Saturday, July 19, 2014

ಬಕಾಸುರ ಬೆಂಗಳೂರು
ದಿನವಿಡೀ ಚಕ್ರ ಕಟ್ಟಿಕೊಂಡು ಓಡಾಡಿದ್ದ ಬೆಂಗಳೂರು ಶಿವಾ ಎಂದು ರಾತ್ರಿ ಬೆಳಕಿನಡಿಯೇ ಮಲಗಿಬಿಟ್ಟಿದೆ. ಎಣಿಸೋಣವೆಂದರೆ ತಾರೆಗಳಿಲ್ಲ; ಜೋಗುಳಕ್ಕೆ ಸಂಗೀತವಿಲ್ಲ. ಹಾರುತ್ತಿರುವ ವಿಮಾನದ ಲೈಟು ನೋಡಿ, ಫ್ಲೈ ಓವರ್‌ನಲ್ಲಿ ಓಡುತ್ತಿರುವ ವೆಹಿಕಲ್‌ಗಳ ಶಬ್ದಕ್ಕೆ ಕಿವಿ ಆನಿಸಿ ಗಂಟೆ ಲೆಕ್ಕ ಹಾಕುತ್ತಿದೆ ಬೆಂಗಳೂರು. ಬೆಳಕಾಗಿಬಿಡುತ್ತದೆಯಲ್ಲ ಎಂಬ ಚಿಂತೆ.
ಏಕೆಂದರೆ- ಮತ್ತದೇ ನಾಳೆ ಅಲ್ಲವೇ? ಅದೇ ಚಾಕರಿ,
ಹೊಟ್ಟೆ-ಬಟ್ಟೆ ಬಗ್ಗೆ ಯೋಚಿಸುತ್ತಿರುವಾಗಲೇ ಬೆಂಗಳೂರಿಗೆ ಯಾವುದೋ ಹೊತ್ತಲ್ಲಿ ನಿದ್ದೆ ಬಂದುಬಿಡುತ್ತದೆ.
ಇದೇ ಹೊತ್ತಿಗೇ, ನಾಳೆಯನ್ನು ಕಟ್ಟಲು ಬೆಂಗಳೂರು ಜತೆ ಸಾವಿರ ಊರು-ನೂರು ದೇಶ ಸೇರಿಕೊಂಡುಬಿಡುತ್ತದೆ
ಅಕ್ಕಿ ಹೊತ್ತುಕೊಂಡ ಪಂಜಾಬ್ ರಿಜಿಸ್ಟ್ರೇಷನ್‌ನ ಲಾರಿ ಏದುಸಿರುಬಿಟ್ಟುಕೊಂಡು ಬರುತ್ತದೆ; ಮೋರಿ ವಾಸನೆ ತಡೆಯದೆ ಮೂಗಿಗೆ ಬಟ್ಟೆ ಕಟ್ಟಿಕೊಂಡ ಡ್ರೈವರ್ ತಮಿಳು ಹಾಡು ಕೇಳುತ್ತಿರುತ್ತಾನೆ. ದುಬೈ ಅತ್ತರು ಪೂಸಿಕೊಂಡ ಉತ್ತರದಾಕೆ ಕಣ್ಣು ಮಿಟುಕಿಸುತ್ತಾಳೆ; ಫ್ಲೈಟಿನಲ್ಲಿ ಬೆಚ್ಚನೆ ಬಂದಿಳಿದ ಅಮೆರಿಕದ ಆಪಲ್‌ಗೆ ರೊಮಾಂಟಿಕ್ ಕನಸುಗಳಿವೆಯೋ ಗೊತ್ತಿಲ್ಲ. ಗುಜರಾತ್‌ನಿಂದ ಬರುವ ನ್ಯಾನೊ ಕಾರುಗಳಿಗೆ ಈ ರೋಡಿಗಿಳಿಯಬೇಕಲ್ಲ ಎಂಬ ವರಿ. ಇಂಟರ್‌ಸಿಟಿಯಲ್ಲಿ ಬರುವ ಬಿಜಾಪುರ ರೈತನಿಗೆ ದ್ರಾಕ್ಷಿಯೋ, ವೈನೋ ಮಾರಾಟವಾದರೆ ಸಾಕು ಎನ್ನುವ ಕಳವಳ.
ಒಂಟಿಯಲ್ಲ
ಬೆಂಗಳೂರು ಒಂಟಿಯಲ್ಲ. ಎಲ್ಲೆಲ್ಲಿಂದಲೋ ಜನ ಬರುವ ಹಾಗೆಯೇ ಒಂದೊಂದು ಸರಕುಗಳನ್ನೂ ತರುತ್ತಾರೆ. ಎಲ್ಲರಿಗೂ ಬೆಂಗಳೂರು ಬದುಕಿಗೆ ಕಾಂಟ್ರಿಬ್ಯೂಟ್ ಮಾಡುವ ತವಕ. ತಮ್ಮ ಬದುಕನ್ನೂ ಗಟ್ಟಿ ಮಾಡಿಕೊಳ್ಳುವ ‘ರವಸೆ.
ಉಹುಂ, ಹಾಗಂತ ಬೆಂಗಳೂರು ಗಮ್ಮತ್ತು ನಿದ್ದೆ ಮಾಡುವ ಹಾಗೇನೂ ಇಲ್ಲ. ಸತ್ಯಮಂಗಲದಿಂದ ಬರುವ ಮಲ್ಲಿಗೆ ಹೂ ಒಂದಿಷ್ಟು ತಡವಾಗಿಬಿಟ್ಟರೆ ಸಾವಿರ ಮಹಿಳೆಯರ ಹೊಟ್ಟೆಗೆ ಹಿಟ್ಟಿಲ್ಲ; ಲಕ್ಷ ಮಹಿಳೆಯರ ಜುಟ್ಟಿಗೆ ಹೂವಿಲ್ಲ ಎಂದಾಗಿಬಿಡುತ್ತದೆ. ಗುಲ್ಬರ್ಗದಲ್ಲಿ ತೊಗರಿ ಬೆಳೆ ಮಳೆಗೆ ನಾಶವಾದರೆ, ಬೆಂಗಳೂರು ಲಬೋ ಲಬೋ ಎನ್ನುತ್ತದೆ.
ಹಾಲಿನ ಲಾರಿಯ ಹೆಡ್‌ಲೈಟ್ ಬೆಂಗಳೂರಿನ ನಿದ್ದೆಯನ್ನು ಓಡಿಸಿಬಿಡುತ್ತದೆ. ದಿನಕ್ಕೆ 14 ಲಕ್ಷ ಲೀಟರ್ ಹಾಲು 3 ಲಕ್ಷ ಲೀಟರ್ ಮೊಸರು ಬೇಕೇ ಬೇಕು- ಈ ಬೆಂಗಳೂರಿಗೆ. ಊರಿನ ಗೋವಳರೆಲ್ಲ ಎಷ್ಟು ಹಾಲು ಕರೆದರೂ ಬೆಂಗಳೂರು ಹೊಟ್ಟೆ ತುಂಬಿಸುವುದು ಕಷ್ಟವೇ. ದೂರದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರುಗಳೆಲ್ಲ ಜತೆ ಸೇರಿಬಿಡುತ್ತವೆ- ಬೆಂಗಳೂರಿಗೆ ಹಾಲು ಕೊಡಲು.
ಬೆಂಗಳೂರು ಎದ್ದು ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಹೂವಿನ ಗಮಗಮ ಶುರುವಾಗಿಬಿಡುತ್ತದೆ. ಹಬ್ಬದ ಟೈಮೆಂದರೆ ಮುಗಿಯಿತು ಬಣ್ಣದ ಗುಡ್ಡೆ ಹರಿದುಬರುತ್ತದೆ. ಹಬ್ಬದ ಸೀಸನ್‌ನಲ್ಲಿ ದಿನಕ್ಕೆ 50ರಿಂದ 70 ಸಾವಿರ ಕೆಜಿ ಹೂವು ಬೇಕೇಬೇಕು. ರೋಸ್ ಕಂಡರೆ ಎವರ್‌ಯೂತ್ ಬೆಂಗಳೂರು ಎದೆಗೂಡಲ್ಲಿ ಅದೇನೋ ತನನಂ ತನನಂ. ದಿನಕ್ಕೆ 5000 ಕೆಜಿ ರೋಸ್ ಬಿಕರಿಯಾಗಿಬಿಡುತ್ತದೆ. ಕಡಪದಿಂದ ಬರುವ ಸೇವಂತಿ, ಗೌರಿಬಿದನೂರಿನ ಕನಕಾಂಬರ, ಮದುರೈ, ಸೇಲಂನ ಮಲ್ಲಿಗೆ, ಮದ್ದೂರು, ಮೈಸೂರಿನ ಕಾಕಡಗಳು ಹೊಸ ಗಂ‘ ನೀಡುತ್ತದೆ. ಬೋರಿಂಗ್ ಲೈಫ್ ನೋಡಿ ಸುಮ ನಕ್ಕುಬಿಡುತ್ತದೆ; ಹೂವನ್ನೇ ನಂಬಿಕೊಂಡ ಗ್ರಾಮಾಂತರದ ಸಾವಿರಾರು ರೈತರು ಮುಖದಲ್ಲಿ ಹೂವು ಅರಳುತ್ತದೆ; ಮಾರಾಟವನ್ನೇ ನಂಬಿಕೊಂಡ ಶ್ರಮಿಕ ಮಹಿಳೆಯರ ಬದುಕೂ ಅರಳುತ್ತದೆ.

ವೆಜ್ಜೋ-ನಾನ್‌ವೆಜ್ಜೋ?
ಬೆಂಗಳೂರು ಬಕನ ಹಾಗೆ. ಎಷ್ಟು ಕೊಟ್ಟರೂ ತಿನ್ನಬಲ್ಲುದು. ದಿನಕ್ಕೆ 600 ಟನ್ ಅಕ್ಕಿ ಬೇಕು. 1,500 ನ್ ತರಕಾರಿ ಬೇಕು. ಸುಮಾರು 100 ಟನ್ ಮಾಂಸ ಬೇಕು.
ತರಕಾರಿ ತಿನ್ನುವುದರಲ್ಲಿ ಬೆಂಗಳೂರು ಸದಾ ಮುಂದು. ಹಾಪ್‌ಕಾಮ್ಸ್ ಒಂದರ ಮೂಲಕವೇ ಪ್ರತಿ ದಿನ 100 ಮೆಟ್ರಿಕ್ ಟನ್ ತರಕಾರಿ ಇಲ್ಲಿಗೆ ಬರುತ್ತಿದೆ. ಅಂದರೆ ಇದು ಒಟ್ಟು ಮಾರುಕಟ್ಟೆಯ ಶೇ 8ರಷ್ಟು ಮಾತ್ರ.
30,000 ಹಾಕರ್‌ಗಳು ಇಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೆ. ಇವರಲ್ಲಿ ಶೇ 70ಕ್ಕೂ ಹೆಚ್ಚು ‘ಾಗ ತರಕಾರಿಯನ್ನೇ ಮಾರಿ ಬದುಕು ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ತರಕಾರಿ ಕೊಳ್ಳುವವರು ಶೇ 83ರಷ್ಟು ‘ಾಗ ಹಾಕರ್‌ಗಳನ್ನು ಮತ್ತು ಮನೆ ಪಕ್ಕದ ಮಾರುಕಟ್ಟೆಯನ್ನೇ ಆಶ್ರಯಿಸಿಕೊಂಡಿದ್ದಾರೆ ಎಂದು ನ್ಯಾಷನಲ್ ಅಲಯನ್ಸ್ ಸ್ಟ್ರೀಟ್ ವೆಂಡರ್ಸ್ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆ ಹೇಳುತ್ತದೆ.
ಬೆಂಗಳೂರು ಬರೇ ವೆಜ್ ಅಲ್ಲ. ಇಡಿ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಮಾಂಸದ ಪೈಕಿ ಶೇ 30ರಷ್ಟನ್ನು ಬೆಂಗಳೂರೇ ಕಬಳಿಸುತ್ತಿದೆ.
ಒಂದು ವರ್ಷದ ಹಿಂದಿನ ಅಂಕಿ ಅಂಶ ನೋಡುವುದಾದರೆ ಬೆಂಗಳೂರು ಪ್ರತಿವರ್ಷ 33,312 ಟನ್ ಮಾಂಸ ಹಾಗೂ 5,825 ಟನ್ ಕೋಳಿ ಮಾಂಸ ತಿನ್ನುತ್ತಿದೆ. 2009ರ ಲೆಕ್ಕದ ಪ್ರಕಾರ 13,800 ಟನ್ ಮಟನ್, 925 ಟನ್ ಬೀಫ್ ಬೆಂಗಳೂರು ತಿಂದಿದೆ.
ಬನಾನ ಸಿಟಿ
ಬೆಂಗಳೂರನ್ನು ನೀವು ಗಾರ್ಡನ್ ಸಿಟಿ ಅಂತ ಹೇಗೆ ಕರೀತೀರೋ, ಹಾಗೆಯೇ ಬನಾನ ಸಿಟಿ ಅಂತಾನೂ ಕರೀಬಹುದು. ಏಕೆಂದರೆ ಬೆಂಗಳೂರು ಒಂದು ದಿನದಲ್ಲಿ ತಿಂದು ಬಿಸಾಡೋ ಬಾಳೆಹಣ್ಣಿನ ಸಿಪ್ಪೆಯನ್ನೇ ರಾಶಿ ಹಾಕಿದರೆ ಯಶವಂತಪುರ ಮಾರುಕಟ್ಟೆ 10 ದಿನ ವಿಸರ್ಜಿಸುವ ಕಸದ ತೂಕಕ್ಕೆ ಸಮವಾಗುತ್ತದೆ!
ಅಂದರೆ ದಿನಕ್ಕೆ 500 ಟನ್ ಬಾಳೆಹಣ್ಣು ಸಿಪ್ಪೆಯನ್ನು ಬೆಂಗಳೂರು ಎಸೆಯುತ್ತಿದೆ. ದಟ್ ಮೀನ್ಸ್, ಬೆಂಗಳೂರು ದಿನಕ್ಕೆ ಬರೊಬ್ಬರಿ 4,000 ಟನ್ ಬಾಳೆ ಹಣ್ಣು ತಿನ್ನುತ್ತಿದೆ. ಈಗ ಹೇಳಿ, ಇದು ಬೆಂಗಳೂರು ಬನಾನ ಸಿಟಿ ಅಲ್ಲವೇ? ಕನಕಪುರ, ರಾಮನಗರ, ಮೈಸೂರು, ತುಮಕೂರಿನಿಂದ ಬರುವ ಏಲಕ್ಕಿ ಬಾಳೆ, ತಮಿಳುನಾಡಿನಿಂದ ಬರುವ ಪಚ್ಚೆ ಬಾಳೆ, ತಿರುಚಿರಾಪಳ್ಳಿಯಿಂದ ಬರುವ ಪುವತ್ ಬಾಳೆ ಬೆಂಗಳೂರಿನ ಫೇವರಿಟ್.
ಸಿಂಗೇನ ಅಗ್ರಹಾರ ಹೋಲ್‌ಸೇಲ್ ಮಾರ್ಕೆಟ್‌ಗೆ ದಿನಾ ದೆಹಲಿ- ಕಾಶ್ಮೀರದಿಂದ  ಸುಮಾರು 500 ಟನ್ ಸೇಬು ಹಣ್ಣುಬರುತ್ತದೆ.
ಹಣ್ಣು ಮಾರುಕಟ್ಟೆಯಲ್ಲಿ ಬೆಂಗಳೂರೇ ನಂಬರ್ ಒನ್. ತೋಟಗಾರಿಕಾ ಇಲಾಖೆ ಲೆಕ್ಕದ ಪ್ರಕಾರ ದಿನಕ್ಕೆ 50ರಿಂದ 60 ಕೋಟಿ ರೂ ಹಣ್ಣಿನ ವಹಿವಾಟು ಇಲ್ಲಿ ನಡೆಯುತ್ತದೆ!
ಹಾಗೆಯೇ, ಗುಲ್ಬರ್ಗದಿಂದ ತೊಗರಿ ಬೇಳೆ, ಕೊಡಗಿನಿಂದ ಕಾಫಿ, ಮಂಗಳೂರಿನಿಂದ ತೆಂಗಿನ ಎಣ್ಣೆ, ಗೋಡಂಬಿ, ತುಮಕೂರು-ಶಿರಾ, ತಿಪಟೂರಿನಿಂದ ಎಳೆನೀರು, ಮಂಡ್ಯ, ಮದ್ದೂರಿನಿಂದ ಕಬ್ಬು, ಗುಜರಾತ್, ರಾಜಸ್ಥಾನಗಳಿಂದ ದಿನಸಿ, ಕೋಲಾರದಿಂದ ಟೊಮೆಟೋ, ಗ್ರಾಮಾಂತರದಿಂದ ಕೊತ್ತಂಬರಿ ಸೊಪ್ಪು.. ಹೀಗೆ ಒಂದೊಂದು ಜಿಲ್ಲೆಯೂ ಬೆಂಗಳೂರಿನ ಹೊಟ್ಟೆ ತುಂಬಿಸುತ್ತದೆ.
ಬೆಂಗಳೂರೆಂದರೆ ಹಾಗೆಯೇ.. ಊರಿಗೆಲ್ಲ ನೆರಳು ಕೊಡುತ್ತದೆ; ತಾನೂ ಬದುಕುತ್ತದೆ. ಇನ್ನೊಬ್ಬರಿಗೂ ಬದುಕು ಕೊಡುತ್ತದೆ. ಕಾಲಿಗೆ ಚಕ್ರ ಕಟ್ಟಿಕೊಂಡು ದಿನವಿಡೀ ಓಡಾಡುವ ಬೆಂಗಳೂರು ಎಲ್ಲರಿಗೂ ಹೊಟ್ಟೆಗೆ ಸಿಕ್ಕಿತ್ತಾ ಎಂದು ನೋಡುತ್ತದೆ. ಸಂಜೆಯ ಹೊತ್ತಿಗೆ 2,500 ಟನ್ ತ್ಯಾಜ್ಯ ವಿಸರ್ಜಿಸಿ ಮತ್ತೆ ನಿದ್ದೆಗೆ ಒರಗುತ್ತದೆ.. ನಾಳೆ ಹೇಗೆ ಎಂಬ ಚಿಂತೆಯೊಂದಿಗೆ.
ನಸುಕಿನಲ್ಲಿ ಸಾಮಗ್ರಿಗಳನ್ನು ಖಾಲಿ ಮಾಡಿಕೊಂಡು ಜಡಜಡ ಶಬ್ದ ಮಾಡಿಕೊಂಡು ಹೊರ ಹೋಗುವ ಲಾರಿಗೆ ಎದುರಿನಲ್ಲಿ ವಾಬ್ಲರ್ ಹಕ್ಕಿಯೊಂದು ಸಿಗುತ್ತದೆ. ದೂರದ ಯುರೇಷಿಯಾದಿಂದ ಅದು ಬೆಂಗಳೂರಿಗೆ ಬರುತ್ತಿದೆ!
ಬೆಂಗಳೂರೆಂದರೆ ಹಾಗೆಯೇ ಎಲ್ಲರಿಗೂ ನೆರಳು ಕೊಡುತ್ತದೆ.




ಎಲ್ಲ ಹಣ್ಣುಗಳಿಗೂ ಬೆಂಗಳೂರು ಮ್ಯಾಲ್ ಕಣ್ಣು!
ಹಣ್ಣಿನ ಮಾರಾಟಕ್ಕೆ ಇಡೀ ದೇಶದಲ್ಲೇ ಬೆಂಗಳೂರು ಬೆಸ್ಟ್ ಪ್ಲೇಸ್ ಎನ್ನುತ್ತದೆ ಫಲೋದ್ಯಮ. ಇಂದು ಹೊರರಾಜ್ಯಗಳಿಂದ ಮಾತ್ರವಲ್ಲ, ಹೊರದೇಶಗಳಿಂದಲೂ ಹಣ್ಣು ಹಂಪಲು ಆಮದಾಗುತ್ತಿದೆ. ಬನ್ನಿ, ಬೆಂಗಳೂರು ಫ್ರುಟ್ ಮಾರ್ಟ್‌ಗೆ ಒಂದು ಸುತ್ತು ಬರೋಣ...
*ಬೆಂಗಳೂರಿನಲ್ಲಿ  ವಾಷಿಂಗ್ಟನ್ ಆಪಲ್ ಮಾರಾಟ ಹೆಚ್ಚುತ್ತಿದೆ.  ಇನ್ನು  ಆಸ್ಟ್ರೇಲಿಯಾ, ಜಪಾನ್, ಚೀನಾದಿಂದಲೂ ಸೇಬು ಬರುತ್ತಿದೆ. ಅಮೆರಿಕ, ಯುಕೆಯಿಂದ ಮರಸೇಬು, ಫ್ಲೋರಿಡಾ, ಕ್ಯಾಲಿಫೋರ್ನಿಯಾದಿಂದ ಕಿತ್ತಳೆ ಬರುತ್ತಿದೆ. ಫ್ರೆಷ್ ಕ್ಯಾಲಿಫೋರ್ನಿಯಾ ಗ್ರೇಪ್ಸ್, ಕ್ಯಾಲಿಫೋರ್ನಿಯಾ ಪ್ರುನ್ಸ್, ಕ್ಯಾಲಿಫೋರ್ನಿಯಾ ಪ್ರೀಚಸ್, ನೆಕ್ಟೇರಿಯನ್ಸ್, ಪ್ಲಮ್‌ಗಳ ಮಾರಾಟ ಈಗ ಬೆಂಗಳೂರಿನಲ್ಲಿ ತೀವ್ರಗತಿಯಿಂದ ಸಾಗುತ್ತಿದೆ ಎಂದು ವಿದೇಶಿ ಹಣ್ಣುಗಳ ಮಾರಾಟ ಪ್ರವರ್ತಕ ಕಂಪೆನಿ ಎಸ್‌ಸಿಎಸ್ ಸಮೂಹ ಸಂಸ್ಥೆಯ ನಿರ್ದೇಶಕ ಸುಮಿತ್ ಶರಣ್ ಹೇಳುತ್ತಾರೆ.
ಮೊದಲು ಬೆಂಗಳೂರಿನಲ್ಲಿ  ‘ಾರತೀಯ ಹಣ್ಣುಗಳು ಮಾತ್ರ ಲ‘್ಯವಿದ್ದವು. ಈಗ ಸಂಘಟಿತ ರಿಟೇಲಿಂಗ್‌ನ ಪರಿಣಾಮ ವಿದೇಶಿ ಹಣ್ಣುಗಳು ಲ‘್ಯವಾಗುತ್ತಿವೆ. ಹೆಚ್ಚುತ್ತಿರುವ ಆದಾಯ, ವಿದೇಶ ಪ್ರವಾಸದ ಫಲ,ನಗರೀಕರಣ, ಬದಲಾಗುತ್ತಿರುವ ಲೈಫ್‌ಸ್ಟೈಲ್‌ನಿಂದಾಗಿ ವರ್ಷವಿಡೀ ವಿದೇಶಿ ಹಣ್ಣುಗಳು ದೊರೆಯುವಂತಾಗಿವೆ ಎಂದು ಅವರು ವಿಶ್ಲೇಷಿಸುತ್ತಾರೆ.
ಪ್ರತಿದಿನ ಬೆಂಗಳೂರಿಗೆ ಎರಡು ಕಂಟೇನರ್ ತುಂಬಾ ವಿದೇಶಿ ಹಣ್ಣು ಬರುತ್ತದೆ. ಇದರ ಬೆಲೆ ಎಷ್ಟಪ್ಪಾ ಎಂದರೆ 80 ಲಕ್ಷ ರೂಪಾಯಿ. ಅಂದರೆ, ನಿತ್ಯ 80 ಲಕ್ಷ  ರೂ. ವಿದೇಶಿ ಹಣ್ಣು ಇಲ್ಲಿ ಖರ್ಚಾಗುತ್ತದೆ ಎಂದಾಯಿತು. ‘ಬೆಂಗಳೂರಿನ ಶ್ರೀಮಂತ ಜನ ವಿದೇಶಿ ಹಣ್ಣಿಗೆ ಮುಗಿಬೀಳುತ್ತಾರೆ. ದುಡ್ಡಿನ ಮುಖ ನೋಡೊಲ್ಲ. ಆಸ್ಟ್ರೇಲಿಯಾ ಚೆರ‌್ರಿ ಬೆಲೆ ಕೆಜಿಗೆ 1800 ರೂ ಇದ್ದರೂ ತಲೆಕೆಡಿಸಿಕೊಳ್ಳೋದಿಲ್ಲ’ ಎಂದು ರಸೆಲ್ ಮಾರ್ಕೆಟ್ ಫ್ರುಟ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಪ್ರ‘ಾನ ಕಾರ‌್ಯದರ್ಶಿ ಇದ್ರೀಸ್ ಚೌ‘ರಿ ಹೇಳುತ್ತಾರೆ.
ಬೆಂಗಳೂರು ಹಣ್ಣು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ ಎಂದು ತೋಟಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ಹೇಳುತ್ತಾರೆ.
* ಸೀಸನ್‌ನಲ್ಲಿ ಪ್ರತಿದಿನ ಬೆಂಗಳೂರಿಗೆ 100 ಟನ್ ಸಪೋಟಾ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗದಿಂದ ಬರುತ್ತದೆ. ಹಿರಿಯೂರು, ಹೊಸದುರ್ಗ, ಚಿತ್ರದುರ್ಗ, ಕೊಪ್ಪಳದಿಂದ ದಾಳಿಂಬೆ ಬರುತ್ತದೆ. ಇದು ದಿನಕ್ಕೆ 50 ಟನ್ ಗ್ಯಾರಂಟಿ.
* ಬೆಂಗಳೂರು ಬ್ಲೂ  ದ್ರಾಕ್ಷಿ ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರದಿಂದ ಬರುತ್ತಿದ್ದು, ದಿನಕ್ಕೆ ಕನಿಷ್ಠ 100 ಟನ್ ಖರ್ಚಾಗುತ್ತಿದೆ.
* ಪಪ್ಪಾಯಕ್ಕೆ ಎಲ್ಲಿಲ್ಲದ ಡಿಮಾಂಡ್. ಸೀಸನ್‌ನಲ್ಲಿ ಇದು ದಿನಕ್ಕೆ  ಸಾವಿರ ಟನ್ ಖರ್ಚಾಗುವುದೂ ಉಂಟು. ಅನಂತಪುರ, ಚಿತ್ರದುರ್ಗ ತುಮಕೂರು, ಹಿರಿಯೂರಿನಿಂದ ಬರುತ್ತದೆ.
*ಸೊರಬ, ಬನವಾಸಿ, ಕೊಡಗು, ಉಡುಪಿ, ಮೂಡಬಿದಿರೆಯಿಂದ ಬರುವ ಪೈನಾಪಲ್ ಸೀಸನ್‌ನಲ್ಲಿ 800 ಟನ್ ಖರ್ಚಾಗುವುದೂ ಉಂಟು.
* ಕರ್ನೂಲು, ಕಡಪ, ಗಡ್ವಾಲ್, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಿಂದ ಮೂಸಂಬಿ ಬರುತ್ತದೆ. ದಿನಕ್ಕೆ 800ರಿಂದ 1000 ಟನ್ ಬೇಡಿಕೆ ಇದೆ.
* ನಾಗಪುರ ಮತ್ತು ಕೊಡಗಿನಿಂದ ಬರುವ ಕಿತ್ತಳೆ ದಿನಕ್ಕೆ 1000 ಟನ್ ಖರ್ಚಾಗುತ್ತದೆ.
* ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶಗಳಿಂದ ಬರುವ ಕಿವಿ ಹಣ್ಣು, ಊಟಿ, ಕೊಡೈಕೆನಾಲ್‌ನಿಂದ ಬರುವ ಬೆಣ್ಣೆ ಹಣ್ಣು, ಮಹಾಬಲೇಶ್ವರದ ಸ್ಟ್ರಾಬೆರ‌್ರಿ, ಸೊಲ್ಲಾಪುರದಿಂದ ಬರುವ ಗೋರೆಹಣ್ಣಿಗೆ ಈಗ ಡಿಮಾಂಡ್ ಹೆಚ್ಚುತ್ತಿದೆ



 ತರಕಾರಿ ಹೊಸಕೋಟೆಯಿಂದ
ಬೆಂಗಳೂರು ತಿನ್ನುವ ಬೀನ್ಸ್ ಹೊಸಕೋಟೆಯದ್ದು, ಟೊಮೆಟೋ ಹೊಸಕೋಟೆಯಿಂದ ಬಂದಿದೆ, ಕ್ಯಾರೆಟ್ ಹೊಸಕೋಟೆಯಿಂದಲೇ... ಹೀಗೆ ಯಾವ ಹೆಸರು ಹೇಳಿದರೂ ಹೊಸಕೋಟೆ ಹೆಸರು ಮೊದಲಿಗೆ ಬಂದುಬಿಡುತ್ತದೆ.
ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಬೆಂಗಳೂರು ಜನರಿಗೆ ತರಕಾರಿ ಪೂರೈಸುತ್ತಿದೆ. ಬೆಂಗಳೂರಿಗೆ ಎಲ್ಲೆಲ್ಲಿಂದ ತರಕಾರಿ ಸಪ್ಲೈ ಆಗುತ್ತಿದೆ ಎಂದು ನೋಡೋಣ...
ಬೀನ್ಸ್ ಹೊಸಕೋಟೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹಾಸನ, ದಾಬಸ್‌ಪೇಟೆಯಿಂದ ಬಂದರೆ, ಟೊಮೆಟೋ, ಕೋಲಾರ, ಚನ್ನಪಟ್ಟಣ, ದೊಡ್ಡಬಳ್ಳಾಪುರ, ಮಾಗಡಿಯಿಂದ ಬರುತ್ತದೆ. ಕೊತ್ತಂಬರಿ ಸೊಪ್ಪು ಚಿಂತಾಮಣಿ, ಕೋಲಾರದಿಂದ ಪೂರೈಕೆಯಾದರೆ, ಕ್ಯಾರೆಟ್ ಹೊಸಕೋಟೆ, ಕೋಲಾರ, ಚಿಕ್ಕಬಳ್ಳಾಪುರ, ಊಟಿಯಿಂದ ಬರುತ್ತದೆ.
ಬೆಂಡೆಕಾಯಿ ತಮಿಳುನಾಡಿನಿಂದ ಬಂದರೆ, ನಿಂಬೆಹಣ್ಣು ಆಂ‘್ರದ ಗುಂಟೂರಿನಿಂದ ಹಾಗೂ ನುಗ್ಗೇಕಾಯಿ ತಮಿಳುನಾಡಿನಿಂದ ಬರುತ್ತದೆ. ಬೂದುಕುಂಬಳ ಕಾಯಿ ಚಿಂತಾಮಣಿ, ಕೋಲಾರ ಮುಂಬೈ, ಮಹಾರಾಷ್ಟ್ರದಿಂದ ಬರುತ್ತದೆ.
ಮೈಸೂರಿನಿಂದ ಸೌತೆಕಾಯಿ, ಪಡುವಲಕಾಯಿ, ದಪ್ಪ ಮೆಣಸು ಬಂದರೆ, ಎಳೆ ಮೆಣಸಿನ ಕಾಯಿ ಅರಕಲಗೂಡು, ಮಾಗಡಿಯಿಂದ ಸಪ್ಲೈ ಆಗುತ್ತದೆ. ಒಂದು ದಿನಕ್ಕೆ ಬೆಂಗಳೂರಿಗೆ 1,500 ಟನ್‌ಗೂ ಹೆಚ್ಚು ತರಕಾರಿ ಪೂರೈಕೆಯಾಗುತ್ತದೆ ಎಂಬ ಅಂದಾಜಿದೆ.
ಪ್ರತಿ ದಿನ ಬೆಂಗಳೂರಿಗೆ 500 ಟನ್ ಈರುಳ್ಳಿ ಬರುತ್ತಿದೆ. ಇದು ಬಹುತೇಕ ಚಿತ್ರದುರ್ಗ, ಹೊಸದುರ್ಗ ಹಾಗೂ ಮಹಾರಾಷ್ಟ್ರಗಳಿಂದ ಬರುತ್ತಿದೆ.



