದರೆ ಸಾಕು, ಯಾರೊ ರಾಜಾಸ್ಥಾನಿ ಮಾರ್ವಾಡಿ ಎನ್ನಬಹುದಿತ್ತು. ಸ್ವಲ್ಪ ಸ್ವಲ್ಪ ಹಿಂದಿ, ತೋಡಾ ತೋಡಾ ಕನ್ನಡದಲ್ಲಿ ಮಾತು ಶುರು ಮಾಡಿದ ಆತ ಅದಿರು ಕೊಳ್ಳಲು ಬಂದ ವ್ಯಾಪಾರಿ ಎಂದು ತಿಳಿಯಲು ಮ್ಯಾನೇಜರ್‌ಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ.
ಕೂತಲ್ಲೇ ವ್ಯಾಪಾರ ಕುದುರುತಿದೆಯಲ್ಲ ಎನ್ನುವ ಖುಷಿ ಮ್ಯಾನೇಜರ್‌ಗೆ. ಆಗ ಮಾರುಕಟ್ಟೆ ಬೆಲೆ ಪ್ರತಿ ಮೆಟ್ರಿಕ್‌ ಟನ್‌ಗೆ 900ರಿಂದ 1000 ರೂಪಾಯಿ ಇತ್ತು. ಆದರೆ ಈ ವರ್ತಕ ಈ ಬೆಲೆಯನ್ನು ಏಕ್‌ದಮ್‌ ತಿರಸ್ಕರಿಸಿಬಿಟ್ಟರು. ಉಹುಂ, 700 ರೂಪಾಯಿಗೆ ಕೊಟ್ಟರೆ ತಗೋತ್ತೀನಿ ಎಂದು ಒಂದೇ ಮಾತು ಇಟ್ಟರು. ಚೌಕಾಸಿ ನಡೆಯುತ್ತಿರುವ ಹಾಗೆಯೇ ಆ ವ್ಯಾಪಾರಿ ಇಡೀ ಗಣಿಗೆ ನಾಲ್ಕು ಸುತ್ತು ಬಂದಾಗಿತ್ತು. ಎಷ್ಟು ಅದಿರು ಸಿಗುತ್ತದೆ, ಎಷ್ಟು ಸಾಗಾಟವಾಗುತ್ತದೆ, ಎಲ್ಲಿಗೆ ಸಾಗಾಟವಾಗುತ್ತದೆ ಎಂದೆಲ್ಲ ಕಣ್ಣಲ್ಲೇ ಲೆಕ್ಕ ಹಾಕಿ ಆಗಿತ್ತು. ಗಣಿ ಒಡೆಯನ ಮೊಬೈಲ್‌ ನಂಬರ್‌ಗೂ ಮಾತಾಡಿ ಡೀಲ್‌ ಇನ್ನೇನು ಪಕ್ಕಾ ಆಗುತ್ತದೆ ಎನ್ನುವಷ್ಟರಲ್ಲಿ, ದಿಢೀರಾಗಿ ಮುಂದಿನ ವಾರ ಬರುತ್ತೇನೆ ಎಂದು ಹೊರಟೇಬಿಟ್ಟ ವ್ಯಾಪಾರಿ.
ಮುಂದಿನ ಭಾನುವಾರ- ವ್ಯಾಪಾರಿ ಮಿಸ್‌ ಮಾಡಲಿಲ್ಲ. ಹಿಂದಿನ ವಾರದ ಡ್ರೆಸ್ಸೆ ಹಾಕಿಕೊಂಡಿದ್ದರಿಂದ  ಮ್ಯಾನೇಜರ್‌ಗೆ ಬೇಗ ಗುರ್ತು ಸಿಕ್ಕಿತು. ಈ ಸಲ ಮತ್ತೆ ಶುರುವಿನಿಂದ ಚೌಕಾಸಿ. ಈ ವಾರದ ರಿಸಲ್ಟ್‌ ಅಷ್ಟೇ.. ಆಮೇಲೆ ಬರುತ್ತೇನೆ ಎಂದು ಹೊರಟುಬಿಟ್ಟ.
ಒಂದೆರಡು ದಿನ ಆಗಿತ್ತೇನೋ- 2007, ಜೂನ್‌ 13. ಈಗ ವ್ಯಾಪಾರಿ ಬರಲಿಲ್ಲ. ದಂಡೆತ್ತಿ ಬಂದದ್ದು ಲೋಕಾಯುಕ್ತ ಅಧಿಕಾರಿಗಳು ಮತ್ತು ಪೊಲೀಸರು. ಒಂದು ಕೋಟಿ ರೂ ಮೌಲ್ಯದ 11,500 ಟನ್‌ ಅದಿರು, ಐದು ಜೆಸಿಬಿಗಳನ್ನು ವಶಪಡಿಸಿಕೊಂಡರು. ಇದುವೇ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಗಣಿ ಮೇಲೆ ನಡೆದ ದಾಳಿ.
ಆ ಮಾರ್ವಾಡಿ ವ್ಯಾಪಾರಿ ವೇಷ ಹಾಕಿಕೊಂಡು ಬಂದವರು ಬೇರೆ ಯಾರೂ ಅಲ್ಲ- ಗಣಿ ತನಿಖೆಯ ದಂಡನಾಯಕ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಯು.ವಿ.ಸಿಂಗ್‌. ಇನ್ನಾರೋ ಕೆಳಹಂತದ ಅಧಿಕಾರಿಯನ್ನು ಕಳುಹಿಸಿ ಸ್ಥಳ ಪರಿಶೀಲನೆ ಮಾಡಬಹುದಾಗಿತ್ತು. ಡಾ. ಸಿಂಗ್‌ ಹಾಗೆ ಮಾಡಲಿಲ್ಲ. ತಾವೇ ಗಣಿಗಿಳಿದರು!
2-3 ಕಿಮೀ ದೂರದಲ್ಲಿ ಜೀಪು ನಿಲ್ಲಿಸಿ ವೇಷ ಬದಲಿಸಿಕೊಂಡು ಬಂದ ಸಿಂಗ್‌ಗೆ ಮುಖ್ಯವಾಗಿ ಅಲ್ಲಿಗೆ ಇರುವ ದಾರಿಗಳ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಗಣಿಗಾರಿಕೆ ರಾತ್ರಿ ಎಷ್ಟು ಹೊತ್ತಿನವರೆಗೆ ನಡೆಯುತ್ತದೆ ಎನ್ನುವ ವಿಷಯ ಬೇಕಾಗಿತ್ತು. ಅದೆಲ್ಲವನ್ನೂ ಸಂಗ್ರಹಿಸಿದರು.
ಆದರೆ ಅದಿರು ಕೊಳ್ಳಲು ಬಂದ ವ್ಯಾಪಾರಿ ನಡೆದುಕೊಂಡು ಏಕೆ ಬರುತ್ತಿದ್ದಾನೆ ಎಂದು ಊಹಿಸುವ ಶಕ್ತಿ ಮಾತ್ರ ಗಣಿಯಲ್ಲಿ ಯಾರಿಗೂ ಇರಲಿಲ್ಲ. ಏಕೆಂದರೆ, ಗಣಿದಾಳಿ ಎನ್ನುವ ಕಲ್ಪನೆಯೂ ಆ ತನಕ ಯಾರಿಗೂ ಇರಲಿಲ್ಲ.
ಜೆಸಿಬಿ ಕಂಟಕ
ಅರಳಿಕಟ್ಟೆ ಗಣಿ ಮೇಲೆ ದಾಳಿ ಮಾಡಲು ಬೆಂಗಳೂರಿನಿಂದ 50 ಮಂದಿ ಕ್ವಿಕ್‌ ರೆಸ್ಪಾನ್ಸ್‌ ಟೀಮ್‌ನ ಪೊಲೀಸರೂ ಬಂದಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ದಂಡು ಜೂನ್‌ 13ರ ರಾತ್ರಿ 8 ಗಂಟೆಗೆ ಹೊರಟಿತು. ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಮೂರು ಕಡೆಯಿಂದ ದಾಳಿ ಮಾಡುವುದು ಎಂದು ನಿರ್ಧರಿಸಲಾಯಿತು. ಲೋಕಾಯುಕ್ತ ಎಸ್ಪಿ ರಂಗಸ್ವಾಮಿ ನಾಯಕ್‌ ದಾಳಿಯ ನೇತೃತ್ವ ವಹಿಸಿದ್ದರು.
ರಾತ್ರಿ ಸುಮಾರು 11 ಗಂಟೆಗೆ ಐದು ಜೆಸಿಬಿಗಳು ಆರ್ಭಟಿಸುತ್ತಾ ಕೆಲಸ ಮಾಡುತ್ತಿದ್ದವು. ಮೂರು ಕಡೆಯಿಂದ ಏಕಾಏಕಿ ಸ್ಥಳಕ್ಕೆ ದಾಳಿ ನಡೆದಾಗ ಕೆಲಸಗಾರರಿಗೆಲ್ಲರಿಗೂ ದಿಗ್ಬ್ರಾಂತಿ. ಕೆಲವರು ಓಡಿದರು, ಇನ್ನು ಕೆಲವರು ಪ್ರತಿರೋಧ ಒಡ್ಡಿದರು.
ಅಲ್ಲೇ ಸನಿಹದಲ್ಲಿ ಜೀಪಿನಲ್ಲಿ ಕೂತಿದ್ದ ಡಾ. ಸಿಂಗ್‌, ಕ್ಷಣಕ್ಷಣದ ಮಾಹಿತಿಗಳನ್ನು ಲೋಕಾಯುಕ್ತ ಸಂತೋಷ್‌ ಹೆಗಡೆಯವರಿಗೆ ತಿಳಿಸುತ್ತಿದ್ದರು. ರಾತ್ರಿ ಮೂರು ಗಂಟೆಯವರೆಗೂ ಇವರಿಬ್ಬರು ಸತತ ಸಂಪರ್ಕದಲ್ಲಿದ್ದರು. ಅಷ್ಟರಲ್ಲಿ... ಒಮ್ಮಿಂದೊಮ್ಮೆಗೆ ಹಿಂದಿನಿಂದ ರಕ್ಕಸನಂತೆ ಬಂದ ಜೆಸಿಬಿಯೊಂದು ಜೀಪನ್ನು ಬುಡಮೇಲು ಮಾಡಿಬಿಟ್ಟಿತು. ತಕ್ಷಣ ಜೀಪಿನಿಂದ ಸಿಂಗ್‌ ಜಿಗಿದುಬಿಟ್ಟರು. ಕೊಂಚ ತರಚಿದ ಗಾಯಗಳಿಗೀಡಾದ ಅವರು ಪವಾಡ ಎಂಬಂತೆ ಸಾವಿನಿಂದ ಪಾರಾಗಿಬಿಟ್ಟರು.
ಬಹುಶಃ ಇಂಥ ದಾಳಿಗಳು, ಬೆದರಿಕೆಗಳು ಲೋಕಾಯುಕ್ತ ತನಿಖಾ ತಂಡದಲ್ಲಿದ್ದ ಯಾರಿಗೂ ಹೊಸದಲ್ಲ. ಇತರೆ ಅಧಿಕಾರಿಗಳಾದ ವಿಪಿನ್‌ ಸಿಂಗ್‌, ಕೆ.ಉದಯಕುಮಾರ್‌, ಬಿಸ್ವಜಿತ್‌ ಮಿಶ್ರಾ, ತಾಕತ್‌ ಸಿಂಗ್‌ ರಣಾವತ್‌ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಇಂಥ ಸಮಸ್ಯೆಗಳನ್ನು ಎದುರಿಸಿಕೊಂಡೇ ಬಂದಿದ್ದಾರೆ.
ಒಂದು ಮುಖ್ಯಮಂತ್ರಿ ಪದವಿಯನ್ನು ಅಲುಗಾಡಿಸಿದ, ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಆರೋಪ ಹೊರಿಸಿದ ಈ ರಾಜ್ಯದ ಅತ್ಯಂತ ಶಕ್ತಿಶಾಲಿ ವರದಿ ತಯಾರಿಸುವುದು ಸುಲಭವಲ್ಲ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಹೀಗಾಗಿಯೇ ಪ್ರತಿಯೊಬ್ಬರೂ ಹೊರಜಗತ್ತಿಗೆ ತಿಳಿಯದಂತೆ ನಾಜೂಕಾಗಿ ತನಿಖೆಯಲ್ಲಿ ತೊಡಗಿಸಿಕೊಂಡಿದ್ದರು.

