Monday, October 11, 2010

ಆರ್ಟಿಐ ಸುಳಿವು
ಅಕ್ರಮದ 'ಅರಿವು'

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಇಂದಿಗೆ (ಅ.12) ಐದು ವರ್ಷ. ಐದು ವರ್ಷಗಳಲ್ಲಿ  ಆರ್ಟಿಐ ಕಾಯ್ದೆ ಅದೆಷ್ಟು ಸಮರ್ಪಕವಾಗಿ ಬಳಕೆಯಾಗಿದೆ ಎನ್ನುವ ಬಗ್ಗೆ ದೇಶದಲ್ಲಿ ಜಿಜ್ಞಾಸೆ ನಡೆಯುತ್ತಿದೆ. ಹಲವೆಡೆ ಅಧಿಕಾರಿಶಾಹಿಗಳು ಈ ಹಕ್ಕನ್ನು ದಮನ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಆರ್ಟಿಐ ಕಾರ್ಯಕರ್ತರ ಕೊಲೆಗೂ ಇಳಿದ ಪ್ರಕರಣಗಳು ನಡೆದಿವೆ. ಆರ್ಟಿಐ ಕಾಯ್ದೆಯನ್ನು ಬಳಸಿಕೊಂಡು ಜನಸಾಮಾನ್ಯರೊಬ್ಬರು ಎಂಥ ಬದಲಾವಣೆ ತರಬಹುದು ಎನ್ನಲು ಇಲ್ಲಿದೆ ನೋಡಿ ಒಂದು ಉದಾಹರಣೆ. ಇಂಥ ಬದಲಾವಣೆ ಎಲ್ಲೆಡೆ ನಡೆದರೆ? 

  •  ವೆಂಕಟರಾಯಪ್ಪ ಕಳೆದ ವರ್ಷ ತೀರಿಕೊಂಡಿದ್ದಾರೆ. ಆದರೆ ಮೊನ್ನೆ ಮೊನ್ನೆ ಅವರ ಹೆಸರಲ್ಲಿ ಇನ್ನಾರೋ ಸಣ್ಣ ರೈತರಿಗೆ ಸರಕಾರ ನೀಡುವ ಸಹಾಯಧನ ಪಡೆದಿದ್ದು ಬಹಿರಂಗವಾಗಿ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಭಾರಿ ಗದ್ದಲವಾಗಿದೆ.
  •   ಹೈಸ್ಕೂಲ್ ಮಕ್ಕಳೆಲ್ಲ ತಮಗೆ ಸ್ಕಾಲರ್ಶಿಪ್ ಬಂದಿದೆಯೇ ಎಂದು ಹೆಸರನ್ನು ಹುಡುಕುತ್ತಿದ್ದಾರೆ. ಎಷ್ಟೋ ಸಲ, ಸ್ಕಾಲರ್ಶಿಪ್ ಮಂಜೂರಾಗಿದ್ದರೂ ಅವರ ಕೈಗೆ ಸೇರಿರುವುದೇ ಇಲ್ಲ.  ಇನ್ನಾರೋ ಗುಳುಂ ಮಾಡಿರುತ್ತಾರೆ. ಈಗ ಸ್ಕಾಲರ್ಶಿಪ್ ಮಂಜೂರಾದ ವಿದ್ಯಾರ್ಥಿಗಳ ಪಟ್ಟಿಯೇ ಪ್ರಕಟವಾಗುತ್ತದೆ!
 ಇದೆಲ್ಲವೂ ಚಿಂತಾಮಣಿಯ ಜಿ.ವಿ. ಮಂಜುನಾಥ್ ಕರಾಮತ್ತು. ಆ ತಾಲ್ಲೂಕಿನಲ್ಲಿ ಅಕ್ರಮ ಬಹಿರಂಗ ಮಾಡಲು ಅವರೇನು ಒಂದು ದಿನದ ಮುದಲ್ವನ್' ಆಗಿಲ್ಲ.  ಮಾಹಿತಿ ಹಕ್ಕು ಕಾಯ್ದೆ ಮೂಲಕ ಎಲ್ಲವನ್ನೂ ಬಹಿರಂಗಪಡಿಸುತ್ತಿದ್ದಾರೆ. ಅದೂ ಒಂದು ಪತ್ರಿಕೆಯ ಮೂಲಕ.
ಭ್ರಷ್ಟತೆ ಕಂಡಾಗ ಸಿಡಿದೆದ್ದು  ಪ್ರತಿಭಟನೆ ಮಾಡಿಕೊಂಡಿದ್ದ ಮಂಜುನಾಥ್ ಎದುರಿಸಿದ ಆಪತ್ತು ಒಂದೆರಡಲ್ಲ. ಸಮಾನಮನಸ್ಕರನ್ನು ಒಗ್ಗೂಡಿಸಿಕೊಂಡು ವೇದಿಕೆ ರೂಪಿಸಿಯೂ ಹೋರಾಡಿದರು. ಅಲ್ಲೂ ಬೆದರಿಕೆ ಕರೆ, ಕ್ಷಣಕ್ಷಣಕ್ಕೆ ಅಪಾಯ...
ಕೊನೆಗೆ ಅವರು ರೂಪಿಸಿದ ಹೋರಾಟದ ಹೊಸ ಹಾದಿ ಫಲ ಕೊಟ್ಟಿತು.
`ಅರಿವು' ಎಂಬ ದ್ವೈಮಾಸಿಕ ಪತ್ರಿಕೆ ಆರಂಭಿಸಿದರು. ಚಿಂತಾಮಣಿ ತಾಲ್ಲೂಕಿಗೆ ಸೀಮಿತವಾದ ಈ ಪತ್ರಿಕೆಯಲ್ಲಿ ಸುದ್ದಿಗಳಿರುವುದಿಲ್ಲ, ಜಸ್ಟ್ ಮಾಹಿತಿಗಳು. ಮಾಹಿತಿ ಹಕ್ಕು ಕಾಯ್ದೆಯಡಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ  ಕಾರ್ಯಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುವ ಮಂಜುನಾಥ್ ಅದನ್ನು  ಪತ್ರಿಕೆಯಲ್ಲಿ ಪ್ರಕಟಿಸಲು ಆರಂಭಿಸಿದರು. ಇದರಿಂದ ತಾಲ್ಲೂಕಿನಲ್ಲಿ ನಡೆಯುವ ಹಲವು ಅಕ್ರಮಗಳು ಕಚೇರಿಯ ನಾಲ್ಕು ಗೋಡೆಯಿಂದ ಹೊರಗೆ ದಾಟಿ ಬಂದಿವೆ.
ಎರಡು ತಿಂಗಳಿಗೊಮ್ಮೆ ಹೊರಬರುವ ಈ ಪತ್ರಿಕೆಯಲ್ಲಿ ಪ್ರಕಟವಾಗುವ ಒಂದೊಂದು ಸುದ್ದಿಯೂ ರೋಚಕ, ಸೆನ್ಸೇಷನಲ್!  ಈ ಮೂಲಕ ಅವರು ಅಕ್ರಮದ ವಿರುದ್ಧ ಹೋರಾಡುತ್ತಿದ್ದಾರೆ. ಆ ಸ್ಯಾಂಪಲ್ಗಳನ್ನು ನೋಡಿ.
* ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಪಡೆದ ಮಾಹಿತಿ ಅನ್ವಯ 12ನೇ ಹಣಕಾಸು ಆಯೋಗದ ಅನುದಾನದ ಹಂಚಿಕೆಯನ್ನು ಪತ್ರಿಕೆಯಲ್ಲಿ ಮಂಜುನಾಥ್ ಪ್ರಕಟಿಸಿದರು. ಅದರ ಪ್ರಕಾರ 25 ಕಾಮಗಾರಿಗಳಿಗೆ 19 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಕ್ರಿಯಾಯೋಜನೆಯ ಪೂತರ್ಿ ವಿವರ ಪ್ರಕಟವಾಯಿತು.
-ಮರುದಿನ ತಾಪಂ ಕಚೇರಿಗೆ ಜನರೇ ಮುಗಿಬಿದ್ದರು, ನಮ್ಮೂರಿನಲ್ಲಿ ಅಂಗನವಾಡಿ ಕಟ್ಟಡವೇ ಇಲ್ಲ. ಅದರ ದುರಸ್ತಿಗೆ 78 ಸಾವಿರ ಕೊಟ್ಟಿದ್ದೀರಿ. ಈ ಹಣ ಏನು ಮಾಡುತ್ತೀರಿ ಎಂಬ ಪ್ರಶ್ನೆ. ಮತ್ತೊಬ್ಬರು- ನಮ್ಮೂರಿನ ಅಂಗನವಾಡಿಗೆ ಸುಣ್ಣ ಬಳಿಯಲು ಖಚರ್ಾಗಿದ್ದು 3,000 ರೂಪಾಯಿ. ಇಷ್ಟೊಂದು ದೊಡ್ಡ ಮೊತ್ತ ತೋರಿಸಿದ್ದೀರಿ.  ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆ.
ಸಿಡಿದೆದ್ದ ಜನರಿಗೆ ಹೆದರಿದ ತಾಲ್ಲೂಕು ಪಂಚಾಯಿತಿ ಅಂಥ ಕಾಮಗಾರಿಗಳನ್ನು ಕೈ ಬಿಟ್ಟರು, 13 ಲಕ್ಷ ರೂಪಾಯಿ ಉಳಿಯಿತು. ನುಂಗಣ್ಣರು ಬೆಪ್ಪಣ್ಣರಾದರು!
* ಸಣ್ಣ ರೈತರಿಗೆ ಸಕರ್ಾರ ನೀಡುವ 1,000 ರೂಪಾಯಿ ಸಹಾಯಧನ ಈ ವರ್ಷ ಯಾರ್ಯಾರಿಗೆ ಸಂದಿದೆ ಎನ್ನುವ ಮಾಹಿತಿಯನ್ನು ಅರಿವು ಪ್ರಕಟಿಸಿತು.
ಆ ಪಟ್ಟಿಯಲ್ಲಿ  ಮಾಜಿ ಶಾಸಕರ ಸಂಬಂಧಿ, ದೊಡ್ಡ ರೈತರ ಹೆಸರೂ ಇತ್ತು, ನಿಧನರಾದ ರೈತರ ಹೆಸರೂ ಇತ್ತು ಅರ್ಹ ರೈತರು ರೊಚ್ಚಿಗೆದ್ದರು.
* ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡ ವಿದ್ಯಾಥರ್ಿಗಳ ಪಟ್ಟಿ ಒಮ್ಮೆ ಪ್ರಕಟವಾಯಿತು.
ಅಚ್ಚರಿಯ ಸುರಿಮಳೆ. ಎಷ್ಟೊ ಮಂದಿ ವಿದ್ಯಾಥರ್ಿಗಳೇ ಅಲ್ಲ. ಫೋರ್ಜರಿ ಸಹಿಗೆಲ್ಲ ವಿದ್ಯಾಥರ್ಿ ವೇತನ. ಈ ಹಗರಣದ ವಿರುದ್ಧ ಈಗಲೂ ವಿದ್ಯಾರ್ಥಿಗಳೂ ಹೋರಾಟ ಮಾಡುತ್ತಿದ್ದಾರೆ.
* ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಬೇಕಾದರೆ ನಿಜವಾದ ಶುಲ್ಕ 1,926 ರೂಪಾಯಿ. ಆದರೆ ಚಿಂತಾಮಣಿಯ ಹಲವು ಗ್ಯಾಸ್ ಏಜೆನ್ಸಿಗಳಲ್ಲಿ 5,000ಕ್ಕೂ ಹೆಚ್ಚು ಹಣ ಪಡೆಯುತ್ತಿದ್ದರು, ಈ ಬಗ್ಗೆ ಹೋರಾಡಿದರು ಮಂಜುನಾಥ್. ದುಬಾರಿ ಹಣ ಕೊಟ್ಟು ಕೈ ಸುಟ್ಟುಕೊಂಡ ಜನರ ದಂಡೇ ಏಜೆನ್ಸಿ ಮುಂದೆ ಜಮಾಯಿಸಿತು, ಈಗ ಎಲ್ಲವೂ ಸರಿ ಹೋಗಿದೆ.
* ಪ್ರಕೃತಿ ವಿಕೋಪ ನಿಯಡಿ ಶೆಟ್ಟಿಹಳ್ಳಿಯಲ್ಲಿ ಜುಟ್ಟುವಿನ ಕೆರೆ ಏರಿ ದುರಸ್ತಿಗೆ 2 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಬಿತ್ತರವಾಯಿತು,
-ಮುಂದಿನ ಸಂಚಿಕೆಯಲ್ಲಿ ಆ ಊರಿನ ಓದುಗರು ಪತ್ರ ಬರೆದರು- ನಮ್ಮೂರಲ್ಲಿ ಆ ಹೆಸರಿನ ಕೆರೆಯೇ ಇಲ್ಲವಲ್ಲ ಎಂದು!
ಇವೆಲ್ಲ ಸ್ಯಾಂಪಲ್ಗಳಷ್ಟೇ.
ಮಂಜುನಾಥ್ ಬರೇ ಪತ್ರಿಕೆಯಲ್ಲಿ ಮಾಹಿತಿ ಹಾಕಿ ಸುಮ್ಮನೆ ಕೂರೋದಿಲ್ಲ. ಅನ್ಯಾಯದ ವಿರುದ್ಧ ಹೋರಾಡಲು ಜನರಿಗೆ ಮಾರ್ಗದರ್ಶನವನ್ನೂ ನೀಡುತ್ತಾರೆ. ಇದಕ್ಕಾಗಿ `ಮಾಹಿತಿ ಕೇಂದ್ರ'ವನ್ನೂ ಆರಂಭಿಸಿದ್ದಾರೆ.
ಈ ಪತ್ರಿಕೆಯ ಪ್ರಕಾಶಕರಾದ ಶ್ರೀನಿವಾಸಪುರದ ಪಿ.ಎಸ್.ರೆಡ್ಡಿ ಇಂಥ ಪತ್ರಿಕೆಯನ್ನು ಕೋಲಾರ ಜಿಲ್ಲಾ ಮಟ್ಟದಲ್ಲಿ  ತರಲು ಉದ್ದೇಶಿಸಿದ್ದಾರೆ.
`ಜನರಿಗೆ ತಿಳುವಳಿಕೆ ಬಂದು ಅವರೇ ಹೋರಾಡುವಂತಾಗಬೇಕು. ಹಾಗಾದಾಗ ಮಾತ್ರ ಭ್ರಷ್ಟಾಚಾರ ತೊಡೆಯಲು ಸಾಧ್ಯ' ಎನ್ನುತ್ತಾರೆ ಮಂಜುನಾಥ್. ಈಗ ಚಿಂತಾಮಣಿಯಲ್ಲಿ ಕೊಂಚ ಮಟ್ಟಿಗೆ ಪಾರದರ್ಶಕತೆ ಬಂದಿದೆ.