ಶೇ 45ರಷ್ಟು ಬೆಳವಣಿಗೆ
ಬೆಂಗಳೂರಿನ ರಿಟೇಲ್ ಬಿಸಿನೆಸ್ ಪ್ರತಿವರ್ಷಕ್ಕೆ ಶೇ 45ರಷ್ಟು ಹೆಚ್ಚುತ್ತಿದೆ. ದೇಶಕ್ಕೆ ಯಾವುದೇ ಹೊಸ ಉತ್ಪನ್ನ ಬಂದರೆ ಮೊದಲಿಗೆ ಬಿಡುಗಡೆಯಾಗುವ ನಗರ ಬೆಂಗಳೂರು ಎಂಬ ಹೆಗ್ಗಳಿಕೆ ಪ್ರಾಪ್ತವಾಗಿದೆ. ವಿವಿ‘ ರಿಟೇಲ್ ಶಾಪ್‌ಗಳಲ್ಲಿ ಪ್ರತಿದಿನ 30,000 ಬಿಲ್‌ಗಳು ಇಶ್ಯೂ ಆಗುತ್ತಿದೆ!


ದಿನಕ್ಕೆ 200 ಹೆಕ್ಟೇರ್ ಬೆಳೆ ಬೆಂಗಳೂರಿಗೆ
ರಾಜ್ಯದ ಇತರೆ ಜಿಲ್ಲೆಗಳಿಂದಲೇ ಸಾಕಷ್ಟು ಅಕ್ಕಿ ಪೂರೈಕೆಯಾದರೂ ಆಂ‘್ರ, ಪಂಜಾಬ್‌ಗಳಿಂದಲೂ ಅಕ್ಕಿ ಬರುತ್ತದೆ. ಒಂದು ದಿನಕ್ಕೆ 600 ಟನ್ ಅಕ್ಕಿ ಬೇಕೆಂದರೆ, ಅಂದಾಜು ದಿನಕ್ಕೆ 200 ಹೆಕ್ಟೇರ್ ನೆಲದಲ್ಲಿ ಬೆಳೆದ ‘ತ್ತ ಬೆಂಗಳೂರಿಗೇ ಬೇಕು. ಅಂದರೆ ವರ್ಷಕ್ಕೆ 73,000 ಹೆಕ್ಟೇರ್‌ನ ಬೆಳೆಯನ್ನೆಲ್ಲ ಬೆಂಗಳೂರು ತಿನ್ನುತ್ತಿದೆ ಎಂದಾಯಿತು. ಅಷ್ಟು ಜನ ರೈತರಿಗೂ ಕೆಲಸ ಸಿಕ್ಕಿತು; ಮ‘್ಯವರ್ತಿಗಳಿಗೂ ಉದ್ಯೋಗ ಬಂತು. ಈ ಕಾಸ್ಮೊಪಾಲಿಟನ್ ಸಿಟಿಯಲ್ಲಿ 60 ಬಗೆಯ ಅಕ್ಕಿ ಮಾರಾಟವಾಗುತ್ತಿದೆ!

ಬಾಕ್ಸ್..
ಮೂರು ಟನ್ ಖರ್ಜೂರ
ಹೆಲ್ತ್ ಕಾನ್ಷಿಯಸ್ ಬೆಂಗಳೂರಿಗೆ ಜಾಸ್ತಿ. ಹೀಗಾಗಿಯೇ ಡ್ರೈ ಫ್ರೂಟ್‌ಗಳ ಮಾರಾಟವೂ ‘ರದಲ್ಲಿ ಸಾಗುತ್ತದೆ. ಅದರಲ್ಲೂ ಖರ್ಜೂರ ಮಾರಾಟ ಎಷ್ಟಾಗುತ್ತದೆ ಎಂಬ ಅನುಮಾನವಿದ್ದರೆ ಕೇಳಿ- ತಿಂಗಳಿಗೆ ಬರೋಬ್ಬರಿ ಮೂರು ಟನ್ ಖರ್ಜೂರ ಬಿಕರಿಯಾಗುತ್ತದೆ. ಮದೀನಾ, ಜೋರ್ಡಾನ್ ಕಣಿವೆ, ಇರಾಕ್‌ನಿಂದ ಡೇಟ್ಸ್ ಬರುತ್ತದೆ.

ದೇಶದ ನಾಲ್ಕನೇ ದೊಡ್ಡ ನಗರ
ದೇಶದ ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ) ಲೆಕ್ಕಾಚಾರ ನೋಡುವುದಾದರೆ ಬೆಂಗಳೂರು ದೇಶದ ನಾಲ್ಕನೇ ಅತಿ ದೊಡ್ಡ  ನಗರವಾಗಿದೆ. ಬೆಂಗಳೂರು ನಗರ ದೇಶದ ಜಿಡಿಪಿಗೆ 83 ಶತಕೋಟಿ ಡಾಲರ್‌ನಷ್ಟು ಕೊಡುಗೆ ನೀಡುತ್ತಿದೆ. ಮೊದಲ ಸ್ಥಾನದಲ್ಲಿ ಮುಂಬೈ (209 ಶತಕೋಟಿ ಡಾಲರ್) ಇದ್ದರೆ ನಂತರದ ಸ್ಥಾನಗಳಲ್ಲಿ  ನವದೆಹಲಿ (167 ಶತಕೋಟಿ ಡಾಲರ್), ಕೋಲ್ಕತ್ತ (150 ಶತಕೋಟಿ ಡಾಲರ್) ಇವೆ. ಬೆಂಗಳೂರಿನ ಇತರೆ ಹೆಗ್ಗಳಿಕೆ ಎಂದರೆ ‘ಾರತದಲ್ಲೇ ಅತಿ ಹೆಚ್ಚು ಕೋಟ್ಯಪತಿಗಳ ನಗರ. 10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಹೆಚ್ಚು ಕುಟುಂಬಗಳು ಇರುವ ನಗರವೂ ಹೌದು.

ಅದೇ ರೆಡ್‌ಲೈಟ್, ಅದೇ ಡಿಸ್ಕೌಂಟ್, ಅದೇ ಮೀಟಿಂಗು, ಅದೇ ಟೆನ್‌ಷನ್, ಅದೇ ಆಕ್ಸಿಡೆಂಟು, ಅದೇ ಕ್ಯೂ.. ಎಲ್ಲವೂ ಅದದೇ. ಗೊತ್ತಿದ್ದರೂ ಅದೇ ಬದುಕಿಗೆ ಮತ್ತೆ ರೆಡಿಯಾಗಬೇಕಲ್ಲ?

Saturday, February 9, 2013

ಕೊನೆಯ ಸಂಘರ್ಷ!
`ಅಯ್ಯೋ ಇಷ್ಟಕ್ಕೆಲ್ಲ ಇವನು ಸತ್ತನಲ್ಲ..?' ಎಂದು ಎಲ್ಲವೂ ಮುಗಿದುಹೋದ ನಂತರ ತೋರಿಕೆಯ ಸಂತಾಪ ಹೇಳುವ ಮಂದಿಗೆ ನಿಜವಾಗಿಯೂ ಸತ್ತ ವ್ಯಕ್ತಿಯೊಳಗಿನ ಸಂಘರ್ಷದ ಅರಿವೇ ಇರುವುದಿಲ್ಲ.  ಆತ್ಮಹತ್ಯೆಗೆ ಬಹಿರಂಗವಾಗಿ ಕಾರಣಗಳು ಸಿಗಬಹುದು. ಆದರೆ, `ಆತ್ಮಹಂತಕ'ನೊಳಗೆ ನಡೆಯುತ್ತಿರುವ ಮಾನಸಿಕ ಮತ್ತು ದೈಹಿಕ ಸಂಘರ್ಷಗಳಿಗೆ ನಿರ್ದಿಷ್ಟ ವ್ಯಾಖ್ಯೆ ಕೊಡಲು ಯಾವ ತಜ್ಞರಿಂದಲೂ ಸಾಧ್ಯವಾಗಿಲ್ಲ.


ದೀರ್ಘಕಾಲದಿಂದ ಟೆನ್‌ಷನ್‌ನಲ್ಲಿದ್ದ  ವ್ಯಕ್ತಿ ಕೊನೆಗೂ ಆತ್ಮಹತ್ಯೆ ನಿರ್ಧಾರ ಕೈಗೊಂಡ ಕ್ಷಣದಲ್ಲಿ  ಅತ್ಯಂತ ನಿರಾಳನಾಗಿರುತ್ತಾನೆ. ಹೊಯ್ದಾಟ ನಿಂತು ಮನಸು ಪ್ರಫುಲ್ಲಗೊಳ್ಳುತ್ತದೆ; ತಲ್ಲಣಗಳು ಕೊನೆಗೊಂಡು ಶಾಂತತೆ ಮೂಡುತ್ತದೆ. ಯುದ್ಧ  ಮುಗಿದ ನಂತರದ ಮೌನ ಹೊದ್ದ ರಣರಂಗದಂತಿರುತ್ತದೆ ಆತನ ಮನ... ಸಾವಿನ ಮನೆಯ ಹೊಸ್ತಿಲ ಬಳಿ ಹೆಜ್ಜೆ ಇಟ್ಟವರಿಗೆ ಒಂದೆರಡು ಸಾಂತ್ವನದ ಮಾತು; ಒಂದೇ ಒಂದು ಸಹಾಯ ಹಸ್ತ ಸಿಕ್ಕರೆ ಜೀವವೊಂದು ಉಳಿಯುತ್ತದೆ.




ವಿಕಿರಣ ಕರ್ನಾಟಕ 

ಸುಂದರ ನದಿವನಗಳ ನಾಡೇ, ಗಂಧದ ಚಂದದ ಹೊನ್ನಿನ ಗಣಿಯೇ  ಹೀಗೆಂದು ರಾಷ್ಟ್ರಕವಿ ಕುವೆಂಪು ಅವರಿಂದ ಬಣ್ಣಿಸಲ್ಪಟ್ಟಿರುವ ಕನ್ನಡ ನಾಡು ಅಪಾಯಕಾರಿ ಯುರೇನಿಯಂನ್ನೂ ತನ್ನ ಭೂಗರ್ಭದಲ್ಲಿರಿಸಿಕೊಂಡಿದೆ. ಅಷ್ಟೇ ಅಲ್ಲ, ಇಲ್ಲಿ  ಒಂದರ ಮೇಲೊಂದು ಯುರೇನಿಯಂ ಸಂಸ್ಕರಣಾ ಘಟಕಗಳೂ ತಲೆ ಎತ್ತಲಾರಂಭಿಸುತ್ತಿವೆ; ನ್ಯೂಕ್ಲಿಯರ್‌ ಘಟಕದ ತ್ಯಾಜ್ಯಕ್ಕೂ ಕರುನಾಡೇ  ಕಸದ ಬುಟ್ಟಿ ಆಗುತ್ತಿದೆ. ಯುರೇನಿಯಂ ಎಂದಾಕ್ಷಣ ಏಕೆ ಜನಸಮುದಾಯ ಬೆಚ್ಚಿಬೀಳುತ್ತದೆ? ಈ ನಿಟ್ಟಿನಲ್ಲಿ ಒಂದು ರೌಂಡಪ್‌.

ಕಳೆದ ತಿಂಗಳು ಕೋಲಾರದ ಚಿನ್ನದ ಗಣಿಯ ಸುರಂಗಗಳಿಗೆ ತಮಿಳುನಾಡಿನ ಕೂಡಂಕುಲಂ ಪರಮಾಣು ವಿದ್ಯುತ್‌ ಘಟಕದ ತ್ಯಾಜ್ಯಗಳನ್ನು ತಂದು ಸುರಿಯಲಾಗುವುದು ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. ಜನ ರೊಚ್ಚಿಗೆದ್ದರು. ಬಂದ್‌ ನಡೆಸಿದರು. ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಕಾರಣಕ್ಕೋ ಏನೋ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ -ಇಲ್ಲ, ಹಾಗೇನೂ ಇಲ್ಲ- ಎಂದು ಸಮಜಾಯಿಷಿ ಕೊಟ್ಟಿತು. ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ  ಪ್ರಮಾಣಪತ್ರವನ್ನು ವಾಪಸ್‌ ಮಾಡಿಕೊಂಡಿತು.
ಒಂದು ವಾರ ಕಳೆದಿರಲಿಲ್ಲ. ಕೂಡಂಕುಲಂ ತ್ಯಾಜ್ಯವನ್ನು ಸುರಿಯಲು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ  ಸ್ಥಳ ಹುಡುಕಲಾಗುತ್ತಿದೆ ಎಂದು ಅದೇ ವಕೀಲರು ಸುಪ್ರೀಂಕೋರ್ಟಿಗೆ ಮೌಖಿಕವಾಗಿ ಹೇಳಿಕೆಯೊಂದನ್ನು ನೀಡಿದರು. ಈ ವಿಷಯ ಎಲ್ಲೂ ಹೆಚ್ಚು ಸುದ್ದಿಯಾಗಲಿಲ್ಲ.
ಅದರರ್ಥ- ಕೋಲಾರದಲ್ಲಿ ಅಣುತ್ಯಾಜ್ಯ ಸುರಿಯುವ ವಿಷಯಕ್ಕೆ ಪೂರ್ಣವಿರಾಮ ಬಿದ್ದಿಲ್ಲ ಅಂತಲೇ. ವಾಸ್ತವವಾಗಿ, ಯಾವುದೇ ಪರಮಾಣು ವಿದ್ಯುತ್‌ ಘಟಕದಲ್ಲಿ 15 ರಿಂದ 20 ವರ್ಷಗಳ ಕಾಲ ತ್ಯಾಜ್ಯವನ್ನು ಕಾಪಿಟ್ಟುಕೊಳ್ಳುವ ಅವಕಾಶ ಇದೆ. ಆ ನಂತರವಷ್ಟೇ  ತ್ಯಾಜ್ಯಗುಂಡಿ ಬೇಕಾಗಿರುವುದು. ಅದು ಕೋಲಾರದ ಚಿನ್ನದ ಗಣಿಯೂ ಆಗಿರಬಹುದು. . . ಯಾರಿಗೊತ್ತು?
ಕೋಲಾರ ಪ್ರಕರಣಕ್ಕೆ ಸದ್ಯಕ್ಕೆ ವಿರಾಮ ಬಿದ್ದಿದೆ. ಆದರೆ ಮತ್ತೊಂದೆಡೆ ಕರ್ನಾಟಕ ಪರಮಾಣು ವಿದ್ಯುತ್‌ ಉತ್ಪಾದನೆಗೆ ಬೇಕಾದ ಯುರೇನಿಯಂ ಕೇಂದ್ರಬಿಂದುವಾಗುವ ಎಲ್ಲ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿವೆ. ಇನ್ನು  3-4 ದಶಕಗಳಲ್ಲಿ  ಕರುನಾಡು ಯುರೇನಿಯಂ ನಾಡಾಗಿ ಪರಿವರ್ತನೆಗೊಂಡರೂ ಅಚ್ಚರಿಪಡಬೇಕಿಲ್ಲ. ಇದನ್ನು ಪುಷ್ಟೀಕರಿಸಲು ಎಂಟು ಕಾರಣಗಳು ಇಲ್ಲಿವೆ.
1. 
ಕೋಲಾರದಲ್ಲಿ ತ್ಯಾಜ್ಯ ಸುರಿಯುತ್ತಾರೆ ಎನ್ನುವ ಸುದ್ದಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆದರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಎಂಬ ಪುಟ್ಟ ಗ್ರಾಮದಲ್ಲಿ  ಯುರೇನಿಯಂ ಗಣಿಗಾರಿಕೆ ಹೆಚ್ಚು ಕಡಿಮೆ ಶುರುವಾಗಿಬಿಟ್ಟಿದೆ. ಆದರೆ ಇದು ಯಾವ ಕೋಲಾಹಲವನ್ನೂ ಸೃಷ್ಟಿಸಲಿಲ್ಲ.
ಗುಲ್ಬರ್ಗದ ಸೇಡಂನಿಂದ ಬಿಜಾಪುರದ ತನಕ ಇರುವ ಭೀಮಾನದಿ ಪಾತ್ರದಲ್ಲಿ  ಅತ್ಯಂತ ಸಮೃದ್ಧವಾಗಿ ಯುರೇನಿಯಂ ಇದೆ ಎನ್ನುವುದು ಖಚಿತವಾಗಿದೆ. ಅದರಲ್ಲೂ ಗೋಗಿಯಲ್ಲಿ  ದಟ್ಟ ನಿಕ್ಷೇಪ ಇರುವುದು ಸ್ಪಷ್ಟವಾಗಿದೆ. ಇಲ್ಲಿ ಕಳೆದ ಏಳೆಂಟು  ವರ್ಷಗಳ ಹಿಂದೆ ಆರಂಭವಾದ ವಿವಿಧ ಹಂತಗಳ ಪರೀಕ್ಷೆ ಈಚೆಗೆ ಕೊನೆಗೊಂಡಿದ್ದು, ಮುಂದಿನ ವರ್ಷ ಗಣಿಗಾರಿಕೆ ಆರಂಭವಾಗಲಿದೆ. ಒಟ್ಟಾರೆ 39.13 ಎಕರೆ ಜಾಗದಲ್ಲಿ  ಪೂರ್ಣ ಗಣಿಗಾರಿಕೆ ನಡೆಸಲು ಯುರೇನಿಯಂ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಯುಸಿಐಎಲ್‌) ಮುಂದಾಗಿದೆ. ಜಾರ್ಖಂಡ್‌ನ ಜಾದುಗುಡ ಮತ್ತು  ಆಂಧ್ರಪ್ರದೇಶದ  ಪುಲಿವೆಂದುಲದ  ನಂತರ ಮೂರನೇ ಗಣಿ ಇದಾಗಿದೆ. ಆದರೆ, ಇವೆಲ್ಲದ್ದಕ್ಕಿಂತಲೂ ಅತ್ಯಂತ ಸಮೃದ್ಧವಾದ ಅದಿರು ಇಲ್ಲಿ ದೊರೆಯುತ್ತದೆ.
ಸಮೀಪದಲ್ಲೇ ಸಂಸ್ಕರಣಾ ಘಟಕವೂ ಬರಲಿದೆ. ಇದಕ್ಕಾಗಿ  ಸೈದಾಪುರ, ಡಿಗ್ಗಿ  ಹಾಗೂ ಉಮರದೊಡ್ಡಿ  ಎಂಬ ಗ್ರಾಮಗಳನ್ನೊಳಗೊಂಡಂತೆ 102.23 ಹೆಕ್ಟೇರ್‌ ಜಾಗದ ಭೂ ಸ್ವಾಧೀನಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಗಣಿ ಮೂಲಕ  ಪ್ರತಿವರ್ಷ 1,50,000 ಟನ್‌  ಯುರೇನಿಯಂ ಉತ್ಪಾದನೆಯಾಗಲಿದ್ದು, ಸಂಸ್ಕರಣೆಯ ನಂತರ 150 ಟನ್‌ ಸಾಂದ್ರೀಕೃತ ಯುರೇನಿಯಂ ಲಭ್ಯವಾಗಲಿದೆ ಎಂದು ಪರಮಾಣು ಖನಿಜಗಳ ಅನ್ವೇಷಣೆ ಮತ್ತು ಸಂಶೋಧನಾ  ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಗೋಗಿಯ ನಂತರ ಯುಸಿಐಎಲ್‌ ಕಣ್ಣು  ಸಮೀಪದ ಉಕ್ಕಿನಾಳ್‌, ದರ್ಶನಾಪುರ, ತಿಂಥಿಣಿ ಎಂಬ ಗ್ರಾಮಗಳ ಮೇಲೆ ಬೀಳಬಹುದು.
2.
ಇಷ್ಟೇ ಸಮೃದ್ಧ  ಯುರೇನಿಯಂ ನಿಕ್ಷೇಪ ಪತ್ತೆಯಾಗಿರುವುದು ಬೆಳಗಾವಿಯ ಕಲಾದಗಿ ಮುಖಜಭೂಮಿಯಲ್ಲಿ. ಬೆಳಗಾವಿಯಿಂದ ಸುಮಾರು 50 ಕಿಮೀ ದೂರ ಇರುವ ದೇಶನೂರು, ಹೋಗರ್ತಿ, ಕೊಳಾದ್ರಿ ಮತ್ತು ಕೊಲ್ದೂರು ಎಂಬಲ್ಲಿ  ಈಗಾಗಲೇ ಕೇಂದ್ರ ಪರಮಾಣು ಸಚಿವಾಲಯದ ವಿಜ್ಞಾನಿಗಳು ಸಮೀಕ್ಷೆ ಮತ್ತು ಪರೀಕ್ಷೆ ಮುಗಿಸಿದ್ದಾರೆ. ಆದರೆ ಇಲ್ಲಿ ಪೂರ್ಣ ಪ್ರಮಾಣದ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.
ಈ ಭಾಗದಲ್ಲಿ  ಸುಮಾರು 50,000 ಮಂದಿ ನೆಲೆಸಿದ್ದು, ಇವರ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಪ್ರಾಥಮಿಕ ಯೋಜನೆಯನ್ನೂ ರೂಪಿಸಿದೆ. ಖಾನಾಪುರ ತಾಲೂಕಿನ ವಿಶೇಷ ಅರಣ್ಯ ವಲಯದಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಜಿಲ್ಲಾಡಳಿತ ಹಿಂದೆ ಹೇಳಿತ್ತು.
-ಕಲಾದಗಿ ಭಾಗದಲ್ಲಿ  ಯುರೇನಿಯಂ ನಿಕ್ಷೇಪ ಇರುವುದು ನಿಜ. ಆದರೆ ಅದರ ಗಣಿಗಾರಿಕೆ ಆರ್ಥಿಕವಾಗಿ ಸಾಧುವೇ ಎನ್ನುವುದನ್ನು  ಇನ್ನಷ್ಟೇ ಪರಿಶೀಲಿಸಬೇಕಿದೆ. ಅಲ್ಲಿ ಇನ್ನೊಂದು ಗೋಗಿ ಸಿಕ್ಕರೂ ಸಿಗಬಹುದು ಎಂದು ಪರಮಾಣು ಖನಿಜಗಳ ಅನ್ವೇಷಣೆ ಮತ್ತು ಸಂಶೋಧನಾ  ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಡಾ. ಆರ್‌.ಮೊಹಾಂತಿ ಹೇಳುತ್ತಾರೆ.

3
ಕರ್ನಾಟಕಕ್ಕೂ ಯುರೇನಿಯಂಗೂ ಇಂದು ನಿನ್ನೆಯ ನಂಟಲ್ಲ.  1978ರಿಂದಲೇ ರಾಜ್ಯದಲ್ಲಿ ಯುರೇನಿಯಂಗಾಗಿ ಹುಡುಕಾಟ ನಡೆಯುತ್ತಲೇ ಇದೆ. ಇದಲ್ಲದೆ, ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೊಂದಿಕೊಂಡಿರುವ ಬಲ್ಕುಂಜಗುಡ್ಡೆ, ಚಿಕ್ಕಮಗಳೂರಿನ ಕಳಸಾಪುರ,  ಉತ್ತರ ಕನ್ನಡದ ಅರೇಬೈಲ್‌ ಗ್ರಾಮ ಹಾಗೂ ಸುರಪುರ ತಾಲೂಕಿನ ತಿಂಥಿಣಿ ಪ್ರದೇಶದಲ್ಲಿ  ಸಮೀಕ್ಷೆ  ನಡೆದಿದೆ. ಸಮೀಕ್ಷೆ ನಡೆದಾಗಲೆಲ್ಲ ಸಾರ್ವಜನಿಕರು, ಪರಿಸರವಾದಿಗಳು ದನಿ ಎತ್ತಿದ್ದರು. ಅರೇಬೈಲ್‌ನಲ್ಲಿ  ಗಣಿಗಾರಿಕೆ ಸಮೀಕ್ಷೆ ನಡೆದಾಗ ಸಾಹಿತಿ ಡಾ. ಶಿವರಾಮ ಕಾರಂತರ ನೇತೃತ್ವದಲ್ಲಿ  ಪ್ರತಿರೋಧ ವ್ಯಕ್ತವಾಗಿತ್ತು. ಸದ್ಯಕ್ಕೆ ಈ ಯಾವುದೇ ಭಾಗದಲ್ಲಿ ಗಣಿಗಾರಿಕೆ ಮಾಡುವ ಉದ್ದೇಶ ಇಲ್ಲ. ಅದು ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಪರಮಾಣು ಖನಿಜಗಳ ಅನ್ವೇಷಣೆ ಮತ್ತು ಸಂಶೋಧನಾ  ನಿರ್ದೇಶನಾಲಯ ಹೇಳಿದೆ.