ಗಣಿಭೂಮಿ
ಈ ತಂಡಕ್ಕೆ ಮೊದಲು ಬಂದ ಕೆಲಸ- ಗಣಿ ಪ್ರದೇಶದ ಸಮೀಕ್ಷೆ. ಗಣಿಪ್ರದೇಶದ ವಿಸ್ತೀರ್ಣ, ಗಡಿ ಒತ್ತುವರಿ, ಅಕ್ರಮ ಗಣಿಗಾರಿಕೆ ವಿಷಯ ತಿಳಿಯಲು ಒಂಬತ್ತು ತಂಡವನ್ನು 2007ರಲ್ಲಿ ಈ ತನಿಖಾ ತಂಡ ರಚಿಸಿತ್ತು. ಇದಕ್ಕೂ ಸಾಕಷ್ಟು ಅಡ್ಡಿ ಇದ್ದವು. ಒಂದು ಕಡೆ ಅಗತ್ಯ ದಾಖಲೆ ನೀಡಲು ಅಧಿಕಾರಿಗಳು ಅಸಹಕಾರ ಒಡ್ಡಿದರೆ, ಇನ್ನು ಕೆಲವು ಕಡೆ ಗಣಿಒಡೆಯರ ಬೆದರಿಕೆ.
ಒಮ್ಮೆ ಡಿಸಿಎಫ್‌ ಉದಯಕುಮಾರ್‌ ನೇತೃತ್ವದ ತಂಡ ಹೊಸಪೇಟೆ ಭಾಗದಲ್ಲಿ ಸಮೀಕ್ಷೆಗೆ ಹೊರಟಿತ್ತು. ಹತ್ತಾರು ಕಿಲೋ ಮೀಟರ್‌ ದೂರದ ಗಣಿಪ್ರದೇಶಕ್ಕೆ ಹೋಗುತ್ತಿರಬೇಕಾದರೆ ಗುಂಪೊಂದು ಉದಯಕುಮಾರ್‌ ಟೀಮನ್ನು ನಿಲ್ಲಿಸಿ ಸಮೀಕ್ಷೆ ಮಾಡಲು ಬಿಡೊಲ್ಲ ಎಂದು ಧಮಕಿ ಹಾಕಿತು. ಈ ಅಧಿಕಾರಿಗಳೂ ಏನೂ ಮಾಡುವ ಸ್ಥಿತಿ ಇರಲಿಲ್ಲ. ಉದಯ್‌ ನಮ್ರತೆಯಿಂದಲೇ ಹೇಳಿದರು-ನೋಡಿ, ಇವತ್ತು ನಮಗೆ ತೊಂದರೆ ಮಾಡಿದರೆ ಸಮೀಕ್ಷೆ ನಿಲ್ಲೊಲ್ಲ. ನಾಳೆ ಇನ್ನೊಂದು ತಂಡ ಇಲ್ಲಿಗೆ ಬಂದು ಕೆಲಸ ಮಾಡಿಯೇ ತೀರುತ್ತೆ. ಪೊಲೀಸ್‌ ಫೋರ್ಸ್‌ ಕೂಡ ಬರಬಹುದು ಎಂದು. ವಿಷಯ ಪ್ರಕೋಪಕ್ಕೆ ಹೋಗಬಹುದು ಎಂಬ ಭಯದಿಂದಲೋ ಏನೋ ಸಮೀಕ್ಷೆ ಮತ್ತೆ ಯಾರೂ ಅಡ್ಡಿಪಡಿಸಲಿಲ್ಲ.
ಅಲ್ಲಿದ್ದುದು ಒಂದು ಬಗೆಯ ರಣಭೂಮಿಯ ಛಾಯೆಯೇ. ಬೆಳಿಗ್ಗೆ ಎದ್ದು ಗಣಿಭೂಮಿಗೆ ಹೋದರೆ ಮತ್ತೆ ಮರಳುತ್ತೇವೆ ಎನ್ನುವ ಗ್ಯಾರಂಟಿಯೂ ಇರೋದಿಲ್ಲ. ದಿನಕ್ಕೆ ಹತ್ತರಿಂದ ಹದಿನೈದು ಕಿಮೀ ನಡೆಯಲೇಬೇಕು. ಬೆಳಿಗ್ಗೆ ತಿಂಡಿ ಬಿಟ್ಟರೆ ಮತ್ತೆ ರಾತ್ರಿಯೇ ಊಟ. ಮಧ್ಯೆ ಮಧ್ಯೆ ಬಿಸ್ಕೆಟ್ಟೇ ಗತಿ.
ಒಮೆ ಉತ್ಸಾಹದ ಯುವ ಅಧಿಕಾರಿಯೊಬ್ಬರು ವೇಗವಾಗಿ ನಡೆಯುವಾಗ ಕಾಲು ಉಳುಕಿಸಿಕೊಂಡು ಮತ್ತೆ ಅವರನ್ನು ಎಷ್ಟೋ ಮೈಲಿ ಎತ್ತಿಕೊಂಡು ಬಂದ ಘಟನೆಗಳು ಈ ತಂಡದಲ್ಲಿ ಇನ್ನೂ ಹಸಿರಾಗಿದೆ.

ಅಧಿಕಾರಿಗಳೇ ಅಡ್ಡಿ
ಸರ್ವೆಗೆ ಬೇಕಾದುದು ಅಗತ್ಯ ದಾಖಲೆ. ಅದನ್ನು ಪೂರೈಸಲಿಕ್ಕೇ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಎರಡು ತಿಂಗಳ ಕಾಲ ಬರೇ ದಾಖಲೆ ಪಡೆಯಲಿಕ್ಕೇ ಟೈಮ್‌ ವೇಸ್ಟ್‌ ಮಾಡಿದ್ದು ಉಂಟು ಎಂದು ತನಿಖಾ ಅಧಿಕಾರಿಯೊಬ್ಬರು ಹೇಳುತ್ತಾರೆ.
ಒಮೆ ಹೊಸಪೇಟೆಯ ಗಣಿ ಇಲಾಖೆ ಉಪನಿರ್ದೇಶಕರ ಬಳಿ ಅಗತ್ಯ ದಾಖಲೆ ಕೋರಿದಾಗ ಅದನ್ನು ನೀಡಲು ನಿರಾಕರಿಸಿದರು. ಆ ದಾಖಲೆ ಇಲ್ಲದೆ ಸರ್ವೆ ಮಾಡುವ ಹಾಗೂ ಇಲ್ಲ. ಹಲವು ಸಲ ಕೋರಿದರೂ ಉಹುಂ, ಆ ಗಣಿ ಅಧಿಕಾರಿ ಜಪ್ಪಯ್ಯ ಅನ್ನಲಿಲ್ಲ. ಕೊನೆಗೆ ಲೋಕಾಯುಕ್ತರಿಂದ ಸರ್ಚ್‌ ವಾರಂಟ್‌ ಹೊರಡಿಸಿದ ನಂತರ ದಾಖಲೆ ಸಿಕ್ಕಿತು. 30 ಜನ ಅಧಿಕಾರಿಗಳು 170 ಗಣಿಗಳ ಸರ್ವೆ ಮಾಡಿ ಮುಗಿಸುವಷ್ಟರಲ್ಲಿ ಒಂದೂವರೆ ವರ್ಷ ಕಳೆದಿತ್ತು.
ಗಡಿಗಳನ್ನು ಗುರುತಿಸಲು ಹಿಂದೆ ಬಳಸುತ್ತಿದ್ದ ಪರ್ಮನೆಂಟ್‌ ರಾಕ್‌ಗಳನ್ನೂ ಬ್ಲಾಸ್ಟ್‌ ಮಾಡಿ ಬಿಟ್ಟಿತ್ತು ಗಣಿ ಮಾಫಿಯಾ. ಗಡಿ ಗುರುತಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇತ್ತು. ಕೊನೆಗೇ ಅದನ್ನು ಉಪಗ್ರಹ ಚಿತ್ರವನ್ನು ಬಳಸಿಕೊಂಡು ಗುರುತಿಸಿತು ಲೋಕಾಯುಕ್ತ ತಂಡ.