Wednesday, October 6, 2010

ಅಳುವುದು ಸುಲಭ; ಆಳುವುದು ಕಷ್ಟ!
-ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು
-ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ
ಇದು ಬಹುಶಃ  ರಾಜಕೀಯ ದುರಂತ ಇರಬೇಕು. ಒಬ್ಬ ವ್ಯಕ್ತಿಗೇ ಇಂಥ ಎರಡೆರಡು ವಿರೋಧಾಭಾಸದ `ಬಿರುದಾಂಕಿತ'!
ಸಮರ್ಥ ವಿರೋಧ ಪಕ್ಷದ ನಾಯಕನೊಬ್ಬ ಸಮರ್ಥ ಆಡಳಿತಗಾರನಾಗಲಾರ ಎನ್ನುವ ವಿಪರ್ಯಾಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ  ಸಾಬೀತುಪಡಿಸಿಬಿಟ್ಟಿದ್ದಾರೆ. ಅವರೊಬ್ಬ ದುರ್ಬಲ ಮುಖ್ಯಮಂತ್ರಿ ಎನ್ನುವುದನ್ನು  ವಿರೋಧಿಗಳು ಹೇಳಿದ್ದರೆ ಅದು ಸಹಜ ಟೀಕೆ ಎಂದು ತಳ್ಳಿಹಾಕಬಹುದಿತ್ತು. ಆದರೆ ಇದನ್ನು ಅವರ ಪಕ್ಷದವರೇ ಒಳಗೊಳಗೆ ಹೇಳಿಕೊಳ್ಳುತ್ತಿರುವುದರಿಂದ ಇದೊಂದು ನಿರ್ವಿವಾದ ಅಂಶ.
ಯಾವುದಾದರೂ ಸಂಕಟಕ್ಕೆ ಸಿಕ್ಕಿಹಾಕಿಕೊಂಡಾಗಲೆಲ್ಲ  `ಇದು ನನಗೆ ಇನ್ನೊಂದು ಅಗ್ನಿ ಪರೀಕ್ಷೆ' ಎಂದು ಹೇಳುತ್ತಿದ್ದ ಯಡಿಯೂರಪ್ಪ ತಮ್ಮ ರಾಜಕೀಯ ಪ್ರಬುದ್ಧತೆ ತೋರಲು ಅಡಿಗಡಿಗೆ ಸೋತರು. ಒಮ್ಮೆಯೂ ಅವರು ತನ್ನ  ಧೋರಣೆಯಲ್ಲಿ ಇರಬಹುದಾದ ಸಮಸ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲೂ ಹೋಗಲಿಲ್ಲ. ವಿರೋಧ ಪಕ್ಷದ ಸ್ಥಾನಕ್ಕೆ ಹೇಗೆ ಭಾವುಕತೆ, ರೊಚ್ಚು ತುಂಬಿದರೋ ಅದನ್ನೇ ಮುಖ್ಯಮಂತ್ರಿ ಸೀಟಿಗೂ ಅಂಟಿಸಿದರೆ ಸಾಕು ಸುಲಭವಾಗಿ ಐದು ವರ್ಷ ಆಡಳಿತ ನಡೆಸಬಹುದು ಎಂದು ತಿಳಿದುಕೊಂಡಿದ್ದರೋ ಏನೋ. ಆದರೆ ಆ ಸೀಟು ಡಿಮಾಂಡ್‌ ಮಾಡುವುದೇ ಬೇರೆಯ ಸ್ವಭಾವವನ್ನು ಎಂಬುದನ್ನು  ಮರೆತೇಬಿಟ್ಟರು.ಕೆಟ್ಟದ್ದಾಗಿ ಅಳುವುದರಿಂದ ಸಿಂಪಥಿ ಗಳಿಸಬಹುದು; ಆದರೆ ಕೆಟ್ಟದ್ದಾಗಿ ಆಳುವುದರಿಂದ ಅಲ್ಲ;
ಬಿಡಿಸಿ ನಿವಾಳಿಸಿ ಎಸೆಯಬಹುದಾಗಿದ್ದ ಬಲೆಯಲ್ಲೂ  ಯಡಿಯೂರಪ್ಪ ಬಿದ್ದು  ತೊಳಲಾಡಿಬಿಟ್ಟರು. ಇಲ್ಲದಿದ್ದರೆ ಯಾವುದೇ ಬಲ ಇಲ್ಲದ ರೇಣುಕಾಚಾರ್ಯರಂಥ ಶಾಸಕರೊಬ್ಬರ ಮರ್ಜಿಗೆ ಸರ್ಕಾರ ಬೀಳಬೇಕಿತ್ತೇ? ಜಸ್ಟ್‌ ತಮಗೆ ಮಂತ್ರಿಗಿರಿ ಬೇಕೆನ್ನುವ ಕಾರಣದಿಂದ ರೆಸಾರ್ಟ್‌ಗಳಲ್ಲಿ ಅಡಗಿ ಕುಳಿತು ಅವರು ಸರ್ಕಾರವನ್ನು ಹೆದರಿಸುತ್ತಾರೆಂದರೆ... ಅದು ರೇಣುಕಾಚಾರ್ಯ ಅವರ ಸಾಮರ್ಥ್ಯವಂತೂ ಖಂಡಿತಾ ಅಲ್ಲ. ಮುಖ್ಯಮಂತ್ರಿ ದೌರ್ಬಲ್ಯವಲ್ಲವೇ?
2009ರಲ್ಲಿ  ನೆರೆ ಕಂಡ ಒಂದೇ ತಿಂಗಳಲ್ಲಿ  ರೆಡ್ಡಿ ಸೋದರರ ಬಂಡಾಯಕ್ಕೆ ಮುಖ್ಯಮಂತ್ರಿ ಕಡಿವಾಣ ಹಾಕಿದ್ದರೆ ಇಷ್ಟೊಂದು ಅಧ್ವಾನ ಎದುರಿಸುವ ಅಗತ್ಯವಂತೂ ಇರುತ್ತಿರಲಿಲ್ಲ. ಆದರೆ ಅಲ್ಲಿಂದ ಅವರು ಹೆಜ್ಜೆ ಹೆಜ್ಜೆಗೆ ಮಂಡಿಯೂರುತ್ತಲೇ ಬಂದರು. ಸ್ವಾಭಿಮಾನಕ್ಕಿಂತ ಅಧಿಕಾರದ ಕುರ್ಚಿ ದೊಡ್ಡದ್ದು ಎನ್ನುವ ತಮ್ಮ ಅಂತರಾಳದ ಅಭಿಮತವನ್ನು ಜಗಜ್ಜಾಹೀರು ಮಾಡಿಬಿಟ್ಟರು.
ಯಾವುದೇ ಒಬ್ಬ  ಸ್ಟ್ರಾಂಗ್‌ ಮುಖ್ಯಮಂತ್ರಿ ತಮ್ಮದೇ ಪಕ್ಷದ ಶಾಸಕರಿಗೆ ಅಂಜಿಕೊಂಡು ಕೂರುವ ಅಗತ್ಯ ಹೇಗೆ ಇಲ್ಲವೋ ಹಾಗೆಯೇ ಶಾಸಕರನ್ನು ಪೂರ್ಣ ಕಡೆಗಣಿಸಿ ದೌಲತ್ತು ಮಾಡುವುದೂ ಅಸಂಬದ್ಧ. ಇದೇ ಯಡಿಯೂರಪ್ಪ ಅವರ ದ್ವಂದ್ವ. ಒಂದು ಕಡೆ ತಮ್ಮ ಪಕ್ಷದ ಶಾಸಕರನ್ನು ಪೂರ್ಣ ಕಡೆಗಣಿಸಿ ನಿರಂಕುಶ ಪ್ರಭು ಆಗಿಬಿಟ್ಟರೆ, ಇನ್ನೊಂದು ಕಡೆ ಕೆಲವರ ಬ್ಲಾಕ್‌ಮೇಲ್‌ಗೆ ಬೆದರಿ ಅವರು ಹೇಳಿದ್ದಕ್ಕೆಲ್ಲ ಸಹಿ ಹಾಕಿಬಿಡುವ ಕಾರಕೂನರಾಗಿಬಿಟ್ಟರು. ಇದೆರಡನ್ನೂ ಸರಿದೂಗಿಸಿಕೊಂಡು ಹೋಗದೇ ಇದ್ದುದೇ ಇಂದು ಯಡಿಯೂರಪ್ಪ ಸಂಕಟಕ್ಕೆ ಕಾರಣ.
ಸಂಪುಟ ಪುನರ್ರಚನೆ ಬೇಡ ಎಂದು ಯಾರೋ ಶಾಸಕ ಬಹಿರಂಗ ಹೇಳಿಕೆ ನೀಡುತ್ತಾನೆ ಎಂದರೆ, ನನಗೆ ಮಂತ್ರಿಗಿರಿ ಕೊಡದಿದ್ದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಇನ್ನೊಬ್ಬ ಶಾಸಕ ಕತ್ತಿ ಝಳಪಿಸುತ್ತಾನೆ ಎಂದರೆ, ಅದೆಲ್ಲಿಂದಲೋ ಕುಳಿತು ಈ ಸರ್ಕಾರ ನೆಟ್ಟಗಿಲ್ಲ ಎಂದು ಒಬ್ಬ ಶಾಸಕ ಮಾಧ್ಯಮಕ್ಕೆ ಬೈಟ್‌ ಕೊಡುತ್ತಾನೆ ಎಂದರೆ, ಅಧಿಕಾರಿ ಟ್ರಾನ್ಸ್‌ಫರ್‌ನ್ನು  ಇನ್ನೊಬ್ಬ ಮಂತ್ರಿ ಕ್ಯಾನ್ಸಲ್‌ ಮಾಡಿಸುತ್ತಾನೆ ಎಂದರೆ, ಭಾರಿ ಹಗರಣದಡಿ ಸಿಲುಕಿಯೂ ಬಚಾವಾಗುತ್ತಾರೆ ಎಂದರೆ... ಅದು ಮುಖ್ಯಮಂತ್ರಿಯ ಅಸಹಾಯಕತೆಯನ್ನಲ್ಲದೆ ಇನ್ನೇನನ್ನು ಹೇಳೀತು?
ಬಿಜೆಪಿ `ಸಹಿಷ್ಣುತೆ'
ಇನ್ನೊಂದು ದುರಂತ ಎಂದರೆ: ಶಿಸ್ತನ್ನು ಗುತ್ತಿಗೆಗೆ ಪಡೆದುಕೊಂಡಿದ್ದೇವೇನೋ ಎನ್ನುವ ಪೋಸ್‌ ಕೊಡುತ್ತಿದ್ದ ಬಿಜೆಪಿ ಯಡಿಯೂರಪ್ಪ ಸರ್ಕಾರದ ಇಷ್ಟೊಂದು ಅಶಿಸ್ತು- ಅಪಸ್ಯವಗಳನ್ನು  ಸಹಿಸಿಕೊಂಡಿವೆ. ಅಂದರೆ, ಸಂಘಟನೆ  `ಸಹಿಷ್ಣುತೆ'ಯನ್ನು ಮೈಗೂಡಿಸಿಕೊಂಡಿದೆ ಎಂದು ವ್ಯಾಖ್ಯಾನಿಸಿಕೊಳ್ಳಬಹುದೇ?
ಬಿಜೆಪಿಯಂಥ ಒಂದು ರಾಷ್ಟ್ರೀಯ ಪಕ್ಷ ಅನಾಯಕತ್ವಕ್ಕೆ ಈಡಾದರೆ ಏನಾಗಬಲ್ಲುದು ಎಂಬುದಕ್ಕೆ ಕರ್ನಾಟಕದ ಪೊಲಿಟಿಕ್ಸ್‌ಗಿಂತ ಬೇರೆ ನಿದರ್ಶನ ಏಕೆ ಬೇಕು? ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡ ಬಿಜೆಪಿ ಧುರೀಣರು ಇವತ್ತು ಅವರದ್ದೇ ಪಕ್ಷದ ಶಾಸಕರಿಂದ ಅದೇ ಹೆಬ್ಬಾಗಿಲು ಮುಚ್ಚುತ್ತಿರುವುದನ್ನು ನೋಡಿ ಸುಮ್ಮನೆ ಕೂತುಬಿಟ್ಟಿದ್ದಾರೆ.
ಆಪರೇಷನ್‌ ಕಮಲದಂಥ ಚಟುವಟಿಕೆಯನ್ನು  ಒಂದಷ್ಟು  ಜನ ಒಪ್ಪಿಕೊಳ್ಳಬಹುದು. ಆದರೆ, ಆ ಒಪ್ಪಿಗೆ ಲಕ್ಷ್ಮಣ ರೇಖೆಯನ್ನು  ದಾಟಿದಾಗಲೂ ಪಕ್ಷದ ಹೈಕಮಾಂಡ್‌ ಸುಮ್ಮನಿತ್ತು. ರೆಡ್ಡಿ ದೂಳು ಇಡೀ ಕರ್ನಾಟಕವನ್ನು ಮುಚ್ಚಿಕೊಂಡಾಗಲೂ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದರು. ಹಗರಣಗಳ ಮೇಲೆ ಹಗರಣ ಸುರಿದಾಗಲೂ ಶಿಸ್ತಿನ ಪಕ್ಷದ ಸುಮ್ಮನಿತ್ತು, ಭ್ರಷ್ಟಾಚಾರ ತಾರಕಕ್ಕೆ ಹೋದಾಗಲೂ ಬಿಜೆಪಿ ಗಪ್‌ಚುಪ್‌... ಆ ಮೌನಗಳೇ ಇವತ್ತು ಬಿಜೆಪಿಯನ್ನು ಇಷ್ಟೊಂದು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಜೆಪಿ ನಾಯಕರು ಈಗ ಕಾಂಗ್ರೆಸ್‌-ಜೆಡಿಎಸ್‌ ನಾಯಕರನ್ನು ಬಯ್ಯಬಹುದು. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಈ ನಾಯಕರು ಕೈ ಹಾಕಿದ್ದೂ ನಿಜ. ಆದರೆ, ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ಮರೆಮಾಚಲಾಗದು. ಬಿಜೆಪಿ ಮತ್ತು ಯಡಿಯೂರಪ್ಪ  ಈಗ ಕನ್ನಡಿ ಮುಂದೆ ನಿಂತುಕೊಂಡರೆ ರಾಜ್ಯಕ್ಕೆ ಒಳಿತು.