4
 ಕೋಲಾರದ ಅಂತರ್ಜಲದಲ್ಲಿ ಈಗಲೂ ಯುರೇನಿಯಂ ಇದೆ ಎನ್ನುವುದು ತಿಳಿದಿದೆಯೇ?  ಈಚೆಗೆ ಬಾಬಾ ಅಟಾಮಿಕ್‌ ರೀಸರ್ಚ್‌ ಸೆಂಟರ್‌ ಹಾಗೂ ಸೆಂಟರ್‌ ಫಾರ್‌ ಎನ್‌ವಿರಾನ್‌ಮೆಂಟ್‌ ಅಂಡ್‌ ಎನರ್ಜಿ ರೀಸರ್ಚ್‌ ಸ್ಟಡೀಸ್‌ನ  ಸಹಯೋಗದಲ್ಲಿ  ವಿಜ್ಞಾನಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 11 ತಾಲೂಕುಗಳಲ್ಲಿನ  52 ಕೊಳವೆ ಬಾವಿಗಳಲ್ಲಿ  ಈ ಅಧ್ಯಯನ ಮಾಡಲಾಗಿದೆ. ಇಲ್ಲಿ ಯುರೇನಿಯಂ ಅಂಶ ಪ್ರತಿ ಲೀಟರ್‌ಗೆ 0.3ರಿಂದ 1442.9 ಮೈಕ್ರೊ ಗ್ರಾಮ್‌ ತನಕ ಇದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಯ ಪ್ರಕಾರ ಪ್ರತಿ ಲೀಟರ್‌ಗೆ 2ರಿಂದ 30 ಮೈಕ್ರೋಗ್ರಾಮ್‌ಗಿಂದ ಕಡಿಮೆ ಇದ್ದರೆ ಮಾತ್ರ ಅದು ಕುಡಿಯಲು ಯೋಗ್ಯ. ಕೋಲಾರ ಸುತ್ತಮುತ್ತ ಗ್ರಾನೈಟ್‌ ಕಲ್ಲುಗಳು ಇರುವುದರಿಂದ ಯುರೇನಿಯಂ ಅಂಶ ಇರುವುದು  ಸಹಜ ಎಂದು ತಜ್ಞರು ಹೇಳುತ್ತಾರೆ.

5.
ಬೆಂಗಳೂರಿನ ಗಾಳಿ ಮತ್ತು ನೀರು ಯುರೇನಿಯಂ ಮುಕ್ತವಾಗಿಲ್ಲ. ಇಲ್ಲಿ ನೀವು ಕುಡಿಯುವ ನೀರು ಮತ್ತು ಗಾಳಿಯಲ್ಲಿ  ರೇಡಿಯೋವಿಕಿರಣ ರೇಡಾನ್‌ ಇರುವುದು  ಅಧ್ಯಯನಗಳಿಂದ ಖಚಿತವಾಗಿದೆ. ಬಾಬಾ ಅಟಾಮಿಕ್‌ ರೀಸರ್ಚ್‌ ಸೆಂಟರ್‌ ಮತ್ತು ಬೆಂಗಳೂರು ವಿವಿಯ ಪರಿಸರ ವಿಜ್ಞಾನ ವಿಭಾಗ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ  ಬೆಂಗಳೂರಿನ ಅಂತರ್ಜಲದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರೇಡಾನ್‌ ಇದೆ ಎನ್ನುವುದು ಗೊತ್ತಾಗಿದೆ. ಪ್ರೊ. ಆರ್‌.ಕೆ.ಸೋಮಶೇಖರ್‌ ನೇತೃತ್ವದ ಈ ಅಧ್ಯಯನ ತಂಡ ಬೆಂಗಳೂರಿನ ವಿವಿಧ ಮೂಲಗಳಿಂದ 78 ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಅಭ್ಯಸಿಸಿತು. ರೇಡಾನ್‌ ಅಂಶ ಪ್ರತಿ ಲೀಟರ್‌ಗೆ 11.1 ಬೆಕ್ವೆರಲ್‌ ಗಿಂತ ಹೆಚ್ಚಿರುವುದು ದಾಖಲಾಗಿದೆ. ಯುರೇನಿಯಂ ಸಮೃದ್ಧ ಕಲ್ಲುಗಳಿಂದ ಈ ರೇಡಾನ್‌ ಉತ್ಪತ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ನಗರದಲ್ಲಿ  ಹೊಟ್ಟೆ ಕ್ಯಾನ್ಸರ್‌ ಹೆಚ್ಚುತ್ತಿದೆ ಎಂದು ತಜ್ಞರು ಅಂದಾಜಿಸುತ್ತಾರೆ.

6
ಚಿಕ್ಕಮಗಳೂರು ಜಿಲ್ಲೆಯಲ್ಲೂ ರೇಡಾನ್‌ ಮತ್ತು  ರೇಡಿಯೋ ವಿಕಿರಣ ಅಂಶಗಳು ಇವೆ ಎಂದರೆ ನಂಬುವಿರಾ? ಶಿವಮೊಗ್ಗ, ಸಿರಾ ಹಾಗೂ ಮೈಸೂರಿನ ಭೌತ ವಿಜ್ಞಾನದ  ಅಧ್ಯಾಪಕರಾದ ಎಸ್‌.ಮಂಜುನಾಥ್‌. ಎ.ಜಯಶೀಲನ್‌ ಹಾಗೂ ಪಿ. ವೆಂಕಟರಮಣಯ್ಯ ಅವರನ್ನೊಳಗೊಂಡ ತಂಡವೊಂದು ಈಚೆಗೆ ಚಿಕ್ಕಮಗಳೂರು ಜಿಲ್ಲೆಯ ಮಣ್ಣಿನ ಸ್ಯಾಂಪಲ್‌ನ್ನು ಪರೀಕ್ಷಿಸಿತು.
ರೇಡಾನ್‌ 226, ರೇಡಾನ್‌ 228, ಪೊಲೋನಿಯಂ 210 ಹಾಗೂ ಸೀಸ 210ಗಳು ಹೊರಸೂಸುವ ಗಾಮಾ ಪ್ರಮಾಣ ಹೆಚ್ಚಿರುವುದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಕೃಷಿಭೂಮಿಯಲ್ಲಿ ಈ ಪ್ರಮಾಣ ಹೆಚ್ಚಿದ್ದು, ಬಹುಶಃ ಇದು ಗ್ರಾನೈಟ್‌ ಮತ್ತು ಯುರೇನಿಯಂ ಅಂಶದಿಂದಲೇ ವಿಸರ್ಜನೆಯಾಗುತ್ತಿದೆ ಎಂದು ಅಧ್ಯಯನ ಅಂದಾಜು ಮಾಡಿದೆ. ಇಲ್ಲಿ ಕುಡಿಯುವ ನೀರಿನಲ್ಲಿ 0.2ರಿಂದ 27.9 ಮೈಕ್ರೊಗ್ರಾಮ್‌ನಷ್ಟು ಯುರೇನಿಯಂ ಅಂಶ ಪತ್ತೆಯಾಗಿದೆ.

7
 ಇದೆಲ್ಲವೂ ಕರ್ನಾಟಕ ಯುರೇನಿಯಂ ಸಮೃದ್ಧ ಎಂದು ಸೂಚಿಸಿದರೆ, ಮಾನವನಿರ್ಮಿತ ಯುರೇನಿಯಂ ಸಂಸ್ಕರಿತ ಘಟಕಗಳಿಗೂ ಕರ್ನಾಟಕ ನೆಚ್ಚಿನ ತಾಣವಾಗಿದೆ. ಭಾರಿ ವಿರೋಧದ ನಡುವೆ ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ನ್ಯೂಕ್ಲಿಯರ್‌ ವಿದ್ಯುತ್‌ ಉತ್ಪಾದನಾ ಘಟಕ ಆರಂಭವಾಗಿದೆ. ಇದರಿಂದ ಜನಜೀವನಕ್ಕೆ ಯಾವುದೇ ಅಪಾಯ ಇಲ್ಲ; ವಿಕಿರಣ ಜನಜೀವನಕ್ಕೆ ತಟ್ಟದ ಹಾಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಪರಮಾಣು ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಕೈಗಾ ಸುತ್ತಮುತ್ತಲಿನ ಜನರಲ್ಲಿ ಭಯ ಮಾತ್ರ ವಿಪರೀತವಾಗಿದೆ. ಆ ಭಾಗದಲ್ಲಿ ಕ್ಯಾನ್ಸರ್‌ ಪ್ರಮಾಣ ಹೆಚ್ಚಾಗಿದೆ ಎನ್ನುವ ವರದಿಗಳು ಜನರನ್ನು ತಲ್ಲಣಗೊಳಿಸಿವೆ. ಆ ಕ್ಯಾನ್ಸರ್‌ಗೂ ಕೈಗಾ ಘಟಕಕ್ಕೂ ಸಂಬಂಧ ಇದೆ ಎನ್ನುವುದನ್ನು ಯಾವುದೇ ಅಧ್ಯಯನಗಳು ಶ್ರುತಪಡಿಸಿಲ್ಲ. ಆದರೂ, ಉತ್ತರ ಕನ್ನಡ ಜಿಲ್ಲೆಯ ಜನ ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡಂತೆ ಒಳಗೊಳಗೆ  ಬೇಯುತ್ತಿದ್ದಾರೆ. ನಾಳೆ ಏನೋ ಎಂಬ ಚಿಂತೆ

8
ಹೆಚ್ಚಿನ ಜನರಿಗೆ ಗೊತ್ತಿಲ್ಲ. ಮೈಸೂರಿನಿಂದ 20 ಕಿಮೀ ದೂರದ ರಟ್ನಹಳ್ಳಿ ಎಂಬಲ್ಲಿ ರೇರ್‌ ಮೆಟೀರಿಯಲ್‌ ಪ್ಲಾಂಟ್‌ ಎನ್ನುವ ಘಟಕ ಇದೆ. ಇದು ಅದರ ಕೋಡ್‌ನೇಮ್‌. ಅಣು ವಿದ್ಯುತ್‌ ಇಲಾಖೆ ಸ್ಥಾಪಿಸಿರುವ ಈ ಘಟಕದಲ್ಲಿ  ಯುರೇನಿಯಂ ಸಮೃದ್ಧೀಕರಣ ಪ್ರಕ್ರಿಯೆ ನಡೆಯುತ್ತದೆ. ಅಂದರೆ ಒಂದು ಬಾರಿ ಬಳಸಿ ಶಕ್ತಿ ಕಳೆದುಕೊಂಡ ಯುರೇನಿಯಂಗೆ ಮತ್ತೆ ಶಕ್ತಿ ತುಂಬುವ ಕೆಲಸ.  ಹಾಗೆಯೇ, ಜಾರ್ಖಂಡ್‌ನಲ್ಲಿ ಗಣಿಗಾರಿಕೆಯಾದ ಯುರೇನಿಯಂನ್ನು ಹೈದರಾಬಾದ್‌ಗೆ ಶುದ್ಧೀಕರಣಕ್ಕೆ ಕಳುಹಿಸಲಾಗುತ್ತದೆ. ಬಳಿಕ ಅದನ್ನು ಮೈಸೂರಿಗೆ  ತಂದು ನ್ಯೂಕ್ತಿಯರ್‌ ಗ್ರೇಡ್‌ ಯುರೇನಿಯಂ ಆಗಿ ಪರಿವರ್ತಿಸಲಾಗುತ್ತದೆ.  ಅಂದರೆ, ಯುರೇನಿಯಂ ಅಂಶವನ್ನು ವೃದ್ಧಿಸಲಾಗುತ್ತದೆ.  ಅದಿರಿನಲ್ಲಿ ಶೇ 0.3ರಷ್ಟು ಯುರೇನಿಯಂ ಅಂಶ ಇದ್ದರೆ, ಈ ಘಟಕದಲ್ಲಿ ಅದನ್ನು ಶೇ 30ರಿಂದ 45 ರಷ್ಟು ಹೆಚ್ಚಿಸಲಾಗುತ್ತದೆ. ಈಗ ಈ ಘಟಕವನ್ನು ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ.
ಆದರೆ ಮೈಸೂರಿನ ಜನತೆಯ ಆತಂಕ ಅದಲ್ಲ. ನಾಳೆ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಯುರೇನಿಯಂ ಲೀಕ್‌ ಆಗುವುದಿಲ್ಲವೇ ಎನ್ನುವ ಕಳವಳ ಜನರದ್ದು. ಹೀಗಾಗಿಯೇ 1980ರ ದಶಕದಲ್ಲಿ ಇದು ತಲೆ ಎತ್ತಿದಾಗ ಹಲವರು ಇದನ್ನು ಪ್ರತಿರೋಧಿಸಿದರು. ಸಿಎಫ್‌ಟಿಐಆರ್‌ ವಿಜ್ಞಾನಿ ಡಾ. ಎಚ್‌ ಎ ಪಾರ್ಪಿಯಾ , ಪ್ರೊ. ರಾಮಲಿಂಗ ಹಾಗೂ ಸಾಕೇತ್‌ ರಾಜನ್‌ (ನಂತರ ನಕ್ಸಲ್‌ ನಾಯಕನಾಗಿ ಸಾವನ್ನಪ್ಪಿದ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಚಿತ್ರದುರ್ಗದಲ್ಲಿ ಇಂಥದ್ದೇ  ಇನ್ನೊಂದು ಯುರೇನಿಯಂ ಸಮೃದ್ಧೀಕರಣ ವಿಶೇಷ ಘಟಕವನ್ನು ತೆರೆಯಲು ಪರಮಾಣು ಇಲಾಖೆ ಉದ್ದೇಶಿಸಿದೆ. ಇಲ್ಲಿ ವೃದ್ಧಿಯಾಗುವ ಯುರೇನಿಯಂ 1,000 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ಸಾಕಾಗುತ್ತದೆ.
ಒಟ್ಟಾರೆ, ಮುಂದಿನ ದಿನಗಳಲ್ಲಿ ಕರುನಾಡ ಮೇಲೆ ಯುರೇನಿಯಂ ಭೀತಿ ಅಪ್ಪಳಿಸುವುದಂತೂ ಖಚಿತ. ಆದರೆ ಆ ಭೀತಿ ಭಾವವನು ಹೋಗಲಾಡಿಸುವವರು ಯಾರು?


ಹಿರೇಮಠರ ಮಾತು 
ಬಳ್ಳಾರಿ ಅಕ್ರಮ ಗಣಿಯೊಳ ಹೊಕ್ಕು ಅಲ್ಲಿ ನಡೆಯುತ್ತಿದ್ದ ಲೂಟಿಕೋರರ ರುದ್ರನರ್ತನವನ್ನು ಕಣ್ಣಾರೆ ಕಂಡ ಎಸ್‌.ಆರ್‌.ಹಿರೇಮಠರು ಹೆದರಿ ನಿಲ್ಲಲಿಲ್ಲ. ಎದೆಯೊಳಗೆ ಧಗಧಗಿಸುತ್ತಿದ್ದ ಹೋರಾಟದ ಕಿಚ್ಚು ಹಾಗೆ ಸುಮ್ಮನಿರಲು ಬಿಡುವಂಥದ್ದೂ ಅಲ್ಲ. ಗಣಿವ್ಯೂಹದೊಳಗಿನ ಹಳವಂಡಗಳ ಒಂದೊಂದೇ ದಾಖಲೆಗಳನ್ನು ಕಲೆ ಹಾಕಿ ಸುಪ್ರೀಂಕೋರ್ಟ್‌ವರೆಗೆ ಹೋಗಿ ಮುಟ್ಟಿಸಿದರು. ಅಕ್ರಮಿಗಳನ್ನು ಸಿಬಿಐ ಕಟಕಟೆಗೆ ತಂದು ನಿಲ್ಲಿಸುವವರೆಗೆ ವಿರಮಿಸಲಿಲ್ಲ. ಈಗ ಜನಾರ್ದನ ರೆಡ್ಡಿ ಒಳಗಿದ್ದಾರೆ;ಯಡಿಯೂರಪ್ಪ ಒಳಗೆ ಹೋಗಲು ಕಾಯುತ್ತಿದ್ದಾರೆ.. ಹೋರಾಟ ಹೇಗೆ ಸಾಗಿಬಂತು? ಅದರ ಹಿಂದಿನ ರಣತಂತ್ರಗಳೇನು? ಹಿರೇಮಠ್‌ ಅವರ ಮಾತಿನಲ್ಲೇ ಕೇಳಿ. . .


ಇನ್ನೂ ಮಹಾಭಾರತ ಪೂರ್ಣಗೊಂಡಿಲ್ಲ..
ಎಸ್‌.ಆರ್‌.ಹಿರೇಮಠ
2008- ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಾಂಡವವಾಡುತ್ತಿದ್ದ ಸಮಯವದು. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಇದೇ ವೇಳೆ ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆಗಳಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಕೆಲವು ಸ್ನೇಹಿತರು ದಾಖಲೆ ಸಹಿತ ನಮ್ಮ ಗಮನಕ್ಕೆ ತಂದರು. ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು ನಮ್ಮ ಸಂಸ್ಥೆ ಸಮಾಜ ಪರಿವರ್ತನ ಸಮುದಾಯದ (ಎಸ್‌ಪಿಎಸ್‌) ಮುಖ್ಯ ಧ್ಯೇಯ ಕೂಡ.
ಪರಿಸರದ ಮೇಲೆ ಸರ್ಕಾರದ ನಿಯಂತ್ರಣ ಇರಬಾರದು. ಬದಲಾಗಿರುವ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲಿ ಪರಿಸರದ ಮೇಲೆ ಸಮುದಾಯದ ನಿಯಂತ್ರಣ ಇರಬೇಕು ಎನ್ನುವುದು ನಮ್ಮ ಇಂಗಿತ. ಈ ಅಭಿಪ್ರಾಯವನ್ನು ಇಟ್ಟುಕೊಂಡೇ ನಾವು ಬೇರೆ ಬೇರೆ ಕ್ಷೇತ್ರಗಳಿಂದ ಬಂದ ಸಮಾನ ಮನಸ್ಕರು ಒಂದು ಕಡೆ ಸೇರಿಕೊಂಡೆವು.
ಸಮಾಜದ ಮೇಲೆ ದೂರಗಾಮಿ ದುಷ್ಪರಿಣಾಮ ಬೀರಬಲ್ಲ ಅಕ್ರಮಗಳ ವಿರುದ್ಧ ಕಾನೂನುಬದ್ಧವಾಗಿ ಹೋರಾಡುತ್ತಿದ್ದೆವು. ಕೆಲವು ವರ್ಷಗಳ ಹಿಂದೆಯಷ್ಟೇ ಛತ್ತೀಸ್‌ಗಢದ ಬಸ್ತಾರ್‌ ಅರಣ್ಯದಲ್ಲಿ ಟಿಂಬರ್‌ ಮಾಫಿಯಾದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆ. ಆ ಪ್ರಕರಣದ ಗಾಢ ಅನುಭವ ನನ್ನದ್ದಾಗಿದ್ದರಿಂದಲೋ ಏನೋ, ಬಳ್ಳಾರಿ ಗಣಿಗಾರಿಕೆ ವಿಷಯವನ್ನು ಸಂಡೂರಿನ ನಾಗರಿಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ನನ್ನ ಗಮನಕ್ಕೆ ತಂದರು. ಅಲ್ಲಿ ನಡೆಯುತ್ತಿದ್ದ ಅರಣ್ಯ ನಾಶ, ಗಣಿಗಾರಿಕೆ ಕುರಿತು ದಾಖಲೆ ಸಹಿತ ಹಲವು ಸ್ವಯಂ ಸೇವಕರು ನನ್ನನ್ನು  ಸಂಪರ್ಕಿಸಿದರು. ಸ್ಥಳೀಯರೇ ನಿಂತು ಹೋರಾಡಬೇಕು, ನಾನು ನಿಮಗೆ ಸಹಕರಿಸುತ್ತೇನೆ ಎಂದು ಹೇಳಿ ಅವರೆಲ್ಲರ ಸಹಾಯದಿಂದ ಬಳ್ಳಾರಿ ಜಿಲ್ಲೆಯ ಗಣಿಗಾರಿಕೆ ಇತಿಹಾಸ, ಅಲ್ಲಿನ ಪರಿಸರ ನಾಶ, ನಿಯಮಗಳನ್ನು ಮೀರಿ ನಡೆಯುತ್ತಿರುವ ಗಣಿಗಾರಿಕೆ ಎಲ್ಲವನ್ನೂ ಅಧ್ಯಯನ ಮಾಡಿದೆವು. ಅಲ್ಲಿ ರೆಡ್ಡಿ ಸೋದರರದ್ದು ಮಾತ್ರ ಅಕ್ರಮ ಗಣಿಗಾರಿಕೆ ಆಗಿರಲಿಲ್ಲ. ಅನಿಲ್‌ ಲಾಡ್‌, ಎಂಎಸ್‌ಪಿಎಲ್‌, ಕಲ್ಯಾಣಿ, ಜಿಂದಾಲ್‌ ಹೀಗೆ ಎಲ್ಲರಿಗೂ ಖನಿಜದ ಲಾಭ ಮುಖ್ಯವಾಗಿತ್ತೇ ಹೊರತು ಪರಿಸರದ ಬಗ್ಗೆ ಯಾರಿಗೂ ಚಿಂತೆ ಇರಲಿಲ್ಲ. ಇಲ್ಲಿ ಕೋಟಿಗಟ್ಟಲೆ ಅವ್ಯವಹಾರ ನಡೆದಿರುವ ಅನುಮಾನ ಶುರುವಾಯಿತು.
ಮೊದಲ ಹೆಜ್ಜೆ
ಇದರ ವಿರುದ್ಧ ಹೋರಾಟ ಎಂದು ಮಹಾಭಾರತ ಯುದ್ಧದಂಥ ತೀವ್ರತಮವಾದ ಹೋರಟ ಬೇಕು ಎಂದು ನನಗೆ ಅನ್ನಿಸಿತು. ಎಲ್ಲದ್ದಕ್ಕೂ ಮೊದಲು ಜನರನ್ನು ಸೇರಿಸಬೇಕಾಗುತ್ತದೆ. ಜನರಿಗೆ ತಿಳುವಳಿಕೆ ನೀಡಬೇಕಾಗುತ್ತದೆ. ಹೀಗಾಗಿ, 2008ರ ನವೆಂಬರ್‌ 16 ರಂದು ಸಂಡೂರಿನಲ್ಲಿ  ಜಾಗೃತಿ ರೇಖಾ ಎಂಬ ಸತ್ಯಾಗ್ರಹವನ್ನು ಹಮ್ಮಿಕೊಂಡೆವು. ಇದರಲ್ಲಿ ಸುಮಾರು 350 ಜನ ಭಾಗವಹಿಸಿದ್ದರು. ಮರುದಿನವೇ ಹೊಸಪೇಟೆಯಲ್ಲಿ ಅಂಥದ್ದೇ ಕಾರ್ಯಕ್ರಮ ಹಮ್ಮಿಕೊಂಡೆವು. ಸಂಕಲ್ಪ ಸಭಾ ಎಂಬ ಸಭೆ ನಡೆಸಿ ತಹಶೀಲ್ದಾರ್‌ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಅಕ್ರಮ ಗಣಿಗಾರಿಕೆ ಬಗ್ಗೆ ಮನವಿ ಸಲ್ಲಿಸಿದೆವು. ಇದು ಮಹಾಭಾರತದ ಮೊದಲ ಹೆಜ್ಜೆ.
ಹೀಗೆ ಒಂದೊಂದೇ ಹೆಜ್ಜೆ ಇಟ್ಟುಕೊಂಡು ಹೋಗಬೇಕೆಂದು ನಮಗೆ ಬಹಳ ಸ್ಪಷ್ಟವಾಗಿ ಗೊತ್ತಿತ್ತು. ಏಕೆಂದರೆ ನಾವು ಎದುರು ಹಾಕಿಕೊಳ್ಳುತ್ತಿರುವುದು ಸಾಮಾನ್ಯ ವ್ಯಕ್ತಿಗಳನ್ನಲ್ಲ ಎಂದು ಅರಿವೂ ನಮಗಿತ್ತು. 2009ರ ಜನವರಿ 25ರಂದು ಬಳ್ಳಾರಿ ಜಿಲ್ಲಾಧಿಕರಿ ಕಚೇರಿ ಎದುರು ಭಾರಿ ಪ್ರತಿಭಟನೆ ಮಾಡಿದೆವು. ಅದರಲ್ಲಿ ಸುಮಾರು 5,000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಮೇ ತಿಂಗಳಲ್ಲಿ ಎಸ್‌ಪಿಎಸ್‌ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಜಂಟಿಯಾಗಿ ಕಾರ್ಯಾಗಾರವನ್ನು ಆಯೋಜಿಸಿತು. ಇದರಲ್ಲಿ ಹಂಪಿ ಕನ್ನಡ ವಿವಿ ಮತ್ತು ಗುಲ್ಬರ್ಗ ವಿವಿಯ ವಿಸ್ತರಣಾ ಕೇಂದ್ರದ ತಜ್ಞರು ಆಗಮಿಸಿ ವಿವಿಧ ಕಡೆಗಳಿಂದ ಬಂದಿದ್ದ ಯುವ ಕಾರ್ಯಕರ್ತರಿಗೆ ಮಾಹಿತಿಗಳನ್ನು ನೀಡಿದರು.
ಜನಾಂದೋಲನದ ಜತೆಗೆ ಕಾನೂನು ಹೋರಾಟ ಮಾಡುವುದು ನಮ್ಮ ಮುಖ್ಯ ಗುರಿ. ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಿದೆವು. ಇದೇನು ಸರಳವಲ್ಲ. ಎಲ್ಲ ಅಗತ್ಯ ದಾಖಲೆಗಳನ್ನು ಕಲೆಹಾಕಬೇಕು. ಒಂದಿಷ್ಟೂ ಜಾರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನನ್ನ ಜತೆಗೆ ಪ್ರೊ. ವಿಷ್ಣು ಕಾಮತ್‌, ಡಾ. ರವೀಂದ್ರನಾಥ ರಾಮಚಂದ್ರರಾವ್‌ ಕೊಂಗೊವಿ ಮತ್ತಿತರರು ಸಾಕಷ್ಟು ಅಧ್ಯಯನ ನಡೆಸಿದರು. ಆ ಹೊತ್ತಿಗೆ ಲೋಕಾಯುಕ್ತರಾಗಿದ್ದ ಸಂತೋಷ್‌ ಹೆಗಡೆ ಅವರು ತಮ್ಮ ಮೊದಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಅದರಲ್ಲಿ ಅಕ್ರಮದ ಬಗ್ಗೆ ಸಾಕಷ್ಟು ಮಾಹಿತಿ ಇದ್ದವು. ಇದರ ಜತೆಗೆ ಮೈನ್ಸ್‌ ಅಂಡ್‌ ಮಿನರಲ್ಸ್‌ ರೆಗ್ಯುಲೇಷನ್‌ ಕಾಯ್ದೆ, ರಾಷ್ಟ್ರೀಯ ಖನಿಜ ನೀತಿ, 2004ರಲ್ಲಿ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ) ನೀಡಿದ ವರದಿ, ರಾಜ್ಯ ಸರ್ಕಾರ ನೀಡಿದ ಲೈಸೆನ್ಸ್‌, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಗಣಿ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿ. . .  ಹೀಗೆ ನೂರಾರು ದಾಖಲೆಗಳನ್ನು ಕಲೆ ಹಾಕಿದೆವು.