ಲಾಟರಿ ರೇಡ್‌
ಗಣಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲೂ ಇವರು ಸೈನಿಕರಂತೆ ವ್ಯವಸ್ಥಿತ ವ್ಯೂಹ ರೂಪಿಸುತ್ತಿದ್ದರು. ಇಡುವ ಒಂದೊಂದು ಹೆಜ್ಜೆಯೂ ನಿಗೂಢವಾಗಿರಬೇಕು, ಅಷ್ಟೇ ಕೇರ್‌ಫುಲ್ಲಾಗಿರಬೇಕು. ಇವರ ಎದುರು ಪಾಳಯದಲ್ಲಿ ಇದ್ದುದು ಗುಪ್ತಚರ ಇಲಾಖೆಯನ್ನು ಕೈಯಲ್ಲಿ ಇಟ್ಟುಕೊಂಡ ಒಂದು ಸರ್ಕಾರ ಹಾಗೂ ಯಾವ ಕಾನೂನಿಗೂ ಜಗ್ಗದ ಗಣಿ ಮಾಫಿಯಾ! ಇಡುವ ಒಂದು ತಪ್ಪು ಹೆಜ್ಜೆಯ ಪರಿಣಾಮ ಯಾವ ದುರಂತವೂ ಆಗಬಹುದು.
ಹೀಗಾಗಿ, ಲೋಕಾಯುಕ್ತ ಅಧಿಕಾರಿಗಳು ರೈಡ್‌ಗೆ ತೆರಳುವ ಸಂದರ್ಭ ಯಾವ ಮಾಹಿತಿಗಳನ್ನೂ ಲೀಕ್‌ ಮಾಡುತ್ತಿರಲಿಲ್ಲ. ದಾಳಿಗೆ ಪೂರಕ ಮಾಹಿತಿ ಸಂಗ್ರಹವಾಯಿತು ಎಂದು ಗೊತ್ತಾದ ತಕ್ಷಣ ಸಂಬಂಧಿಸಿದ ಅರಣ್ಯಾಧಿಕಾರಿಗಳಿಗೆ ಮೆಸೇಜ್‌ ಹೋಗುತ್ತಿತ್ತು- ನಾಳೆ ಬೆಳಿಗ್ಗೆ ಇಷ್ಟು ಹೊತ್ತಿಗೆ ಗೆಸ್ಟ್‌ಹೌಸ್‌ಗೆ ಬಂದು ಬಿಡಿ ಎಂದು. ಯಾವ ಅಧಿಕಾರಿಯನ್ನೂ ನಂಬುವ ಸ್ಥಿತಿ ಇಲ್ಲ!
ಮರುದಿನ ಅಧಿಕಾರಿಗಳೆಲ್ಲರೂ ಜಮಾಯಿಸಿದ ತಕ್ಷಣ, ಎಲ್ಲರ ಮೊಬೈಲ್‌ಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ನಂತರ ತಂಡಗಳನ್ನು ರಚಿಸಲಾಗುತ್ತಿತ್ತು. ಪ್ರತಿಯೊಂದು ತಂಡದಲ್ಲೂ ಐದಾರು ಅಧಿಕಾರಿಗಳು. ಅವರು ಎಲ್ಲಿಗೆ ಹೊರಡಬೇಕೆಂದು ನಿರ್ಧಾರ ಮಾಡುತ್ತಿದ್ದುದು ಲಾಟರಿ ಮೂಲಕ! ಲಾಟರಿಯಲ್ಲಿ ಬಂದ ಸ್ಥಳಕ್ಕೆ ಆ ತಂಡ ದಾಳಿ ಮಾಡುತ್ತಿತ್ತು.
ಈ ಹೊತ್ತಿಗೆ ತಂಡಕ್ಕೆ ಅಗತ್ಯವಾದ ಎಲ್ಲ ಪರಿಕರಗಳು ಸಿದ್ಧವಾಗಿಬಿಡುತ್ತಿತ್ತು. ಶಸ್ತ್ರದಿಂದ ಹಿಡಿದು ಕ್ಯಾಂಡಲ್‌, ಹಗ್ಗ, ಪೆನ್‌, ಕಾಗದ.. ಹೀಗೆ ಒಂದೇ ಒಂದು ಚಿಕ್ಕ ಸಂಗತಿಯೂ ಅಲ್ಲಿ ಮುಖ್ಯ. ಗಣಿಭಾಗದಲ್ಲಿ ಏನೇನೂ ಸಿಗುತ್ತಿರಲಿಲ್ಲ. ತಂಡದ ನಾಯಕನೊಬ್ಬನ ಕೈಯಲ್ಲಿ ಬಿಟ್ಟರೆ ಇನ್ನಾರ ಕೈಯಲ್ಲಿ ಮೊಬೈಲ್‌ ಇರುತ್ತಿರಲಿಲ್ಲ. ಇದಕ್ಕೆ ಪೂರ್ವ ಸಿದ್ಧತೆ ವ್ಯವಸ್ಥೆ ಮಾಡುತ್ತಿದ್ದುದು ಡಿಸಿಎಫ್‌ ಉದಯಕುಮಾರ್‌.
ಗಣಿಭೂಮಿಯಲ್ಲಿ ಕಲ್ಲುಗಳಿಗೂ ಕಣ್ಣಿವೆ. ಹೀಗಾಗಿ ಯಾರಿಗೂ ಹೇಳದೆ ಕೇಳದೆ ಗಣಿ ಕಡೆಗೆ ಹೆಜ್ಜೆ ಇಡುವ ಸ್ಥಿತಿ. ಒಮೊಮೆ  ಅಧಿಕಾರಿಗಳು ಮನೆಯವರಿಗೂ ವಿಷಯ ಹೇಳುತ್ತಿರಲಿಲ್ಲ. ಅದು ಹೋಗಲಿ, ತಾನೆಲ್ಲಿಗೆ ಇವತ್ತು ಹೋಗುತ್ತಿದ್ದೇನೆ ಎನ್ನುವ ಅರಿವು ಸ್ವತಃ ಡ್ರೈವರ್‌ಗೂ ಇರುತ್ತಿರಲಿಲ್ಲ. ಸಾಹೇಬ್ರು ಹೇಳಿದ ಕಡೆ ಹೋಗುವುದಷ್ಟೇ ಕೆಲಸ. ಎರಡು ವರ್ಷ ಕಳೆಯುವುದರೊಳಗೆ ಈ ಎಲ್ಲ ಅಧಿಕಾರಿಗಳಿಗೆ ಗಣಿ ಪ್ರದೇಶದ ಇಂಚಿಂಚೂ ಕರಗತವಾಗಿಬಿಟ್ಟಿತ್ತು.





ಜಾತ್ರೆಗೆ ಹೊರಟ ಲಾರಿ
ಬೇಲೆಕೇರಿಗೆ ಬಂತು!