Friday, October 1, 2010

ಭೂ ಹಗರಣದ ಸುದ್ದಿ ಓದಿ ದಣಿದವರಿಗೆ ಈ ಜೋಕ್‌..
`ನಾನು ಮುಖ್ಯಮಂತ್ರಿಯಾಗಲಾ?
ಬ್ರಹ್ಮ ಸೃಷ್ಟಿ ಕಾರ್ಯ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಒಂದಷ್ಟು ಜನರ ಗುಂಪೊಂದು ಆತನ ಬಳಿ ಬಂತು.
`ಅರೆ ಏನಾಯಿತು ನಿಮಗೆಲ್ಲ. ನಿಮ್ಮನ್ನು ಅವತ್ತೇ ಮ್ಯಾನುಫ್ಯಾಕ್ಚರ್‌ ಮಾಡಿ ಕಳಿಸಿದೆನಲ್ಲ?'
ಆ ಗುಂಪು ಹೇಳಿತು- `ಕ್ವಾಲಿಟಿ ಚೆಕ್‌ನಲ್ಲಿ ರಿಜೆಕ್ಟ್‌ ಆಗಿ ಬಂದಿದ್ದೇವೆ ಸರ್‌. ಏನು ಮಾಡೋದು?'
ಬ್ರಹ್ಮನಿಗೆ  ಫುಲ್‌ ತಲೆಬಿಸಿ. ಮತ್ತೊಮ್ಮೆ ಎಲ್ಲರನ್ನೂ ಪರೀಕ್ಷಿಸಿದ.
`ಓಹೋ, ನಿಮಗೆ ಐರನ್‌ ಕಂಟೆಂಟ್‌ ಕೊರತೆ ಇದೆ. ಹೋಗಿ ನೀವು ಕಬ್ಬಿಣ ತಿಂದು ಬದುಕಿ' ಎಂದು ಕಳುಹಿಸಿಕೊಟ್ಟ. ಅವರು ಬಳ್ಳಾರಿ ಮಂತ್ರಿಗಳಾದರು.
'ಇದೊ ನಿಮಗೆ ಸೈಟ್‌ ಸಮಸ್ಯೆ ಇದ್ದ ಹಾಗಿದೆ. ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಮಾಡಿಕೊಂಡು ಬದಕ್ಕಳಿ' ಎಂದ. ಅವರೆಲ್ಲ  ಸೈಟ್‌ ವ್ಯಾಪಾರ ಮಾಡಿಕೊಂಡು ಬೆಂಗಳೂರಿನ ಮಂತ್ರಿಗಳಾದರು.
'ಅಯ್ಯಯ್ಯೋ, ನಿಮ್‌ ಮೇಲೆ ನಿಮಗೆ ಕಂಟ್ರೋಲ್‌ ಇರಲ್ಲವಲ್ಲ.. ನಿಮಗೇನು ಮಾಡ್ಲಿ...?' ಎಂದು ಬ್ರಹ್ಮ ಚಿಂತೆ ಮಾಡುವಷ್ಟರಲ್ಲೇ ಆ ವ್ಯಕ್ತಿ ಅಂದ- `ನಾನು ಮುಖ್ಯಮಂತ್ರಿಯಾಗಲಾ?' ಅಂತ.

Sunday, September 26, 2010

ಹನಿ... ಹನಿ... ಹನಿ...