ರಣನೀತಿ
ದಾಖಲೆಗಳನ್ನು  ಕಲೆಹಾಕಿದ ನಂತರ ನಾವು ಇದನ್ನು ಯಾವ ರೀತಿ ಮಂಡಿಸಬೇಕು ಎನ್ನುವುದರ ಬಗ್ಗೆ  ಚರ್ಚೆ ಆರಂಭಿಸಿದೆವು. ಅದಕ್ಕೊಂದು ರಣನೀತಿ ಬೇಕಾಗಿತ್ತು. ಸ್ವಲ್ಪ ಯಾಮಾರಿದರೂ ನಮ್ಮ ಪ್ರಯತ್ನವೆಲ್ಲ ನೀರಿಗೆ ಹಾಕಿದ ಹೋಮದಂತಾಗಿಬಿಡುತ್ತಿತ್ತು.
ಅಷ್ಟೂ ದಿನ ಕರ್ನಾಟಕದಲ್ಲಿ ನಮ್ಮದು ಯಾವುದೇ ಗಣಿಗಾರಿಕೆ  ಇಲ್ಲ ಎಂದು ಜನಾರ್ದನ ರೆಡ್ಡಿ ಹೇಳುತ್ತಿದ್ದರೆ, ಕರ್ನಾಟಕದಲ್ಲಿ ಅಕ್ರಮ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವಾದಿಸುತ್ತಿದ್ದರು. ಹೀಗಾಗಿ, ನಾವು ಆಂಧ್ರದ ಅಕ್ರಮವನ್ನೇ ಆಧಾರವಾಗಿಟ್ಟುಕೊಂಡು ಸಿಬಿಐಯನ್ನು ಕರ್ನಾಟಕಕ್ಕೆ ಎಳೆದು ತಂದು ಇವರನ್ನೆಲ್ಲ ಕಟಾಂಜನದಲ್ಲಿ ನಿಲ್ಲಿಸಬೇಕಾಗಿತ್ತು. ಕರ್ನಾಟಕದ ಅಕ್ರಮದ ಬಗ್ಗೆ ನಾವು ಮೊದಲಿಗೆ ಪ್ರಸ್ತಾಪಿಸುವ ಹಾಗೆ ಇರಲಿಲ್ಲ. ಇದಕ್ಕಾಗಿ 4 ತಿಂಗಳು ತಪಸ್ಸನ್ನೇ ಮಾಡಿದೆವು. ನಾನು ಮತ್ತು ಗೆಳೆಯ ನಾಗಮಣಿ ಒಂದೊಂದೇ ತನಿಖೆ ಶುರು ಮಾಡಿದೆವು.  ಎರಡೂ ರಾಜ್ಯಕ್ಕೆ ಹೊಂದಿಕೊಂಡಿರುವ ಬಳ್ಳಾರಿ ಮೀಸಲು ಅರಣ್ಯದಲ್ಲಿ  ನಡೆದ ಒತ್ತುವರಿ, ರಸ್ತೆ ನಿರ್ಮಾಣ, ಸುಗಲಮ್ಮ ದೇವಸ್ಥಾನ ಧ್ವಂಸಗಳ ಬಗ್ಗೆ  ದಾಖಲೆ ಕಲೆ ಹಾಕಿದೆವು. ಆಂಧ್ರಕ್ಕೆ ಸೇರಿರುವ ಓಬಳಾಪುರದಲ್ಲಿ 29.21 ಲಕ್ಷ ಟನ್‌; ಅನಂತಪುರ ಮೈನಿಂಗ್‌ನಲ್ಲಿ 11 ಲಕ್ಷ ಟನ್‌ ಖನಿಜ ಸಂಗ್ರಹಿಸಿದ್ದೇವೆ ಎಂದು ಓಎಂಸಿ ಹೇಳಿಕೊಂಡಿತ್ತು. ಇದು ಹೇಗೆ ಸಾಧ್ಯ?  ಅಲ್ಲಿ ಅಷ್ಟೊಂದು ಖನಿಜ ಸಿಗುವುದಿಲ್ಲ; ಸಿಕ್ಕರೂ ಗುಣಮಟ್ಟದ್ದಿಲ್ಲ. ಹೀಗಾಗಿ ಇವೆಲ್ಲ ಕರ್ನಾಟಕದಿಂದ ಅಕ್ರಮವಾಗಿ ಸಾಗಾಟವಾದದ್ದು ಎನ್ನುವುದನ್ನು ಸಾಬೀತುಪಡಿಸುವ ಹೊಣೆ ನಮ್ಮ ಮೇಲೆ ಇತ್ತು.
ಇದೇ ಹೊತ್ತಿಗೆ ಆಂಧ್ರದಲ್ಲಿ  ರಾಜಕೀಯ ಸ್ಥಿತಿ ಬದಲಾಗಿತ್ತು. ಅಲ್ಲಿ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಅದರ ವರದಿ ಆಧರಿಸಿ ಆಂಧ್ರ ಸರ್ಕಾರ ಸುಪ್ರೀಂಕೋರ್ಟಿಗೆ ಎಸ್‌ಎಲ್‌ಪಿ ಸಲ್ಲಿಸಿತು. ಗಣಿಗಾರಿಕೆ ನಿಷೇಧವೂ ಆಯಿತು.
ಈ ಬೆಳವಣಿಗೆಯನ್ನೇ ನಾವು ಕಾಯುತ್ತಿದ್ದೆವು. ತಕ್ಷಣ ನಾವೂ ಸುಪ್ರೀಂಕೋರ್ಟಿಗೆ ರಿಟ್‌ ಹಾಕಿದೆವು. ತನಿಖೆ ವ್ಯಾಪ್ತಿಗೆ ಕರ್ನಾಟಕವನ್ನೂ ಸೇರಿಸಿ ಎಂದು ಕೋರಿಕೊಂಡೆವು. ನಮ್ಮ ಅರ್ಜಿ ಅರಣ್ಯಪೀಠದಲ್ಲಿ ಏಳನೇ ಸರದಿಯಲ್ಲಿತ್ತು. ಪರಿಸ್ಥಿತಿ ನಮ್ಮ ಪರವಾಗಿಲ್ಲ ಎನ್ನುವುದು ಅರಿವಿಗೆ ಬಂತು. ಮುಖ್ಯ ನ್ಯಾಯಮೂರ್ತಿ ಬದಲಾಗುವವರೆಗೆ ನಮ್ಮ ಯಾವುದೇ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಗೊತ್ತಾದ ಕೂಡಲೇ ಒಂದೆರಡು ತಿಂಗಳು ಸುಮ್ಮನೆ ಕುಳಿತೆವು.
ಮುಖ್ಯ ನ್ಯಾಯಮೂರ್ತಿಗಳಾಗಿ ಎಸ್‌.ಎಸ್‌.ಕಪಾಡಿಯಾ ಅಧಿಕಾರ ಸ್ವೀಕರಿಸಿದ್ದು ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ಅವರು ಒಬ್ಬ ನಿಷ್ಪಕ್ಷಪಾತ ಮತ್ತು ಸಮರ್ಥ ನ್ಯಾಯಮೂರ್ತಿ. ಏಳನೇ ಸ್ಥಾನದಲ್ಲಿರುವ ನಮ್ಮ ಅರ್ಜಿಗೆ ಮೊದಲ ಆದ್ಯತೆ ಕೊಡಿ ಎಂದು ಕೋರ್ಟಿಗೆ ಮತ್ತೆ ಮೊರೆ ಹೋದೆವು. ಇಲ್ಲದಿದ್ದರೆ ಪ್ರಕರಣ ವಿಚಾರಣೆಗೆ ಬರುವಾಗ ಐದೋ, ಹತ್ತೋ ವರ್ಷವಾಗಬಹುದು. ಅಷ್ಟರೊಳಗೆ ಗಣಿಕಳ್ಳರು ಎಲ್ಲ ಸಂಪನ್ಮೂಲವನ್ನು  ಖಾಲಿ ಮಾಡುವ ಅಪಾಯವಿದೆ. ಆದ್ದರಿಂದ ಕನಿಷ್ಠ  ಪ್ರಕರಣದ ವಿಚಾರಣೆಯನ್ನು ಕೇಂದ್ರ ಉನ್ನತಾಧಿಕಾರ ಸಮಿತಿಗೆ ವಹಿಸಿಕೊಡಿ ಎಂದು ನಾವು ಮಾಡಿದ ಮನವಿಗೆ ಸಿಜೆ ಸ್ಪಂದಿಸಿದರು. ಬಳ್ಳಾರಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸಿಇಸಿಯನ್ನು ರಚಿಸಿ ಸಿಜೆ ಕಪಾಡಿಯಾ ಆದೇಶಿಸಿದರು.


ಸ್ವಯಂ ವಾದ
ನನಗೆ ವಾದ ಮಂಡನೆಗೆ ನೆರವಾಗುತ್ತಿದ್ದವರು ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌. ಒಂದು ಹಂತದಲ್ಲಿ ಅವರು 2ಜಿ ಪ್ರಕರಣದಲ್ಲಿ ಬಿಝಿಯಾಗಿದ್ದರು. ಹಾಗಾಗಿ, ನನಗೆ ವಾದ ಮಂಡಿಸಲು ಉತ್ತೇಜಿಸಿದರು. ಕೆಲವು ಲಾ ಪಾಯಿಂಟ್‌ಗಳನ್ನು ನಾನು ಹೇಳಿಕೊಡುತ್ತೇನೆ. ಉಳಿದಂತೆ ಸತ್ಯವನ್ನೇ ಹೇಳುತ್ತಾ ಬಂದರೆ ಸಾಕು ಎಂದು ನನ್ನನ್ನು ಹುರಿದುಂಬಿಸಿದರು. ಆಗಲೇ ಬೇರೆ ಬೇರೆ ಪ್ರಕರಣಗಳಲ್ಲಿ  4 ಪಿಐಎಲ್‌ ಹಾಕಿದ್ದ ಅನುಭವ ಇದ್ದುದರಿಂದ ವಾದ ಮಂಡಿಸುವುದು ನನಗೆ ಕಷ್ಟ ಎಂದು ಅನ್ನಿಸಲಿಲ್ಲ.
ಸಿಇಸಿ ಮುಂದೆ ನಾನು ವಾದ ಮಂಡಿಸಬೇಕಾಗಿತ್ತು. ಅವರ ಪರವಾಗಿದ್ದ 3-4 ವಕೀಲರು ನನ್ನನ್ನು ಹರಿದು ತಿನ್ನುವ ಹಾಗೆ ನೋಡುತ್ತಿದ್ದರು. ನಾನು ತಣ್ಣಗೆ ವಾದ ಮಂಡಿಸಿದೆ. ಸುಮಾರು 500 ಪುಟಗಳ ಸಮಗ್ರ ದಾಖಲೆಗಳನ್ನು ಸಿಇಸಿ ಮುಂದೆ ಸಲ್ಲಿಸುವ ಮೂಲಕ ರೆಡ್ಡಿ ಒಡೆತನದಲ್ಲಿರುವ ನಾಲ್ಕು ಗಣಿಗಾರಿಕೆ ಲೀಸ್‌ನ್ನು ರದ್ದುಪಡಿಸಬೇಕು ಎಂದು ವಾದಿಸಿದೆ. ಗಣಿಗಾರಿಕೆ ನಿಷೇಧವನ್ನು ಮೊದಲಿಗೆ ಸಿಇಸಿ ನ್ಯಾಯಮೂರ್ತಿಗಳು ಒಪ್ಪಿಕೊಂಡಿರಲಿಲ್ಲ. ನಿಷೇಧಿಸದಿದ್ದರೆ ಸಕ್ರಮದ ಹೆಸರಿನಲ್ಲಿ ಅಕ್ರಮಗಳು ಮುಂದುವರೆಯಬಹುದೆಂಬ ಆತಂಕವನ್ನು ಸಕಾರಣವಾಗಿ ವಿವರಿಸಿದೆ.
ಕಡೆಗೂ 2011ರ ಏಪ್ರಿಲ್‌ 15ರಂದು 2003ರಿಂದ 2009ರವರೆಗೆ ಸುಮಾರು 304.91 ಲಕ್ಷ ಮೆಟ್ರಿಕ್‌ ಟನ್‌ಅದಿರು ಅಕ್ರಮ ಸಾಗಣೆಯಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸಿಇಸಿ ಮಧ್ಯಂತರ ವರದಿಯಲ್ಲಿ ಹೊರಹಾಕಿತು. ಯಡಿಯೂರಪ್ಪ ಮುಖ್ಯಮಂತ್ರಿ ಅವಧಿಯಲ್ಲಿ ಸಕ್ರಮಕ್ಕಿಂತ (61 ಲಕ್ಷ ಟನ್‌) ಅಕ್ರಮ (71 ಲಕ್ಷ ಟನ್‌) ಅದಿರು ರಫ್ತಾಗಿದ್ದು, ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದ ಅವ್ಯವಹಾರವನ್ನು ನೋಡಿಲ್ಲ ಎಂದು ಸ್ವತಃ ನ್ಯಾಯಮೂರ್ತಿಗಳು ಹೇಳಿದರು.
ಸಿಇಸಿ ತನ್ನ ತನಿಖೆ ಆರಂಭಿಸಿತ್ತು. ಈ ನಡುವೆ 2011ರ ಜುಲೈ 27ರಂದು ಲೋಕಾಯುಕ್ತ ಸಂತೋಷ್‌ ಹೆಗಡೆ ತಮ್ಮ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿ ತುಮಕೂರು, ಚಿತ್ರದುರ್ಗದಲ್ಲಿನ ಅಕ್ರಮಗಳ ಬಗ್ಗೆಯೂ ಪ್ರಸ್ತಾಪವಿತ್ತು. ಸಿಇಸಿಯವರಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಡಬೇಕಾಗಿತ್ತು. ಹೀಗಾಗಿ 4-5 ದಿನಗಳಲ್ಲಿ ಲೋಕಾಯುಕ್ತ ವರದಿಯನ್ನು ಕೋರ್ಟಿಗೆ ಸಲ್ಲಿಸಿ, ತನಿಖೆ ವ್ಯಾಪ್ತಿಯನ್ನು ಈ ಜಿಲ್ಲೆಗಳಿಗೂ ವಿಸ್ತರಿಸಬೇಕೆಂದು ಕೋರಿಕೊಂಡೆ.
ಸಾಕಷ್ಟು ದಿನಗಳ ವಾದ-ಪ್ರತಿವಾದಗಳ ನಂತರ, ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಸಿಬಿಐ ತನಿಖೆಯನ್ನು ಕರ್ನಾಟಕಕ್ಕೂ ವಿಸ್ತರಿಸುವಲ್ಲಿ ಸಫಲನಾದೆ. ಇದು ಬೆಣ್ಣೆಯಿಂದ  ಕೂದಲು ತೆಗೆಯುವಂಥ ಸೂಕ್ಷ್ಮತೆಯ ಕೆಲಸ. ನಮ್ಮ ರಾಜ್ಯಕ್ಕೂ ಸಿಬಿಐ ಕಾಲಿಟ್ಟಿತ್ತು. ಅಲ್ಲಿಗೆ ನನ್ನ ಒಂದು ಹಂತದ ಕೆಲಸ ಮುಗಿದಿತ್ತು. ಜನಾರ್ದನ ರೆಡ್ಡಿ ಬಂಧನವೂ ಆಯಿತು. ವಿಚಾರಣೆ ನಡೆಯುತ್ತಿದೆ.
ಆದರೆ, ಮಹಾಭಾರತ ಮುಗಿದಿರಲಿಲ್ಲ. ರೆಡ್ಡಿಯನ್ನು ಸಿಬಿಐ ತೆಕ್ಕೆಗೆ ಎಳೆದುಕೊಳ್ಳುವಾಗ ಅನಾಯಾಸವಾಗಿ ಸಿಕ್ಕಿಬಿದ್ದಿದ್ದು  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಆಗಲೇ ಸಿರಾಜುದ್ದೀನ್‌ ಬಾಷಾ ಅವರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಸಂತೋಷ್‌ ಹೆಗಡೆ ವರದಿಯಲ್ಲೂ ಯಡಿಯೂರಪ್ಪ ಅಕ್ರಮಗಳ ಪ್ರಸ್ತಾಪವಿತ್ತು. ನಾನು ಹೆಚ್ಚೇನೂ ಮಾಡಲಿಲ್ಲ. ಈ ವರದಿಗಳನ್ನು ಸುಪ್ರೀಂಕೋರ್ಟಿನ ಸಿಇಸಿಗೆ ಸಲ್ಲಿಸಿದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಹೆಚ್ಚು ಕಷ್ಟವೇನೂ ಆಗಲಿಲ್ಲ. ನ್ಯಾಯಾಲಯ ನಮ್ಮ ವಾದಕ್ಕೆ ಸಮರ್ಪಕವಾಗಿಯೇ ಸ್ಪಂದಿಸಿತು. ಈವರೆಗೆ ನಡೆದ ಸುಮಾರು 140ಕ್ಕೂ ಹೆಚ್ಚು ಡಿನೋಟಿಫಿಕೇಷನ್‌ ಪ್ರಕರಣ ತನಿಖೆಗೆ ಒಳಪಡುತ್ತದೆ.
ಮಹಾಭಾರತ ಇನ್ನೂ ಮುಗಿದಿಲ್ಲ. ಬೇಲೆಕೇರಿ ಬಂದರು ಹಗರಣವನ್ನೂ ತನಿಖೆಗೆ ಒಳಪಡಿಸುವುದು ಮುಂದಿನ ಗುರಿ. ಈ ಪ್ರಕರಣದ ವಿಚಾರಣೆ ಆಗಸ್ಟ್‌ನಲ್ಲಿ ಬರಲಿದೆ. ಇದರಲ್ಲಿ  ಜನಾರ್ದನ ರೆಡ್ಡಿ ಪತ್ನಿ, ಶ್ರೀರಾಮುಲು ಪತ್ನಿ ಒಡೆತನದ ಕಂಪೆನಿ, ಶಾಸಕ ನಾಗೇಂದ್ರ ಅವರ ಹಗರಣ, ಅದಾನಿ ಎಂಟರ್‌ಪ್ರೈಸಸ್‌, ಮಲ್ಲಿಕಾರ್ಜುನ ಶಿಪ್ಪಿಂಗ್‌ ಮುಂತಾದ 20 ಕಂಪೆನಿಗಳ ಅಕ್ರಮ ವಿಚಾರಣೆಗೆ ಬರುತ್ತದೆ.
ಇಷ್ಟರ ನಡುವೆ, ಕನಕಪುರ- ಚಾಮರಾಜನಗರದಲ್ಲಿನ ಗ್ರಾನೈಟ್‌ ಗಣಿಗಾರಿಕೆ ಕುರಿತು ಕೋರ್ಟ್‌ ಮೆಟ್ಟಿಲೇರಬೇಕೆಂಬ ಒತ್ತಡ ಬರುತ್ತಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಅಕ್ರಮಗಳ ಕುರಿತು ತನಿಖೆಯಾಗಬೇಕೆಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.
ನನಗೆ ಇಲ್ಲಿ ರೆಡ್ಡಿ, ಯಡಿಯೂರಪ್ಪ ಯಾರೂ ಮುಖ್ಯರಲ್ಲ. ಅವರೆಲ್ಲರೂ ನಿಮಿತ್ತ ಮಾತ್ರ. ಮುಖ್ಯ ಗಣಿ ಪ್ರದೇಶದ ಜನರ ಬದುಕು. ಅದಕ್ಕಾಗಿ ಪುನಶ್ಚೇತನ ಕೆಲಸ ಆರಂಭವಾಗುವ ಹಂತದಲ್ಲಿದೆ. ಇನ್ನು ಮುಂದೆ ಯಾರೂ ಸಹ ಇಂಥ ಅಕ್ರಮಗಳಿಗೆ ಕೈ  ಹಾಕಬಾರದು ಎನ್ನುವುದು ನನ್ನ ಉದ್ದೇಶ. ಹಾಗೆ ನೋಡಿದರೆ ನನ್ನದು ದೊಡ್ಡ ಸಾಹಸವೇನಲ್ಲ. ಬೇರೆಯವರು ಸಿದ್ಧಪಡಿಸಿದ ವರದಿ, ಕೊಟ್ಟ ದಾಖಲೆಗಳನ್ನು ಒಂದು ಕಡೆ ಜೋಡಿಸಿ ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸಿದ್ದೇನೆ ಅಷ್ಟೇ. ಇಂಥ ಹೋರಾಟ ನನ್ನಿಂದ ಒಬ್ಬನಿಂದಲೇ ಆಗುವ ಕೆಲಸ ಅಲ್ಲ. ಇಷ್ಟರವರೆಗೆ ನೀವು ನೋಡಿದ್ದು ಮಹಾಭಾರತದ ಒಂದು ಭಾಗ ಮಾತ್ರ. ನೀವೆಲ್ಲರೂ ಕೈ ಜೋಡಿಸಿ ಇದನ್ನು ಪೂರ್ಣಗೊಳಿಸಬೇಕು.


ಬಾಕ್ಸ್‌...

ಹಿರೇಮಠರಿಗೆ ಆದಾಯ ಎಲ್ಲಿಂದ?
ರಾಜ್ಯದ ಅತಿರಥ ಮಹಾರಥ ರಾಜಕಾರಣಿಗಳನ್ನು ಎದುರು ಹಾಕಿಕೊಂಡು ಸುಪ್ರೀಂಕೋರ್ಟ್‌ ತನಕ ಹೋಗಿ ಹೋರಾಡುತ್ತಿರುವ ಎಸ್‌.ಆರ್‌.ಹಿರೇಮಠರಿಗೆ ಆದಾಯ ಎಲ್ಲಿಂದ ಎನ್ನುವ ಪ್ರಶ್ನೆ ನಿಮಗೂ ಉದ್ಭವಿಸಿರಬಹುದು. ಅದಕ್ಕೆ ಅವರು ಕೊಡುತ್ತಿರುವ  ಉತ್ತರ ಇದು:
ನನ್ನ ನ್ಯಾಯಪರ ಹೋರಾಟಕ್ಕೆ ಮೂರು ಬಗೆಯಲ್ಲಿ ಸಂಪನ್ಮೂಲ ಸಂಗ್ರಹಿಸುತ್ತಿದ್ದೇನೆ.
ಹಳ್ಳಿಗರ ಸೇವೆ: ಯಾವುದೇ ಹೋರಾಟಕ್ಕೆ ಆಯಾ ಹಳ್ಳಿ ಜನರ ಸಹಕಾರ ಬೇಕು. ನಮಗೆ ಇರಲು ಶಾಲೆಯೋ, ಗುಡಿಯನ್ನು ಕೊಟ್ಟರೆ ಸಾಕು. ಅಲ್ಲಿಯೇ ಇದ್ದು ಜನಸಂಘಟನೆ ಮಾಡುತ್ತೇವೆ. ಮನೆ ಮನೆಯಿಂದಲೂ ಜನ ರೊಟ್ಟಿ ಕೊಟ್ಟು ಕಳುಹಿಸುತ್ತಾರೆ. ಯುವಕರು, ಯುವತಿಯರು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಮಾಹಿತಿ ಸಂಗ್ರಹ ಮಾಡಿಕೊಡುತ್ತಾರೆ.
ಮಧ್ಯಮ ವರ್ಗ: ಯಾರೋ ಒಬ್ಬ ಶ್ರೀಮಂತನಿಂದ ಹಣ ಸಂಗ್ರಹಿಸಿದರೆ ಅದಕ್ಕೆ ಜನಶಕ್ತಿ ಬರುವುದಿಲ್ಲ. ಹೀಗಾಗಿ ನಾನು ಮಧ್ಯಮವರ್ಗದ ಜನರಿಂದ ಹಣ ಪಡೆದುಕೊಂಡಿದ್ದೇನೆ. ಎಲ್ಲ ಲೆಕ್ಕವೂ ಇದೆ. ಅಕ್ರಮ ಗಣಿ ವಿರುದ್ಧದ ಹೋರಾಟಕ್ಕೆ ಬೆಂಗಳೂರಿನ ಪ್ರೊಫೆಸರ್‌ಡಾ. ವಿಷ್ಣು ಕಾಮತ್‌ನನಗೆ ಸಹಕಾರ ಕೊಟ್ಟಿದ್ದಾರೆ. ವಕೀಲ ಮೋಹನ್‌ಕಾತರಕಿ ಅವರು ಈ ವರ್ಷ 20,000 ರೂ ಕೊಟ್ಟಿದ್ದಾರೆ. ಖರ್ಚು ವೆಚ್ಚವನ್ನು ಲೆಕ್ಕಾಚಾರದಿಂದಲೇ ಮಾಡುತ್ತೇನೆ. ಸಾಧಾರಣವಾಗಿ ದೆಹಲಿಗೆ ಹೋಗುವುದು ರೈಲಿನಲ್ಲೇ. ಅಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ದಿನಕ್ಕೆ 175 ರೂ ಕೊಟ್ಟು ಉಳಿದುಕೊಳ್ಳುತ್ತೇನೆ. ಗಣಿ ವಿರುದ್ಧದ ಹೋರಾಟದಲ್ಲಿ ವಕೀಲ ಶಾಂತಿಭೂಷಣ್‌ಉಚಿತ ವಕಾಲತು ಮಾಡಿದ್ದಾರೆ. ಪಿಐಎಲ್‌ಸಲ್ಲಿಸಲು ಜಸ್ಟೀಸ್‌ಪಿ.ಎನ್‌.ಭಗವತಿ ಪ್ರತಿಷ್ಠಾನ ಹಣ ಕೊಟ್ಟಿದೆ.
ನಾನು ಹನ್ನೊಂದು ವರ್ಷ ಅಮೆರಿಕದಲ್ಲಿದ್ದೆ. ಅಲ್ಲಿನ ಭಾರತೀಯರು ಇಂಥ ಕೆಲಸಕ್ಕೆ ಹಣ ಕೊಡುತ್ತಾರೆ. 1979ರಿಂದಲೇ ನಮ್ಮ ಸಂಸ್ಥೆಗೆ ವಿದೇಶಿ ಭಾರತೀಯರು ದೇಣಿಗೆ ಕೊಟ್ಟಿದ್ದಾರೆ. ಹೀಗೆ ಈ ತ್ರಿವೇಣಿ ಸಂಗಮದ ದೇಣಿಗೆಯಿಂದಲೇ ಹೋರಾಡುತ್ತಿದ್ದೇನೆ.


Friday, October 21, 2011

ಸ್ಪೀಡ್‌ ಜಮಾನ!
ಸೂರ್ಯನಿಂದ ಭೂಮಿ 14,95,97,890 ಕಿಮೀ ದೂರವಿದೆ ಎಂದು ಮಿಡ್‌ಟರ್ಮ್‌ ಎಕ್ಸಾಮ್‌ಗೆ ಹುಡುಗರು ಉರು ಹೊಡೆಯುತ್ತಿರುವಾಗಲೇ ಜಿನೀವಾದಿಂದ ಸುದ್ದಿಯೊಂದು ಬೆಳಕಿನಷ್ಟೇ ವೇಗವಾಗಿ ಬಂದು ಅಪ್ಪಳಿಸಿದೆ. ಅದೇನಾದರೂ ನಿಜವಾಗಿಬಿಟ್ಟರೆ ನಾವು ಈವರೆಗೆ ಓದಿದ ಭೌತ ವಿಜ್ಞಾನವನ್ನೆಲ್ಲ ಮರೆಯಬೇಕಾಗುತ್ತದೆ.
ಭೌತವಿಜ್ಞಾನದ  ಜಗತ್ತಿನ ಅತಿ ದೊಡ್ಡ  ಪ್ರಯೋಗಾಲಯ ಯುರೋಪಿಯನ್‌ ಅರ್ಗನೈಸೇಷನ್‌ ಫಾರ್‌ ನ್ಯೂಕ್ಲಿಯರ್‌ ರೀಸರ್ಚ್‌ (ಸಿಇಆರ್‌ಎನ್‌)ನಿಂದ ಕಳೆದ ವಾರ ಬಂದ ಸುದ್ದಿ ಇದಾಗಿತ್ತು. ನಾವು ಈವರೆಗೆ ಜಗತ್ತಿನಲ್ಲಿ ಅತಿ ವೇಗದಲ್ಲಿ ಚಲಿಸುವ ವಸ್ತು ಬೆಳಕು  ಎನ್ನುವುದನ್ನು ನಂಬಿಕೊಂಡಿದ್ದೆವು. ಆದರೆ ಈ ಹೊಸ ಸುದ್ದಿ ಪ್ರಕಾರ, ಬೆಳಕಿಗಿಂತ ವೇಗವಾಗಿ ನ್ಯೂಟ್ರಿನೋ ಎಂಬ ಕಣ ಚಲಿಸುತ್ತದೆ.
ಅಂದರೆ, 1905ರಲ್ಲಿ ಆಲ್ಬರ್ಟ್‌ ಐನ್‌ಸ್ಟೀನ್‌ ಮಂಡಿಸಿದ್ದ ವಿಶೇಷ ಸಾಪೇಕ್ಷ ಸಿದ್ಧಾಂತವನ್ನೇ ಸಿಇಆರ್‌ಎನ್‌ ವಿಜ್ಞಾನಿಗಳು ಪ್ರಶ್ನಿಸಿದಂತಾಗಿದೆ. ಬೆಳಕು ಪ್ರತಿ ಸೆಕೆಂಡ್‌ಗೆ ಮೂರು ಲಕ್ಷ ಕಿಮೀ ವೇಗವಾಗಿ ಚಲಿಸುತ್ತದೆ ಎಂದು ಐನ್‌ಸ್ಟೀನ್‌ ಹೇಳಿದ್ದ.  ಆದರೆ, ಈ ಪ್ರಯೋಗದಲ್ಲಿ ನ್ಯೂಟ್ರಿನೋ ಎಂಬ ಪುಟ್ಟ ಕಣ ಬೆಳಕಿಗಿಂತ 60 ನ್ಯಾನೊ ಸೆಕೆಂಡ್‌ಗಳಷ್ಟು ಬೇಗ ಚಲಿಸುತ್ತದೆ ಎಂಬುದು ಶ್ರುತಪಡಿಟ್ಟಿದೆ.