ಇಡೀ ವ್ಯವಸ್ಥೆಯ ಕಣ್ಣಿಗೆ ಅದಿರು ಎರಚಿದ್ದ ಕಾರವಾರ ಬಳಿಯ ಬೇಲೆಕೇರಿ ಬಂದರು ಸದ್ದಿಲ್ಲದೆ ಮಲಗಿತ್ತು. ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದ ಬಂದರು ಅದು. ಕರಾವಳಿ ನಿಗಾಪಡೆ ಅಲ್ಲಿ ಇಲ್ಲ. ವಾಚ್‌ ಟವರ್‌ ಕೂಡ ಇಲ್ಲ. ಅದಿರು ತಂದ ಕಾರ್ಗೊಗಳನ್ನು ಹಾಗೆಯೇ ಬಾರ್ಜ್‌ನಲ್ಲಿ ಹೇರಿಕೊಂಡು ಆಳಸಮುದ್ರದಲ್ಲಿ ನಿಂತಿದ್ದ ಹಡಗಿಗೆ ಇಳಿಸಿಬಿಡುವ ಕಾಯಕ ನಡೆಯುತ್ತಲೇ ಇತ್ತು. ವಿದೇಶಕ್ಕೆ ಅಕ್ರಮವಾಗಿ ಹೋದ ಅದಿರಿಗೆ ಲೆಕ್ಕವೇ ಇರಲಿಲ್ಲ.
ಈ ವಾಸನೆ ಸಿಕ್ಕ ಕೂಡಲೇ ಪಿಸಿಸಿಎಫ್‌ ಯು.ವಿ.ಸಿಂಗ್‌ ಅವರು ಡಿಸಿಎಫ್‌ ಉದಯಕುಮಾರ್‌ ಅವರಿಗೆ ಜವಾಬ್ದಾರಿ ವಹಿಸಿದರು.
ಆಗ ಜಲಸಂವರ್ಧನ ಇಲಾಖೆಯಲ್ಲಿದ್ದ ಉದಯಕುಮಾರ್‌ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಖಾಸಗಿ ಜೀಪಿನಲ್ಲಿ ಬೇಲೆಕೇರಿಗೆ ಹೋಗಿ ಅಲ್ಲಿ ಸಾಗಣೆಯಾಗುತ್ತಿದ್ದ ಅದಿರಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಒಂದು ದಿನಕ್ಕೆ ಎಷ್ಟು ಲಾರಿ ರೋಡಲ್ಲಿ ಹೋಗುತ್ತಿದೆ ಎಂದು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಅಡಾನಿ ಎಂಟರ್‌ಪೈಸಸ್‌, ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಕಂಪೆನಿಗಳೇ ಇಲ್ಲಿ ಅಕ್ರಮ ವಹಿವಾಟು ಮಾಡುತ್ತಿರುವುದು ಬೆಳಕಿಗೆ ಬಂತು.
ಒಂದೆರಡು ಬಾರಿ ಸ್ವತಃ ಯುವಿ ಸಿಂಗ್‌ ಅವರೇ ಮಾಹಿತಿ ಕಲೆ ಹಾಕಲು ಬಂದರು. ಆ ಹೊತ್ತಿಗೇ (2010) ಸಿಂಗ್‌ ಮುಖಪರಿಚಯ ಎಲ್ಲರಿಗೂ ಆಗಿಬಿಟ್ಟಿತು. ಲೋಕಾಯುಕ್ತ ಅಧಿಕಾರಿ ಎಂದು ಟಿವಿ, ಪತ್ರಿಕೆಗಳಲ್ಲಿ ಪ್ರಚಾರವಾಗಿಬಿಟ್ಟಿತ್ತು. ಹೀಗಾಗಿ, ಹಳೆಯ ಟಿ ಶರ್ಟ್‌, ಪ್ಯಾಂಟ್‌ ಮತ್ತು ತಲೆಗೆ ಮಫ್ಲರ್‌ ಸುತ್ತಿಕೊಂಡು ವಿಲಕ್ಷಣ ಡ್ರೆಸ್‌ನಲ್ಲಿ ಅವರು ಬೇಲೆಕೇರಿಗೆ ಬಂದರು. ಜಲಸಂವರ್ಧನಾ ಇಲಾಖೆಯ ಜೀಪಿನಲ್ಲಿ ಬಂದ ಅವರು ಒಬ್ಬ ಲೋಕಾಯುಕ್ತ ಅಧಿಕಾರಿ ಎಂದು ಯಾರಿಗೂ ತಿಳಿಯಲಿಲ್ಲ. ಸ್ವತಃ ಜೀಪು ಚಾಲಿಸುತ್ತಿದ್ದ ಡ್ರೈವರ್‌ಗೂ ಸಹ. ಅಲ್ಲಿ ಸಾಗಾಟಕ್ಕೆ ರಾಶಿ ಬಿದ್ದಿದ್ದ ಅದಿರು ನೋಡಿ ದಂಗಾದರು.
ಒಂದೆರಡು ದಿನಗಳ ನಂತರ ರೇಡ್‌ಗೆ ವ್ಯವಸ್ಥೆ ಮಾಡಿದರು. ಅವತ್ತು 2010 ಫೆಬ್ರವರಿ 20. ದಾಳಿ ಕೂಡ ಅತ್ಯಂತ ನಾಜೂಕಾಗಿ ನಡೆಯುವಂತೆ ವ್ಯವಸ್ಥೆ ಮಾಡಿಕೊಂಡರು. ಆಗ ಕಾರವಾರದಲ್ಲಿದ್ದ ದಕ್ಷ ಅಧಿಕಾರಿ ಆರ್‌. ಗೋಕುಲ್‌ ಸಹಾಯ ಪಡೆದುಕೊಂಡರು. ಎಸಿಎಫ್‌ ತಾಕತ್‌ ಸಿಂಗ್‌ ರಣಾವತ್‌ ವ್ಯೂಹ ರಚಿಸಿದರು.
ಅದಿರು ಸಾಗಾಟಕ್ಕೆ ಬಳಸುವ ಲಾರಿಗೆ ಸ್ಥಳೀಯ ದೇವಸ್ಥಾನ ಜಾತ್ರೆಯೊಂದರ ಬ್ಯಾನರ್‌ ಬರೆಯಿಸಿ ಹಾಕಲಾಯಿತು. ನೋಡಿದರೆ, ಎಲ್ಲೋ ಜಾತ್ರೆಗೆ ಹೊರಟ ಲಾರಿಯಂತೇ ಕಾಣುತ್ತಿತ್ತು. ಆ ಲಾರಿಯಲ್ಲಿ ಅಧಿಕಾರಿಗಳು ಕೂತರು. ಯುವಿ ಸಿಂಗ್‌ರಂತೂ ಥೇಟ್‌ ಲಾರಿ ಕ್ಲೀನರ್‌ ಮಾದರಿ ಕಾಣಿಸುತ್ತಿದ್ದರು.
ಯಾರಿಗೂ ತಿಳಿಯದಂತೆ ರೂಪಿಸಿದ ದಾಳಿ ಮರುದಿನ ಇಡೀ ದೇಶದಾದ್ಯಂತ ಸುದ್ದಿಯಾಯಿತು. ದಾಳಿಯಲ್ಲಿ 80,000 ಮೆಟ್ರಿಕ್‌ ಟನ್‌ ಅಕ್ರಮ ಅದಿರನ್ನು ವಶಪಡಿಸಿಕೊಳ್ಳಲಾಯಿತು. ರಫ್ತುದಾರರ ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ಈ ಕಂಪ್ಯೂಟರ್‌ನಲ್ಲಿದ್ದ ಮಾಹಿತಿಗಳನ್ನು ಅಧಿಕಾರಿಗಳಾದ ವಿಪಿನ್‌ ಸಿಂಗ್‌ ಮತ್ತು ಬಿಸ್ವಜಿತ್‌ ಮಿಶ್ರಾ ಹೊರತೆಗೆದು ದೇಶಕ್ಕೆ ಆಘಾತಕಾರಿ ಸುದ್ದಿ ಕೊಟ್ಟರು- 2006-07ರಿಂದ 2010ರ ತನಕ ಈ ಬಂದರು ಮೂಲಕ 77.38 ಲಕ್ಷ ಮೆಟ್ರಿಕ್‌ ಟನ್‌ ಅದಿರು ಸಾಗಾಟವಾಗಿತ್ತು!
ಆಫೀಸ್ಸೇ ಮನೆ, ಗಣಿಯೇ ಪಿಕ್ನಿಕ್‌
ಗಣಿ ತನಿಖಾ ಅಧಿಕಾರಿಗಳಿಗೆ 2007ರಿಂದ ಮನೆ ಮತ್ತು ಮೈನ್‌ ಎರಡೂ ಒಂದೇ ಆಗಿಬಿಟ್ಟಿತ್ತು. ನಂಬಿದರೆ ನಂಬಿ, ಬಿಟ್ಟರೆ ಬಿಡಿ- ಈ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಎಷ್ಟೋ ವರ್ಷಗಳಾದವು. ಭಾನುವಾರವೂ ಕೆಲಸ. ಯುವಿ ಸಿಂಗ್‌ರಂತೂ 2004ರಿಂದ ಈವರೆಗೆ ರಜೆ ತೆಗೆದುಕೊಂಡಿದ್ದು ಬರೇ ನಾಲ್ಕು ಸಲ. ಅದೂ ಹುಷಾರಿಲ್ಲದೆ ಆಸ್ಪತ್ರೆಗೆ ದಾಖಲಾಗಿದ್ದಕ್ಕಾಗಿ!
ಐದಾರು ವರ್ಷಗಳ ನಂತರ ನಾನು ಇಡೀ ಸಂಡೇನ ಎಂಜಾಯ್‌ ಮಾಡಿದ್ದು ಮೊನ್ನೆ ಜುಲೈ 31ಕ್ಕೆ. ಎಲ್ಲೂ ಹೋಗಿಲ್ಲ ಮನೆಯಲ್ಲೇ ಇದ್ದೆ ಎಂದು ಸಿಂಗ್‌ ಹೇಳುತ್ತಾರೆ.ಹೌದು ಅವರ ರುಟೀನೇ ಹಾಗಿತ್ತು. ವಾರದ ದಿನಗಳಲ್ಲಿ ಚರ್ಚ್‌ ಬೀದಿಯ ಕೆರೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಗಣಿ ವರದಿ ಕೆಲಸ ಮಾಡುತ್ತಿದ್ದರೆ, ಶನಿವಾರ-ಭಾನುವಾರ ಗಣಿ ಕಡೆಗೆ ಪಯಣ.ಕೆಲವೊಮೆ ಯಾರಿಗೂ ಹೇಳದೆ- ಲೋಕಾಯುಕ್ತರಿಗೂ ಸಹ.
2009ರ ಅಕ್ಟೋಬರ್‌ 2
ಅವತ್ತು ಸರ್ಕಾರಿ ರಜೆ. ಎಲ್ಲರೂ ಗಾಂಧಿ ಜಯಂತಿ ನೆಪದಲ್ಲಿ ರಜೆ ಅನುಭವಿಸುತ್ತಿದ್ದರೆ ಸಿಂಗ್‌ ಓಬಳಾಪುರಂ ಕಡೆಗೆ ಹೊರಟರು. ರೆಡ್ಡಿ ಸಾಮ್ರಾಜ್ಯದ ಓಬಳಾಪುರಂಗೆ ಕಾಲಿಡುವುದೆಂದರೆ ಚಕ್ರವ್ಯೂಹಕ್ಕೆ ಹೆಜ್ಜೆ ಇಟ್ಟ ಹಾಗೆ. ಅದೇಕೋ ಏನೋ, ಯಾವುದಕ್ಕೂ ಅಂಜದ ಸಿಂಗ್‌ ಲೋಕಾಯುಕ್ತರಿಗೂ ಹೇಳದೆ ಹೊರಟುಬಿಟ್ಟರು. ಖಾಸಗಿ ಜೀಪಿನಲ್ಲಿ ರೆಡ್ಡಿಕೋಟೆ ಪ್ರವೇಶಿಸಿದರು. ಆ ಕೋಟೆಯ ಇಂಚಿಂಚಿನಲ್ಲಿ ಕಾವಲುಪಡೆ ಇರುತ್ತದೆ. ಹಾಗೆಯೇ, ಸಿಂಗ್‌ ಪ್ರವೇಶ ಮಾಹಿತಿ ಸಿಕ್ಕ ಕೂಡಲೇ ಬೆಂಗಳೂರು ರಿಜಿಸ್ಟ್ರೇಷನ್‌ನ ಮೂರು ಸ್ಕಾರ್ಪಿಯೋ ವಾಹನಗಳು ಫಾಲೋ ಮಾಡಿದವು.
ಆ ಗಣಿ ಭಾಗದ ಇಂಚಿಂಚೂ ಪರಿಚಯವಿದ್ದ ಸಿಂಗ್‌ ಹೆಚ್ಚೇನೂ ಹೆದರಲಿಲ್ಲ. ಕವಲು ಹಾದಿಯಲ್ಲಿ ಒಂದು ಕಡೆ ಜೀಪನ್ನು ನಿಲ್ಲಿಸಿ ಬೆಟ್ಟ ಏರತೊಡಗಿದರು. ಸ್ವಲ್ಪ ಹೊತ್ತು ಇವರ ಚಲನವಲನ ಗಮನಿಸಿದ ಸ್ಕಾರ್ಪಿಯೋ ಮಂದಿ ಹಿಂತಿರುಗಿದರು.
ಬಿರುಬಿಸಿಲಿನಲ್ಲಿ ಬೆಟ್ಟ ಏರಿದ ಸಿಂಗ್‌ಗೆ ಅಲ್ಲಿನ ಗಣಿಯೊಂದರ ಮ್ಯಾನೇಜರ್‌ ಚಂದ್ರಶೇಖರ್‌ ಎಂಬಾತ ಒಬ್ಬ ಸಿಕ್ಕಿದ. ತಾನು ಕೇಂದ್ರ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡ ಸಿಂಗ್‌, ಗಣಿ ಚಟುವಟಿಕೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯತೊಡಗಿದರು. ಫೊಟೋ ತೆಗೆಯಲು ಆತ ಅಡ್ಡಿಪಡಿಸಿ ಬೆದರಿಕೆ ಒಡ್ಡಿದ. ಆ  ಅಕ್ರಮ ಗಣಿಗಳ ಬಗ್ಗೆ ಒಂದೊಂದೇ ಅಸ್ತ್ರ ತೆಗೆದು ಮ್ಯಾನೇಜರ್‌ ಬಾಯಿ ಮುಚ್ಚಿಸಿದರು. ಇವರು ಸಿಬಿಐ ಅಧಿಕಾರಿ ಇರಬೇಕು ಎಂದು ಭಾವಿಸಿದ ಆತ ಸುಮನಾಗಿಬಿಟ್ಟ.
ಉರಿಬಿಸಿಲಿನಲ್ಲಿ ಬೆವರುತ್ತಲೇ, ಕುಡಿಯಲು ನೀರೂ ಇಲ್ಲದೆ ಸಂಜೆ ತನಕ ಸಮೀಕ್ಷೆ ನಡೆಸಿದ್ದರು ಸಿಂಗ್‌.
ಇನ್ನೊಂದು ಸಲ 2007ರ ಆಗಸ್ಟ್‌ 15ರಂದು ಆಂಧ್ರಪ್ರದೇಶ ಗಡಿಯಲ್ಲಿರುವ ಗಣಿಗೆ ಸಿಂಗ್‌ ಭೇಟಿ ನೀಡಿದರು. ಹತ್ತಾರು ಕಿಲೋ ಮೀಟರ್‌ ನಡೆದುಕೊಂಡು ಹೋಗುತ್ತಿರುವಾಗ ಅವರ ಎಡಗಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಕಾಲು ವಿಪರೀತ ಊದಿಕೊಂಡಿತು. ತಕ್ಷಣ ಬೆಂಗಳೂರಿಗೆ ಮರಳಿದರು. ಎರಡು ದಿನ ತರುವಾಯ ಲೋಕಾಯುಕ್ತರ ಕರೆಯಂತೆ ಮಂಗಳೂರು ಬಂದರು ವೀಕ್ಷಣೆಗೆ ಹೊರಟರು. ಅಲ್ಲಿಂದ ಮರಳುವಾಗ ಕಾಲು ಮತ್ತಷ್ಟು ಊದಿಕೊಂಡಿತು. ನಡೆದಾಡಲಾಗದ ಸ್ಥಿತಿ ಉಂಟಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಾದರು.
ಅಹರ್ನಿಶಿ ದುಡಿಮೆ
ಕಳೆದ ಹನ್ನೊಂದು ತಿಂಗಳು ಇಡೀ ಟೀಮ್‌ಗೆ ಅಹರ್ನಿಶಿ ದುಡಿಮೆ. ರಾತ್ರಿ 2 ಗಂಟೆಯವರೆಗೂ ಅಧಿಕಾರಿ, ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ತಕ್ಷಣ ಗಾಢ ನಿದ್ದೆ ಬರಲು ಸಿಂಗ್‌ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಎಲ್ಲರೂ ಅಷ್ಟೇ ವಿಪಿನ್‌, ಬಿಸ್ವಜಿತ್‌, ತಾಕತ್‌ಸಿಂಗ್‌ ಎಲ್ಲರೂ ನಡುರಾತ್ರಿ ತನಕ ಕೆಲಸ ಮಾಡುತ್ತಿದ್ದರು. ಈ ದೊಡ್ಡ ಜವಾಬ್ದಾರಿ ಮುಗಿದ ನಂತರವಷ್ಟೇ ಆರೂವರೆ ಗಂಟೆಗೆ ಮೊನ್ನೆ ಮನೆಗೆ ಹೋದೆ ಎಂದು ಉದಯಕುಮಾರ್‌ ಹೇಳುತ್ತಾರೆ.