ಬೆಂದಕಾಳೂರು ತೊಯ್ದು ತೊಪ್ಪೆಯಾಗಿದೆ. ಭೋರನೆ ಸುರಿದ ಮಳೆಯ ಸಂಕಷ್ಟದ ನಡುವೆಯೂ ಅಲ್ಲೊಂದು ಇಲ್ಲೊಂದು ಬಿದ್ದ ಹನಿ ಇಲ್ಲಿದೆ.
*    *    *   
ಅಂದು..
ಸರ್‌, ಕಾರ್ಪೊರೇಷನ್ನಾ?
ಹೌದ್ರೀ
ನಮನೇಲಿ ಮೂರು ದಿನದಿಂದ ನೀರಿಲ್ಲ.
ಇಂದು..
ಸರ್‌, ಕಾರ್ಪೋರೇಷನ್ನಾ
ಹೌದ್ರೀ
ನಮನೆ ತುಂಬಾ 3 ದಿನದಿಂದ ನೀರಿದೆ!
* * *   
ಹೀಗೊಂದು ಸುದ್ದಿ- ಬೆಂಗಳೂರಲ್ಲಿ ಭಾರಿ ಮಳೆ. "ಬಾವಿ'ಗಿಳಿದು ಮಹಾ"ಸಾಗರ'ದ ಪ್ರತಿಪಕ್ಷಗಳ ಧರಣಿ.
*    *    *
ಮನೆ ಮಾಲೀಕ : ಎಲ್ಲ ಅನುಕೂಲಾನೂ ಇದೆ. 24 ಅವರ್‌ ವಾಟರ್‌. ಚೆನ್ನಾಗಿ ಗಾಳಿ ಬರುತ್ತೆ. ಪಾರ್ಕಿಂಗ್‌ ನೋ ಪ್ರಾಬ್ಲಂ. ಅಕ್ಕಪಕ್ಕದವರು ತುಂಬಾ ಸೈಲೆಂಟ್‌. ಬಸ್‌ಗಳು ಬೇಕಷ್ಟಿವೆ. ಕೂಲ್‌ ಏರಿಯಾ.
ಬಾಡಿಗೆದಾರ: ಸರ್‌, ಮನೆ ತಂಕ ದೋಣಿ ಬರುತ್ತಾ?
*    *    *   
ಕೊನೆಗೂ "ಸಿಲಿಕಾನ್‌ ಕಣಿವೆ' ಹೆಸರು ಸಾರ್ಥಕವಾಯಿತು. ಈಗ "ಕಣಿವೆ' ತುಂಬಾ ನೀರು!
*    *    *
ದಾರಿಹೋಕ (ಅಡ್ರೆಸ್‌ ಚೀಟಿ ತೋರಿಸಿ) ಸರ್‌, ಸ್ವಲ್ಪ ಅಡ್ರೆಸ್‌ ಹೇಳ್ತೀರಾ?
"ಸೀದಾ ಹೋಗಿ. ಮುಂದೆ ಸಿಗ್ನಲ್‌ ಇರುತ್ತೆ. ಬರೀ ನೀರಿರುತ್ತೆ. ಗಾಬ್ರಿಯಾಗಬೇಡಿ. ಪ್ಯಾಂಟನ್ನು ಮಡಚಿ ಶೂವನ್ನು ಬಿಚ್ಚಿ, ನಿಧಾನವಾಗಿ ಮುಂದೆ ಹೋಗಿ. ಎಡಬಲದಲ್ಲಿ ನಿಂತ ಬಸ್ಸಿರುತ್ತೆ. ಅದಕ್ಕೆ ಹತ್ತಬೇಡಿ. ಅದು ಎಲ್ಲಿಗೂ ಹೋಗಲ್ಲ. ಮತ್ತೆ ಬಲಕ್ಕೆ ತಿರುಗಿ. ಈಗ ನೀರು ಆಳ ಜಾಸ್ತಿಯಾಗಿರುತ್ತೆ. ಈಜೋದೇ ಗತಿ. ಹಾಗೇನೇ ಎರಡೂವರೆ ಕಿಮೀ ಈಜಿ. ಅಲ್ಲಿ ಅಪಾರ್ಟ್‌ಮೆಂಟ್‌ನ 4ನೇ ಮಾಡಿ ಸಿಗುತ್ತೆ. ಅಲ್ಲಿ "ಇಳಿ'ಯಬೇಡಿ. ಮುಂದೆ ಹೋಗಿ, ಅಲ್ಲಿ ಇನ್ನೊಂದು ಸರ್ಕಲ್‌ ಸಿಗುತ್ತೆ. ಅಲ್ಲೇ ಎಡಕ್ಕೆ ಈಜಿ. ಅದೇ ಕ್ರಾಸ್‌ನಲ್ಲಿ ನಿಮ ಅಡ್ರೆಸ್‌ ಇದೆ. ಮನೆ ಇದ್ರೆ ಅದೃಷ್ಟ. ಗುಡ್‌ಲಕ್‌..!
*    *    *
ಬೆಂಗಳೂರಿನ ಹುಡುಗನ ಜತೆ ಮದುವೆ ಫಿಕ್ಸ್‌ ಆಗಿದೆ ಎಂದಾಕ್ಷಣ ಗುಲ್ಬರ್ಗ ಹುಡುಗಿ ನಾಚಿ "ನೀರಾದಳು"
*    *    *
ಹೀಗೊಂದು ಸುದ್ದಿ: ಜಲನಗರದಲ್ಲಿ ರಸ್ತೆಗಳೆಲ್ಲ ತುಂಬಿ ಹರಿಯುತ್ತಿರುವುದರಿಂದ ಎರಡು ಬೋಟ್‌ಗಳ ನಡುವೆ ಡಿಕ್ಕಿಯಾಗಿ ನಾಲ್ವರು ಮುಳುಗಿದ್ದಾರೆ.
(ಇದು 2006ರಲ್ಲಿ ಪ್ರಜಾವಾಣಿಯಲ್ಲಿ  ಪ್ರಕಟವಾದ ಲೇಖನ. ಈಗಲೂ ಪರಿಸ್ಥಿತಿ ಬದಲಾಗಿಲ್ಲ ಬಿಡಿ)