ಹಾಗೆಂದು ಇದು ರಾತ್ರೋರಾತ್ರಿ `ಬೆಳಕಿಗೆ' ಬಂದ ವಿಚಾರವಲ್ಲ. ಕಳೆದ ಮೂರು ವರ್ಷಗಳಿಂದ ನಡೆಸಲಾದ ಪ್ರಯೋಗದ ಫಲ. ಇಟಲಿ ಮತ್ತು ಫ್ರಾನ್ಸ್‌ ಸರ್ಕಾರದ ನೆರವಿನಲ್ಲಿ ನಡೆದ ಈ ಪ್ರಯೋಗದಲ್ಲಿ 11 ದೇಶಗಳ 160 ವಿಜ್ಞಾನಿಗಳು ಭಾಗವಹಿಸಿದ್ದರು.
ಜಿನೆವಾದ ಸಿಇಆರ್‌ಎನ್‌ನಿಂದ ಇಟಲಿಯ ಗ್ರಾನ್‌ಸ್ಯಾಸೊ ಎಂಬಲ್ಲಿಗೆ 730 ಕಿಮೀ ದೂರದ ನಿರ್ವಾತ ಪ್ರದೇಶದಲ್ಲಿ ಈ ಪರೀಕ್ಷೆ ನಡೆದಿದೆ. ಸಿಇಆರ್‌ಎನ್‌ನಲ್ಲಿ ಸಿದ್ಧಪಡಿಸಲಾದ ನ್ಯೂಟ್ರಿನೋ ಕಣಗಳನ್ನು ಆಕ್ಸಿಲೇಟರ್‌ ಉಪಕರಣದ ಮೂಲಕ ಬಲವಾಗಿ ದೂಡಲಾಯಿತು.  ಅತ್ತ ಕಡೆ ಗ್ರಾನ್‌ಸ್ಯಾಸೊನಲ್ಲಿ ಇದನ್ನು ಪತ್ತೆ ಹಚ್ಚಲು ಆಸಿಲೇಷನ್‌ ಪ್ರೊಜೆಕ್ಟರ್‌  ವಿತ್‌ ಎಮಲ್ಷನ್‌ ಟ್ರಾಕಿಂಗ್‌ ಆಪರೇಟಸ್‌ (ಅಪೇರಾ) ಎಂಬ ವಿಶೇಷ ಡಿಟೆಕ್ಟರ್‌ನ್ನು ಭೂಮಿಯಡಿ ಹುದುಗಿಸಿಡಲಾಗಿತ್ತು. ಈ ಕಣಗಳು ಎಷ್ಟು ಸೆಕೆಂಡ್‌ನಲ್ಲಿ ಗ್ರಾನ್‌ಸ್ಯಾಸೊ ತಲುಪಿದವು ಎಂದು ಲೆಕ್ಕ ಹಾಕಲಾಯಿತು. ಇಂಥ ಪ್ರಯೋಗ ಮಾಡಿದ್ದು ಒಂದೆರಡು ಸಲ ಅಲ್ಲ. ಸಾವಿರಾರು ಸಲ. ಕೊನೆಗೂ ನ್ಯೂಟ್ರಿನೋ ಕಣ ಬೆಳಕಿಗಿಂತ ಶೇ 0.0025ರಷ್ಟು ಬೇಗ ಚಲಿಸುತ್ತದೆ ಎನ್ನುವ ವಿಚಾರ ಸ್ಪಷ್ಟವಾಯಿತು.
ಬರುವ ಪ್ರತಿಯೊಂದು ಫಲಿತಾಂಶಗಳು ನಿರೀಕ್ಷೆಯಂತೆಯೇ ಇವೆ ಎನ್ನುವುದು ವಿಜ್ಞಾನಿಗಳಿಗೆ ಗೊತ್ತಾಗಿಬಿಟ್ಟಿತು. ಹಾಗೆಂದು ಅವರು ಅದನ್ನು ತರಾತುರಿಯಲ್ಲಿ ಪ್ರಕಟಿಸುವ ಧೈರ್ಯವನ್ನೂ ಮಾಡಲಿಲ್ಲ. ಏಕೆಂದರೆ, ಈ ಫಲಿತಾಂಶ ಭೌತವಿಜ್ಞಾನದ ಬುಡವನ್ನೇ ಅಲ್ಲಾಡಿಸಿಬಿಡುತ್ತದೆ; ಟೀಕೆಗಳ ಮಹಾಪೂರ ಹರಿದುಬರುತ್ತದೆ ಎಂದು ಅರಿವೂ ಅವರಿಗೆ ಇತ್ತು. ಆ ಕಾರಣಕ್ಕಾಗಿಯೇ ಪ್ರಯೋಗದ ನೇತೃತ್ವ ವಹಿಸಿದ್ದ ಡೇರಿಯೋ ಅಟೆರಿಯೊ, `ಈ ಬಗ್ಗೆ ಇನ್ನಷ್ಟು ಪರೀಕ್ಷೆ ನಡೆಯಬೇಕು' ಎಂದು ಹೇಳಿ ನಿರೀಕ್ಷಣಾ ಜಾಮೀನು ಪಡೆದುಕೊಂಡುಬಿಟ್ಟರು.
2007ರಲ್ಲಿ ಚಿಕಾಗೋದ ಫರ್ಮಿಲ್ಯಾಬ್‌ನಲ್ಲೂ ಇಂಥದ್ದೊಂದು ಪ್ರಯೋಗ ನಡೆದಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಆದರ ಜಿನೆವಾದ ಸುದ್ದಿ ಕೇಳಿ ಫರ್ಮಿಲ್ಯಾಬ್‌ನವರೂ ಗರಿಗೆದರಿದ್ದಾರಂತೆ. ದೂಳು ತುಂಬಿದ್ದ  ಯಂತ್ರೋಪಕರಣಗಳನ್ನು ಮತ್ತೆ ಅಣಿಗೊಳಿಸಲು ಹೊರಟಿದ್ದಾರೆ.
ಕಂಪನ
ಅಟೆರಿಯೋ ಪ್ರಯೋಗದ ಫಲಶ್ರುತಿಯನ್ನು ಪ್ರಕಟಿಸುತ್ತಿರುವಂತೆಯೇ ವಿಜ್ಞಾನ ಲೋಕದಲ್ಲಿ ಕಂಪನ ಶುರುವಾಗಿಬಿಟ್ಟಿದೆ. ಇದೇನು ಮಕ್ಕಳಾಟ ಎಂದು ಹಲವರು ಪ್ರಶ್ನಿಸಿದರೆ, ಇದು ಹಾರುವ ಚಾಪೆ ಇದ್ದ ಹಾಗೆ ಗೇಲಿ ಮಾಡಿದವರು ಇದ್ದಾರೆ. ನಿಜ, ಹಾಗೊಂದು ವೇಳೆ ಇದನ್ನು ವೈಜ್ಞಾನಿಕ ಲೋಕ ಒಪ್ಪಿಕೊಂಡುಬಿಟ್ಟರೆ ಫಿಜಿಕ್ಸ್‌ನ ಮೂಲತಳಹದಿಯೇ ಅಲುಗಾಡಿಬಿಡುತ್ತದೆ. ವಿಶ್ವದ ಉಗಮ, ವಿಕಾಸದಿಂದ ಹಿಡಿದು ಕಾಲದ ಗಣನೆಯವರೆಗೂ ಎಲ್ಲವನ್ನೂ ಮಾಡಿದ್ದು ಐನ್‌ಸ್ಟೀನ್‌ ಸಾಪೇಕ್ಷ ಸಿದ್ಧಾಂತವನ್ನು (ಥಿಯರಿ ಆಫ್‌ ರಿಲೇಟಿವಿಟಿ) ಆಧರಿಸಿಯೇ. 
ನಕ್ಷತ್ರ, ಗ್ಯಾಲಕ್ಸಿಗಳ ದೂರ ಅಳೆಯುತ್ತಿದ್ದುದು ಐನ್‌ಸ್ಟೀನ್‌ನ ಇದೇ ಪರಿಕಲ್ಪನೆ ಮೂಲಕ. ನಾವು ಪ್ರಸಕ್ತ ನೋಡುತ್ತಿರುವ ನಕ್ಷತ್ರ ಎಷ್ಟೋ ಸಾವಿರ ವರ್ಷಗಳ ಹಿಂದೆ ಚೆಲ್ಲಿದ ಬೆಳಕು. ಬಹುಶಃ ಈಗ ಆ ನಕ್ಷತ್ರ ಸತ್ತೇ ಹೋಗಿದ್ದಿರಬಹುದು ಎಂಬ ನಮ್ಮ ವಿಜ್ಞಾನಿಗಳ ವಾದವನ್ನೆಲ್ಲ ಮರುಪರಿಶೀಲಿಸಬೇಕಾಗಬಹುದು. ಫಿಜಿಕ್ಸ್‌ ಪಠ್ಯಪುಸ್ತಕವೇ ಬದಲಾಗಿಬಿಡುತ್ತದೆ.
ಇದಕ್ಕೂ ಮಿಗಿಲಾಗಿ, ಕಾಲದ ಪರಿಕಲ್ಪನೆ  ಬಗ್ಗೆ ಆಲೋಚಿಸೋಣ. ಕಾಲದ ಮೇಲಿನ ಸವಾರಿ ಬಗ್ಗೆ ಸಾಕಷ್ಟು ಸಿನೆಮಾ, ಧಾರಾವಾಹಿಗಳು ಬಂದಿವೆ. ಖ್ಯಾತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಟೈಮ್‌ ಮತ್ತು ಸ್ಪೇಸ್‌ ಪರಿಕಲ್ಪನೆ ಕುರಿತು ಮನೋಜ್ಞವಾಗಿ ಬರೆದಿದ್ದಾರೆ. ಲಾಸ್ಟ್‌ ಎಂಬ ಟಿವಿ ಧಾರಾವಾಹಿಯಲ್ಲಿ  ಗೆಳೆಯರ ತಂಡವೊಂದು ಬೆಳಕಿಗಿಂತ ವೇಗವಾಗಿ ಚಲಿಸಿ ದಶಕಗಳ ಹಿಂದೆ ಹೋಗಿ ನಿಂತುಕೊಂಡ ಸ್ವಾರಸ್ಯಕರ ಕಥೆ ಇತ್ತು. ಬಹುಶಃ ಅದೇ ನಿಜವಾಗಿಬಿಟ್ಟರೆ..?
ನ್ಯೂಟ್ರಿನೋ ಕಣದ ಮೂಲಕ ನಾವು ಮುಂದಿನ ದಿನಗಳಲ್ಲಿ ಇ ಮೇಲ್‌ನಂತೆ ಯಾವುದಾದರೂ ಸಂದೇಶ ಕಳುಹಿಸಲು ಸಾಧ್ಯವಾಯಿತು ಎಂದಿಟ್ಟುಕೊಳ್ಳಿ. ಅಂಥ ಸಂದರ್ಭದಲ್ಲಿ ನಮ್ಮ ಸಂದೇಶ  ಭೂತ ಕಾಲಕ್ಕೆ ಹೋಗಿನಿಂತುಕೊಂಡು ಬಿಡುತ್ತದೆ. ಅಂದರೆ, ಬೆಳಕಿಗಿಂತ ವೇಗವಾಗಿ ಈ ಕಣಗಳು ಸಂದೇಶವನ್ನು  ಹೊತ್ತೊಯ್ದಿರುತ್ತವೆ!
ಐನ್‌ಸ್ಟೀನ್‌ ಹೇಳಿದ, ವಿಶ್ವ ಒಪ್ಪಿಕೊಂಡ ಇ=ಎಂಸಿ2 (ಇಲ್ಲಿ ಇ ಎಂದರೆ ಶಕ್ತಿ, ಎಂ ಎಂದರೆ ದ್ರವ್ಯರಾಶಿ ಹಾಗೂ ಸಿ ಎನ್ನುವುದು ಬೆಳಕಿನ ವೇಗದ ಸ್ಥಿರಾಂಕ) ಇಲ್ಲಿ ಅರ್ಥ ಕಳೆದುಕೊಳ್ಳಬಹುದು. ಈ ನಿಯಮದ ಪ್ರಕಾರ ಬೆಳಕಿಗಿಂತ ವೇಗವಾಗಿ ಚಲಿಸುವ ಯಾವುದಾದರೂ ವಸ್ತುಗಳಿದ್ದರೆ ಅವುಗಳ ದ್ರವ್ಯರಾಶಿ(ಮಾಸ್‌) ಅನಂತವಾಗಿರಬೇಕು. ಸಾಧಾರಣ ದ್ರವ್ಯರಾಶಿ ಇರುವ ಯಾವುದೇ ವಸ್ತು ಬೆಳಕಿಗಿಂತ ಬೇಗ ಚಲಿಸಲಾರವು. ಇಲ್ಲಿ ಬೆಳಕಿನ ಕಣಕ್ಕೆ  (ಫೋಟಾನ್‌) ದ್ರವ್ಯರಾಶಿ ಇಲ್ಲ. ಹೀಗಾಗಿ ಐನ್‌ಸ್ಟೀನ್‌ ಆಲೋಚನೆ ಕತೆ ಏನು? ಯಾವುದು ನಿಜ? ಎಷ್ಟು ನಿಜ?
ಆ್ಯಂಟಿ ರಿಲೇಟಿವಿಸಂ
ಐನ್‌ಸ್ಟೀನ್‌ ಸಿದ್ಧಾಂತವನ್ನು ಒಪ್ಪದವರು, ತಿರಸ್ಕರಿಸಿದವರು ಒಬ್ಬಿಬ್ಬರಲ್ಲ. ಅವರು ಥಿಯರಿ ಮಂಡಿಸುತ್ತಿರುವಾಗಲೇ ವಿರೋಧ ಸಾಕಷ್ಟು ವ್ಯಕ್ತವಾಗಿದ್ದವು.  ಗ್ರಹಣದ ವೇಳೆ, ಬಾಹ್ಯಾಕಾಶ ನೌಕೆಯಲ್ಲಿ  ಹೀಗೆ ಬೇರೆ ಬೇರೆ ಸನ್ನಿವೇಶದಲ್ಲಿ ಐನ್‌ಸ್ಟೀನ್‌ನ ನಿಲುವನ್ನು ಪರೀಕ್ಷಿಸಲಾಗಿದೆ. ಮ್ಯಾಕ್ಸ್‌ವೆಲ್‌ನ ಎಲೆಕ್ಟ್ರೋಮ್ಯಾಗ್ನೆಟಿಸಂ ನಿಯಮ ಹಾಗೂ ಮೈಕೆಲ್ಸನ್‌ ಮೋರೆ ಪ್ರಯೋಗಗಳು ಐನ್‌ಸ್ಟೀನ್‌ ನಿಲುವಿಗೆ ಸವಾಲು ಒಡ್ಡಿದ್ದವು. ಲಾರೆಂಟ್ಜ್‌ ಎಂಬಾತ ಸಾಪೇಕ್ಷ  ಥಿಯರಿಯನ್ನು ಪ್ರಶ್ನಿಸಲು ಪ್ರಯತ್ನಿಸಿ ಸೋತಿದ್ದ.
ಐನ್‌ಸ್ಟೀನ್‌ ಇದ್ದಾಗಲೇ ಆತನ ಸಿದ್ಧಾಂತವನ್ನು ಮುರಿಯುವ ಪ್ರಯತ್ನ ನಡೆಯುತ್ತಲೇ ಇತ್ತು. ಅಂಥ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಬರೆದ ಪ್ರಬಂಧವನ್ನು ಕ್ರೋಡೀಕರಿಸಿ `100 ಆಥರ್ಸ್‌ ಎಗೆನೆಸ್ಟ್‌ ಐನ್‌ಸ್ಟೀನ್‌' ಎಂಬ ಪುಸ್ತಕವೇ ಬಂದಿತ್ತು. ಇದನ್ನು ಓದಿ ಐನ್‌ಸ್ಟೀನ್‌ ಏನು ಹೇಳಿದ್ದ ಗೊತ್ತೇ? `ಸುಳ್ಳಿದ್ದರೆ ಸುಳ್ಳೆಂದು ಹೇಳಲು ನೂರು ಜನ ಏಕೆ? ಒಬ್ಬ ಸಾಕಲ್ಲವೇ?' ಎಂದು.
ಈಗಲೂ ಐನ್‌ಸ್ಟೀನ್‌ ನಿಲುವನ್ನು ಪ್ರಶ್ನಿಸುತ್ತಲೇ ಇರುವ ವರ್ಗ ಒಂದಿದೆ. ಅವರನ್ನು ಆ್ಯಂಟಿ ರಿಲೇಟಿವಿಸ್ಟ್‌ ಎಂದು ಕರೆಯಲಾಗುತ್ತದೆ.  ಈ ವಿಜ್ಞಾನಿಗಳ ಗುಂಪು ಒಂದಲ್ಲ ಒಂದು ರೀತಿಯಲ್ಲಿ ಒಗ್ಗೂಡಿ, ಪ್ರಯೋಗ ನಡೆಸಿ ಐನ್‌ಸ್ಟೀನ್‌ ಪಾರಮ್ಯವನ್ನು ಮುರಿಯಲು ಪ್ರಯತ್ನಿಸುತ್ತಲೇ ಇದೆ.

ನ್ಯೂಟ್ರಿನೋ ಎಂದರೇನು?
ಸಬ್‌ ಅಟಾಮಿಕ್‌ ಕಣವಾಗಿರುವ ಇದು ಕೊಂಚ ಎಲೆಕ್ಟ್ರಾನ್‌ ಥರದ ಗುಣಲಕ್ಷಣಹೊಂದಿದೆ. ಆದರೆ, ಇದಕ್ಕೆ ಎಲೆಕ್ಟ್ರಾನ್‌ನಂತೆ ಯಾವುದೇ ವಿದ್ಯುತ್‌ ಚಾರ್ಜ್‌ ಹೊಂದಿರುವುದಿಲ್ಲ. ಇದರಿಂದ ಯಾವುದೇ ವಿದ್ಯುತ್‌ಕಾಂತೀಯ ಬಲ ಇದರ ಮೇಲೆ ಪರಿಣಾಮ ಬೀರುವುದಿಲ್ಲ.  ಹಾಗಾಗಿ ಯಾರ ಅಡ್ಡಿ ಇಲ್ಲದೆಯೂ ಬಲುದೂರವನ್ನು ಕ್ರಮಿಸಿಬಿಡುತ್ತದೆ. ಟ್ರಾಫಿಕ್‌ ಸಿಗ್ನಲ್‌ ಇದ್ದರೂ ಸೈಕಲ್‌ ಸವಾರ ಹೋಗುತ್ತಾನಲ್ಲ ಹಾಗೆ. ಕೆಲವು ಸಲ ಘನವಸ್ತುಗಳ ಒಳಗೂ ಇದು ಹೊಕ್ಕುಬಿಡುತ್ತದೆ. ಗೋಡೆಗಳನ್ನೂ ಕ್ರಮಿಸಿ ಮುಂದೆ ಹೋಗುವ ಛಾತಿ ಇದಕ್ಕಿದೆಯಂತೆ.
1931ರಲ್ಲಿ ಇಂಥದ್ದೊಂದು ಕಣದ ಅಸ್ತಿತ್ವದ ಬಗ್ಗೆ ತಿಳಿದುಬಂತು. 1968ರಲ್ಲಿ ಸೂರ್ಯನ ಕಿರಣಗಳಿಂದ ಹೊರಹೊಮ್ಮಿದ ಎಲೆಕ್ಟ್ರಾನ್‌ನ ಜತೆಗೆ ಈ ನ್ಯೂಟ್ರಿನೋ ಇರುವುದು ಗೊತ್ತಾಯಿತು. 1987ರಲ್ಲಿ  ಸೂಪರ್‌ನೋವಾದಿಂದ ಹೊರಬಂದ ನ್ಯೂಟ್ರಿನೋ ವೇಗವನ್ನು ನೋಡಿ ವಿಜ್ಞಾನಿಗಳಿಗೆ ಅಚ್ಚರಿಯಾಯಿತಂತೆ.
ಇದರ ದ್ರವ್ಯರಾಶಿ ಭಾರಿ ಕಡಿಮೆ. ಇವು ಕ್ರಮಿಸುತ್ತಿರುವಾಗಲೇ ವೇಷ ಬದಲಾಯಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆಯಂತೆ.  ಇವುಗಳಿಗೆ ಒಂದು ಬಗೆಯ ವಾಸನೆಯೂ ಇದೆ. ವಾಸನೆಯನ್ನೂ ಬದಲಾಯಿಸಿಕೊಳ್ಳುತ್ತಾ ಇರುತ್ತವೆ. ಎಲೆಕ್ಟ್ರಾನ್‌, ಮ್ಯೂವಾನ್‌ ಅಥವಾ ಟಾವೊ ಜತೆಗೆ ನ್ಯೂಟ್ರಿನೋ ಲಿವ್‌ ಇನ್‌ ರಿಲೇಷನ್‌ಶಿಪ್‌ ನಡೆಸುವುದೇ ಹೆಚ್ಚು.

Wednesday, September 7, 2011

ಮೈ ಎಕ್ಸ್‌ಪೆರಿಮೆಂಟ್‌ ವಿತ್‌ ಮೈನಿಂಗ್‌ 
(ವೆರಿ ವೆರಿ ಸ್ಸಾರಿ... ಇನ್ನೊಬ್ಬರ ಖಾಸಗಿ ವಿಷಯಕ್ಕೆ ತಲೆಹಾಕುವುದು ನಮ್ಮ ಉದ್ದೇಶ ಅಲ್ಲ. ಆದ್ರೂನೂ... ನಮ್ಮ ಮಾಜಿಗಳಿಬ್ಬರ ಪರ್ಸನಲ್‌ ಡೈರಿಯ ಒಂದೆರಡು ಹಾಳೆಗಳು ನಮಗೆ ಸಿಕ್ಕಿಬಿಟ್ಟಿವೆ. ಸಿಕ್ಕಮೇಲೆ ಓದದೆ ಇರೋದು ಹೆಂಗೆ ಅಂತ ಕದ್ದುಮುಚ್ಚಿ ಓದಿಬಿಟ್ಟಿದ್ದೀವಿ. ನಿಮ್ಮ ಮುಂದೆನೂ ಹಂಗೆನೇ ಇಡ್ತಿದ್ದೀವಿ. ಬೇರೊಬ್ಬರ ಪರ್ಸನಲ್‌ ವಿಷ್ಯ ಬೇಡ ಅಂತಿದ್ದರೆ ಸುಮ್ನಿದ್ದುಬಿಡಿ. ಓದಿದ್ರೂನೂ ಯಾರಿಗೂ ಹೇಳ್ಬೇಡಿ!)
ಇದಿಷ್ಟು  ನಮ್ಮ ಮಾಜಿ ಮುಖ್ಯಮಂತ್ರಿಗಳ ಹಾಗೆ ನಾವು ತೆಗೆದುಕೊಳ್ಳುತ್ತಿರುವ ನಿರೀಕ್ಷಣಾ ಜಾಮೀನು.

1. ರೆಡ್ಡೀರಪ್ಪ ಪುಟಗಳಿಂದ..

ಮೊದಲೆಲ್ಲ ಡೈರಿ ಬರೆಯುವ ಅಭ್ಯಾಸ ನನಗಿರಲಿಲ್ಲ. ಪ್ರಾಮಾಣಿಕವಾಗಿ ಹೇಳ್ತೀನಿ- ಡೈರಿ ಅಂದ್ರೆ ನಂಗೆ ಗೊತ್ತಿದ್ದದ್ದು ಕೆಎಂಎಫ್‌ ಮಾತ್ರ. ಆದ್ರೆ ಮೊನ್ನೆ ಅಧಿಕಾರ ಕಳಕೊಂಡ ಮೇಲೆ ಟೈಮ್‌ ಪಾಸ್‌ ಆಗ್ತಾನೇ ಇಲ್ಲ. ಕಣ್ಣು ಮುಚ್ಚಿದರೆ ಕರಿಕೋಟ್‌, ಅಗ್ರಹಾರ.. ಹೀಗೆ ಏನೇನೋ ಕನಸು ಬೀಳುತ್ತಿದೆ. ಅದ್ಕೆ ಇರಲಿ ಅಂತ ಡೈರಿ ಬರೆಯೋಕೆ ಶುರು ಮಾಡಿದ್ದೇನೆ. ಮೊನ್ನೆ ಝಿಂದಗಿ ನ ಮಿಲೇಗಿ ದುಬಾರಾ ಎಂಬ ಸಿನಿಮಾ ನೋಡೋಕೆ ಹೋಗಿದ್ದೆ. ಯಾಕೋ ಕಿರಿಕಿರಿಯಾಗಿ ಅರ್ಧದಲ್ಲೇ ಎದ್ದು ಬಂದೆ. ಅಲ್ಲಿ  ಹೃತಿಕ್‌ ರೋಷನ್‌ ಹೇಗಾದರೂ ಮಾಡಿ ಹಣ ಮಾಡಬೇಕೆಂದು ಹೊರಡುತ್ತಾನೆ. ಜನ ಅವನನ್ನು ಹೀರೋ ಅಂತಾರೆ, ವಿಷಲ್‌ ಹಾಕ್ತಾರೆ. ಅಷ್ಟಕ್ಕೂ ಇಲ್ಲಿ  ನಾನು ಮಾಡಿದ್ದೇನು? ಆದರೆ ನಂಗೆ ವಿಲನ್‌ ಪಟ್ಟ! ಜನ ರಿಯಲ್‌ ಸ್ಟೋರಿ ಇಷ್ಟಪಡಲ್ಲ. ಇರಲಿ ಬಿಡಿ, ಇದೆಲ್ಲ ಆ ಅಪ್ಪ ಮಕ್ಕಳ ಕುತಂತ್ರ ಅನ್ನೋದು ನಂಗೆ ಗೊತ್ತು. ಇಷ್ಟಕ್ಕೂ ಯಾರು ಮಾಡಬಾರದ ಅಪರಾಧ ನಾನೇನು ಮಾಡಲಿಲ್ಲವಲ್ಲ. ಅದಾವುದೋ ಮೈನಿಂಗ್‌ ಕಂಪೆನಿಯಿಂದ ನಮ್‌ ಕಾಲೇಜಿಗೆ ಡೊನೇಷನ್‌ ಪಡಕೊಂಡೆ ಅನ್ನುವುದೇ ಕ್ರೈಮ್ಮಾ? ಈ ನೇಷನ್‌ ನಡೀತಾ ಇರೋದೇ ಡೊನೇಷನ್‌ನಿಂದ ಅನ್ನೋದು ಯಾರಿಗೆ ಗೊತ್ತಿಲ್ಲ ಹೇಳಿ? ಮೊನ್ನೆ ಕೋರ್ಟಿಗೆ ಹೋಗಿ ಮುಕ್ಕಾಲು ಗಂಟೆ ನಿಂತ್ಕೊಂಡೆನಲ್ಲ. ಆಗ ಹೇಗನ್ನಿಸಿತು ಗೊತ್ತಾ? ಕಾಲು ಸುಸ್ತಾಯಿತು. ನಮ್ಮ ರಾಜ್ಯದಲ್ಲಿ ಎಷ್ಟೋ ಮಂದಿ ಕಾರ್ಮಿಕರು ಶ್ರಮದಿಂದ ಕೆಲಸ ಮಾಡುತ್ತಾರಲ್ಲ. ಅವರೆಲ್ಲರ ನೆನಪಾಯಿತು. ನನಗೆ ಇನ್ನೂ ಕೊಂಚ ಕಾಲ ಅವಕಾಶ ಸಿಕ್ಕಿದ್ದರೆ ಈ ಶ್ರಮಿಕ ವರ್ಗಕ್ಕೆ ಅನುಕೂಲ ಮಾಡಿಕೊಡುತ್ತಿದ್ದೆ. ಇರಲಿ, ಇನ್ನೂ ಕಾಲ ಮಿಂಚಿಲ್ಲ. ಆರು ತಿಂಗಳು ಬಿಟ್ಟು ನೋಡ್ತೀನಿ. 