ಕಲಿಗಳ ಪರಿಚಯ
ಸರ್‌ ದಯವಿಟ್ಟು ನಮನ್ನು ಪರಿಚಯ ಮಾಡಿಕೊಡಬೇಡಿ..
ಇದು ಐವರು ಅಧಿಕಾರಿಗಳು ಲೋಕಾಯುಕ್ತ ಸಂತೋಷ ಹೆಗಡೆಯವರಿಗೆ ಕೈ ಮುಗಿದು ಮಾಡಿಕೊಂಡ ಮನವಿ.
ಐತಿಹಾಸಿಕ ಗಣಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಕೂಡಲೇ ಲೋಕಾಯುಕ್ತರು ತಮ್ಮ  ಕಚೇರಿಯಲ್ಲಿ ಆಯೋಜಿಸಲು ಉದ್ದೇಶಿಸಿದ ಪತ್ರಿಕಾಗೋಷ್ಠಿಗೆ ಈ ಐವರನ್ನು ಆಹ್ವಾನಿಸಿದರು. ಈವರೆಗೆ ತೆರೆಮರೆಯಲ್ಲಿದ್ದವರನ್ನು ಪರಿಚಯಿಸುವುದು ಅವರ ಉದ್ದೇಶವಾಗಿತ್ತು. ಪ್ರಚಾರಕ್ಕೆ ಮುಖಕೊಡದೆ ಸದ್ದಿಲ್ಲದೆ ಕೆಲಸ ಮಾಡುವ ಅಧಿಕಾರಿಗಳಿಗೆ ಇದು ಮುಜುಗರ ತಂದಿದ್ದರಿಂದಲೇ ಲೋಕಾಯುಕ್ತರಿಗೆ ಮನವಿ ಮಾಡಿದ್ದರು.
ಹೌದು, ನಮಗೆ ಕೊಟ್ಟ ಕೆಲಸ ಮಾಡಿದ್ದೇವೆ. ಇದರಲ್ಲೇನಿದೆ ಸಾಧನೆ? ಎಂದು ವಿನಮ್ರತೆಯಿಂದ ಹೇಳುವ ಈ ಐವರು ಅಧಿಕಾರಿಗಳೇ ಲೋಕಾಯುಕ್ತ ವರದಿಯ ಬೆನ್ನಿಗಿದ್ದವರು. ಸರ್ಕಾರವನ್ನೇ ಅಲುಗಿಸಿಬಿಟ್ಟ 25,000 ಪುಟಗಳ ವರದಿ ತಯಾರಿಸುವುದು ಸಣ್ಣ ಕೆಲಸವೇನಲ್ಲ.
ಇಡೀ ಸರ್ಕಾರವನ್ನು, ಗಣಿ ಮಾಫಿಯಾವನ್ನು ಎದುರಿಗಿಟ್ಟುಕೊಂಡು ಕ್ಷಣ ಕ್ಷಣ ಆತಂಕದಲ್ಲೇ ಕಾಲ ದೂಡಿದ ಇವರ ಪರಿಚಯ ನಿಮಗಿದೆಯೇ?

ಉದಯ ವೀರ್‌ ಸಿಂಗ್‌
ಇಡೀ ಲೋಕಾಯುಕ್ತ ವರದಿಯ ಬೆನ್ನೆಲುಬು ಇವರು. ದಕ್ಷ ಹಾಗೂ ದಿಟ್ಟ ಅಧಿಕಾರಿ ಮೂಲತಃ ರಾಜಸ್ಥಾನದವರು. 2007ರಲ್ಲಿ ಲೋಕಾಯುಕ್ತರು ಇವರಿಗೆ ಗಣಿ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸೂಚಿಸಿದಂದಿನಿಂದ ವಿಶ್ರಾಂತಿ ಪಡೆದುಕೊಂಡೇ ಇಲ್ಲ. ಸ್ವತಃ ಫೀಲ್ಡಿಗಿಳಿಯುವ ದಂಡನಾಯಕ. ಅತ್ಯಂತ ಸರಳ ವ್ಯಕ್ತಿ.
1988ರಲ್ಲಿ ಐಎಫ್‌ಎಸ್‌ಗೆ ಸೇರಿದ ಅವರು 25 ವರ್ಷಗಳ ಅನುಭವದಲ್ಲಿ ನಾಲ್ಕಕ್ಕೂ ಹೆಚ್ಚು ಸಲ ಮಾರಣಾಂತಿಕ ದಾಳಿಗೆ ಒಳಗಾಗಿದ್ದಾರೆ. 44 ವರ್ಷದ ಈ ಕಲಿ ಟಿಂಬರ್‌ ಮಾಫಿಯಾ, ಮರಳು ಮಾಫಿಯಾ, ಗಣಿ ಮಾಫಿಯಾಗಳನ್ನು ಎದುರು ಹಾಕಿಕೊಂಡಿದ್ದಾರೆ. ಮೂಲತಃ ಕೃಷಿಕ ಕುಟುಂಬದ ಇವರು ಸಸ್ಯಶಾಸ್ತ್ರದಲ್ಲಿ ಪಿಎಚ್‌ಡಿ ಗಿಟ್ಟಿಸಿಕೊಂಡಿದ್ದು, 23 ಪ್ರಬಂಧಗಳನ್ನು ಮಂಡಿಸಿದ್ದಾರೆ. ಈಗಲೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾಗಿ ಬೆಂಗಳೂರಿನ ಕೆರೆಗಳಿಗೆ ತ್ಯಾಜ್ಯ ನೀರು ಬಿಡುವ ಮಾಫಿಯಾದ ವಿರುದ್ಧ ಸೆಣಸುತ್ತಿದ್ದಾರೆ.
ಲೋಕಾಯುಕ್ತ ತನಿಖೆ ನಡೆಸುತ್ತಿರುವಾಗಲೇ ಇವರನ್ನು ಎರಡೆರಡು ಬಾರಿ ವರ್ಗ ಮಾಡಲು ಸರ್ಕಾರ ಪ್ರಯತ್ನಿಸಿತ್ತು.

ಕೆ. ಉದಯಕುಮಾರ್‌
ಸದ್ಯ ಕೆರೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಉದಯಕುಮಾರ್‌ ಈ ಟೀಮಿನಲ್ಲಿರುವ ಕನ್ನಡಿಗ. ಮೂಲತಃ ಧಾರವಾಡದ ಇವರ ತಂದೆ ಮತ್ತು ತಾತ ಇಬ್ಬರೂ ಕೃಷಿ ವಿಜ್ಞಾನಿಗಳು. 58 ವರ್ಷದ ಉದಯಕುಮಾರ್‌ ತಮ ವಯಸ್ಸನ್ನು ಮರೆತು ಗಣಿಗುಂಟ ಸುತ್ತಾಡಿ ವರದಿ ಸಿದ್ಧಪಡಿಸಿದ್ದಾರೆ. ದಿನಕ್ಕೆ ಹತ್ತರಿಂದ 15 ಕಿಮೀ ನಡೆಯುವುದರಿಂದ ನನ್ನ ಆರೋಗ್ಯ ಸುಧಾರಿಸಿದೆ ಎಂದು ಹೇಳುತ್ತಾರೆ.
ಅರಣ್ಯ ಇಲಾಖೆಯ ವಿವಿಧ ಹುದ್ದೆಯಲ್ಲಿದ್ದ ಅವರು ಒಮೆಯೂ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ. ಅತ್ಯಂತ ಮೃದು ಸ್ವಭಾವದವರಾದರೂ ವೃತ್ತಿ ವಿಚಾರಕ್ಕೆ ಬಂದಾಗ ಇವರದು ಸದಾ ಗಟ್ಟಿ ನಿಲುವು. ಗಣಿಗಳ ಸಮೀಕ್ಷೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಬಿಸ್ವಜಿತ್‌ ಮಿಶ್ರಾ
ಬಳ್ಳಾರಿಯಲ್ಲಿ 10 ದಿನಗಳ ಕಾಲ ಡಿಸಿಎಫ್‌ ಆಗಿದ್ದ ಇವರು ತೆರಿಗೆ ಪಾವತಿಸದ ಗಣಿ ಕಂಪೆನಿಗಳ ಲೈಸೆನ್ಸ್‌ ನವೀಕರಣಕ್ಕೆ ನಿರಾಕರಿಸಿದ್ದರು. ಬರೇ ಹತ್ತು ದಿನಗಳಲ್ಲಿ 20 ಕೋಟಿ ರೂಪಾಯಿ ವಸೂಲಿ ಮಾಡಿದ್ದರು. ಆದರೆ ರೆಡ್ಡಿ ಸೋದರರ ಬಂಡಾಯದಿಂದ ಚಾಮರಾಜನಗರಕ್ಕೆ ವರ್ಗಗೊಂಡರು. ಅಲ್ಲಿಯೂ ಸುಮನೆ ಕೂರಲಿಲ್ಲ. ಆನೆ- ಮನುಷ್ಯನ ನಡುವಿನ ಸಂಘರ್ಷ ತಪ್ಪಿಸಲು 547 ಕಿಮೀ ಉದ್ದದ ಆನೆ ತಡೆ ಬೇಲಿ ನಿರ್ಮಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಪ್ರಸಕ್ತ ಇ- ಆಡಳಿತ ಇಲಾಖೆಯಲ್ಲಿರುವ ಇವರು ಮೂಲತಃ ಭೋಪಾಲ್‌ನವರು. ಟೆಲಿಕಮ್ಯುನಿಕೇಷನ್ಸ್‌ನಲ್ಲಿ ಬಿಇ ಪಡೆದಿರುವ ಇವರು 1998ರಲ್ಲಿ ಐಎಫ್‌ಎಸ್‌ ಸೇರಿದ್ದಾರೆ. ಲೋಕಾಯುಕ್ತ ತನಿಖೆ ವೇಳೆ ರಾಜ್ಯ ಹಾಗೂ ಹೊರರಾಜ್ಯಗಳ ಬಂದರು, ಸ್ಟಾಕ್‌ಯಾರ್ಡ್‌ಗಳಿಗೆ ತೆರಳಿ ಅಕ್ರಮ ರಫ್ತುಗಳ ಕುರಿತ ಮಾಹಿತಿ ಕಲೆ ಹಾಕಿದ್ದಾರೆ. ತನಿಖೆ ಸಂದರ್ಭ ಕಂಪ್ಯೂಟರ್‌ ಸಂಬಂಧಿಸಿದ ದಾಖಲೆಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಿಪಿನ್‌ ಸಿಂಗ್‌
ಮೂಲತಃ ಉತ್ತರ ಪ್ರದೇಶದ ವಿಪಿನ್‌ ಸಿಂಗ್‌ ಮಾಹಿತಿ ತಂತ್ರಜ್ಞಾನ ಪರಿಣಿತ. 1998ರಲ್ಲಿ ಐಎಫ್‌ಎಸ್‌ ಸೇರಿದ ಇವರು ಶಿರಸಿಯಲ್ಲಿ ಕೆಲಸ ಆರಂಭಿಸಿದರು. ನಂತರ ಬೀದರ್‌ನಲ್ಲಿ ಡಿಸಿಎಫ್‌ ಆಗಿ ಕೆಲಸ ಮಾಡಿದ್ದು, ಪ್ರಸಕ್ತ ಇ- ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ ಹರಿದುಬರುತ್ತಿದ್ದ ಹಣದ ಜಾಡು ಹಿಡಿದು ಹೋದ ಇವರು 4,000 ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದ ಅಧಿಕಾರಿಗಳಲ್ಲಿ ಪ್ರಮುಖರು. ಪ್ರಚಾರದ ಹಿಂದೆ ಬೀಳದ ವಿಪಿನ್‌ ಈಗಲೇ ಸಾಕಷ್ಟು ಪ್ರಚಾರ ಸಿಕ್ಕಿದೆ ಎಂದು ಹೇಳುತ್ತಾರೆ.