Friday, September 24, 2010

ಅರೆ ಇಸ್ಕಿ


ನಾವೂ ಬರ್ತೀವಿ ಕಲೆಕ್ಷನ್‌ಗೆ...
ಬಡ್ಡಿಕುಮಾರನ ಬಗ್ಗೆ  `ಇಂಟ್ರೆಸ್ಟ್‌ ' ಇದ್ದರೆ ಈ ಕತೆ ಓದಿ.
ದಿನಾ ತಿರುಗಾಟದಲ್ಲಿರುವ ಬಡ್ಡಿಕುಮಾರ ಅವತ್ತು ಸ್ವಲ್ಪ ಬೇಗ ಮನೆಗೆ ಬಂದ. ಬಡ್ಡಿ ಕಲೆಕ್ಷನ್‌ಗೆ ಹೋಗ್ತಾನೆ. ಎಷ್ಟೊತ್ತಿಗೋ ಮನೆಗೆ ಬರ್ತಾನೆ. ಅವನ ಕಾಲಲ್ಲಿ ಚಕ್ರ ಇದೆ ಅಂತ ಮನೆಯವರು ಹೇಳಿದರೆ, ಅವನ ಕೈಯಲ್ಲಿ ಚಕ್ರಬಡ್ಡಿ ಇದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದರು.  ತಿರುಗಾಟ ಆತನ ಹುಟ್ಟುಗುಣವಾದ್ದರಿಂದ ಮನೆಯಲ್ಲಿದ್ದವರೂ ಸಹ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅವತ್ತು ಹಾಗಾಗಲಿಲ್ಲ. ಮನೆಗೆ ಬಂದು ನೋಡುತ್ತಾನೆ.. ಎಲ್ಲ  ಉಲ್ಟಾ ಪಲ್ಟಾ.
ಹಾಲ್‌ನಲ್ಲಿ  ಕುರ್ಚಿ ಅಡಿಮೇಲಾಗಿದೆ; ಟೀಪಾಯಿ ಒಡೆದುಹೋಗಿದೆ. ಒಂದಷ್ಟು ಹುಡುಗರು ಅಲ್ಲೆಲ್ಲೋ ಮೂಲೆಯಲ್ಲಿ ಕೂತು ಮಾತಾಡುತ್ತಿದ್ದಾರೆ. ಗುಸು.. ಗುಸು...
ಕುಪಿತನಾದ ಬಡ್ಡಿಕುಮಾರನ ಪಿತ್ತ ನೆತ್ತಿಗೇರಿತು.
`ಯಾರೋ ಅದು, ನಾನೂ ಬಂದ್ರೂ ಸುಮ್ನೆ ಇದ್ದೀರಲ್ಲ?' ಅಂತ ಕಿರುಚಿದ
ಉಹುಂ ನೋ ರಿಪ್ಲೈ..
ಅವಿಭಕ್ತ ಕುಟುಂಬದಲ್ಲಿ ಬಡ್ಡಿಕುಮಾರನೇ ಹಿರೀಕ. ಈವರೆಗೆ ಅವನಿಗೆ ಇಂಥ ಅನುಭವ ಆಗಿರಲೇ ಇಲ್ಲ. ಮನೆಯಲ್ಲಿರುವ ಎಲ್ಲರೂ ತಲೆಬಾಗಿ ನಿಂತುಕೊಳ್ಳೋರು. ಈಗ ನೋಡಿದರೆ, ಒಬ್ಬೊಬ್ಬರ ಮುಖ ಒಂದೊಂದು ಕಡೆ.
ಮಧ್ಯಮನನ್ನು ಕರೆದು ಕೇಳಿದ `ಏನೋ ರಾಮಿ, ಗರ ಬಡ್ದಿದೆಯೇನು?
ತಲೆಬೋಳಿಸಿಕೊಂಡಿದ್ದ ರಾಮಿ ಸ್ಲೋ ಮೋಷನ್‌ನಲ್ಲಿ ಕತ್ತು ಎತ್ತಿದ. ತೆಲುಗು ಸೀರಿಯಲ್‌ಪ್ರಿಯನಾದ ಅತ ಸೀರಿಯಲ್‌ನಂತೆಯೇ ಮುಖದಲ್ಲಿ ಒಂದಷ್ಟು ಭಾವನೆ ತೋರಿಸಿ ಸ್ಲೋ ಆಗಿ ಬಾಯಿಬಿಟ್ಟ.. 'ಅಲ್ಲಾ, ನೀನ್ಯಾಕೋ ಒಂದಲ್ಲ ಒಂದು ತಪ್ಪು ಮಾಡ್ತಾ ಇದ್ದೀಯ. ಚಂದ್ರಣ್ಣ ಮೋಸ ಲೆಕ್ಕ ಮಾಡ್ದ ಅಂತ ಬಡ್ಡಿ ವ್ಯವಹಾರದಿಂದ ಕಿತ್ತು ಹಾಕಿದ್ದೀರಿ. ಈಗ ಮತ್ತೆ ಕರ್ಕಬಂದಿದ್ದೀರಿ. ನಾವೆಲ್ಲ ಗಲಾಟೆ ಮಾಡಿದ್ದಕ್ಕೆ ಶೀಬಾಕ್ಕನ ಕಿತ್ತು ಹಾಕಿದ್ರಿ. ಈಗ ಮತ್ತೆ ಪವರ್‌ ಕೊಡ್ತೀರಿ. ನೀವು ವ್ಯವ್ಹಾರದಾಗೆ ಲಾಸ್‌ ಆದಾಗ ಬಡ್ಡಿ ಕಲೆಕ್ಷನ್‌ ಮಾಡ್ಕೊಟ್ಟ ಶಿವೀಗೆ ಈಗ ವ್ಯವಹಾರಕ್ಕೆ ತಲೆ ಹಾಕ್ಬೇಡ ಅಂತೀರಿ. ಇದೆಲ್ಲಾ ಸರೀನಾ?'
ಬಡ್ಡಿಕುಮಾರನಿಗೆ ವಿಷಯ ಅರ್ಥವಾಗುತ್ತಾ ಬಂತು. ಬಡ್ಡಿ ಕಲೆಕ್ಷನ್‌ ಮಾಡೋಕೆ ಕುಮಾರ ಒಬ್ಬೊಬ್ಬರನ್ನು ಒಂದೊಂದು ಲೈನ್‌ಗೆ ಕಳಿಸ್ತಾನೆ. ಇದರಲ್ಲೇ ಯಡವಟ್ಟಾಗಿದ್ದು ಅನ್ನೋದು ಗೊತ್ತಾಯಿತು.
ರಾಮಿ ಹೇಳೋದ್ರಲ್ಲಿ ನಿಜಾ ಇದೆ. ನಾವು ಇನ್ವೆಸ್ಟ್‌ ಮಾಡಿಲ್ಲಾಂದ್ರೆ ನೀವು ಹೆಂಗೆ ವ್ಯವಹಾರ ಮಾಡ್ತಾ ಇದ್ರೀ? ಲಾಭ ಬಂತೂಂತ ನಮನ್ನೇ ಮರೆಯೋದಾ? ಅಲ್ಲೆಲ್ಲೋ ಮೂಲೆಯಲ್ಲಿದ್ದ ಜನ್ನು ಬಂದು ಪ್ರಶ್ನೆ ಒಗಾಯಿಸಿದ.
ಏನು ಉತ್ತರ ಕೊಡೋದು ಗೊತ್ತಾಗದೆ, ಬಡ್ಡಿಕುಮಾರ ತತ್ತರಿಸಿಬಿಟ್ಟ.
"ಅಲ್ಲ.. ಅಲ್ಲ.. ಹಂಗಲ್ಲ. ಇದರಲ್ಲಿ ನಂದೇನಿಲ್ಲ' ಅಂತ ತಡವರಿಸುತ್ತಿರುವಾಗಲೇ ಬ್ಲೇಡಪ್ಪ ಬಂದ. ಬಡ್ಡಿ ಕುಮಾರನ ಸೋದರ ಈ ಬ್ಲೇಡಪ್ಪ. ಒಮೊಮೆ ಇವರಿಬ್ಬರು ಜಗಳ ಮಾಡ್ತಾರೆ. ಲಾಭ ಸರಿ ಸಿಕ್ಕಾಗ ಜತೆಯಾಗಿಬಿಡುತ್ತಾರೆ. ಯಾವಾಗಲೂ ಬ್ಲೇಡ್‌ ಹಿಡಿದುಕೊಂಡೇ ಓಡಾಡುತ್ತಾನೆ. ನಾಲಿಗೆ ಕತ್ತರಿಸ್ತೀನಿ ಅಂತಾ ಇರ್ತಾನೆ. (ನಿಜವಾಗಿಯೂ ನಾಲಿಗೆ ಕತ್ತರಿಸಿದ್ದಾನೋ ಅಂತ ಗೊತ್ತಿಲ್ಲ)
"ನೋಡ್ರೀ, ನಿಮ್ದೇನು ಸಮಸ್ಯೆ? ವಾರ ವಾರ ನಿಮ್ಗೆ ಕಲೆಕ್ಷನ್‌ ಸರಿಯಾಗಿ ಸಿಕ್ತಾ ಇದೆಯೋ, ಇಲ್ವೋ ಹೇಳಿ. ಯಾರ್ನ ಕಲೆಕ್ಷನ್‌ಗೆ ಕಳ್ಸಬೇಕೂಂತ ನಾವು ಡಿಸೈಡ್‌ ಮಾಡ್ತೀವಿ. ಇಲ್ಲಾಂದ್ರೆ ನಿಮ್‌ ದಾರಿ ನೋಡ್ಕೊಳ್ಳಿ ಅಂತಂದುಬಿಟ್ಟ ಬ್ಲೇಡಪ್ಪ.
ಒಂದು ನಿಮಿಷ ಇಡೀ ಮನೆಯಲ್ಲಿ ಮೌನ. ಬ್ಲೇಡಪ್ಪನ ಮಾತಿಂದ ಹೆದರಿದ್ದು ಬಡ್ಡಿಕುಮಾರ. ಅಷ್ಟರಲ್ಲಿ, ಕಣ್ಣಲ್ಲಿ ನೀರುತುಂಬಿಕೊಂಡು ಅದರ ಮೇಲೆ ಕನ್ನಡಕ ಹಾಕಿಕೊಂಡು ಚೇಳೂರಪ್ಪ ಬಂದ. ಅದೇನ್ರಿ ಹಂಗಂತೀರಿ. ಸರಿ ಬಿಡಿ, ನಮ್‌ ದಾರಿ ನೋಡ್ಕೊತ್ತೀವಿ. ನಾನು ನಾಳೇನೇ ಮನೆ ಬಿಟ್ಟು ಹೋಗ್ತೀನಿ. ಅದೇನು ಮಾಡ್ಕತ್ತೀರೋ ಮಾಡ್ಕಳಿ. ನನ್ನ ಕಲೆಕ್ಷನ್‌ ಲೈನ್‌ಗೆ ಕಳಿಸ್ತೀರೋ ಇಲ್ವೊ ಹೇಳಿ ಅಂದ. ಇವನ ಜತೆ ಮುತ್ತಪ್ಪನೂ ಸೇರಿಕೊಂಡ.
ತಕ್ಷಣ ಚೇಳೂರಪ್ಪನ ಹೆಗಲ ಮೇಲೆ ಕೈ ಹಾಕಿದ ಕುಮಾರ ದೂರ ಕರ್ಕೊಂಡು ಹೋಗಿ ಅದೇನು ಕಲೆಕ್ಷನ್‌ ಮೋಡಿ ಮಾಡಿದ್ನೋ ಗೊತ್ತಿಲ್ಲ. ಚೇಳೂರಪ್ಪ ಸುಮನಾಗಿಬಿಟ್ಟ.
ಅಷ್ಟರಲ್ಲಿ ಸರವಿಂದನ ಮೊಬೈಲ್‌ಗೆ ಕಾಲೊಂದು ಬಂತು. ಜೋರಾಗಿ ಕೂಗಿ ಹೇಳಿದ ಆತ "ಓಹೋ.. ಇದು ಮನಂತಕುಮಾರನ ಫೋನ್‌. ಸುಮ್ನಿರಿ.. ಶ್‌..!
ಮೊಬೈಲ್‌ನ್ನು ಹಿಡಿದುಕೊಂಡು ಗತ್ತಿನಿಂದ ದೂರಕ್ಕೆ ಹೋಗಿ ಹುಂ, ಹುಂ.. ಹುಂ.. ಎನ್ನಲಾರಂಭಿಸಿದ.
ಬಡ್ಡಿಕುಮಾರನಿಗೂ ಮನಂತಕುಮಾರನಿಗೂ ಮೊದಲಿನಿಂದಲೂ ಆಗೊಲ್ಲ. ಬಡ್ಡಿ ಕಲೆಕ್ಷನ್‌ ಇನ್‌ಚಾರ್ಜ್‌ ತಗೋಬೇಕು ಅಂತ ಮನಂತ ಭಾಳಾನೇ ಟ್ರೈ ಮಾಡಿ ಸೋತಿದ್ದ.
ಮನೆಯಲ್ಲಿ ಇನ್ನೊಂದು ಡ್ರಾಮಾ ನಡೀತಾ ಇರೋದನ್ನ ನೋಡಿದ ಬಡ್ಡಿಕುಮಾರ ಹೇಳಿಯೇಬಿಟ್ಟ.. ನೋಡ್ರಿ, ಇದು ಫೈನಲ್‌. ನಾನು ಈಗ ಸರವಿಂದ, ಗೋಳಪ್ಪ, ಶಿವಿ ಇವರನ್ನ ಕಲೆಕ್ಷನ್‌ನಿಂದ ತೆಗೀತಾ ಇದ್ದೀನಿ. ಶೀಬಾ, ಸೀಮಣ್ಣ, ನಾಗಾಯಣ, ರಾಮಪ್ಪ, ಶಂಕರಪ್ಪ, ಪೋಥೇಲ ಇವರನ್ನು ಕಲೆಕ್ಷನ್‌ಗೆ ಸೇರಿಸಿಕೊಳ್ತಾ ಇದ್ದೀನಿ.. ಅಂತ ಹೇಳಿ ಹೊರಟೇ ಬಿಟ್ಟ.. ಕಲೆಕ್ಷನ್‌ಗೆ.
ಗೋಳಪ್ಪನ ಗೋಳು ಮನೆ ಇಡೀ ತುಂಬಿಕೊಂಡಿತು. ಅಯ್ಯಯ್ಯೋ.. "ನಂಗೆ ಮೋಸ ಮಾಡಿಬಿಟ್ರು, ನನ್‌ ಕಲೆಕ್ಷನ್‌ ಪೂರ್ತಿಯಾಗಲೇ ಇಲ್ಲ., ಅಷ್ಟು ಬೇಗ ಕಿತ್ತು ಹಾಕಿಬಿಟ್ರಲ್ಲ. ನಾನು ಆತಹತ್ಯೆ ಮಾಡ್ಕೊತ್ತೀನಿ" ಅಂತ ಹೇಳಿ ಮನೆಯಲ್ಲೆಲ್ಲ ಹೊರಳಾಡಿ ಕಣ್ಣೀರು ಹಾಕಿಬಿಟ್ಟ.
ಯಾವಾಗಲೂ ಗಲಾಟೆ ಮಾಡ್ತಾ ಇದ್ದ ಜನ್ನು, ಮುತ್ತಪ್ಪ ಸೈಲೆಂಟಾಗಿಬಿಟ್ರು.
ಬ್ಲೇಡಪ್ಪ ಎಲ್ಲರಿಗೂ ಕಲೆಕ್ಷನ್‌ ಬೀದಿ ಹಂಚಿದ. ಶೀಬಾಗೆ ಪ್ರತ್ಯೇಕವಾಗಿ ಕರ್ದು ಹೇಳ್ದ.. ನೋಡು- ನಿಂಗೆ ಕೊಟ್ಟ ಬೀದಿ ಬಿಟ್ಟು ಬೇರೆ ಕಡೆ ತಲೆಹಾಕಿದಿಯೋ ಹುಷಾರ್‌ ಅಂತ.
ಸೀಮಪ್ಪನ ಕರ್ದು ಬ್ಲೇಡಪ್ಪ.. ನಿಂಗೆ ಆಹಾರ ಬೀದಿ ಕೊಟ್ಟಿದ್ದೀನಿ. ಲಾಸ್ಟ್‌ ಟೈಮ್‌ ವೀರಪ್ಪನ ತರ ಮಾಡಬೇಡ.. ಅಂತ ಹೇಳಿ ನಕ್ಕ.
ಆ ನಗು ಇಡೀ ಮನೆಯಲ್ಲಿ ಪ್ರತಿಧ್ವನಿಸಿತು.
ಲೈನ್‌ ಸಿಗದವರು ಹ್ಯಾಪ್‌ ಮೋರೆ ಹಾಕಿಕೊಂಡು ಅಟ್‌ಲೀಸ್ಟ್‌ ನಮಗೆ ಕಲೆಕ್ಷನ್‌ಗೆ ಒಂದು ಕ್ರಾಸ್‌ ಆದ್ರೂ ಕೊಡ್ರೀಪ ಅಂತ ಗುಟ್ಟುಗುಟ್ಟಾಗಿ ಕೇಳಲು ಶುರುಮಾಡಿದರು. ಲೈನ್‌ ಸಿಕ್ಕವರೆಲ್ಲ ಬ್ಯಾಗ್‌ ಹೆಗಲೇರಿಸಿಕೊಂಡು ಹೊರಟೇಬಿಟ್ಟರು ಕಲೆಕ್ಷನ್‌ಗೆ!

Monday, September 20, 2010

ಉತ್ತರ ಕರ್ನಾಟಕದ ನೆರೆಗೆ ಒಂದು ವರ್ಷ..





ನೆರೆ- ಹೊರೆಯ ಹತ್ತು ಚಿತ್ರಗಳು

                                      ಭರವಸೆಯ ಕಂಗಳು                                                      
ರಾಯಚೂರಿನ ಕಟಕನೂರಿನ ಇದೇ ಶೆಡ್‌ ಒಂದು ವರ್ಷದಿಂದ ಇವರಿಗೆಲ್ಲ ಅರಮನೆ!
ಈ ಹುಡುಗನ ಕಾತರ ಕ್ಯಾಮೆರಾಕ್ಕೆ ಸೆರೆಯಾಗಿದ್ದು ಹೀಗೆ...