2. ಸುಮಾರಣ್ಣ  ಪುಟಗಳಿಂದ.. 

ಯಾವುದೋ ಮೈನಿಂಗ್‌ ಕಂಪೆನಿಗೆ ಸಹಾಯ ಮಾಡಿದ್ದೀನಿ ಅಂತ ಹೇಳಿ ಸಂತೋಷ ಹೆಗಡೆಯವರು ನನಗೆ ಕಪ್ಪು ಚುಕ್ಕೆ ಹಾಕಿದ್ದಾರೆ. ಅಷ್ಟಕ್ಕೆ ನಿಲ್ಸಿದ್ರೆ ಪರವಾಗಿರಲಿಲ್ಲ. ಅವರು ನನ್ನ ಎರಡನೇ ಮನೆ ಬಗ್ಗೆ ಮಾತಾಡಿದ್ದಾರೆ. ನನ್ನ ಮೊದಲನೇ ಮನೆ ಬಗ್ಗೆ  ಮಾತಾಡಿದ್ರೆ ನಂಗೆ ಇಷ್ಟೊಂದು ಸಿಟ್ಟು ಬರುತ್ತಿರಲಿಲ್ಲ. ಅವರು ಮಾತಾಡಿದ್ದು 2ನೇ ಮನೆ ಬಗ್ಗೆ! ಅದೇಕೋ ಏನೋ ನಂಗೆ ಮನೆ, ಮನಿ, ಮೈನಿಂಗು.. ಎಲ್ಲ ಒಂದೇ ಥರ ಕೇಳಿಸುತ್ತೆ ಈಚೆಗೆ. ರಾಜಕಾರಣಿಗಳಿಗೆ ಮನೆ ಮತ್ತು ಮನಿ ಎರಡೂ ಹೆಚ್ಚಿದಷ್ಟೂ ಅನುಕೂಲ. ಮನಿ ಕಡಿಮೆ ಇದ್ದರೆ ಗೆಲ್ಲೋದೆಂಗೆ? ಮನೆ ಒಂದೇ ಇದ್ರೆ ಪ್ರೈಮ್‌ ಮಿನಿಷ್ಟ್ರುಆಗೋದೆಂಗೇ? ಅದೆಲ್ಲ ಎಲ್ಲಿ ಇವರಿಗೆ ಗೊತ್ತಾಗುತ್ತೆ ಬಿಡಿ. ಎಲ್ಲದ್ದಕ್ಕೂ ಕಾಲ ಉತ್ತರ ಹೇಳುತ್ತೆ. ನಾನು ಬೆಳೆಸಿದವರೇ ನನಗೆ ದ್ರೋಹ ಮಾಡ್ತಿದ್ದಾರೆ. ಯಡಿಯೂರಪ್ಪ ಅವರನ್ನ  ಡೆಪ್ಯುಟಿ ಸಿಎಂ, ಸಿಎಂ ಮಾಡಿದ್ದಾರು? ಹೋಗಲಿ, ಹೆಗಡೆಯವರನ್ನು ಲೋಕಾಯುಕ್ತ ಮಾಡಿದ್ದು ಯಾರು? ಇವರೇ ಈಗ ನನ್ನ ವಿರುದ್ಧ ನಿಂತಿದ್ದಾರೆ. ಇದೊಂದು ಥರಾ ಮಣ್ಣಿಗೆ ಮಾಡ್ದ ದ್ರೋಹ. ಯಾಕೆ ಗೊತ್ತಾ- ನಾನು ಮಣ್ಣಿನ ಮೊಮ್ಮಗ ಅಲ್ವಾ?  (ಉಳಿದ ಪುಟಗಳು ಸಿಕ್ಕಿಲ್ಲ. ಈ ಎರಡೂ ಡೈರಿಗಳ ಎಲ್ಲ ಪುಟ ಸಿಕ್ಕದ ನಂತರ ಮೈ ಎಕ್ಸ್‌ಪೆರಿಮೆಂಟ್‌ ವಿತ್‌ ಮೈನಿಂಗ್‌ ಅನ್ನೋ ಪುಸ್ತಕ ತರೋ ಆಲೋಚನೆ ಇದೆ)

Saturday, August 27, 2011

gani


ಅಧಿಕಾರಿಗಳು ಗಣಿ ತನಿಖೆ ನಡೆಸಿದ ರೋಚಕ ಕತೆ
ಎಲ್ಲರ ಮೈಪೂರ್ತಿ ಕೆಂಪು. ದೂಳಿನ ಮಧ್ಯೆ ಕಣ್ಣರಳಿಸಿ ನೋಡಿದರೆ ಮಾತ್ರ ಕಾಣುತ್ತಿದ್ದ ಆ ಜನರಿಗೋ ವಿಪರೀತ ಗಡಿಬಿಡಿ. ಜೆಸಿಬಿಗಳಿಗೂ ತನ್ನ ಆರ್ಭಟ ಯಾರಿಗೂ ಕೇಳಿಸದು ಎಂಬ ಅಹಮಿಕೆ. ಶಬ್ದ ಹತ್ತು ಮೈಲಾಚೆ ಕೇಳಿಸುತ್ತಿದ್ದರೂ, ಇದು ಜಗದ ಮೋಸ್ಟ್‌ ಸೀಕ್ರೆಟ್‌ ಎನ್ನುವ ಭ್ರಮೆ ಆ ಮ್ಯಾನೇಜರನಿಗೆ..
-ಹೇಳಿ ಕೇಳಿ ಅದು ಅರಳಿಕಟ್ಟೆಯ ಅಕ್ರಮ ಗಣಿ. ಸದ್ದಿಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ಹಾಗೇನಾದರೂ ಮೈನ್‌ನವರೋ, ಫಾರೆಸ್ಟ್‌ನವರೋ ಬಂದರೆ ಒಂದಷ್ಟು ಅದಿರು ಮುಕ್ಕಿಸಿದರಾಯಿತು ಎನ್ನುವ ಭಂಡತನ ಇದ್ದೇ ಇದೆ.
ಅರಳಿಕಟ್ಟೆ ಇರುವುದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ. ಎಂದಿನಂತೆ ಅವತ್ತೂ ಉರಿಬಿಸಿಲಿನಲ್ಲಿ ಕಾರ್ಮಿಕರೆಲ್ಲರೂ ಕಾರ್ಯಮಗ್ನರಾಗಿದ್ದರು. ಆ ವೇಳೆ, ಅಷ್ಟರಲ್ಲಿ ಆರಡಿ ಉದ್ದದ ವ್ಯಕ್ತಿಯೊಬ್ಬರು ಗಣಿಭಾಗದತ್ತ ನಡೆದುಕೊಂಡು ಬಂದರು. ದೂಳಿನಿಂದ ಪೈಜಾಮದ ನಿಜಬಣ್ಣ ಕೆಟ್ಟಿತ್ತು. ಕೆಂಪು ರುಮಾಲು ತೊಟ್ಟುಕೊಂಡಿದ್ದರು. ನೋಡಿದರೆ ಸಾಕು, ಯಾರೊ ರಾಜಾಸ್ಥಾನಿ ಮಾರ್ವಾಡಿ ಎನ್ನಬಹುದಿತ್ತು. ಸ್ವಲ್ಪ ಸ್ವಲ್ಪ ಹಿಂದಿ, ತೋಡಾ ತೋಡಾ ಕನ್ನಡದಲ್ಲಿ ಮಾತು ಶುರು ಮಾಡಿದ ಆತ ಅದಿರು ಕೊಳ್ಳಲು ಬಂದ ವ್ಯಾಪಾರಿ ಎಂದು ತಿಳಿಯಲು ಮ್ಯಾನೇಜರ್‌ಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ.
ಕೂತಲ್ಲೇ ವ್ಯಾಪಾರ ಕುದುರುತಿದೆಯಲ್ಲ ಎನ್ನುವ ಖುಷಿ ಮ್ಯಾನೇಜರ್‌ಗೆ. ಆಗ ಮಾರುಕಟ್ಟೆ ಬೆಲೆ ಪ್ರತಿ ಮೆಟ್ರಿಕ್‌ ಟನ್‌ಗೆ 900ರಿಂದ 1000 ರೂಪಾಯಿ ಇತ್ತು. ಆದರೆ ಈ ವರ್ತಕ ಈ ಬೆಲೆಯನ್ನು ಏಕ್‌ದಮ್‌ ತಿರಸ್ಕರಿಸಿಬಿಟ್ಟರು. ಉಹುಂ, 700 ರೂಪಾಯಿಗೆ ಕೊಟ್ಟರೆ ತಗೋತ್ತೀನಿ ಎಂದು ಒಂದೇ ಮಾತು ಇಟ್ಟರು. ಚೌಕಾಸಿ ನಡೆಯುತ್ತಿರುವ ಹಾಗೆಯೇ ಆ ವ್ಯಾಪಾರಿ ಇಡೀ ಗಣಿಗೆ ನಾಲ್ಕು ಸುತ್ತು ಬಂದಾಗಿತ್ತು. ಎಷ್ಟು ಅದಿರು ಸಿಗುತ್ತದೆ, ಎಷ್ಟು ಸಾಗಾಟವಾಗುತ್ತದೆ, ಎಲ್ಲಿಗೆ ಸಾಗಾಟವಾಗುತ್ತದೆ ಎಂದೆಲ್ಲ ಕಣ್ಣಲ್ಲೇ ಲೆಕ್ಕ ಹಾಕಿ ಆಗಿತ್ತು. ಗಣಿ ಒಡೆಯನ ಮೊಬೈಲ್‌ ನಂಬರ್‌ಗೂ ಮಾತಾಡಿ ಡೀಲ್‌ ಇನ್ನೇನು ಪಕ್ಕಾ ಆಗುತ್ತದೆ ಎನ್ನುವಷ್ಟರಲ್ಲಿ, ದಿಢೀರಾಗಿ ಮುಂದಿನ ವಾರ ಬರುತ್ತೇನೆ ಎಂದು ಹೊರಟೇಬಿಟ್ಟ ವ್ಯಾಪಾರಿ.
ಮುಂದಿನ ಭಾನುವಾರ- ವ್ಯಾಪಾರಿ ಮಿಸ್‌ ಮಾಡಲಿಲ್ಲ. ಹಿಂದಿನ ವಾರದ ಡ್ರೆಸ್ಸೆ ಹಾಕಿಕೊಂಡಿದ್ದರಿಂದ  ಮ್ಯಾನೇಜರ್‌ಗೆ ಬೇಗ ಗುರ್ತು ಸಿಕ್ಕಿತು. ಈ ಸಲ ಮತ್ತೆ ಶುರುವಿನಿಂದ ಚೌಕಾಸಿ. ಈ ವಾರದ ರಿಸಲ್ಟ್‌ ಅಷ್ಟೇ.. ಆಮೇಲೆ ಬರುತ್ತೇನೆ ಎಂದು ಹೊರಟುಬಿಟ್ಟ.
ಒಂದೆರಡು ದಿನ ಆಗಿತ್ತೇನೋ- 2007, ಜೂನ್‌ 13. ಈಗ ವ್ಯಾಪಾರಿ ಬರಲಿಲ್ಲ. ದಂಡೆತ್ತಿ ಬಂದದ್ದು ಲೋಕಾಯುಕ್ತ ಅಧಿಕಾರಿಗಳು ಮತ್ತು ಪೊಲೀಸರು. ಒಂದು ಕೋಟಿ ರೂ ಮೌಲ್ಯದ 11,500 ಟನ್‌ ಅದಿರು, ಐದು ಜೆಸಿಬಿಗಳನ್ನು ವಶಪಡಿಸಿಕೊಂಡರು. ಇದುವೇ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಗಣಿ ಮೇಲೆ ನಡೆದ ದಾಳಿ.
ಆ ಮಾರ್ವಾಡಿ ವ್ಯಾಪಾರಿ ವೇಷ ಹಾಕಿಕೊಂಡು ಬಂದವರು ಬೇರೆ ಯಾರೂ ಅಲ್ಲ- ಗಣಿ ತನಿಖೆಯ ದಂಡನಾಯಕ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಯು.ವಿ.ಸಿಂಗ್‌. ಇನ್ನಾರೋ ಕೆಳಹಂತದ ಅಧಿಕಾರಿಯನ್ನು ಕಳುಹಿಸಿ ಸ್ಥಳ ಪರಿಶೀಲನೆ ಮಾಡಬಹುದಾಗಿತ್ತು. ಡಾ. ಸಿಂಗ್‌ ಹಾಗೆ ಮಾಡಲಿಲ್ಲ. ತಾವೇ ಗಣಿಗಿಳಿದರು!
2-3 ಕಿಮೀ ದೂರದಲ್ಲಿ ಜೀಪು ನಿಲ್ಲಿಸಿ ವೇಷ ಬದಲಿಸಿಕೊಂಡು ಬಂದ ಸಿಂಗ್‌ಗೆ ಮುಖ್ಯವಾಗಿ ಅಲ್ಲಿಗೆ ಇರುವ ದಾರಿಗಳ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಗಣಿಗಾರಿಕೆ ರಾತ್ರಿ ಎಷ್ಟು ಹೊತ್ತಿನವರೆಗೆ ನಡೆಯುತ್ತದೆ ಎನ್ನುವ ವಿಷಯ ಬೇಕಾಗಿತ್ತು. ಅದೆಲ್ಲವನ್ನೂ ಸಂಗ್ರಹಿಸಿದರು.
ಆದರೆ ಅದಿರು ಕೊಳ್ಳಲು ಬಂದ ವ್ಯಾಪಾರಿ ನಡೆದುಕೊಂಡು ಏಕೆ ಬರುತ್ತಿದ್ದಾನೆ ಎಂದು ಊಹಿಸುವ ಶಕ್ತಿ ಮಾತ್ರ ಗಣಿಯಲ್ಲಿ ಯಾರಿಗೂ ಇರಲಿಲ್ಲ. ಏಕೆಂದರೆ, ಗಣಿದಾಳಿ ಎನ್ನುವ ಕಲ್ಪನೆಯೂ ಆ ತನಕ ಯಾರಿಗೂ ಇರಲಿಲ್ಲ.
ಜೆಸಿಬಿ ಕಂಟಕ
ಅರಳಿಕಟ್ಟೆ ಗಣಿ ಮೇಲೆ ದಾಳಿ ಮಾಡಲು ಬೆಂಗಳೂರಿನಿಂದ 50 ಮಂದಿ ಕ್ವಿಕ್‌ ರೆಸ್ಪಾನ್ಸ್‌ ಟೀಮ್‌ನ ಪೊಲೀಸರೂ ಬಂದಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ದಂಡು ಜೂನ್‌ 13ರ ರಾತ್ರಿ 8 ಗಂಟೆಗೆ ಹೊರಟಿತು. ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಮೂರು ಕಡೆಯಿಂದ ದಾಳಿ ಮಾಡುವುದು ಎಂದು ನಿರ್ಧರಿಸಲಾಯಿತು. ಲೋಕಾಯುಕ್ತ ಎಸ್ಪಿ ರಂಗಸ್ವಾಮಿ ನಾಯಕ್‌ ದಾಳಿಯ ನೇತೃತ್ವ ವಹಿಸಿದ್ದರು.
ರಾತ್ರಿ ಸುಮಾರು 11 ಗಂಟೆಗೆ ಐದು ಜೆಸಿಬಿಗಳು ಆರ್ಭಟಿಸುತ್ತಾ ಕೆಲಸ ಮಾಡುತ್ತಿದ್ದವು. ಮೂರು ಕಡೆಯಿಂದ ಏಕಾಏಕಿ ಸ್ಥಳಕ್ಕೆ ದಾಳಿ ನಡೆದಾಗ ಕೆಲಸಗಾರರಿಗೆಲ್ಲರಿಗೂ ದಿಗ್ಬ್ರಾಂತಿ. ಕೆಲವರು ಓಡಿದರು, ಇನ್ನು ಕೆಲವರು ಪ್ರತಿರೋಧ ಒಡ್ಡಿದರು.
ಅಲ್ಲೇ ಸನಿಹದಲ್ಲಿ ಜೀಪಿನಲ್ಲಿ ಕೂತಿದ್ದ ಡಾ. ಸಿಂಗ್‌, ಕ್ಷಣಕ್ಷಣದ ಮಾಹಿತಿಗಳನ್ನು ಲೋಕಾಯುಕ್ತ ಸಂತೋಷ್‌ ಹೆಗಡೆಯವರಿಗೆ ತಿಳಿಸುತ್ತಿದ್ದರು. ರಾತ್ರಿ ಮೂರು ಗಂಟೆಯವರೆಗೂ ಇವರಿಬ್ಬರು ಸತತ ಸಂಪರ್ಕದಲ್ಲಿದ್ದರು. ಅಷ್ಟರಲ್ಲಿ... ಒಮ್ಮಿಂದೊಮ್ಮೆಗೆ ಹಿಂದಿನಿಂದ ರಕ್ಕಸನಂತೆ ಬಂದ ಜೆಸಿಬಿಯೊಂದು ಜೀಪನ್ನು ಬುಡಮೇಲು ಮಾಡಿಬಿಟ್ಟಿತು. ತಕ್ಷಣ ಜೀಪಿನಿಂದ ಸಿಂಗ್‌ ಜಿಗಿದುಬಿಟ್ಟರು. ಕೊಂಚ ತರಚಿದ ಗಾಯಗಳಿಗೀಡಾದ ಅವರು ಪವಾಡ ಎಂಬಂತೆ ಸಾವಿನಿಂದ ಪಾರಾಗಿಬಿಟ್ಟರು.
ಬಹುಶಃ ಇಂಥ ದಾಳಿಗಳು, ಬೆದರಿಕೆಗಳು ಲೋಕಾಯುಕ್ತ ತನಿಖಾ ತಂಡದಲ್ಲಿದ್ದ ಯಾರಿಗೂ ಹೊಸದಲ್ಲ. ಇತರೆ ಅಧಿಕಾರಿಗಳಾದ ವಿಪಿನ್‌ ಸಿಂಗ್‌, ಕೆ.ಉದಯಕುಮಾರ್‌, ಬಿಸ್ವಜಿತ್‌ ಮಿಶ್ರಾ, ತಾಕತ್‌ ಸಿಂಗ್‌ ರಣಾವತ್‌ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಇಂಥ ಸಮಸ್ಯೆಗಳನ್ನು ಎದುರಿಸಿಕೊಂಡೇ ಬಂದಿದ್ದಾರೆ.
ಒಂದು ಮುಖ್ಯಮಂತ್ರಿ ಪದವಿಯನ್ನು ಅಲುಗಾಡಿಸಿದ, ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಆರೋಪ ಹೊರಿಸಿದ ಈ ರಾಜ್ಯದ ಅತ್ಯಂತ ಶಕ್ತಿಶಾಲಿ ವರದಿ ತಯಾರಿಸುವುದು ಸುಲಭವಲ್ಲ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಹೀಗಾಗಿಯೇ ಪ್ರತಿಯೊಬ್ಬರೂ ಹೊರಜಗತ್ತಿಗೆ ತಿಳಿಯದಂತೆ ನಾಜೂಕಾಗಿ ತನಿಖೆಯಲ್ಲಿ ತೊಡಗಿಸಿಕೊಂಡಿದ್ದರು.

ಗಣಿಭೂಮಿ
ಈ ತಂಡಕ್ಕೆ ಮೊದಲು ಬಂದ ಕೆಲಸ- ಗಣಿ ಪ್ರದೇಶದ ಸಮೀಕ್ಷೆ. ಗಣಿಪ್ರದೇಶದ ವಿಸ್ತೀರ್ಣ, ಗಡಿ ಒತ್ತುವರಿ, ಅಕ್ರಮ ಗಣಿಗಾರಿಕೆ ವಿಷಯ ತಿಳಿಯಲು ಒಂಬತ್ತು ತಂಡವನ್ನು 2007ರಲ್ಲಿ ಈ ತನಿಖಾ ತಂಡ ರಚಿಸಿತ್ತು. ಇದಕ್ಕೂ ಸಾಕಷ್ಟು ಅಡ್ಡಿ ಇದ್ದವು. ಒಂದು ಕಡೆ ಅಗತ್ಯ ದಾಖಲೆ ನೀಡಲು ಅಧಿಕಾರಿಗಳು ಅಸಹಕಾರ ಒಡ್ಡಿದರೆ, ಇನ್ನು ಕೆಲವು ಕಡೆ ಗಣಿಒಡೆಯರ ಬೆದರಿಕೆ.
ಒಮ್ಮೆ ಡಿಸಿಎಫ್‌ ಉದಯಕುಮಾರ್‌ ನೇತೃತ್ವದ ತಂಡ ಹೊಸಪೇಟೆ ಭಾಗದಲ್ಲಿ ಸಮೀಕ್ಷೆಗೆ ಹೊರಟಿತ್ತು. ಹತ್ತಾರು ಕಿಲೋ ಮೀಟರ್‌ ದೂರದ ಗಣಿಪ್ರದೇಶಕ್ಕೆ ಹೋಗುತ್ತಿರಬೇಕಾದರೆ ಗುಂಪೊಂದು ಉದಯಕುಮಾರ್‌ ಟೀಮನ್ನು ನಿಲ್ಲಿಸಿ ಸಮೀಕ್ಷೆ ಮಾಡಲು ಬಿಡೊಲ್ಲ ಎಂದು ಧಮಕಿ ಹಾಕಿತು. ಈ ಅಧಿಕಾರಿಗಳೂ ಏನೂ ಮಾಡುವ ಸ್ಥಿತಿ ಇರಲಿಲ್ಲ. ಉದಯ್‌ ನಮ್ರತೆಯಿಂದಲೇ ಹೇಳಿದರು-ನೋಡಿ, ಇವತ್ತು ನಮಗೆ ತೊಂದರೆ ಮಾಡಿದರೆ ಸಮೀಕ್ಷೆ ನಿಲ್ಲೊಲ್ಲ. ನಾಳೆ ಇನ್ನೊಂದು ತಂಡ ಇಲ್ಲಿಗೆ ಬಂದು ಕೆಲಸ ಮಾಡಿಯೇ ತೀರುತ್ತೆ. ಪೊಲೀಸ್‌ ಫೋರ್ಸ್‌ ಕೂಡ ಬರಬಹುದು ಎಂದು. ವಿಷಯ ಪ್ರಕೋಪಕ್ಕೆ ಹೋಗಬಹುದು ಎಂಬ ಭಯದಿಂದಲೋ ಏನೋ ಸಮೀಕ್ಷೆ ಮತ್ತೆ ಯಾರೂ ಅಡ್ಡಿಪಡಿಸಲಿಲ್ಲ.
ಅಲ್ಲಿದ್ದುದು ಒಂದು ಬಗೆಯ ರಣಭೂಮಿಯ ಛಾಯೆಯೇ. ಬೆಳಿಗ್ಗೆ ಎದ್ದು ಗಣಿಭೂಮಿಗೆ ಹೋದರೆ ಮತ್ತೆ ಮರಳುತ್ತೇವೆ ಎನ್ನುವ ಗ್ಯಾರಂಟಿಯೂ ಇರೋದಿಲ್ಲ. ದಿನಕ್ಕೆ ಹತ್ತರಿಂದ ಹದಿನೈದು ಕಿಮೀ ನಡೆಯಲೇಬೇಕು. ಬೆಳಿಗ್ಗೆ ತಿಂಡಿ ಬಿಟ್ಟರೆ ಮತ್ತೆ ರಾತ್ರಿಯೇ ಊಟ. ಮಧ್ಯೆ ಮಧ್ಯೆ ಬಿಸ್ಕೆಟ್ಟೇ ಗತಿ.
ಒಮೆ ಉತ್ಸಾಹದ ಯುವ ಅಧಿಕಾರಿಯೊಬ್ಬರು ವೇಗವಾಗಿ ನಡೆಯುವಾಗ ಕಾಲು ಉಳುಕಿಸಿಕೊಂಡು ಮತ್ತೆ ಅವರನ್ನು ಎಷ್ಟೋ ಮೈಲಿ ಎತ್ತಿಕೊಂಡು ಬಂದ ಘಟನೆಗಳು ಈ ತಂಡದಲ್ಲಿ ಇನ್ನೂ ಹಸಿರಾಗಿದೆ.

ಅಧಿಕಾರಿಗಳೇ ಅಡ್ಡಿ
ಸರ್ವೆಗೆ ಬೇಕಾದುದು ಅಗತ್ಯ ದಾಖಲೆ. ಅದನ್ನು ಪೂರೈಸಲಿಕ್ಕೇ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಎರಡು ತಿಂಗಳ ಕಾಲ ಬರೇ ದಾಖಲೆ ಪಡೆಯಲಿಕ್ಕೇ ಟೈಮ್‌ ವೇಸ್ಟ್‌ ಮಾಡಿದ್ದು ಉಂಟು ಎಂದು ತನಿಖಾ ಅಧಿಕಾರಿಯೊಬ್ಬರು ಹೇಳುತ್ತಾರೆ.
ಒಮೆ ಹೊಸಪೇಟೆಯ ಗಣಿ ಇಲಾಖೆ ಉಪನಿರ್ದೇಶಕರ ಬಳಿ ಅಗತ್ಯ ದಾಖಲೆ ಕೋರಿದಾಗ ಅದನ್ನು ನೀಡಲು ನಿರಾಕರಿಸಿದರು. ಆ ದಾಖಲೆ ಇಲ್ಲದೆ ಸರ್ವೆ ಮಾಡುವ ಹಾಗೂ ಇಲ್ಲ. ಹಲವು ಸಲ ಕೋರಿದರೂ ಉಹುಂ, ಆ ಗಣಿ ಅಧಿಕಾರಿ ಜಪ್ಪಯ್ಯ ಅನ್ನಲಿಲ್ಲ. ಕೊನೆಗೆ ಲೋಕಾಯುಕ್ತರಿಂದ ಸರ್ಚ್‌ ವಾರಂಟ್‌ ಹೊರಡಿಸಿದ ನಂತರ ದಾಖಲೆ ಸಿಕ್ಕಿತು. 30 ಜನ ಅಧಿಕಾರಿಗಳು 170 ಗಣಿಗಳ ಸರ್ವೆ ಮಾಡಿ ಮುಗಿಸುವಷ್ಟರಲ್ಲಿ ಒಂದೂವರೆ ವರ್ಷ ಕಳೆದಿತ್ತು.
ಗಡಿಗಳನ್ನು ಗುರುತಿಸಲು ಹಿಂದೆ ಬಳಸುತ್ತಿದ್ದ ಪರ್ಮನೆಂಟ್‌ ರಾಕ್‌ಗಳನ್ನೂ ಬ್ಲಾಸ್ಟ್‌ ಮಾಡಿ ಬಿಟ್ಟಿತ್ತು ಗಣಿ ಮಾಫಿಯಾ. ಗಡಿ ಗುರುತಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇತ್ತು. ಕೊನೆಗೇ ಅದನ್ನು ಉಪಗ್ರಹ ಚಿತ್ರವನ್ನು ಬಳಸಿಕೊಂಡು ಗುರುತಿಸಿತು ಲೋಕಾಯುಕ್ತ ತಂಡ.