ತಾಕತ್‌ ಸಿಂಗ್‌ರಣಾವತ್‌
ಈ ತಂಡದ ಅತ್ಯಂತ ಕಿರಿಯ ಅಧಿಕಾರಿ ಇವರು. ಐಎಫ್‌ಎಸ್‌ ಪ್ರೊಬೇಷನರಿ ಅವಧಿಯಲ್ಲಿರುವ ಇವರು ಬೀದರ್‌ ಡಿಸಿಎಫ್‌ ಆಗಿ ವರ್ಗವಾಗಿದ್ದಾರೆ. ಅಂಕೋಲಾದಲ್ಲಿ ಎಸಿಎಫ್‌ ಆಗಿದ್ದ ಇವರು ಬೇಲೆಕೇರಿ ದಾಳಿಯ ಸಂದರ್ಭ ಪ್ರಮುಖ ಪಾತ್ರ ವಹಿಸಿದ್ದರು. ಯುವ ಉತ್ಸಾಹಿ ಅಧಿಕಾರಿ ತಮ್ಮ ಕಿರು ಅವಧಿಯಲ್ಲೇ ಉತ್ತಮ ಹೆಸರು ಮಾಡಿದ್ದಾರೆ. ಮೂಲತಃ ರಾಜಾಸ್ಥಾನದವರು.
(ವಿಜಯnext ನಲ್ಲಿ ಪ್ರಕಟಿತ ಲೇಖನ)

Saturday, May 7, 2011

ಬೆಂಗಳೂರಲ್ಲಿ ಮಾತ್ರ ಇದು ಸಾಧ್ಯ!
Bangalored
ಕನಸಿನಲ್ಲಿ ಮಿಷೆಲ್‌ ಬಂದರೆ ಒಬಾಮಾ ಸಹಿಸಿಕೊಳ್ಳಬಹುದೇನೋ. ಆದರೆ ಈ ಪದ ಕೇಳಿಸಿಕೊಂಡಾಕ್ಷಣ ಮಾತ್ರ ಅಮೆರಿಕದ ಅಧ್ಯಕ್ಷ ನಿದ್ದೆಯಲ್ಲೂ ಬೆಚ್ಚಿಬಿದ್ದು ಎದ್ದುಬಿಡುತ್ತಾರೆ.. ಕಣ್ಣು ಬಿಟ್ಟರೆ ಕಾಣಿಸೋದು `ಬಫೆಲೋ'ದ ಕೆಂಪು ಕಣ್ಣು!
`ಬೆಂಗಳೂರು ಪಾಲಾಗುವುದು' ಎಂಬ ಅರ್ಥದ ಈ ಪದವನ್ನು ಮೊದಲಿಗೆ ಬಳಸಿದ್ದೇ ಅವರು. ಆದರೆ ಒಂದು ಸಂಗತಿ ಸ್ಪಷ್ಟ. ಈ ಪದ ಬರೇ ಅಮೆರಿಕದ ದುಸ್ವಪ್ನ ಎಂದು ನಾವೇನೂ ಸುಮ್ಮನಿರುವ ಹಾಗಿಲ್ಲ. ಯಾಕೆಂದರೆ, ಇಡೀ ಕರ್ನಾಟಕ ಇವತ್ತು Bangalored ಆಗಲು ಹೊರಟಿದೆ.
ಈ ಬೆಂಗಳೂರು ಜತೆ ಸಂಬಂಧ ಹೊಂದಿಲ್ಲದ ಒಂದೇ ಒಂದು ಮಿಡ್ಲ್‌ಕ್ಲಾಸ್‌ ಫ್ಯಾಮಿಲಿ ಸಿಕ್ಕಿದರೆ ಹೇಳಿ (ಹಾಗೇನಾದರೂ ಇದ್ದರೆ ಅವರೇ ನಿಜವಾದ ದೇಸಿಗಳು). ಹಳ್ಳಿ ತೊರೆದು ಮಹಾನಗರಿ ಸೇರುವ ಮಕ್ಕಳನ್ನು ಇಡೀ ಕುಟುಂಬವೇ ಫಾಲೋ ಮಾಡುತ್ತಿದೆ. ಇವತ್ತು ರಾಜ್ಯದ ಶೇ 16ರಷ್ಟು ಜನ ಬೆಂಗಳೂರಲ್ಲೇ ಇದ್ದಾರೆ. ಒಟ್ಟು ಬೆಂಗಳೂರು ಜಿಲ್ಲೆಯ ಜನಸಂಖ್ಯೆ ಕೋಟಿಗೆ ಐದೇ ಲಕ್ಷ ಕಡಿಮೆ.
ಬಿಳಿಕೆರೆಯ ಮೋಹ ಬಿಟ್ಟು ವೈಟ್‌ಫೀಲ್ಡ್‌ಗೆ ದಾರಿ ಹುಡುಕಿದ ಈ ಜನರು ಉ`ದಾರಿ'ಕರಣದ ಶಿಶುಗಳೇ? ಅಲ್ಲಾ, ಗತಿ ಹುಡುಕಿ ಸಿಟಿ ಸೇರಿದ ಜಾ`ಗತೀ'ಕರಣದ ಕೂಸುಗಳೇ? ಹಳ್ಳಿಗಳಿಗಂತೂ ಈಗ ನಿಜವಾಗಿ ಲಿ`ಬರ'ಲೈಸೇಷನ್‌!
ಇಷ್ಟಕ್ಕೂ ಬೆಂಗಳೂರಲ್ಲೇನಿದೆ ಅಂಥ ಸ್ಪೆಷಾಲಿಟಿ? ಸೆಳೆತ? ನೀವೇನಾದರೂ ಕಂಡಿರಾ?
ಎಲ್ಲೂ ಇಲ್ಲದ್ದು ಬೆಂಗಳೂರಲ್ಲಿ ಏನಿದೆ ಅಂತೀರಾ?...
ಇದು ಚಾಣಕ್ಯ ಅವರು ತೆಗೆದ ಫೊಟೋ.
ಅವರ ಹೆಚ್ಚಿನ ಚಿತ್ರಗಳಿಗೆ
http://chanakachanakya.blogspot.com
ಬ್ಲಾಗ್‌ ನೋಡಿ
  • ಎಲ್ಲ ಊರಲ್ಲಿ ನೀರಿಗೆ ಬಂದ ನೀರೆಯರೆಲ್ಲ ಜತೆ ಸೇರಿ ಹರಟೆ ಹೊಡದರೆ ಬೆಂಗಳೂರಲ್ಲಿ ಕಾರ್ಪೊರೇಷನ್‌ ಕಸದ ಗಾಡಿ ಬರುವಾಗ ಎಲ್ಲ ಗೃಹಿಣಿಯರು ಸೇರಿ ಡಿಸ್‌`ಕಸ' ಮಾಡುತ್ತಾರೆ.
  • ಎಲ್ಲ ಕಡೆ ಫುಟ್‌ಪಾತ್‌ನಲ್ಲಿ ಜನ ನಡೆದರೆ ಬೆಂಗಳೂರಲ್ಲಿ ಟೂ ವೀಲರ್‌ಗಳು ಓಡಾಡುತ್ತವೆ
  • ಬೇರೆ ಊರಲ್ಲಿ ಮಾಜಿ ಪ್ರಧಾನಿಗಳ ಹೆಸರಲ್ಲಿ ರೋಡ್‌, ಪ್ರತಿಮೆ ಇದ್ದರೆ ಇಲ್ಲಿ ಪೆಟ್ರೋಲ್‌ ಬಂಕ್‌ ಇದೆ.
  • ದಿನವೂ ಕಂಡರೂ ಒಮ್ಮೆಯೂ ನಗದ ನೇಬರ್‌ ಮದುವೆಗೆ ನಗುನಗುತ್ತಲೇ ಇನ್ವಿಟೇಷನ್‌ ಕೊಡುತ್ತಾರೆ- ಅದರಲ್ಲಿ `ನಿಮ್ಮ ಹೆಸರು ನಮ್ಮ ಮನದಲ್ಲಿ ಹಸಿರಾಗಿದೆ' ಎಂದು ಬರೆದಿರುತ್ತಾರೆ.
  • ಮನೆಯಲ್ಲಿ ಜ್ವರ ಬಂದಾಗ ಮಾತ್ರ ಬ್ರೆಡ್‌ ತಿನ್ನುವ ಐಟಿ ಹುಡುಗ ಆಫೀಸ್‌ ಕ್ಯಾಂಟೀನ್‌ನಲ್ಲಿ ಚಪ್ಪರಿಸಿಕೊಂಡು ಸ್ಯಾಂಡ್‌ವಿಚ್‌ ತಿನ್ನುತ್ತಾನೆ.
  • ಬೇರೆ ಊರಲ್ಲಿ ಚರಂಡಿಯಲ್ಲಿ ಕಸ ಹರಿದುಹೋದರೆ, ಬೆಂಗಳೂರಲ್ಲಿ ಮಕ್ಕಳೇ ಕೊಚ್ಚಿ ಹೋಗುತ್ತವೆ.
  • ಬೆಂಗಳೂರು ವೆದರ್‌ ಒಂಥರಾ ಹುಡುಗಿಯರ ಮೂಡ್‌ ಇದ್ದ ಹಾಗೆ. ಈಗ ಮಳೆ ಇದ್ದರೆ, ಅರ್ಧ ಗಂಟೆಯಲ್ಲಿ ಬಿಸಿಲು ಬರುತ್ತದೆ.
  • ಬೇರೆ ಸಿಟೀನಲ್ಲಿ ಬಸ್‌, ರೈಲಿನಲ್ಲಿ ರಷ್‌ ಇದ್ದರೆ, ಇಲ್ಲಿ ರೋಡಲ್ಲೇ ನೂಕುನುಗ್ಗಲು
  • ಗ್ರೀನ್‌ ಸಿಟಿ ಎಂಬ ಹೆಸರು ಪಡೆದ ಬೆಂಗಳೂರಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು- ಆಟೋಗಳು.
  • ಬೇರೆ ಊರಲ್ಲಿ ಆಂಬುಲೆನ್ಸ್‌ಗೆ ಜನ ದಾರಿ ಮಾಡಿಕೊಟ್ಟರೆ ನಮ್ಮೂರಲ್ಲಿ ಆಂಬುಲೆನ್ಸ್‌ ಹಿಂದೆಯೇ ಹೋಗುತ್ತಾರೆ.
  • ಎಲ್ಲ ಸಿಟಿಗೆ ಒಂದೇ ಹೆಸರು. ನಮ್ಮಲ್ಲಿ  ಸರ್ಕಾರಕ್ಕೆ ಇದು Bangalore  ಖಾಸಗಿ ಕಂಪೆನಿಗಳಿಗೆ Bengaluru
  • ಬೆಂಗಳೂರು ಮಂದಿ ಎದ್ದ ಹಾಗೆ ಪೇಪರ್‌ ನೋಡೋದು- ಇವತು ್ತಕರೆಂಟ್‌, ನೀರಿದ್ಯಾ ಅಂತ ತಿಳಿಯೋಕೆ.
  • 20x30 ಅಡಿ ಜಾಗದ ಮನೆಗೆ ಇಲ್ಲಿ ತ್ರಿಬಲ್‌ ಬೆಡ್ರೂಮ್‌ ಎನ್ನುತ್ತಾರೆ
  • ಸ್ಕೂಲಲ್ಲಿ ಮೈದಾನವೇ ಇಲ್ಲದ ಮಕ್ಕಳು ಸಂಜೆಯ ಹೊತ್ತು ಸೈಬರ್‌ ಕೆಫೆನಲ್ಲಿ  ಗೇಮ್ಸ್‌  `ನೆಟ್‌ ಪ್ರಾಕ್ಟೀಸ್‌' ಮಾಡುತ್ತಿರುತ್ತಾರೆ.
  • ಮೆಟ್ರೊ ರೈಲು ಆರಂಭದ ದಿನವನ್ನು ಮುಖ್ಯಮಂತ್ರಿ ಪ್ರಕಟಿಸುತ್ತಾರೆ. ಹದಿನೈದು ದಿನ ಕಳೆದ ನಂತರ ಇನ್ನೊಂದು ದಿನವನ್ನೂ ಪ್ರಕಟಿಸುತ್ತಾರೆ.
  • ಬೇರೆ ಊರಿನ ಪಾರ್ಕಿನಲ್ಲಿ ಪ್ರೇಮಿಗಳು, ಕಾಫಿ ಅಂಗಡಿಯಲ್ಲಿ ಸೋಮಾರಿಗಳು ಕೂತಿರುತ್ತಾರೆ. ಬೆಂಗಳೂರಲ್ಲಿ ಪಾರ್ಕಿನಲ್ಲಿ ಸೋಮಾರಿಗಳು ಮಲಗಿದರೆ, ಕೆಫೆ ಕಾಫಿನಲ್ಲಿ ಪ್ರೇಮಿಗಳು ಕೂತಿರುತ್ತಾರೆ.
  • ಅಲ್ಲಿ ಮರದ ಕೆಳಗೆ ವೆಹಿಕಲ್‌ ಪಾರ್ಕ್‌ ಮಾಡಿದರೆ, ಇಲ್ಲಿ ಮನೆ ಮುಂದೆ ವೆಹಿಕಲ್‌ ಪಾರ್ಕ್‌ ಮಾಡಲು ಮರ ಕಡಿಯುತ್ತಾರೆ.
  • ಬೇರೆ ಊರಲ್ಲಿ ಸ್ಕೂಲಿನಿಂದ ಬರುವ ಮಕ್ಕಳನ್ನು ಅಮ್ಮ ಕಾದರೆ, ಬೆಂಗಳೂರಲ್ಲಿ ಆಫೀಸಿನಿಂದ ತಡವಾಗಿ ಬರುವ ಅಪ್ಪ-ಅಮ್ಮನನ್ನು ಮಕ್ಕಳು ಕಾಯುತ್ತವೆ.
  • ಇಲ್ಲಿ  ಮೂತ್ರ ಮಾಡಬಾರದು ಎಂಬ ಬೋರ್ಡ್‌ ನೋಡಿದ ಕೂಡಲೇ ಬೆಂಗಳೂರು ಜನಕ್ಕೆ ನೆನಪಿಗೆ ಬರುವುದು ಮೂತ್ರವೇ.
  • ಬೆಂಗಳೂರು ಜನ ಶ್ರೀಮಂತರು. ಏಕೆಂದರೆ, ಪೆಟ್ರೊಲ್‌ಗೆ ಮೂರು ರೂಪಾಯಿ ಜಾಸ್ತಿ ಕೊಡುತ್ತಾರೆ.
(ಇದು ವಿಜಯnext ನಲ್ಲಿ ಪ್ರಕಟವಾದ ಬರಹ)