ಯಾರ್ಯಾರದೋ ಬದುಕಿನ ಬದುವಿನ ಮೇಲೆ ಸೊಟ್ಟ ಸೊಟ್ಟನೆ ಹರಿದು ಹೋದ ನದಿ ಈಗ ತಣ್ಣಗಾಗಿದ್ದಾಳೆ. ನನಗೇನೂ ಗೊತ್ತಿಲ್ಲ ಎಂಬಂತೆ ಸೈಲೆಂಟಾಗಿಬಿಟ್ಟಿದ್ದಾಳೆ. ಆದರೆ ಇವರೆಲ್ಲರ ಬದುಕೇ ಹರಿದು ಹೋಗಿದೆ. ಹಾಸಿಗೆ ಹಿಡಿದ ಅಮ್ಮನನ್ನು ಬಿಟ್ಟು ದುಡಿಯಲು ಹೋದ ಮಗ ಬರುವುದೇ ಎರಡು ತಿಂಗಳಿಗೊಮ್ಮೆ; ಶೀಟಿನ ಮನೆಯ ತೊಪ್ಪೆ ನೆಲಕ್ಕಿಂತಲೂ ಸುಂದರವಾದ ಜಗತ್ತೊಂದು ಹೊರಗೆ ಇದೆ ಎನ್ನುವ ಅರಿವು ಆ ಪುಟಾಣಿಗಿಲ್ಲ; ಬೆಂಗಳೂರಿಗೆ ಕೆಲಸಕ್ಕೆಂದು ಹೋದ ಗಂಡ ಮತ್ತೆ ಮನೆಗೆ ಬರುತ್ತಾನೆ ಎನ್ನುವ ನಂಬಿಕೆಯೂ ಕಂಕುಳಲ್ಲಿ ಹಸುಳೆ ಹೊತ್ತುಕೊಂಡ ಆಕೆಗೆ ಇಲ್ಲ; ನಾಳೆ ಕೆಲಸ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ; ರಾತ್ರಿ ಹೊಟ್ಟೆ ತುಂಬುತ್ತದೆ ಎಂಬ ಭರವಸೆಯೂ ಇಲ್ಲ . ಒಂದು ವರ್ಷದ ಇಂಥ ಛಿದ್ರ ಬದುಕಿನ ಇಲ್ಲಗಳ ಮಧ್ಯೆ ಉಳಿದಿರುವುದು ಬದುಕುವ ಛಲ ಮಾತ್ರ. ಒಡೆದುಹೋದ ಬದುವನ್ನು ಮತ್ತೆ ಕಟ್ಟಿ ಜೀವನದಲ್ಲಿ ಪಚ್ಚೆ ಕಾಣುವ ಕನಸು ಮಾತ್ರ. 
ಗದಗ, ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ  ಕಂಡುಬಂದ ಅಂಥ ಹರಿದ ಹತ್ತು ಚಿತ್ರಗಳು ಇಲ್ಲಿವೆ...

1
ಮುರಿದುಹೋದ ಹಗ್ಗದ ಮಂಚದಲ್ಲಿ ಮಲಗಿದ್ದ ರಾಧಾಗೆ ಇನ್ನೂ ವರ್ಷ ತುಂಬಿಲ್ಲ. ಬರ್ತ್‌ಡೇ ಯಾವಾಗ ಎಂದು ಕೇಳಿದರೆ ಅವಳ ಅಮ್ಮನ ಕಂಗಳಲ್ಲಿ ನೀರು ತುಂಬುತ್ತದೆ. ಮಲಪ್ರಭ ಇಡೀ ಊರಿಗೆ ಊರನ್ನೇ ನುಂಗಿದಾಗ ರಾಧಾ ಹುಟ್ಟಿದ್ದಳಂತೆ.
ಇಡೀ ಊರು ಉಳಿಯಲು ಚಡಪಡಿಸುತ್ತಿರಬೇಕಾದರೆ ಹುಲಿಯಮ್ಮಳ ಗರ್ಭದಲ್ಲಿ ಕದಲಿಕೆ. ಮಣ್ಣಿನ ಮನೆ ಕಣ್ಣಮುಂದೆ ಕರಗುತ್ತಿರುವಾಗಲೇ ಕರುಳಬಳ್ಳಿಗೆ ಜನುಮ ನೀಡಿದಳು. ನೀರಿನ ನಡುವೆಯೇ ಕಂದಮ್ಮನನ್ನು ಸೆರಗಲಿ ಕಾಪಿಕೊಂಡು ಬಂದ ಆಕೆ ಸೇರಿದ್ದು  ಬಿ.ಎಸ್‌.ಬೇಲೇರಿ ನಿರಾಶ್ರಿತರ ಕ್ಯಾಂಪಿಗೆ (ಗದಗದ ರೋಣ ತಾಲ್ಲೂಕು). ದಾರಿಯಲ್ಲಿ ಬರುವಾಗ ಕೂಸು ಒಮ್ಮೆ ನೀರಿಗೂ ಬಿದ್ದಿತ್ತು. ಅದೃಷ್ಟಕ್ಕೆ ರಾಧಾ ಬದುಕುಳಿದಳು.
ನೆರೆ ಬಂದದ್ದಕ್ಕೆ ಸಾಕ್ಷಿಯಾಗಿ ಕಣ್ಣಿನಲ್ಲೇ ಕತೆ ಹೇಳುವ ಪುಟಾಣಿಗೆ ಈಗ ಹನ್ನೊಂದು ತಿಂಗಳು. ಅಮ್ಮ- ಅಜ್ಜಿ ಹೆಸರುಕಾಳು ಹೊಲದಲ್ಲಿ ದುಡಿದು ಹೊಟ್ಟೆ ತುಂಬಿಸುತ್ತಾರೆ. ಹಾಗೆ ದುಡಿದರೆ ಸಂಜೆ ಊಟ; ಇಲ್ಲದಿದ್ದರೆ ಉಹುಂ ಏನೂ ಇಲ್ಲ. ರಾಧಾಳಂಥ ಎಲ್ಲ ಮಕ್ಕಳಿಗೂ ಇಲ್ಲಿ ಅದೇ ಗತಿ. ಇನ್ನು ಸ್ಕೂಲೆಲ್ಲಿ ಬಂತು?
ಈ ಸ್ಥಿತೀಲಿ ಹ್ಯಾಂಗ್ರೀ ಈ ಮಕ್ಕಳನ್ನು ಸಾಕೋದು? ಬೇಕಾದ್ರೆ ಒಯ್ಯಿರಿ.. ನೀವೇ ಸಾಕಿಕೊಳ್ಳಿ ಹೀಗಂತ ಕ್ಯಾಂಪಿಗೆ ಬರುವ ಪ್ಯಾಟಿ ಜನಕ್ಕೆಲ್ಲ ಬಿಸಲಮ್ಮ ಆಫರ್‌ ಇಡುತ್ತಾಳೆ!
ಅದಾವುದೂ ಗೊತ್ತಾಗದ ಮಗು ಸುಮ್ಮನೆ ನಕ್ಕುಬಿಡುತ್ತದೆ.

2
ಅಲ್ಲಿ ನಗುವ ಮಗು. ಇಲ್ಲೊಂದು ಕಡೆ ಮಗು ಸದಾ ಅಳುತ್ತಿರುತ್ತದೆ.
ಹಡೆದವ್ವ ಬಿಟ್ಟು ಕೆಲಸಕ್ಕೆ ದೂರಕ್ಕೆ ಹೋಗಿದ್ದಾಳೆ. ಎಲ್ಲಿ ಹೋಗಿದ್ದಾಳೋ ಯಾರಿಗೆ ಗೊತ್ತು? ಮಗುವಂತೂ ರಾಯಚೂರಿನ ತಲಮಾರಿ ಕ್ಯಾಂಪಿನಲ್ಲಿ ಅಳುತ್ತಿದೆ. ಆತನ ಹೆಸರು ಇಶಾಕ್‌. ವಯಸ್ಸು ಒಂದು ದಾಟಿದೆ.
ಇಡೀ ಕ್ಯಾಂಪಿನಲ್ಲಿ ಓರಗೆಯ ಮಕ್ಕಳೆಲ್ಲ ಆಡುತ್ತಿರಬೇಕಾದರೆ ಈತನಿಗೆ ಅದೆಲ್ಲ ಬೇಡ. ಮೈ ಇಡೀ ಕಜ್ಜಿ. ಎರಡೂ ಕೈಗಳಲ್ಲಿ ತುರಿಸಿಕೊಳ್ಳಲೂ ಟೈಮಿಲ್ಲ. ಯಾರಾದರೂ ಕೊಟ್ಟ ತಿಂಡಿ ತಿಂದುಕೊಂಡು ಕಾಲು ಕೆರೆದುಕೊಂಡು ಕೂತಿರುತ್ತಾನೆ. ತಲಮಾರಿಯ ಈ ಶೆಡ್‌ಗಳೇ ಹಾಗಿದೆ. ಸಂಜೆಯಾಯಿತೆಂದರೆ ಸೊಳ್ಳೆಗಳ ದಾಳಿ. ಹಾವು, ಚೇಳುಗಳಿಗೂ ಇದು ನಿರಾಶ್ರಿತರ ಶಿಬಿರ! `ನಮಗೋ ದಿನಾ ಚೇಳು ಹಿಡಿದು ಕೊಲ್ಲುವುದೇ ಕೆಲಸ' ಎಂದು ಈರಮ್ಮ ಭುಸುಗುಡುತ್ತಾಳೆ.
ಆದರೇನು, ಅಲ್ಲಿನ ಜನನಾಯಕರಿಗೆ ಈ ಕೋಪದ ಭುಸ್‌ ತಟ್ಟುವುದೇ ಇಲ್ಲ.

3
ಹಾವು-ಚೇಳುಗಳ ಸಿಟ್ಟೆಲ್ಲ ಸಾಮಾನ್ಯ ಜನರ ಮೇಲೆಯೇ!
ಈ ಅಮಾಯಕರ ಮೇಲೆ ಆ ಹಾವಿಗೆ ಏನು ಕೋಪವೋ? ತಲಮಾರಿಯ ಅಭದ್ರ ಶೆಡ್‌ಗೆ ನುಸುಳಿಬಂದ ಹಾವೊಂದು ತಾಯಪ್ಪನನ್ನು ಕಚ್ಚಿ ಹಾಗೆಯೇ ಹರಿದುಹೋಯಿತು. ಈಗ ಆತನ ಹೆಂಡತಿ ಬಸಮ್ಮ, ಮಗಳು ಭೀಮೇಶಮ್ಮ, ಮಗ ನಾಗರಾಜ್‌ ಅನಾಥರು. ಜಲಪ್ರಳಯದಿಂದ ಪಾರಾಗಿ ಸಾವನ್ನು ಗೆದ್ದೇಬಿಟ್ಟೆವಲ್ಲ ಎಂದು ನಿಡಿದು ಉಸಿರು ಬಿಟ್ಟ ಜನರೇ ಈಗ ಉಸಿರು  ಹಿಡಿದು ನಿಂತುಕೊಂಡಿದ್ದಾರೆ! ಅದೇ ತಾಯಪ್ಪನ ಪಕ್ಕದ ಮನೆಯಲ್ಲಿ ಅನಾಥವಾಗಿ ಮಲಗಿರುವ ನರಸಿಂಹುಡು ಊಟ ಬಿಟ್ಟಿದ್ದಾನೆ. ಆಸ್ತಮಾದಿಂದ ಉಸಿರಾಡಲೂ ಆಗುತ್ತಿಲ್ಲ. ಮೂಳೆಗಳ ಹಂದರವಾದ ಆತ ಅಷ್ಟೇ ದುರ್ಬಲವಾದ ಶೆಡ್‌ನ ನೆಲದ ಮೇಲೆ ಬಿದ್ದಿದ್ದಾನೆ.. ತಮ್ಮನನ್ನು ಉಳಿಸಿಕೊಡಿ ಎಂದು ಅವನ ಅಣ್ಣ ಬಂದವರಲ್ಲೆಲ್ಲ ಗೋಗರೆಯುತ್ತಿದ್ದಾನೆ.
ಕ್ಯಾಂಪಿನ ಮೇಲೆ ಗಿಡುಗ ಸುತ್ತುತ್ತಲೇ ಇದೆ!