ಲಾಟರಿ ರೇಡ್‌
ಗಣಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲೂ ಇವರು ಸೈನಿಕರಂತೆ ವ್ಯವಸ್ಥಿತ ವ್ಯೂಹ ರೂಪಿಸುತ್ತಿದ್ದರು. ಇಡುವ ಒಂದೊಂದು ಹೆಜ್ಜೆಯೂ ನಿಗೂಢವಾಗಿರಬೇಕು, ಅಷ್ಟೇ ಕೇರ್‌ಫುಲ್ಲಾಗಿರಬೇಕು. ಇವರ ಎದುರು ಪಾಳಯದಲ್ಲಿ ಇದ್ದುದು ಗುಪ್ತಚರ ಇಲಾಖೆಯನ್ನು ಕೈಯಲ್ಲಿ ಇಟ್ಟುಕೊಂಡ ಒಂದು ಸರ್ಕಾರ ಹಾಗೂ ಯಾವ ಕಾನೂನಿಗೂ ಜಗ್ಗದ ಗಣಿ ಮಾಫಿಯಾ! ಇಡುವ ಒಂದು ತಪ್ಪು ಹೆಜ್ಜೆಯ ಪರಿಣಾಮ ಯಾವ ದುರಂತವೂ ಆಗಬಹುದು.
ಹೀಗಾಗಿ, ಲೋಕಾಯುಕ್ತ ಅಧಿಕಾರಿಗಳು ರೈಡ್‌ಗೆ ತೆರಳುವ ಸಂದರ್ಭ ಯಾವ ಮಾಹಿತಿಗಳನ್ನೂ ಲೀಕ್‌ ಮಾಡುತ್ತಿರಲಿಲ್ಲ. ದಾಳಿಗೆ ಪೂರಕ ಮಾಹಿತಿ ಸಂಗ್ರಹವಾಯಿತು ಎಂದು ಗೊತ್ತಾದ ತಕ್ಷಣ ಸಂಬಂಧಿಸಿದ ಅರಣ್ಯಾಧಿಕಾರಿಗಳಿಗೆ ಮೆಸೇಜ್‌ ಹೋಗುತ್ತಿತ್ತು- ನಾಳೆ ಬೆಳಿಗ್ಗೆ ಇಷ್ಟು ಹೊತ್ತಿಗೆ ಗೆಸ್ಟ್‌ಹೌಸ್‌ಗೆ ಬಂದು ಬಿಡಿ ಎಂದು. ಯಾವ ಅಧಿಕಾರಿಯನ್ನೂ ನಂಬುವ ಸ್ಥಿತಿ ಇಲ್ಲ!
ಮರುದಿನ ಅಧಿಕಾರಿಗಳೆಲ್ಲರೂ ಜಮಾಯಿಸಿದ ತಕ್ಷಣ, ಎಲ್ಲರ ಮೊಬೈಲ್‌ಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ನಂತರ ತಂಡಗಳನ್ನು ರಚಿಸಲಾಗುತ್ತಿತ್ತು. ಪ್ರತಿಯೊಂದು ತಂಡದಲ್ಲೂ ಐದಾರು ಅಧಿಕಾರಿಗಳು. ಅವರು ಎಲ್ಲಿಗೆ ಹೊರಡಬೇಕೆಂದು ನಿರ್ಧಾರ ಮಾಡುತ್ತಿದ್ದುದು ಲಾಟರಿ ಮೂಲಕ! ಲಾಟರಿಯಲ್ಲಿ ಬಂದ ಸ್ಥಳಕ್ಕೆ ಆ ತಂಡ ದಾಳಿ ಮಾಡುತ್ತಿತ್ತು.
ಈ ಹೊತ್ತಿಗೆ ತಂಡಕ್ಕೆ ಅಗತ್ಯವಾದ ಎಲ್ಲ ಪರಿಕರಗಳು ಸಿದ್ಧವಾಗಿಬಿಡುತ್ತಿತ್ತು. ಶಸ್ತ್ರದಿಂದ ಹಿಡಿದು ಕ್ಯಾಂಡಲ್‌, ಹಗ್ಗ, ಪೆನ್‌, ಕಾಗದ.. ಹೀಗೆ ಒಂದೇ ಒಂದು ಚಿಕ್ಕ ಸಂಗತಿಯೂ ಅಲ್ಲಿ ಮುಖ್ಯ. ಗಣಿಭಾಗದಲ್ಲಿ ಏನೇನೂ ಸಿಗುತ್ತಿರಲಿಲ್ಲ. ತಂಡದ ನಾಯಕನೊಬ್ಬನ ಕೈಯಲ್ಲಿ ಬಿಟ್ಟರೆ ಇನ್ನಾರ ಕೈಯಲ್ಲಿ ಮೊಬೈಲ್‌ ಇರುತ್ತಿರಲಿಲ್ಲ. ಇದಕ್ಕೆ ಪೂರ್ವ ಸಿದ್ಧತೆ ವ್ಯವಸ್ಥೆ ಮಾಡುತ್ತಿದ್ದುದು ಡಿಸಿಎಫ್‌ ಉದಯಕುಮಾರ್‌.
ಗಣಿಭೂಮಿಯಲ್ಲಿ ಕಲ್ಲುಗಳಿಗೂ ಕಣ್ಣಿವೆ. ಹೀಗಾಗಿ ಯಾರಿಗೂ ಹೇಳದೆ ಕೇಳದೆ ಗಣಿ ಕಡೆಗೆ ಹೆಜ್ಜೆ ಇಡುವ ಸ್ಥಿತಿ. ಒಮೊಮೆ  ಅಧಿಕಾರಿಗಳು ಮನೆಯವರಿಗೂ ವಿಷಯ ಹೇಳುತ್ತಿರಲಿಲ್ಲ. ಅದು ಹೋಗಲಿ, ತಾನೆಲ್ಲಿಗೆ ಇವತ್ತು ಹೋಗುತ್ತಿದ್ದೇನೆ ಎನ್ನುವ ಅರಿವು ಸ್ವತಃ ಡ್ರೈವರ್‌ಗೂ ಇರುತ್ತಿರಲಿಲ್ಲ. ಸಾಹೇಬ್ರು ಹೇಳಿದ ಕಡೆ ಹೋಗುವುದಷ್ಟೇ ಕೆಲಸ. ಎರಡು ವರ್ಷ ಕಳೆಯುವುದರೊಳಗೆ ಈ ಎಲ್ಲ ಅಧಿಕಾರಿಗಳಿಗೆ ಗಣಿ ಪ್ರದೇಶದ ಇಂಚಿಂಚೂ ಕರಗತವಾಗಿಬಿಟ್ಟಿತ್ತು.





ಜಾತ್ರೆಗೆ ಹೊರಟ ಲಾರಿ
ಬೇಲೆಕೇರಿಗೆ ಬಂತು!


ಇಡೀ ವ್ಯವಸ್ಥೆಯ ಕಣ್ಣಿಗೆ ಅದಿರು ಎರಚಿದ್ದ ಕಾರವಾರ ಬಳಿಯ ಬೇಲೆಕೇರಿ ಬಂದರು ಸದ್ದಿಲ್ಲದೆ ಮಲಗಿತ್ತು. ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದ ಬಂದರು ಅದು. ಕರಾವಳಿ ನಿಗಾಪಡೆ ಅಲ್ಲಿ ಇಲ್ಲ. ವಾಚ್‌ ಟವರ್‌ ಕೂಡ ಇಲ್ಲ. ಅದಿರು ತಂದ ಕಾರ್ಗೊಗಳನ್ನು ಹಾಗೆಯೇ ಬಾರ್ಜ್‌ನಲ್ಲಿ ಹೇರಿಕೊಂಡು ಆಳಸಮುದ್ರದಲ್ಲಿ ನಿಂತಿದ್ದ ಹಡಗಿಗೆ ಇಳಿಸಿಬಿಡುವ ಕಾಯಕ ನಡೆಯುತ್ತಲೇ ಇತ್ತು. ವಿದೇಶಕ್ಕೆ ಅಕ್ರಮವಾಗಿ ಹೋದ ಅದಿರಿಗೆ ಲೆಕ್ಕವೇ ಇರಲಿಲ್ಲ.
ಈ ವಾಸನೆ ಸಿಕ್ಕ ಕೂಡಲೇ ಪಿಸಿಸಿಎಫ್‌ ಯು.ವಿ.ಸಿಂಗ್‌ ಅವರು ಡಿಸಿಎಫ್‌ ಉದಯಕುಮಾರ್‌ ಅವರಿಗೆ ಜವಾಬ್ದಾರಿ ವಹಿಸಿದರು.
ಆಗ ಜಲಸಂವರ್ಧನ ಇಲಾಖೆಯಲ್ಲಿದ್ದ ಉದಯಕುಮಾರ್‌ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಖಾಸಗಿ ಜೀಪಿನಲ್ಲಿ ಬೇಲೆಕೇರಿಗೆ ಹೋಗಿ ಅಲ್ಲಿ ಸಾಗಣೆಯಾಗುತ್ತಿದ್ದ ಅದಿರಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಒಂದು ದಿನಕ್ಕೆ ಎಷ್ಟು ಲಾರಿ ರೋಡಲ್ಲಿ ಹೋಗುತ್ತಿದೆ ಎಂದು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ಅಡಾನಿ ಎಂಟರ್‌ಪೈಸಸ್‌, ಮಲ್ಲಿಕಾರ್ಜುನ್‌ ಶಿಪ್ಪಿಂಗ್‌ ಕಂಪೆನಿಗಳೇ ಇಲ್ಲಿ ಅಕ್ರಮ ವಹಿವಾಟು ಮಾಡುತ್ತಿರುವುದು ಬೆಳಕಿಗೆ ಬಂತು.
ಒಂದೆರಡು ಬಾರಿ ಸ್ವತಃ ಯುವಿ ಸಿಂಗ್‌ ಅವರೇ ಮಾಹಿತಿ ಕಲೆ ಹಾಕಲು ಬಂದರು. ಆ ಹೊತ್ತಿಗೇ (2010) ಸಿಂಗ್‌ ಮುಖಪರಿಚಯ ಎಲ್ಲರಿಗೂ ಆಗಿಬಿಟ್ಟಿತು. ಲೋಕಾಯುಕ್ತ ಅಧಿಕಾರಿ ಎಂದು ಟಿವಿ, ಪತ್ರಿಕೆಗಳಲ್ಲಿ ಪ್ರಚಾರವಾಗಿಬಿಟ್ಟಿತ್ತು. ಹೀಗಾಗಿ, ಹಳೆಯ ಟಿ ಶರ್ಟ್‌, ಪ್ಯಾಂಟ್‌ ಮತ್ತು ತಲೆಗೆ ಮಫ್ಲರ್‌ ಸುತ್ತಿಕೊಂಡು ವಿಲಕ್ಷಣ ಡ್ರೆಸ್‌ನಲ್ಲಿ ಅವರು ಬೇಲೆಕೇರಿಗೆ ಬಂದರು. ಜಲಸಂವರ್ಧನಾ ಇಲಾಖೆಯ ಜೀಪಿನಲ್ಲಿ ಬಂದ ಅವರು ಒಬ್ಬ ಲೋಕಾಯುಕ್ತ ಅಧಿಕಾರಿ ಎಂದು ಯಾರಿಗೂ ತಿಳಿಯಲಿಲ್ಲ. ಸ್ವತಃ ಜೀಪು ಚಾಲಿಸುತ್ತಿದ್ದ ಡ್ರೈವರ್‌ಗೂ ಸಹ. ಅಲ್ಲಿ ಸಾಗಾಟಕ್ಕೆ ರಾಶಿ ಬಿದ್ದಿದ್ದ ಅದಿರು ನೋಡಿ ದಂಗಾದರು.
ಒಂದೆರಡು ದಿನಗಳ ನಂತರ ರೇಡ್‌ಗೆ ವ್ಯವಸ್ಥೆ ಮಾಡಿದರು. ಅವತ್ತು 2010 ಫೆಬ್ರವರಿ 20. ದಾಳಿ ಕೂಡ ಅತ್ಯಂತ ನಾಜೂಕಾಗಿ ನಡೆಯುವಂತೆ ವ್ಯವಸ್ಥೆ ಮಾಡಿಕೊಂಡರು. ಆಗ ಕಾರವಾರದಲ್ಲಿದ್ದ ದಕ್ಷ ಅಧಿಕಾರಿ ಆರ್‌. ಗೋಕುಲ್‌ ಸಹಾಯ ಪಡೆದುಕೊಂಡರು. ಎಸಿಎಫ್‌ ತಾಕತ್‌ ಸಿಂಗ್‌ ರಣಾವತ್‌ ವ್ಯೂಹ ರಚಿಸಿದರು.
ಅದಿರು ಸಾಗಾಟಕ್ಕೆ ಬಳಸುವ ಲಾರಿಗೆ ಸ್ಥಳೀಯ ದೇವಸ್ಥಾನ ಜಾತ್ರೆಯೊಂದರ ಬ್ಯಾನರ್‌ ಬರೆಯಿಸಿ ಹಾಕಲಾಯಿತು. ನೋಡಿದರೆ, ಎಲ್ಲೋ ಜಾತ್ರೆಗೆ ಹೊರಟ ಲಾರಿಯಂತೇ ಕಾಣುತ್ತಿತ್ತು. ಆ ಲಾರಿಯಲ್ಲಿ ಅಧಿಕಾರಿಗಳು ಕೂತರು. ಯುವಿ ಸಿಂಗ್‌ರಂತೂ ಥೇಟ್‌ ಲಾರಿ ಕ್ಲೀನರ್‌ ಮಾದರಿ ಕಾಣಿಸುತ್ತಿದ್ದರು.
ಯಾರಿಗೂ ತಿಳಿಯದಂತೆ ರೂಪಿಸಿದ ದಾಳಿ ಮರುದಿನ ಇಡೀ ದೇಶದಾದ್ಯಂತ ಸುದ್ದಿಯಾಯಿತು. ದಾಳಿಯಲ್ಲಿ 80,000 ಮೆಟ್ರಿಕ್‌ ಟನ್‌ ಅಕ್ರಮ ಅದಿರನ್ನು ವಶಪಡಿಸಿಕೊಳ್ಳಲಾಯಿತು. ರಫ್ತುದಾರರ ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಯಿತು.
ಈ ಕಂಪ್ಯೂಟರ್‌ನಲ್ಲಿದ್ದ ಮಾಹಿತಿಗಳನ್ನು ಅಧಿಕಾರಿಗಳಾದ ವಿಪಿನ್‌ ಸಿಂಗ್‌ ಮತ್ತು ಬಿಸ್ವಜಿತ್‌ ಮಿಶ್ರಾ ಹೊರತೆಗೆದು ದೇಶಕ್ಕೆ ಆಘಾತಕಾರಿ ಸುದ್ದಿ ಕೊಟ್ಟರು- 2006-07ರಿಂದ 2010ರ ತನಕ ಈ ಬಂದರು ಮೂಲಕ 77.38 ಲಕ್ಷ ಮೆಟ್ರಿಕ್‌ ಟನ್‌ ಅದಿರು ಸಾಗಾಟವಾಗಿತ್ತು!
ಆಫೀಸ್ಸೇ ಮನೆ, ಗಣಿಯೇ ಪಿಕ್ನಿಕ್‌
ಗಣಿ ತನಿಖಾ ಅಧಿಕಾರಿಗಳಿಗೆ 2007ರಿಂದ ಮನೆ ಮತ್ತು ಮೈನ್‌ ಎರಡೂ ಒಂದೇ ಆಗಿಬಿಟ್ಟಿತ್ತು. ನಂಬಿದರೆ ನಂಬಿ, ಬಿಟ್ಟರೆ ಬಿಡಿ- ಈ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಎಷ್ಟೋ ವರ್ಷಗಳಾದವು. ಭಾನುವಾರವೂ ಕೆಲಸ. ಯುವಿ ಸಿಂಗ್‌ರಂತೂ 2004ರಿಂದ ಈವರೆಗೆ ರಜೆ ತೆಗೆದುಕೊಂಡಿದ್ದು ಬರೇ ನಾಲ್ಕು ಸಲ. ಅದೂ ಹುಷಾರಿಲ್ಲದೆ ಆಸ್ಪತ್ರೆಗೆ ದಾಖಲಾಗಿದ್ದಕ್ಕಾಗಿ!
ಐದಾರು ವರ್ಷಗಳ ನಂತರ ನಾನು ಇಡೀ ಸಂಡೇನ ಎಂಜಾಯ್‌ ಮಾಡಿದ್ದು ಮೊನ್ನೆ ಜುಲೈ 31ಕ್ಕೆ. ಎಲ್ಲೂ ಹೋಗಿಲ್ಲ ಮನೆಯಲ್ಲೇ ಇದ್ದೆ ಎಂದು ಸಿಂಗ್‌ ಹೇಳುತ್ತಾರೆ.ಹೌದು ಅವರ ರುಟೀನೇ ಹಾಗಿತ್ತು. ವಾರದ ದಿನಗಳಲ್ಲಿ ಚರ್ಚ್‌ ಬೀದಿಯ ಕೆರೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಗಣಿ ವರದಿ ಕೆಲಸ ಮಾಡುತ್ತಿದ್ದರೆ, ಶನಿವಾರ-ಭಾನುವಾರ ಗಣಿ ಕಡೆಗೆ ಪಯಣ.ಕೆಲವೊಮೆ ಯಾರಿಗೂ ಹೇಳದೆ- ಲೋಕಾಯುಕ್ತರಿಗೂ ಸಹ.
2009ರ ಅಕ್ಟೋಬರ್‌ 2
ಅವತ್ತು ಸರ್ಕಾರಿ ರಜೆ. ಎಲ್ಲರೂ ಗಾಂಧಿ ಜಯಂತಿ ನೆಪದಲ್ಲಿ ರಜೆ ಅನುಭವಿಸುತ್ತಿದ್ದರೆ ಸಿಂಗ್‌ ಓಬಳಾಪುರಂ ಕಡೆಗೆ ಹೊರಟರು. ರೆಡ್ಡಿ ಸಾಮ್ರಾಜ್ಯದ ಓಬಳಾಪುರಂಗೆ ಕಾಲಿಡುವುದೆಂದರೆ ಚಕ್ರವ್ಯೂಹಕ್ಕೆ ಹೆಜ್ಜೆ ಇಟ್ಟ ಹಾಗೆ. ಅದೇಕೋ ಏನೋ, ಯಾವುದಕ್ಕೂ ಅಂಜದ ಸಿಂಗ್‌ ಲೋಕಾಯುಕ್ತರಿಗೂ ಹೇಳದೆ ಹೊರಟುಬಿಟ್ಟರು. ಖಾಸಗಿ ಜೀಪಿನಲ್ಲಿ ರೆಡ್ಡಿಕೋಟೆ ಪ್ರವೇಶಿಸಿದರು. ಆ ಕೋಟೆಯ ಇಂಚಿಂಚಿನಲ್ಲಿ ಕಾವಲುಪಡೆ ಇರುತ್ತದೆ. ಹಾಗೆಯೇ, ಸಿಂಗ್‌ ಪ್ರವೇಶ ಮಾಹಿತಿ ಸಿಕ್ಕ ಕೂಡಲೇ ಬೆಂಗಳೂರು ರಿಜಿಸ್ಟ್ರೇಷನ್‌ನ ಮೂರು ಸ್ಕಾರ್ಪಿಯೋ ವಾಹನಗಳು ಫಾಲೋ ಮಾಡಿದವು.
ಆ ಗಣಿ ಭಾಗದ ಇಂಚಿಂಚೂ ಪರಿಚಯವಿದ್ದ ಸಿಂಗ್‌ ಹೆಚ್ಚೇನೂ ಹೆದರಲಿಲ್ಲ. ಕವಲು ಹಾದಿಯಲ್ಲಿ ಒಂದು ಕಡೆ ಜೀಪನ್ನು ನಿಲ್ಲಿಸಿ ಬೆಟ್ಟ ಏರತೊಡಗಿದರು. ಸ್ವಲ್ಪ ಹೊತ್ತು ಇವರ ಚಲನವಲನ ಗಮನಿಸಿದ ಸ್ಕಾರ್ಪಿಯೋ ಮಂದಿ ಹಿಂತಿರುಗಿದರು.
ಬಿರುಬಿಸಿಲಿನಲ್ಲಿ ಬೆಟ್ಟ ಏರಿದ ಸಿಂಗ್‌ಗೆ ಅಲ್ಲಿನ ಗಣಿಯೊಂದರ ಮ್ಯಾನೇಜರ್‌ ಚಂದ್ರಶೇಖರ್‌ ಎಂಬಾತ ಒಬ್ಬ ಸಿಕ್ಕಿದ. ತಾನು ಕೇಂದ್ರ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡ ಸಿಂಗ್‌, ಗಣಿ ಚಟುವಟಿಕೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯತೊಡಗಿದರು. ಫೊಟೋ ತೆಗೆಯಲು ಆತ ಅಡ್ಡಿಪಡಿಸಿ ಬೆದರಿಕೆ ಒಡ್ಡಿದ. ಆ  ಅಕ್ರಮ ಗಣಿಗಳ ಬಗ್ಗೆ ಒಂದೊಂದೇ ಅಸ್ತ್ರ ತೆಗೆದು ಮ್ಯಾನೇಜರ್‌ ಬಾಯಿ ಮುಚ್ಚಿಸಿದರು. ಇವರು ಸಿಬಿಐ ಅಧಿಕಾರಿ ಇರಬೇಕು ಎಂದು ಭಾವಿಸಿದ ಆತ ಸುಮನಾಗಿಬಿಟ್ಟ.
ಉರಿಬಿಸಿಲಿನಲ್ಲಿ ಬೆವರುತ್ತಲೇ, ಕುಡಿಯಲು ನೀರೂ ಇಲ್ಲದೆ ಸಂಜೆ ತನಕ ಸಮೀಕ್ಷೆ ನಡೆಸಿದ್ದರು ಸಿಂಗ್‌.
ಇನ್ನೊಂದು ಸಲ 2007ರ ಆಗಸ್ಟ್‌ 15ರಂದು ಆಂಧ್ರಪ್ರದೇಶ ಗಡಿಯಲ್ಲಿರುವ ಗಣಿಗೆ ಸಿಂಗ್‌ ಭೇಟಿ ನೀಡಿದರು. ಹತ್ತಾರು ಕಿಲೋ ಮೀಟರ್‌ ನಡೆದುಕೊಂಡು ಹೋಗುತ್ತಿರುವಾಗ ಅವರ ಎಡಗಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಕಾಲು ವಿಪರೀತ ಊದಿಕೊಂಡಿತು. ತಕ್ಷಣ ಬೆಂಗಳೂರಿಗೆ ಮರಳಿದರು. ಎರಡು ದಿನ ತರುವಾಯ ಲೋಕಾಯುಕ್ತರ ಕರೆಯಂತೆ ಮಂಗಳೂರು ಬಂದರು ವೀಕ್ಷಣೆಗೆ ಹೊರಟರು. ಅಲ್ಲಿಂದ ಮರಳುವಾಗ ಕಾಲು ಮತ್ತಷ್ಟು ಊದಿಕೊಂಡಿತು. ನಡೆದಾಡಲಾಗದ ಸ್ಥಿತಿ ಉಂಟಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಾದರು.
ಅಹರ್ನಿಶಿ ದುಡಿಮೆ
ಕಳೆದ ಹನ್ನೊಂದು ತಿಂಗಳು ಇಡೀ ಟೀಮ್‌ಗೆ ಅಹರ್ನಿಶಿ ದುಡಿಮೆ. ರಾತ್ರಿ 2 ಗಂಟೆಯವರೆಗೂ ಅಧಿಕಾರಿ, ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ತಕ್ಷಣ ಗಾಢ ನಿದ್ದೆ ಬರಲು ಸಿಂಗ್‌ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಎಲ್ಲರೂ ಅಷ್ಟೇ ವಿಪಿನ್‌, ಬಿಸ್ವಜಿತ್‌, ತಾಕತ್‌ಸಿಂಗ್‌ ಎಲ್ಲರೂ ನಡುರಾತ್ರಿ ತನಕ ಕೆಲಸ ಮಾಡುತ್ತಿದ್ದರು. ಈ ದೊಡ್ಡ ಜವಾಬ್ದಾರಿ ಮುಗಿದ ನಂತರವಷ್ಟೇ ಆರೂವರೆ ಗಂಟೆಗೆ ಮೊನ್ನೆ ಮನೆಗೆ ಹೋದೆ ಎಂದು ಉದಯಕುಮಾರ್‌ ಹೇಳುತ್ತಾರೆ.


ಕಲಿಗಳ ಪರಿಚಯ
ಸರ್‌ ದಯವಿಟ್ಟು ನಮನ್ನು ಪರಿಚಯ ಮಾಡಿಕೊಡಬೇಡಿ..
ಇದು ಐವರು ಅಧಿಕಾರಿಗಳು ಲೋಕಾಯುಕ್ತ ಸಂತೋಷ ಹೆಗಡೆಯವರಿಗೆ ಕೈ ಮುಗಿದು ಮಾಡಿಕೊಂಡ ಮನವಿ.
ಐತಿಹಾಸಿಕ ಗಣಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಕೂಡಲೇ ಲೋಕಾಯುಕ್ತರು ತಮ್ಮ  ಕಚೇರಿಯಲ್ಲಿ ಆಯೋಜಿಸಲು ಉದ್ದೇಶಿಸಿದ ಪತ್ರಿಕಾಗೋಷ್ಠಿಗೆ ಈ ಐವರನ್ನು ಆಹ್ವಾನಿಸಿದರು. ಈವರೆಗೆ ತೆರೆಮರೆಯಲ್ಲಿದ್ದವರನ್ನು ಪರಿಚಯಿಸುವುದು ಅವರ ಉದ್ದೇಶವಾಗಿತ್ತು. ಪ್ರಚಾರಕ್ಕೆ ಮುಖಕೊಡದೆ ಸದ್ದಿಲ್ಲದೆ ಕೆಲಸ ಮಾಡುವ ಅಧಿಕಾರಿಗಳಿಗೆ ಇದು ಮುಜುಗರ ತಂದಿದ್ದರಿಂದಲೇ ಲೋಕಾಯುಕ್ತರಿಗೆ ಮನವಿ ಮಾಡಿದ್ದರು.
ಹೌದು, ನಮಗೆ ಕೊಟ್ಟ ಕೆಲಸ ಮಾಡಿದ್ದೇವೆ. ಇದರಲ್ಲೇನಿದೆ ಸಾಧನೆ? ಎಂದು ವಿನಮ್ರತೆಯಿಂದ ಹೇಳುವ ಈ ಐವರು ಅಧಿಕಾರಿಗಳೇ ಲೋಕಾಯುಕ್ತ ವರದಿಯ ಬೆನ್ನಿಗಿದ್ದವರು. ಸರ್ಕಾರವನ್ನೇ ಅಲುಗಿಸಿಬಿಟ್ಟ 25,000 ಪುಟಗಳ ವರದಿ ತಯಾರಿಸುವುದು ಸಣ್ಣ ಕೆಲಸವೇನಲ್ಲ.
ಇಡೀ ಸರ್ಕಾರವನ್ನು, ಗಣಿ ಮಾಫಿಯಾವನ್ನು ಎದುರಿಗಿಟ್ಟುಕೊಂಡು ಕ್ಷಣ ಕ್ಷಣ ಆತಂಕದಲ್ಲೇ ಕಾಲ ದೂಡಿದ ಇವರ ಪರಿಚಯ ನಿಮಗಿದೆಯೇ?

ಉದಯ ವೀರ್‌ ಸಿಂಗ್‌
ಇಡೀ ಲೋಕಾಯುಕ್ತ ವರದಿಯ ಬೆನ್ನೆಲುಬು ಇವರು. ದಕ್ಷ ಹಾಗೂ ದಿಟ್ಟ ಅಧಿಕಾರಿ ಮೂಲತಃ ರಾಜಸ್ಥಾನದವರು. 2007ರಲ್ಲಿ ಲೋಕಾಯುಕ್ತರು ಇವರಿಗೆ ಗಣಿ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸೂಚಿಸಿದಂದಿನಿಂದ ವಿಶ್ರಾಂತಿ ಪಡೆದುಕೊಂಡೇ ಇಲ್ಲ. ಸ್ವತಃ ಫೀಲ್ಡಿಗಿಳಿಯುವ ದಂಡನಾಯಕ. ಅತ್ಯಂತ ಸರಳ ವ್ಯಕ್ತಿ.
1988ರಲ್ಲಿ ಐಎಫ್‌ಎಸ್‌ಗೆ ಸೇರಿದ ಅವರು 25 ವರ್ಷಗಳ ಅನುಭವದಲ್ಲಿ ನಾಲ್ಕಕ್ಕೂ ಹೆಚ್ಚು ಸಲ ಮಾರಣಾಂತಿಕ ದಾಳಿಗೆ ಒಳಗಾಗಿದ್ದಾರೆ. 44 ವರ್ಷದ ಈ ಕಲಿ ಟಿಂಬರ್‌ ಮಾಫಿಯಾ, ಮರಳು ಮಾಫಿಯಾ, ಗಣಿ ಮಾಫಿಯಾಗಳನ್ನು ಎದುರು ಹಾಕಿಕೊಂಡಿದ್ದಾರೆ. ಮೂಲತಃ ಕೃಷಿಕ ಕುಟುಂಬದ ಇವರು ಸಸ್ಯಶಾಸ್ತ್ರದಲ್ಲಿ ಪಿಎಚ್‌ಡಿ ಗಿಟ್ಟಿಸಿಕೊಂಡಿದ್ದು, 23 ಪ್ರಬಂಧಗಳನ್ನು ಮಂಡಿಸಿದ್ದಾರೆ. ಈಗಲೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾಗಿ ಬೆಂಗಳೂರಿನ ಕೆರೆಗಳಿಗೆ ತ್ಯಾಜ್ಯ ನೀರು ಬಿಡುವ ಮಾಫಿಯಾದ ವಿರುದ್ಧ ಸೆಣಸುತ್ತಿದ್ದಾರೆ.
ಲೋಕಾಯುಕ್ತ ತನಿಖೆ ನಡೆಸುತ್ತಿರುವಾಗಲೇ ಇವರನ್ನು ಎರಡೆರಡು ಬಾರಿ ವರ್ಗ ಮಾಡಲು ಸರ್ಕಾರ ಪ್ರಯತ್ನಿಸಿತ್ತು.