Sunday, April 10, 2011

ಅರೆ ಇಸ್ಕಿ!

ಬಾಳು ಬಾಲಾಯಿತು


ನನಗೂ ಕ್ರಿಕೆಟ್‌ಗೂ ಸಂಬಂಧ ಅಷ್ಟಕ್ಕಷ್ಟೆ. ಎಷ್ಟೋ ಸಲ ಈ ಮ್ಯಾಚ್‌ ನೋಡಲೇಬೇಕು ಅಂತ ಆಫೀಸಿಗೆ ರಜೆ ಹಾಕಿ ಕೂತದ್ದಿದೆ. ಉಹುಂ, ಕಾಲು ಗಂಟೆ ಕಳೆದ ಕೂಡಲೇ ಬೋರನ್ನಿಸಿಬಿಟ್ಟು, ಇದಕ್ಕಿಂತ ಆ ಆಫೀಸೇ ಬೆಸ್ಟ್‌ ಅಂತ ಅನ್ನಿಸಿದ್ದೂ ಇದೆ. ಕ್ರಿಕೆಟ್‌ ಹುಚ್ಚು ಬೆಳೆಸಿಕೊಂಡು ನಾನೂ ಮನುಷ್ಯನಾಗಬೇಕು ಅಂತ ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿದೆ. ಕಡೆಗೂ ನಾನು ಒಪ್ಪಿಕೊಂಡುಬಿಟ್ಟಿದ್ದೇನೆ- ನನಗೂ ಕ್ರಿಕೆಟ್‌ಗೂ ಆಗಿಬರೊಲ್ಲ ಅಂತ.
ನಮ ಮನೆಯಲ್ಲಿ ನನ್ನನ್ನು ಬಿಟ್ಟರೆ ಎಲ್ಲರಿಗೂ ಕ್ರಿಕೆಟ್ಟೇ ದೇವರು. ನನ್ನಾಕೆಗೋ ಕ್ರಿಕೆಟ್‌ ಎಂದರೆ ಮುಗೀತು. ಹೊಸ ಆಟಗಾರರಿಂದ ಹಿಡಿದು 70ರ ದಶಕದ ಆಟಗಾರರವರೆಗೂ ಎಲ್ಲರ ಹೆಸರು, ಅವರು ಮಾಡಿದ ಸ್ಕೋರ್‌, ಯಾವ ಮ್ಯಾಚ್‌ನಲ್ಲಿ ಯಾರು ಕ್ಯಾಚ್‌ ಹಿಡಿದರು, ಯಾರು ಬಿಟ್ಟಿದ್ದರಿಂದ ಯಾರು ಸೋತರು, ಯಾವ ಸ್ಪಿನ್ನಿಗೆ ಯಾವ ಶಾಟ್‌ ಬೇಕು ಹೀಗೆ ಎಲ್ಲವೂ ಕರಾತಲಮಲಕ. ನಂಗೆ ಅದೆಲ್ಲ ಬೇಜಾರಾಗೊಲ್ಲ. ಆದರೆ ನಾನು ಆಫೀಸಿನಿಂದ ಸುಸ್ತಾಗಿ ಮನೆಗೆ ಬಂದು ಬೆನ್ನು ನೋವು ಅಂತ ಮಲಗಿಕೊಂಡರೆ, ರೀ ಪಾಪ ಸಚಿನ್‌ಗೆ ಭುಜ ನೋವಂತೆ, ಅಫ್ರಿದಿಗೆ ಸೊಂಟ ನೋವಂತೆ ಕಣ್ರೀ ಅಂತಂದುಬಿಡುತ್ತಾಳೆ. ಯಾವ ಗಂಡಸು ತಾನೇ ಇಂಥದ್ದನ್ನು ಸಹಿಸಿಕೊಳ್ಳುತ್ತಾನೆ ಹೇಳಿ?
ವರ್ಲ್ಡ್‌ಕಪ್‌ ಆರಂಭವಾಯಿತೆಂದರೆ ನಮ ಮನೇಲಿ ಸ್ಟೌ, ಕುಕ್ಕರ್‌ಗಳಿಗೆಲ್ಲ ಖುಷಿ. ಒಂದ್ಸಲ ಹೀಗೆ ಆಯಿತು. ಲಾಸ್ಟ್‌ ವರ್ಲ್ಡ್‌ ಕಪ್‌ನಲ್ಲಿ ಡೇ ಅಂಡ್‌ ನೈಟ್‌ ಮ್ಯಾಚ್‌ ಮರುದಿನ ಬೆಳಿಗ್ಗೆ ನಾನು ಎಂದಿನಂತೆ ಏಳು ಗಂಟೆಗೆ ಎದ್ದೆ. ನನ್ನ ಇನ್‌ಬಾಕ್ಸ್‌ನಲ್ಲಿ ಒಂದು ಮೆಸೇಜ್‌ ಬಂದಿತ್ತು. ರಾತ್ರಿ ಮಲಗುವಾಗ ತಡವಾಗಿದೆ. ಅಡುಗೆ ಮನೇಲಿ ಪೆಪ್ಸಿನೂ, ಕುರುಕುರೆನೂ ಇಟ್ಟಿದ್ದೇನೆ. ಬ್ರೇಕ್‌ ಫಾಸ್ಟ್‌ ಮಾಡಿಕೊಂಡು ಆಫೀಸಿಗೆ ಹೋಗಿ. ಡೋಂಟ್‌ ಡಿಸ್ಟರ್ಬ್‌. ಗುಡ್‌ನೈಟ್‌ ಅಂತ. ಕ್ರಿಕೆಟ್‌ ಮಾತ್ರ ಅಲ್ಲ, ಈ ಜಾಹೀರಾತುಗಳೂ ನನ್ನ ಲೈಫನ್ನ ಹಾಳು ಮಾಡ್ತಾ ಇದೆ ಅಂತ ಅರ್ಥ ಆಗಿದ್ದು ನನಗೆ ಅವತ್ತೇ.
ನಾನು ಮದುವೆಯಾಗಿದ್ದು ವರ್ಲ್ಡ್‌ ಕಪ್‌ ಮುಗಿದ ನಂತರದ ತಿಂಗಳು. ಹಾಗಾಗಿ ಮತ್ತೆ ನಾಲ್ಕು ವರ್ಷ ಸಮಸ್ಯೆ ಇರಲಿಲ್ಲ. ಸಂಸಾರಕ್ಕೇನೂ ತೊಂದರೆಯಾಗಿಲ್ಲ. ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು.
ನಾನಾಕೆಯ ಕ್ರಿಕೆಟ್‌ ಪ್ರೀತಿ ಬಗ್ಗೆ ಹೆಚ್ಚು ವಿರೋ ವ್ಯಕ್ತಪಡಿಸುವುದಿಲ್ಲ. ಏನೋ ಅಭಿಮಾನ ಎಂದು ಸುಮನಾಗಿಬಿಡುತ್ತೇನೆ. ಆದರೆ ರಾತ್ರಿ ಮ್ಯಾಚ್‌ ನೋಡಿ ಬೆಳಿಗ್ಗೆ ಎದ್ದು ಧೋನಿದ್ದು ಏನು ಆಟ ಕಣ್ರೀ ಅಂತಾಳಲ್ಲ, ಆಗ ಮನಸ್ಸಿಗೆ ತುಂಬಾ ಕುರ್‌ಕುರೆಯಾಗ್ತದೆ. ಒಮೊಮೆ ವಿನಾ ಕಾರಣ ನನ್ನನ್ನು ಕ್ರಿಕೆಟಿಗರಿಗೆ ಹೋಲಿಸುವಾಗಲಂತೂ ಮೈ ಉರಿದುಬಿಡುತ್ತದೆ. ಅದ್ಯಾಕ್ರೀ ಶ್ರೀಶಾಂತ್‌ ಥರ ಸಿಡುಕುತ್ತೀರಿ, ಸಚಿನ್‌ ಥರ ಉಗುರು ಕಚ್ಕೊತ್ತೀರಿ.. ಹೀಗೆ ನನ್ನನ್ನು ಅವರಿಗೆಲ್ಲ ಹೋಲಿಸಿಬಿಟ್ಟಾಗ ಶಾಂತವಾಗಿ ಹೇಳ್ತೀನಿ- ನೋಡು ಕಣೇ, ಹಾಗೆಲ್ಲ ಕಂಪೇರ್‌ ಮಾಡಬೇಡ. ನಾನು ನಾನೇ ಅಂತ. ತಕ್ಷಣ ಬ್ಯಾಟ್‌ ಮಾಡುತ್ತಾಳೆ- ಅಬ್ಬಾ, ಈಗ ದ್ರಾವಿಡ್‌ ಥರ ಕಾಣಿಸ್ತಾ ಇದ್ದೀರಿ, ಎಷ್ಟು ಕೂಲ್‌.. ಅಂತ!
ಎಷ್ಟೋ ಸಲ ರಾತ್ರಿ ಊಟಕ್ಕೂ ತತ್ವಾರ. ಏನೋ ಪಾಪ ಮ್ಯಾಚ್‌ ನೋಡ್ತಾ ಇದ್ದಾಳೆ ಅಂತ ಅಡುಗೆ ಮಾಡೋಕೆ ಹೋದ್ರೆ ಅಲೂ ್ಲಎಡವಟ್ಟು. ಬೇಳೆಯೋ, ಉಪ್ಪೋ ಇರುವುದೇ ಇಲ್ಲ. ಆಕೆಯ ಕ್ರಿಕೆಟ್‌ ಸಹವಾಸ- ನಮಗೆಲ್ಲ ಉಪವಾಸ ಎಷ್ಟೋ ದಿನ. ಕೇಳಿದ್ರೆ, ಕ್ರಿಕೆಟ್‌ ಎನ್ನೋದು ಧರ್ಮ; ವರ್ಲ್ಡ್‌ಕಪ್‌ ಎನ್ನೋದು ವ್ರತ ಎಂದು ಏನೇನೋ ಬಡಬಡಿಸುತ್ತಿದ್ದಳು.