4
ಇಷ್ಟಾದರೂ ಒಂದಷ್ಟು ಕನಸುಗಳನ್ನು ಹಿಡಿಯಲ್ಲಿಟ್ಟುಕೊಂಡು ಸಂಧ್ಯಾಜೀವಿಗಳು ಆಕಾಶ ನೋಡುತ್ತಿವೆ. ಮತ್ತೆ ತಮ್ಮ ಜೀವಿತ ಕಾಲದಲ್ಲಿ ಅಂಥ ಮಳೆ ಬರಲಾರದು ಎನ್ನುವ ನಂಬಿಕೆ ಅವರದು. 
ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಶೆಡ್‌ನಲ್ಲಿ ಇಂಥ ಹಲವು ಜೀವಗಳು ಹೊಸಬದುಕಿಗೆ ಹಪಹಪಿಸುತ್ತಿವೆ. ಮಹ್ಮದ್‌ ಆಲಿ ಹಾಸಿಗೆ ಬಿಟ್ಟೇಳುವ ಸ್ಥಿತಿಯಲ್ಲಿಲ್ಲ. ಆದರೂ, ಹೊರಗಿನವರು ಯಾರೇ ಬರಲಿ. ನಮ್ಮ ಜನರಿಗೆ ಸೌಕರ್ಯ ಕೊಡಿ. ನೀರಿಲ್ಲ, ಕರೆಂಟಿಲ್ಲ, ಮನೆ ಇಲ್ಲ ಎಂದು ಸಮಸ್ಯೆಗಳನ್ನು ಪಟ್ಟಿ ಮಾಡಿಕೊಡುತ್ತಾರೆ.
ಈ ಕ್ಯಾಂಪಿಗೆ ಯಾರೇ ಹೋಗಲಿ, ಸಾಲುಸಾಲಾಗಿ ವೃದ್ಧಜೀವಗಳೆಲ್ಲ ಬಂದು ನಿಂತುಕೊಂಡುಬಿಡುತ್ತಾರೆ. ಹೊಸ ಬದುಕು ಕಾಣಬಹುದೋ ಎನ್ನುವ ನಿರೀಕ್ಷೆ. ಪರಿಹಾರ ಸಿಗಬಹುದೋ ಎಂಬ ಆಸೆ. ಅದು ಕಣ್ಣು ಕಾಣದ ನರಸಮ್ಮಳ ಕಣ್ಣಲ್ಲೂ ಇದೆ. ವೃದ್ಧರಾದ ಶಬ್ದಾಜ್‌ ಆಲಿ ಸಾಬ್‌, ಕಾಯಮ್ಮ, ಕರಿತಾಯಮ್ಮ, ಬಳ್ಳಾರಿಗೆ ಕೆಲಸಕ್ಕೆ ಹೋಗಿರುವ ಮಕ್ಕಳ ಕಾತರದಲ್ಲಿರುವ ಬುರುಗಮ್ಮ, ಎಲ್ಲೋ ಹೋದ ಗಂಡನನ್ನು ಕಾಯುತ್ತಿರುವ ಬಾಲೆ ತಿಮ್ಮವ್ವರ ಕಣ್ಣಲ್ಲೂ ಅದೇ ಆಸೆ.

5
ಕಾಯುವುದು ಈ ಸಂತ್ರಸ್ತರ ದಿನಚರಿ. ಅದು ಪರಿಹಾರಕ್ಕೆ ಇರಬಹುದು, ದೂರದೂರಿಗೆ ಕೆಲಸಕ್ಕೆ ಹೋದ ತಮ್ಮವರಿಗೆ ಇರಬಹುದು ಇಲ್ಲವೇ ನಾಳೆ ಸಿಗುವ ಮನೆಗೇ ಇರಬಹುದು..ಅಥವಾ ಆ ರಾತ್ರಿಯ ಊಟಕ್ಕೂ ಆಗಿರಬಹುದು.
ಸುರಪುರದ ಬಂಡೊಳ್ಳಿಯ ಶಿವಮ್ಮಳ ವಯಸ್ಸು ಈಗ 18. ರೋಣದ ಬಿಎಸ್‌ ಬೇಲೇರಿಯ ಹುಲಿಯಮ್ಮಳ ವಯಸ್ಸು ಈಗ 19. ಇಬ್ಬರ ಕಂಕುಳಲ್ಲೂ ಮಕ್ಕಳಿವೆ. ಆದರೆ ಗಂಡ ಎಲ್ಲಿ ಎಂದು ಕೇಳಿದರೆ ಉತ್ತರ ಇಲ್ಲ. ಕೆಲಸಕ್ಕೆ ಹೋಗಿದ್ದಾನೋ, ಕೆಲಸ ಮುಗಿಸಿ ಹೋಗಿದ್ದಾನೋ? ಸ್ವಲ್ಪ ವಿಚಾರಿಸಿದರೆ ಸಾಕು- ಎಲ್ಲಾದರೂ ಗಂಡನ ಮನೆ ಸಿಕ್ರೆ ನೋಡ್ತೀರಾ? ಎಂದು ಅತ್ಯಂತ ಡೀಸೆಂಟಾಗಿ ಹಿರಿಯರು ಮಾತುಕತೆಗೆ ರೆಡಿಯಾಗುತ್ತಾರೆ.
ಪರಿಹಾರದ ಪಟ್ಟೀನಲ್ಲೂ ನಮ್ಮ ಹೆಸರಿಲ್ಲ. ಮನೆಯಂತೂ ಕನಸೇ, ನಾವೇನು ಮಾಡೋದು? ಎಂದು ಹೇಳುವ ಶಿವಮ್ಮ ಮಗುವಿನತ್ತ ನೋಡುತ್ತಾಳೆ. ಅಲ್ಲೇ ಕೈಯಲ್ಲಿ ಗುಂಡಿ ತೋಡುತ್ತಿದ್ದ ಆ ಮಗು ನೀರು ಸಿಗುತ್ತದೋ ಎಂದು ನೋಡುತ್ತದೆ. ಇಲ್ಲಿ, ಅಮ್ಮನ ಕಂಗಳಲ್ಲಿ ನೀರು ಬರುತ್ತದೆ.


 6
ಕಣ್ತುಂಬಾ ನೀರನ್ನೇ ತುಂಬಿಕೊಂಡ ಚೀಕಲಪರ್ವಿ ಶೆಡ್‌ನ ಹೆಣ್ಣುಮಕ್ಕಳು ರಾತ್ರಿ ಮಲಗುವ ಮೊದಲು ನೀರು ಕುಡಿಯೋದಿಲ್ಲ!
ನಡುರಾತ್ರಿ ಮೂತ್ರಬಂದರೆ ಹೊರಗೆ ಹೋಗಲು ಭಯ. ಕರೆಂಟಿಲ್ಲ. ಪಕ್ಕದಲ್ಲಿ ಶೌಚಾಲಯವಿಲ್ಲ. ನೀರಿಂದಲೇ ಈ ಗತಿ ಬಂದರೂ ಈಗ ಕುಡಿಯಲಿಕ್ಕೇ ಸರಿಯಾದ ನೀರಿಲ್ಲ.
ಒಂದೊಂದು ಊರಿನ ಒಂದೊಂದು ಶೆಡ್‌ಗಳು ಒಂದೊಂದು ಕತೆ ಹೇಳುತ್ತವೆ. ಟಿನ್‌ನ ಈ ಶೀಟ್‌ನಲ್ಲಿ ಕೆಲವೆಡೆ ಮನೆ ಕಟ್ಟಿಕೊಂಡಿದ್ದರೆ, ಇನ್ನು ಕೆಲವೆಡೆ ಬಿದಿರಿನ ತಟ್ಟಿಯೇ ಗೋಡೆ.  ಚೀಕಲಪರ್ವಿಯಲ್ಲಿ ಬಿದಿರಿನ ಶೀಟ್‌ ಹಾರಿಹೋಗಿದೆ. ರಾಯಚೂರಿನ ಕಟಕನೂರಿನ ಮನೆಗಳು ಬೆಂಗಳೂರಿನ ಧನಿಕರ ಮನೆಯ ನಾಯಿಗೂಡಿಗಿಂತಲೂ ಚಿಕ್ಕದ್ದು. ಇಲ್ಲಿ ಅಡುಗೆ ಮನೆ ಹೊರಗೆ! ಕೆಸರಿನ ನಡುವೆ ಈ ಜನರ ಅರಮನೆ!
ಬಾಗಲಕೋಟೆ ಸಿಮೆಂಟ್‌ನಲ್ಲಿ ಮನೆ ಕಟ್ಟುವ ಕನಸು ಕಟ್ಟಿಕೊಂಡಿದ್ದರು. ಅದೇ ಜನ ಈಗ ಅದೇ ಬಾಗಲಕೋಟೆ ಸಿಮೆಂಟ್‌ನ ಚೀಲದಲ್ಲಿ ಮನೆ ಕಟ್ಟಿಕೊಂಡಿದ್ದಾರೆ!
ಮಳೆಗಾಳಿ ಬಂದರೆ ಕಣ್ಮುಚ್ಚಿಕೊಂಡು ದೇವರ ಚಿತ್ರ ಇರುವ ಕ್ಯಾಲೆಂಡರ್‌ಗೆ ನಮಿಸುತ್ತಾರೆ. ಕಣ್ಣು ತೆರೆದಾಗ ಶೆಡ್‌ ಬೀಳದೇ ಇದ್ದರೆ ಇನ್ನೊಮ್ಮೆ ನಮಿಸುತ್ತಾರೆ!