ನನ್‌ ಬಾಳು ಒಂಥರಾ ಕ್ರಿಕೆಟ್‌ ಬಾಲ್‌ ಥರಾನೇ ಆಗೋಯಿತು. ಯಾರು ಗೆಲ್ತಾರೋ, ಯಾರು ಸೋಲ್ತಾರೋ ನಾನಂತೂ ಹೊಡೆಸಿಕೊಳ್ಳೋದೇ ಆಗೋಯಿತು.
ಇವಳ ಕ್ರಿಕೆಟ್‌ ಹುಚ್ಚು ಅತಿರೇಕಕ್ಕೆ ಹೋಗುತ್ತಿರುವುದನ್ನು ನೋಡಿ ಯಾವುದಾದರೂ ಸೈಕ್ರಿಯಾಟಿಸ್ಟ್‌ ಹತ್ತಿರ ಕರೆದುಕೊಂಡು ಹೋಗಬೇಕು ಎಂದು ತೀರ್ಮಾನಿಸಿದೆ. ಹಗಲು ರಾತ್ರಿ ಕ್ರಿಕೆಟ್‌ ಧ್ಯಾನ ನಿಲ್ಲಿಸದಿದ್ದರೆ ಮುಂದೆ ಅಪಾಯ ಇದೆ ಎಂದು ನನಗೆ ಗೊತ್ತಾಯಿತು. ಫೇಮಸ್ಸು ಡಾಕ್ಟು ನಳಿನಿ ಬಳಿ ಒಮೆ ಕರೆದುಕೊಂಡು ಹೋದೆ. ಥರೋ ಪರೀಕ್ಷೆ ಮಾಡಿ, ಪ್ರಾಬ್ಲಂ ಏನೂ ಇಲ್ಲ. ಸುಮನಿದ್ದು ಬಿಡಿ ಎಂದು ಸಲಹೆ ಕೊಟ್ಟರು. ನನ್ನ ಕಷ್ಟ ಅವರಿಗೆ ಎಲ್ಲಿ ಅರ್ಥವಾಗಬೇಕು? ಅವರು ಗಂಡಸ್ಸಾಗಿದ್ದು, ಇಂಥ ಹೆಂಡತಿ ಇದ್ರೆ ಗೊತ್ತಾಗ್ತ ಇತ್ತೇನೋ?
ಮೊದ ಮೊದಲು ಮಕ್ಕಳ ಜತೆ, ಪಕ್ಕದ ಮನೆ ರೀನಾ ಜತೆ ಕ್ರಿಕೆಟ್‌ ಬಗ್ಗೆ ಚರ್ಚೆ ಮಾಡುತ್ತಿದ್ದ ಈಕೆ ಈಗ ಫೋನಿನಲ್ಲೂ ಸ್ನೇಹಿತರ ಜತೆ ಕ್ರಿಕೆಟ್‌ ಬಗ್ಗೆ ಮಾತಾಡಲು ಶುರು ಮಾಡಿದಳು. ಒಂದು ದಿನ ಅರ್ಧಗಂಟೆಯಾದರೂ ಫೋನ್‌ ಇಟ್ಟಿರಲಿಲ್ಲ, ಬರೇ ಇದೇ ಡಿಸ್ಕಷನ್‌. . . ಏನು ಶಾಟ್‌ ಅದು, ಅವನ ಸ್ಕೇರ್‌ ಕಟ್‌ ಸೂಪರ್‌ ಆಗಿತ್ತು. ಈ ಸ್ಕೋರ್‌ನ ಚೇಸ್‌ ಮಾಡ್ಲಿಲ್ಲ ಅಂದ್ರೆ ಇನ್ನ್ಯಾಕ್ರೀ ಆಡಬೇಕು.. ಹೀಗೆ ಆಕ್ರೋಶಭರಿತ ಮಾತುಗಳು. ಫೋನಿಟ್ಟ ಮೇಲೆ ಕೇಳ್ದೆ- ಯಾರ ಜತೆಗೆ ಇಷ್ಟೊತ್ತು ಕ್ರಿಕೆಟ್‌ ಆಡ್ತಾ ಇದ್ದೆ ಅಂತ. ಅದೇ ಕಣ್ರೀ ಅವತ್ತು ಕರ್ಕೊಂಡು ಹೋಗಿದ್ರಲ್ಲ, ಸೈಕ್ರಿಯಾಟಿಸ್ಟ್‌ ಡಾ. ನಳಿನಿ ಅಂತ ಹೇಳಿದಾಗ ನಾನು ಇಂಡಿಯಾದ ಪಿಚ್ಚಾಗಿಬಿಟ್ಟೆ!
ಬಹುಶಃ ನನ್ನ ಹಾಗೆಯೇ ಎಷ್ಟು ಜನ ಹೀಗೆ ಒದ್ದಾಡುತ್ತಿರಬಹುದೋ ಎಂದು ನನಗೆ ಆಗಾಗ್ಗೆ ಕಾಡುತ್ತಿತ್ತು. ಈ ಬಗ್ಗೆ ಸಾಕಷ್ಟು ಸಲ ಗಂಭೀರವಾಗಿ (ಗೌತಮ್‌ ಗಂಭೀರವಾಗಿ ಅಲ್ಲ) ಯೋಚನೆ ಮಾಡಿದ್ದೆ. ಕ್ರಿಕೆಟ್‌ಪೀಡಕರ ಸಂಘವೊಂದನ್ನು ಕಟ್ಟುವ ಬಗ್ಗೆಯೂ ಯೋಚನೆ ಮಾಡಿದ್ದೆ. ಈ ಐಡಿಯಾವನ್ನು ನನ್ನ ಮಿತ್ರನೊಬ್ಬನಿಗೆ ಹೇಳಿದೆ.
ಅವನಿಗೋ ಆಶ್ಚರ್ಯ! ಅಲ್ಲ ಕಣಪ್ಪ, ಯಾವಾಗಲೂ ಡಕ್‌ಗೆ ಔಟ್‌ ಆಗೋನು ಸೆಂಚುರಿ ಬಾರಿಸಿದಂಗಾಯ್ತಲ್ಲೋ, ನಿನಗೂ ಐಡಿಯಾ ಬಂದಿದೆ ಅಂತ ಕುಟುಕಿದ. ಅದೆಲ್ಲ ಇರಲಿ, ಸಂಘ ಆರಂಭಿಸೋದ ಅಂತ ನೇರವಾಗಿ ಕೇಳ್ದೆ.
ನೋಡು, ಅದೆಲ್ಲ ಓಕೆ. ಸಂಘ ಸ್ಥಾಪಿಸಿ ನಿಮ ಹಿತಾಸಕ್ತಿ ಬಗ್ಗೆ ಹೋರಾಡೋದು ಎಲ್ಲ ಗುಡ್‌ ಐಡಿಯಾನೇ. ಆದರೆ ಒಂದು ಎಡವಟ್ಟು ಆಗಬೋದು..
ನೋಡು, ಸಾಮಾನ್ಯವಾಗಿ ಕ್ರಿಕೆಟ್‌ನ್ನು ಇಷ್ಟಪಡದ ಗಂಡಸರು ಭಾಳ ಕಡಿಮೆ. ಹೀಗಾಗಿ, ನಿನಗೆ ಏನೋ ಐಬಿದೆ ಅಂತ ಜನ ತಿಳ್ಕೊಂಡ್ರೆ ಎಂದು ನೇರವಾಗಿ ನನ್ನ ಪೌರುಷಕ್ಕೇ ಸವಾಲು ಹಾಕಿದ. ಮತ್ತೊಮೆ ಪಿಚ್ಚಾಗಿಬಿಟ್ಟೆ!
ಕ್ರಿಕೆಟ್‌ ವಿರುದ್ಧ ಆಡೋದಕ್ಕಿಂತ ಅಡ್ಜಸ್ಟ್‌ ಆಗಿಬಿಡೋದೇ ವಾಸಿ ಅಂತ ತೀರ್ಮಾನಕ್ಕೆ ಬಂದುಬಿಟ್ಟೆ.
ಇನ್ನೊಂದು ಸಲ, ನನ್ನ ಮಗ ಶಾಲೆಯಿಂದ ಬಂದೋನೇ ಬ್ಯಾಗನ್ನು ಮೂಲೆಗೆ ಎಸೆದು, ಇವರಿಗೆಲ್ಲರಿಕ್ಕಿಂತ ನಮ್‌ ಇಂಡಿಯಾ ಕ್ರಿಕೆಟ್‌ ಟೀಮೇ ಬೆಸ್ಟ್‌ ಅನ್ಸುತ್ತೆ ಅಂತ ಗೊಣಗೋಕೆ ಶುರು ಮಾಡಿದ.
ಅಪ್ಪನ ಕರುಳು ಚುರ್‌ಕ್‌ ಅಂತು. ಕೇಳ್ದೆ, ಏಕೋ, ಏನಾಯಿತೋ ಅಂತ.
ಅಲ್ಲ, ಮನೇಲಿ ನೀನು, ಅಮ ಹೊಡೀತೀರಿ. ಸ್ಕೂಲಲ್ಲಿ ಮೇಷ್ಟ್ರು ಹೊಡೀತಾರೆ. ಇವರೆಲ್ಲರಿಗಿಂತ ನಮ್‌ ಟೀಮೇ ಬೆಟರ್‌ ಅಲ್ವಾ? ಅಂತಂದ.
ಅಮನ ಕ್ರಿಕೆಟ್‌ ಜೀನ್‌ ಮಗನಿಗೂ ಟ್ರಾನ್ಸ್‌ಫರ್‌ ಆಗಿರುವುದು ಕನ್‌ಫರ್ಮ್‌ ಆಯಿತು.