7   
ಊರಿಡೀ ಕೊಚ್ಚಿ ಹೋದರೂ ಎಷ್ಟೋ ಕಡೆ ದೇವಸ್ಥಾನಗಳು ಮಾತ್ರ ಭದ್ರವಾಗಿವೆ. ಈಗಲೂ ಈ ದೇವರೇ ಈ ಜನರಿಗೆ ಹೊಸ ಭರವಸೆ ತುಂಬಿಸಬಲ್ಲವರು.
ಮಹಾಮಳೆಗೆ ಕಟಕನೂರು ಪೂರಾ ಕೊಚ್ಚಿಹೋಗಿತ್ತು. ಆದರೆ ಅಲ್ಲಿನ ಆಂಜನೇಯ ದೇವಸ್ಥಾನ ಮಾತ್ರ ಉಹುಂ ಜಪ್ಪೆನ್ನಲಿಲ್ಲ. ಮನೆಕಳಕೊಂಡ ಜನರೆಲ್ಲ ಈಗ ಊರ ಹೊರವಲಯದಲ್ಲಿ  ತಾತ್ಕಾಲಿಕ ಶೆಡ್‌ನಲ್ಲಿದ್ದಾರೆ. ಊರೊಳಗೆ ಆಂಜನೇಯ ಮಾತ್ರ. ಆದರೆ ಜನ ದೇವರನ್ನು ಬಿಟ್ಟಿಲ್ಲ. ಪ್ರತಿ ಶನಿವಾರ ಇಲ್ಲಿ  ಈಗಲೂ ಪೂಜೆ ನಡೆಯುತ್ತದೆ. ಜನ ಸೇರುತ್ತಾರೆ. ಆ ಊರಿನ ಹಿರಿ ಮಹಿಳೆ ಹನುಮಕ್ಕ ದಿನಕ್ಕೆ ಎರಡು ಸಲ ಬಂದು ಪೂಜೆ ಮಾಡಿ ಹೋಗುತ್ತಾಳೆ. ನನಗೆ ಮನೆ ಕೊಡಿಸಪ್ಪ ಎಂದು ಮೊರೆ ಇಡುತ್ತಾಳೆ. ದೇವರಿಗೆ ಕೇಳಿಸಿತೋ ಇಲ್ಲವೋ ಗೊತ್ತಿಲ್ಲ. ಅಧಿಕಾರಿಗಳಿಗೆ ಮಾತ್ರ ಈ ಮೊರೆ ಕೇಳಿಸಿಲ್ಲ. ಹನುಮಕ್ಕನ ಇಬ್ಬರು ಗಂಡುಮಕ್ಕಳಿಗೆ ಮನೆ ಕೊಡಿಸಿದ್ದಾರೆ. ಹನುಮಕ್ಕನಿಗೆ ಇಲ್ಲ.
ಆದರೂ ನಂಬಿಕೆ ಬಿಟ್ಟಿಲ್ಲ. ನಂಗೆ ಪ್ರತ್ಯೇಕ ಮನೆ ಕೊಡಿಸು ಎಂದು ದಿನವೂ ಮೊರೆ ಇಡುತ್ತಾಳೆ.
ರೋಣ ತಾಲ್ಲೂಕಿನ ಬಸರೋಡಿನಲ್ಲಿ ಹಲವರಿಗೆ ದೇವಳವೇ ಮನೆ. ಅಲ್ಲಿನ ಸಿದ್ದರಾಮ ಹಿರೇಮಠ ಬಿದ್ದುಹೋದ ತಮ್ಮ ಮನೆ ರಿಪೇರಿ ಮಾಡಿಸುವ ಬದಲು ದೇವರಿಗೆ.. ಅಲ್ಲಲ್ಲ.. ದೇವಸ್ಥಾನಕ್ಕೇ ಮೊರೆ ಹೋಗಿದ್ದಾನೆ!

8
ತಗಡು ಶೀಟಿನ ಮನೆಗೊಂದು ನಂಬರ್‌ : 1019
ಕಳೆದ ಮೂರು ವರ್ಷಗಳಿಂದ ನರಗುಂದದ ಹಾಡಗೋಳಿಯ ನಿವಾಸಿ ಅಂಗವಿಕಲ ನಿಂಗಪ್ಪ ವಲಚಾದಿ ವಿಳಾಸ ಇದು. 1997ರಲ್ಲಿ  ಮಲಪ್ರಭ ನದಿ ಪ್ರವಾಹ ಬಂದು ಮನೆ ಮಠ ಕಳೆದುಕೊಂಡ ಇವರಿಗೆ ಸರ್ಕಾರ ಟೆಂಪರರಿ ಶೆಡ್‌ ಕಟ್ಟಿಸಿಕೊಟ್ಟಿತ್ತು. ಈಗಲೂ ಅಲ್ಲೇ ಇದ್ದಾರೆ. ನಿರ್ಮಾಣವಾಗುತ್ತಿರುವ ಹೊಸಮನೆ ಕನಸು ಕಟ್ಟಿಕೊಂಡಿದ್ದಾರೆ.
ನದಿ ಬದುಕಿಗೂ ಇವರಿಗೂ ಜನುಮ ಜನುಮದ ಸಂಬಂಧ. `15 ವರ್ಷ ಹಿಂದೆ ಹಿಂದೆ ಗಂಗವ್ವ ಬಂದಿದ್ಳು. ಒಂದಷ್ಟು ದಿನ ಊರ ಹೊರ ಹೋಗಿ ಮತ್ತೆ ವಾಪಾಸಾಗುತ್ತಿದ್ದೊ. 2007ರಲ್ಲಿ  ಮತ್ತೆ ನೆರೆ ಬಂದಾಗ ಸರ್ಕಾರ ಶೆಡ್‌ ಹಾಕಿಸಿಕೊಟ್ಟಿತು' ಎಂದು ಬಾಳವ್ವ ತಲವಾರಿ ಹೇಳುವಾಗ ಆಕೆಯ ಕಣ್ಣಲ್ಲಿ ಹೊಸಮನೆಯೇ ನಲಿಯುತ್ತಿತ್ತು. ನೋಡ್ರೀ, ನಮಗೆ ಅಗ್ದೀ ತ್ರಾಸ ಐತೆ. ಅಳು ಬರ್ತೈತಿ ಆದರೂ ನಕ್ಕೊಂಡೇ ಹೇಳ್ತೀವಿ ಎನ್ನುತ್ತಲೇ ಆಕೆ ನೋವನ್ನೆಲ್ಲ ಬಿಚ್ಚಿಡುತ್ತಾಳೆ.

9
ಗೋಡೆಯಲ್ಲಿ ದೊಡ್ಡ ಬಿರುಕಿದೆ. ಇತ್ತಲಿಂದ ನೋಡಿದರೆ ಆಚೆಗಿನ ಬೆಳಕು ಕಾಣಿಸುತ್ತದೆ. ಕಂಬ ಸೊಟ್ಟಗಾಗಿದೆ. ಒಂದು ಗಾಳಿ ಮಳೆ ಬಂದರೆ ಮನೆ ಜೀಕುತ್ತದೆ. ಮನೆಸೂರಿನಲ್ಲಿ ಕಟ್ಟಿದ ಜೇಡರ ಬಲೆ ಬಿಡಿಸಲು ಧೈರ್ಯ ಇಲ್ಲ. ಮುಟ್ಟಿದರೆ ಎಲ್ಲಿ ಮನೆ ಬೀಳುತ್ತದೋ ಎಂಬ ಭಯ.
ಇಷ್ಟಾದರೂ ಅಲ್ಲೇ ಸಂಸಾರ.
ನರೇಗಲ್‌ನ `ಕೆಲ' ಸಂತ್ರಸ್ತರ ಧೈರ್ಯ. ನೆರೆಯಿಂದ ಹಾನಿಯಾದ ಮನೆ ಬಿಟ್ಟು ದೂರ ಹೋಗಲು ರೆಡಿ ಇಲ್ಲ. `ಏನೋ ಒಂದು ವರ್ಷ ಮಳೆ ಬಂತು. ಪ್ರತಿವರ್ಷ ಬರುತ್ತೇನ್ರೀ' ಎನ್ನುವ `ಕೆಲವರ' ಪ್ರಶ್ನೆಯಲ್ಲಿ  ಧೈರ್ಯ ಇದೆಯೋ, ಭಂಡತನ ಇದೆಯೋ ಗೊತ್ತಿಲ್ಲ. ಬೇರೆ ಊರಿನಲ್ಲಿ ಪುನರ್ವಸತಿ ಬಯಸುವ ಜನರೂ ಈಗ ಸೈಲೆಂಟಾಗಿಬಿಟ್ಟಿದ್ದಾರೆ. ಇವರಿಗೆ `ಕೆಲವರ' ವಿರುದ್ಧ ಮಾತನಾಡುವ ಧೈರ್ಯವಂತೂ ಇಲ್ಲ!
ರಾಯಚೂರಿನ ತುಂಗಭದ್ರಾದ ಜನಕ್ಕೆ ಪುನರ್ವಸತಿ ಕಾಣಲು ಮನಸ್ಸಿದ್ದರೂ ಅವರಿಗೆ ಸೂಕ್ತ ಜಾಗವೇ ಇನ್ನೂ ಸಿಕ್ಕಿಲ್ಲ.

10

ಹರಿದುಹೋದ ಜಿಂಕ್‌ಶೀಟ್‌ ನಡುವೆ ಮಳೆ ನೀರು ಜಿನುಗುತ್ತಿದೆ. ಇರುಳ ಆಕಾಶದಲ್ಲಿ ಚಂದಿರ ಇಲ್ಲ; ಬರಿ ಕರಿಮೋಡ. ಅದರೆ ಶೆಡ್‌ ಒಳಗೆ ಹಸಿ ಹಸಿ ನೆಲದ ಮೇಲೆ ಗೋಣಿ ತಾಟಿನಲ್ಲಿ ಮಲಗಿದ ನವಜೋಡಿ ಚಂದಿರನ ಕಾಣುತ್ತಿದೆ.
ಬದುಕು ಬರಿದಾದರೂ ಬಯಕೆ ಬರಿದಲ್ಲವಲ್ಲ. ಈ ಕಷ್ಟದ ಸಂಕೋಲೆಯ ಶೆಡ್‌ನಲ್ಲಿ  ಎಲ್ಲ ಸಂಭ್ರಮ ನಡೆಯುತ್ತದೆ. ಹಾಡಗೋಳಿ ಕ್ಯಾಂಪಿನಲ್ಲಿ  ಒಂದು ವರ್ಷದಲ್ಲಿ ಮೂರು ಮದುವೆಯಾಗಿದೆ. ಈಗ ಅಲ್ಲಿ   ಎಂಟು ಮಂದಿ ಗರ್ಭಿಣಿಯರು ಇದ್ದಾರೆ. ಈಚೆಗೆ ಮೂರು ಡೆಲಿವರಿಯಾಗಿದೆ. ಬಿ.ಎಸ್‌.ಬೇಲೇರಿ ಕ್ಯಾಂಪ್‌ನಲ್ಲಿ  ಇಬ್ಬರು ಹಸಿ ಬಾಣಂತಿಯರಿದ್ದಾರೆ. ಚೀಕಲಪರ್ವಿಯಲ್ಲಿ  ಮೂವರು ಗರ್ಭಿಣಿಯರಿದ್ದಾರೆ.
ಮಕ್ಕಳು ಪಕ್ಕದ ಮನೆಯ ಡಿಷ್‌ ಟಿವಿ ಮೂಲಕ ಹೊಸ ಲೋಕ ನೋಡುತ್ತಿದ್ದಾರೆ. ಜನ ಬವಣೆ ಮರೆತು ಹೊಸ `ಮನೆ' ಕಟ್ಟುತ್ತಿದ್ದಾರೆ. ಸರ್ಕಾರ ಕೊಟ್ಟಿತೋ, ಬಿಟ್ಟಿತೋ ಜನರ ಮನದಲ್ಲಿ  ಹೊಸ ಹಾದಿ ಹುಡುಕುವ ಛಲ ಇದೆ. ಹಾವು ಕಚ್ಚಿ ಸತ್ತ ತಾಯಪ್ಪನ ಮಗಳು ಟೈಲರಿಂಗ್‌ ಮಾಡುತ್ತಿದ್ದಾಳೆ. ಕಟಕನೂರಿನಿಂದ ಹತ್ತು ಜನ ಬೆಂಗಳೂರಿಗೆ ಕೂಲಿಗೆ ಹೋಗಿದ್ದಾರೆ; ಗಂಡ ಬರುತ್ತಾನೋ ಎಂದು ಕಾಯುತ್ತಿರುವ ಹುಲಿಯಮ್ಮ ಹೆಸರುಕಾಳು ಕೊಯಿಲು ಮಾಡುತ್ತಿದ್ದಾಳೆ...
(August‌ 27ರ ವಿಜಯnext ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)