ಕೆ. ಉದಯಕುಮಾರ್‌
ಸದ್ಯ ಕೆರೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಉದಯಕುಮಾರ್‌ ಈ ಟೀಮಿನಲ್ಲಿರುವ ಕನ್ನಡಿಗ. ಮೂಲತಃ ಧಾರವಾಡದ ಇವರ ತಂದೆ ಮತ್ತು ತಾತ ಇಬ್ಬರೂ ಕೃಷಿ ವಿಜ್ಞಾನಿಗಳು. 58 ವರ್ಷದ ಉದಯಕುಮಾರ್‌ ತಮ ವಯಸ್ಸನ್ನು ಮರೆತು ಗಣಿಗುಂಟ ಸುತ್ತಾಡಿ ವರದಿ ಸಿದ್ಧಪಡಿಸಿದ್ದಾರೆ. ದಿನಕ್ಕೆ ಹತ್ತರಿಂದ 15 ಕಿಮೀ ನಡೆಯುವುದರಿಂದ ನನ್ನ ಆರೋಗ್ಯ ಸುಧಾರಿಸಿದೆ ಎಂದು ಹೇಳುತ್ತಾರೆ.
ಅರಣ್ಯ ಇಲಾಖೆಯ ವಿವಿಧ ಹುದ್ದೆಯಲ್ಲಿದ್ದ ಅವರು ಒಮೆಯೂ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ. ಅತ್ಯಂತ ಮೃದು ಸ್ವಭಾವದವರಾದರೂ ವೃತ್ತಿ ವಿಚಾರಕ್ಕೆ ಬಂದಾಗ ಇವರದು ಸದಾ ಗಟ್ಟಿ ನಿಲುವು. ಗಣಿಗಳ ಸಮೀಕ್ಷೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಬಿಸ್ವಜಿತ್‌ ಮಿಶ್ರಾ
ಬಳ್ಳಾರಿಯಲ್ಲಿ 10 ದಿನಗಳ ಕಾಲ ಡಿಸಿಎಫ್‌ ಆಗಿದ್ದ ಇವರು ತೆರಿಗೆ ಪಾವತಿಸದ ಗಣಿ ಕಂಪೆನಿಗಳ ಲೈಸೆನ್ಸ್‌ ನವೀಕರಣಕ್ಕೆ ನಿರಾಕರಿಸಿದ್ದರು. ಬರೇ ಹತ್ತು ದಿನಗಳಲ್ಲಿ 20 ಕೋಟಿ ರೂಪಾಯಿ ವಸೂಲಿ ಮಾಡಿದ್ದರು. ಆದರೆ ರೆಡ್ಡಿ ಸೋದರರ ಬಂಡಾಯದಿಂದ ಚಾಮರಾಜನಗರಕ್ಕೆ ವರ್ಗಗೊಂಡರು. ಅಲ್ಲಿಯೂ ಸುಮನೆ ಕೂರಲಿಲ್ಲ. ಆನೆ- ಮನುಷ್ಯನ ನಡುವಿನ ಸಂಘರ್ಷ ತಪ್ಪಿಸಲು 547 ಕಿಮೀ ಉದ್ದದ ಆನೆ ತಡೆ ಬೇಲಿ ನಿರ್ಮಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಪ್ರಸಕ್ತ ಇ- ಆಡಳಿತ ಇಲಾಖೆಯಲ್ಲಿರುವ ಇವರು ಮೂಲತಃ ಭೋಪಾಲ್‌ನವರು. ಟೆಲಿಕಮ್ಯುನಿಕೇಷನ್ಸ್‌ನಲ್ಲಿ ಬಿಇ ಪಡೆದಿರುವ ಇವರು 1998ರಲ್ಲಿ ಐಎಫ್‌ಎಸ್‌ ಸೇರಿದ್ದಾರೆ. ಲೋಕಾಯುಕ್ತ ತನಿಖೆ ವೇಳೆ ರಾಜ್ಯ ಹಾಗೂ ಹೊರರಾಜ್ಯಗಳ ಬಂದರು, ಸ್ಟಾಕ್‌ಯಾರ್ಡ್‌ಗಳಿಗೆ ತೆರಳಿ ಅಕ್ರಮ ರಫ್ತುಗಳ ಕುರಿತ ಮಾಹಿತಿ ಕಲೆ ಹಾಕಿದ್ದಾರೆ. ತನಿಖೆ ಸಂದರ್ಭ ಕಂಪ್ಯೂಟರ್‌ ಸಂಬಂಧಿಸಿದ ದಾಖಲೆಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಿಪಿನ್‌ ಸಿಂಗ್‌
ಮೂಲತಃ ಉತ್ತರ ಪ್ರದೇಶದ ವಿಪಿನ್‌ ಸಿಂಗ್‌ ಮಾಹಿತಿ ತಂತ್ರಜ್ಞಾನ ಪರಿಣಿತ. 1998ರಲ್ಲಿ ಐಎಫ್‌ಎಸ್‌ ಸೇರಿದ ಇವರು ಶಿರಸಿಯಲ್ಲಿ ಕೆಲಸ ಆರಂಭಿಸಿದರು. ನಂತರ ಬೀದರ್‌ನಲ್ಲಿ ಡಿಸಿಎಫ್‌ ಆಗಿ ಕೆಲಸ ಮಾಡಿದ್ದು, ಪ್ರಸಕ್ತ ಇ- ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ ಹರಿದುಬರುತ್ತಿದ್ದ ಹಣದ ಜಾಡು ಹಿಡಿದು ಹೋದ ಇವರು 4,000 ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿದ ಅಧಿಕಾರಿಗಳಲ್ಲಿ ಪ್ರಮುಖರು. ಪ್ರಚಾರದ ಹಿಂದೆ ಬೀಳದ ವಿಪಿನ್‌ ಈಗಲೇ ಸಾಕಷ್ಟು ಪ್ರಚಾರ ಸಿಕ್ಕಿದೆ ಎಂದು ಹೇಳುತ್ತಾರೆ.

ತಾಕತ್‌ ಸಿಂಗ್‌ರಣಾವತ್‌
ಈ ತಂಡದ ಅತ್ಯಂತ ಕಿರಿಯ ಅಧಿಕಾರಿ ಇವರು. ಐಎಫ್‌ಎಸ್‌ ಪ್ರೊಬೇಷನರಿ ಅವಧಿಯಲ್ಲಿರುವ ಇವರು ಬೀದರ್‌ ಡಿಸಿಎಫ್‌ ಆಗಿ ವರ್ಗವಾಗಿದ್ದಾರೆ. ಅಂಕೋಲಾದಲ್ಲಿ ಎಸಿಎಫ್‌ ಆಗಿದ್ದ ಇವರು ಬೇಲೆಕೇರಿ ದಾಳಿಯ ಸಂದರ್ಭ ಪ್ರಮುಖ ಪಾತ್ರ ವಹಿಸಿದ್ದರು. ಯುವ ಉತ್ಸಾಹಿ ಅಧಿಕಾರಿ ತಮ್ಮ ಕಿರು ಅವಧಿಯಲ್ಲೇ ಉತ್ತಮ ಹೆಸರು ಮಾಡಿದ್ದಾರೆ. ಮೂಲತಃ ರಾಜಾಸ್ಥಾನದವರು.
(ವಿಜಯnext ನಲ್ಲಿ ಪ್ರಕಟಿತ ಲೇಖನ)

Saturday, May 7, 2011

ಬೆಂಗಳೂರಲ್ಲಿ ಮಾತ್ರ ಇದು ಸಾಧ್ಯ!
Bangalored
ಕನಸಿನಲ್ಲಿ ಮಿಷೆಲ್‌ ಬಂದರೆ ಒಬಾಮಾ ಸಹಿಸಿಕೊಳ್ಳಬಹುದೇನೋ. ಆದರೆ ಈ ಪದ ಕೇಳಿಸಿಕೊಂಡಾಕ್ಷಣ ಮಾತ್ರ ಅಮೆರಿಕದ ಅಧ್ಯಕ್ಷ ನಿದ್ದೆಯಲ್ಲೂ ಬೆಚ್ಚಿಬಿದ್ದು ಎದ್ದುಬಿಡುತ್ತಾರೆ.. ಕಣ್ಣು ಬಿಟ್ಟರೆ ಕಾಣಿಸೋದು `ಬಫೆಲೋ'ದ ಕೆಂಪು ಕಣ್ಣು!
`ಬೆಂಗಳೂರು ಪಾಲಾಗುವುದು' ಎಂಬ ಅರ್ಥದ ಈ ಪದವನ್ನು ಮೊದಲಿಗೆ ಬಳಸಿದ್ದೇ ಅವರು. ಆದರೆ ಒಂದು ಸಂಗತಿ ಸ್ಪಷ್ಟ. ಈ ಪದ ಬರೇ ಅಮೆರಿಕದ ದುಸ್ವಪ್ನ ಎಂದು ನಾವೇನೂ ಸುಮ್ಮನಿರುವ ಹಾಗಿಲ್ಲ. ಯಾಕೆಂದರೆ, ಇಡೀ ಕರ್ನಾಟಕ ಇವತ್ತು Bangalored ಆಗಲು ಹೊರಟಿದೆ.
ಈ ಬೆಂಗಳೂರು ಜತೆ ಸಂಬಂಧ ಹೊಂದಿಲ್ಲದ ಒಂದೇ ಒಂದು ಮಿಡ್ಲ್‌ಕ್ಲಾಸ್‌ ಫ್ಯಾಮಿಲಿ ಸಿಕ್ಕಿದರೆ ಹೇಳಿ (ಹಾಗೇನಾದರೂ ಇದ್ದರೆ ಅವರೇ ನಿಜವಾದ ದೇಸಿಗಳು). ಹಳ್ಳಿ ತೊರೆದು ಮಹಾನಗರಿ ಸೇರುವ ಮಕ್ಕಳನ್ನು ಇಡೀ ಕುಟುಂಬವೇ ಫಾಲೋ ಮಾಡುತ್ತಿದೆ. ಇವತ್ತು ರಾಜ್ಯದ ಶೇ 16ರಷ್ಟು ಜನ ಬೆಂಗಳೂರಲ್ಲೇ ಇದ್ದಾರೆ. ಒಟ್ಟು ಬೆಂಗಳೂರು ಜಿಲ್ಲೆಯ ಜನಸಂಖ್ಯೆ ಕೋಟಿಗೆ ಐದೇ ಲಕ್ಷ ಕಡಿಮೆ.
ಬಿಳಿಕೆರೆಯ ಮೋಹ ಬಿಟ್ಟು ವೈಟ್‌ಫೀಲ್ಡ್‌ಗೆ ದಾರಿ ಹುಡುಕಿದ ಈ ಜನರು ಉ`ದಾರಿ'ಕರಣದ ಶಿಶುಗಳೇ? ಅಲ್ಲಾ, ಗತಿ ಹುಡುಕಿ ಸಿಟಿ ಸೇರಿದ ಜಾ`ಗತೀ'ಕರಣದ ಕೂಸುಗಳೇ? ಹಳ್ಳಿಗಳಿಗಂತೂ ಈಗ ನಿಜವಾಗಿ ಲಿ`ಬರ'ಲೈಸೇಷನ್‌!
ಇಷ್ಟಕ್ಕೂ ಬೆಂಗಳೂರಲ್ಲೇನಿದೆ ಅಂಥ ಸ್ಪೆಷಾಲಿಟಿ? ಸೆಳೆತ? ನೀವೇನಾದರೂ ಕಂಡಿರಾ?
ಎಲ್ಲೂ ಇಲ್ಲದ್ದು ಬೆಂಗಳೂರಲ್ಲಿ ಏನಿದೆ ಅಂತೀರಾ?...
ಇದು ಚಾಣಕ್ಯ ಅವರು ತೆಗೆದ ಫೊಟೋ.
ಅವರ ಹೆಚ್ಚಿನ ಚಿತ್ರಗಳಿಗೆ
http://chanakachanakya.blogspot.com
ಬ್ಲಾಗ್‌ ನೋಡಿ
  • ಎಲ್ಲ ಊರಲ್ಲಿ ನೀರಿಗೆ ಬಂದ ನೀರೆಯರೆಲ್ಲ ಜತೆ ಸೇರಿ ಹರಟೆ ಹೊಡದರೆ ಬೆಂಗಳೂರಲ್ಲಿ ಕಾರ್ಪೊರೇಷನ್‌ ಕಸದ ಗಾಡಿ ಬರುವಾಗ ಎಲ್ಲ ಗೃಹಿಣಿಯರು ಸೇರಿ ಡಿಸ್‌`ಕಸ' ಮಾಡುತ್ತಾರೆ.
  • ಎಲ್ಲ ಕಡೆ ಫುಟ್‌ಪಾತ್‌ನಲ್ಲಿ ಜನ ನಡೆದರೆ ಬೆಂಗಳೂರಲ್ಲಿ ಟೂ ವೀಲರ್‌ಗಳು ಓಡಾಡುತ್ತವೆ
  • ಬೇರೆ ಊರಲ್ಲಿ ಮಾಜಿ ಪ್ರಧಾನಿಗಳ ಹೆಸರಲ್ಲಿ ರೋಡ್‌, ಪ್ರತಿಮೆ ಇದ್ದರೆ ಇಲ್ಲಿ ಪೆಟ್ರೋಲ್‌ ಬಂಕ್‌ ಇದೆ.
  • ದಿನವೂ ಕಂಡರೂ ಒಮ್ಮೆಯೂ ನಗದ ನೇಬರ್‌ ಮದುವೆಗೆ ನಗುನಗುತ್ತಲೇ ಇನ್ವಿಟೇಷನ್‌ ಕೊಡುತ್ತಾರೆ- ಅದರಲ್ಲಿ `ನಿಮ್ಮ ಹೆಸರು ನಮ್ಮ ಮನದಲ್ಲಿ ಹಸಿರಾಗಿದೆ' ಎಂದು ಬರೆದಿರುತ್ತಾರೆ.
  • ಮನೆಯಲ್ಲಿ ಜ್ವರ ಬಂದಾಗ ಮಾತ್ರ ಬ್ರೆಡ್‌ ತಿನ್ನುವ ಐಟಿ ಹುಡುಗ ಆಫೀಸ್‌ ಕ್ಯಾಂಟೀನ್‌ನಲ್ಲಿ ಚಪ್ಪರಿಸಿಕೊಂಡು ಸ್ಯಾಂಡ್‌ವಿಚ್‌ ತಿನ್ನುತ್ತಾನೆ.
  • ಬೇರೆ ಊರಲ್ಲಿ ಚರಂಡಿಯಲ್ಲಿ ಕಸ ಹರಿದುಹೋದರೆ, ಬೆಂಗಳೂರಲ್ಲಿ ಮಕ್ಕಳೇ ಕೊಚ್ಚಿ ಹೋಗುತ್ತವೆ.
  • ಬೆಂಗಳೂರು ವೆದರ್‌ ಒಂಥರಾ ಹುಡುಗಿಯರ ಮೂಡ್‌ ಇದ್ದ ಹಾಗೆ. ಈಗ ಮಳೆ ಇದ್ದರೆ, ಅರ್ಧ ಗಂಟೆಯಲ್ಲಿ ಬಿಸಿಲು ಬರುತ್ತದೆ.
  • ಬೇರೆ ಸಿಟೀನಲ್ಲಿ ಬಸ್‌, ರೈಲಿನಲ್ಲಿ ರಷ್‌ ಇದ್ದರೆ, ಇಲ್ಲಿ ರೋಡಲ್ಲೇ ನೂಕುನುಗ್ಗಲು
  • ಗ್ರೀನ್‌ ಸಿಟಿ ಎಂಬ ಹೆಸರು ಪಡೆದ ಬೆಂಗಳೂರಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು- ಆಟೋಗಳು.
  • ಬೇರೆ ಊರಲ್ಲಿ ಆಂಬುಲೆನ್ಸ್‌ಗೆ ಜನ ದಾರಿ ಮಾಡಿಕೊಟ್ಟರೆ ನಮ್ಮೂರಲ್ಲಿ ಆಂಬುಲೆನ್ಸ್‌ ಹಿಂದೆಯೇ ಹೋಗುತ್ತಾರೆ.
  • ಎಲ್ಲ ಸಿಟಿಗೆ ಒಂದೇ ಹೆಸರು. ನಮ್ಮಲ್ಲಿ  ಸರ್ಕಾರಕ್ಕೆ ಇದು Bangalore  ಖಾಸಗಿ ಕಂಪೆನಿಗಳಿಗೆ Bengaluru
  • ಬೆಂಗಳೂರು ಮಂದಿ ಎದ್ದ ಹಾಗೆ ಪೇಪರ್‌ ನೋಡೋದು- ಇವತು ್ತಕರೆಂಟ್‌, ನೀರಿದ್ಯಾ ಅಂತ ತಿಳಿಯೋಕೆ.
  • 20x30 ಅಡಿ ಜಾಗದ ಮನೆಗೆ ಇಲ್ಲಿ ತ್ರಿಬಲ್‌ ಬೆಡ್ರೂಮ್‌ ಎನ್ನುತ್ತಾರೆ
  • ಸ್ಕೂಲಲ್ಲಿ ಮೈದಾನವೇ ಇಲ್ಲದ ಮಕ್ಕಳು ಸಂಜೆಯ ಹೊತ್ತು ಸೈಬರ್‌ ಕೆಫೆನಲ್ಲಿ  ಗೇಮ್ಸ್‌  `ನೆಟ್‌ ಪ್ರಾಕ್ಟೀಸ್‌' ಮಾಡುತ್ತಿರುತ್ತಾರೆ.
  • ಮೆಟ್ರೊ ರೈಲು ಆರಂಭದ ದಿನವನ್ನು ಮುಖ್ಯಮಂತ್ರಿ ಪ್ರಕಟಿಸುತ್ತಾರೆ. ಹದಿನೈದು ದಿನ ಕಳೆದ ನಂತರ ಇನ್ನೊಂದು ದಿನವನ್ನೂ ಪ್ರಕಟಿಸುತ್ತಾರೆ.
  • ಬೇರೆ ಊರಿನ ಪಾರ್ಕಿನಲ್ಲಿ ಪ್ರೇಮಿಗಳು, ಕಾಫಿ ಅಂಗಡಿಯಲ್ಲಿ ಸೋಮಾರಿಗಳು ಕೂತಿರುತ್ತಾರೆ. ಬೆಂಗಳೂರಲ್ಲಿ ಪಾರ್ಕಿನಲ್ಲಿ ಸೋಮಾರಿಗಳು ಮಲಗಿದರೆ, ಕೆಫೆ ಕಾಫಿನಲ್ಲಿ ಪ್ರೇಮಿಗಳು ಕೂತಿರುತ್ತಾರೆ.
  • ಅಲ್ಲಿ ಮರದ ಕೆಳಗೆ ವೆಹಿಕಲ್‌ ಪಾರ್ಕ್‌ ಮಾಡಿದರೆ, ಇಲ್ಲಿ ಮನೆ ಮುಂದೆ ವೆಹಿಕಲ್‌ ಪಾರ್ಕ್‌ ಮಾಡಲು ಮರ ಕಡಿಯುತ್ತಾರೆ.
  • ಬೇರೆ ಊರಲ್ಲಿ ಸ್ಕೂಲಿನಿಂದ ಬರುವ ಮಕ್ಕಳನ್ನು ಅಮ್ಮ ಕಾದರೆ, ಬೆಂಗಳೂರಲ್ಲಿ ಆಫೀಸಿನಿಂದ ತಡವಾಗಿ ಬರುವ ಅಪ್ಪ-ಅಮ್ಮನನ್ನು ಮಕ್ಕಳು ಕಾಯುತ್ತವೆ.
  • ಇಲ್ಲಿ  ಮೂತ್ರ ಮಾಡಬಾರದು ಎಂಬ ಬೋರ್ಡ್‌ ನೋಡಿದ ಕೂಡಲೇ ಬೆಂಗಳೂರು ಜನಕ್ಕೆ ನೆನಪಿಗೆ ಬರುವುದು ಮೂತ್ರವೇ.
  • ಬೆಂಗಳೂರು ಜನ ಶ್ರೀಮಂತರು. ಏಕೆಂದರೆ, ಪೆಟ್ರೊಲ್‌ಗೆ ಮೂರು ರೂಪಾಯಿ ಜಾಸ್ತಿ ಕೊಡುತ್ತಾರೆ.
(ಇದು ವಿಜಯnext ನಲ್ಲಿ ಪ್ರಕಟವಾದ ಬರಹ)

Sunday, April 10, 2011

ಅರೆ ಇಸ್ಕಿ!

ಬಾಳು ಬಾಲಾಯಿತು


ನನಗೂ ಕ್ರಿಕೆಟ್‌ಗೂ ಸಂಬಂಧ ಅಷ್ಟಕ್ಕಷ್ಟೆ. ಎಷ್ಟೋ ಸಲ ಈ ಮ್ಯಾಚ್‌ ನೋಡಲೇಬೇಕು ಅಂತ ಆಫೀಸಿಗೆ ರಜೆ ಹಾಕಿ ಕೂತದ್ದಿದೆ. ಉಹುಂ, ಕಾಲು ಗಂಟೆ ಕಳೆದ ಕೂಡಲೇ ಬೋರನ್ನಿಸಿಬಿಟ್ಟು, ಇದಕ್ಕಿಂತ ಆ ಆಫೀಸೇ ಬೆಸ್ಟ್‌ ಅಂತ ಅನ್ನಿಸಿದ್ದೂ ಇದೆ. ಕ್ರಿಕೆಟ್‌ ಹುಚ್ಚು ಬೆಳೆಸಿಕೊಂಡು ನಾನೂ ಮನುಷ್ಯನಾಗಬೇಕು ಅಂತ ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿದೆ. ಕಡೆಗೂ ನಾನು ಒಪ್ಪಿಕೊಂಡುಬಿಟ್ಟಿದ್ದೇನೆ- ನನಗೂ ಕ್ರಿಕೆಟ್‌ಗೂ ಆಗಿಬರೊಲ್ಲ ಅಂತ.
ನಮ ಮನೆಯಲ್ಲಿ ನನ್ನನ್ನು ಬಿಟ್ಟರೆ ಎಲ್ಲರಿಗೂ ಕ್ರಿಕೆಟ್ಟೇ ದೇವರು. ನನ್ನಾಕೆಗೋ ಕ್ರಿಕೆಟ್‌ ಎಂದರೆ ಮುಗೀತು. ಹೊಸ ಆಟಗಾರರಿಂದ ಹಿಡಿದು 70ರ ದಶಕದ ಆಟಗಾರರವರೆಗೂ ಎಲ್ಲರ ಹೆಸರು, ಅವರು ಮಾಡಿದ ಸ್ಕೋರ್‌, ಯಾವ ಮ್ಯಾಚ್‌ನಲ್ಲಿ ಯಾರು ಕ್ಯಾಚ್‌ ಹಿಡಿದರು, ಯಾರು ಬಿಟ್ಟಿದ್ದರಿಂದ ಯಾರು ಸೋತರು, ಯಾವ ಸ್ಪಿನ್ನಿಗೆ ಯಾವ ಶಾಟ್‌ ಬೇಕು ಹೀಗೆ ಎಲ್ಲವೂ ಕರಾತಲಮಲಕ. ನಂಗೆ ಅದೆಲ್ಲ ಬೇಜಾರಾಗೊಲ್ಲ. ಆದರೆ ನಾನು ಆಫೀಸಿನಿಂದ ಸುಸ್ತಾಗಿ ಮನೆಗೆ ಬಂದು ಬೆನ್ನು ನೋವು ಅಂತ ಮಲಗಿಕೊಂಡರೆ, ರೀ ಪಾಪ ಸಚಿನ್‌ಗೆ ಭುಜ ನೋವಂತೆ, ಅಫ್ರಿದಿಗೆ ಸೊಂಟ ನೋವಂತೆ ಕಣ್ರೀ ಅಂತಂದುಬಿಡುತ್ತಾಳೆ. ಯಾವ ಗಂಡಸು ತಾನೇ ಇಂಥದ್ದನ್ನು ಸಹಿಸಿಕೊಳ್ಳುತ್ತಾನೆ ಹೇಳಿ?
ವರ್ಲ್ಡ್‌ಕಪ್‌ ಆರಂಭವಾಯಿತೆಂದರೆ ನಮ ಮನೇಲಿ ಸ್ಟೌ, ಕುಕ್ಕರ್‌ಗಳಿಗೆಲ್ಲ ಖುಷಿ. ಒಂದ್ಸಲ ಹೀಗೆ ಆಯಿತು. ಲಾಸ್ಟ್‌ ವರ್ಲ್ಡ್‌ ಕಪ್‌ನಲ್ಲಿ ಡೇ ಅಂಡ್‌ ನೈಟ್‌ ಮ್ಯಾಚ್‌ ಮರುದಿನ ಬೆಳಿಗ್ಗೆ ನಾನು ಎಂದಿನಂತೆ ಏಳು ಗಂಟೆಗೆ ಎದ್ದೆ. ನನ್ನ ಇನ್‌ಬಾಕ್ಸ್‌ನಲ್ಲಿ ಒಂದು ಮೆಸೇಜ್‌ ಬಂದಿತ್ತು. ರಾತ್ರಿ ಮಲಗುವಾಗ ತಡವಾಗಿದೆ. ಅಡುಗೆ ಮನೇಲಿ ಪೆಪ್ಸಿನೂ, ಕುರುಕುರೆನೂ ಇಟ್ಟಿದ್ದೇನೆ. ಬ್ರೇಕ್‌ ಫಾಸ್ಟ್‌ ಮಾಡಿಕೊಂಡು ಆಫೀಸಿಗೆ ಹೋಗಿ. ಡೋಂಟ್‌ ಡಿಸ್ಟರ್ಬ್‌. ಗುಡ್‌ನೈಟ್‌ ಅಂತ. ಕ್ರಿಕೆಟ್‌ ಮಾತ್ರ ಅಲ್ಲ, ಈ ಜಾಹೀರಾತುಗಳೂ ನನ್ನ ಲೈಫನ್ನ ಹಾಳು ಮಾಡ್ತಾ ಇದೆ ಅಂತ ಅರ್ಥ ಆಗಿದ್ದು ನನಗೆ ಅವತ್ತೇ.
ನಾನು ಮದುವೆಯಾಗಿದ್ದು ವರ್ಲ್ಡ್‌ ಕಪ್‌ ಮುಗಿದ ನಂತರದ ತಿಂಗಳು. ಹಾಗಾಗಿ ಮತ್ತೆ ನಾಲ್ಕು ವರ್ಷ ಸಮಸ್ಯೆ ಇರಲಿಲ್ಲ. ಸಂಸಾರಕ್ಕೇನೂ ತೊಂದರೆಯಾಗಿಲ್ಲ. ಇಬ್ಬರು ಮಕ್ಕಳು. ಒಂದು ಗಂಡು, ಒಂದು ಹೆಣ್ಣು.
ನಾನಾಕೆಯ ಕ್ರಿಕೆಟ್‌ ಪ್ರೀತಿ ಬಗ್ಗೆ ಹೆಚ್ಚು ವಿರೋ ವ್ಯಕ್ತಪಡಿಸುವುದಿಲ್ಲ. ಏನೋ ಅಭಿಮಾನ ಎಂದು ಸುಮನಾಗಿಬಿಡುತ್ತೇನೆ. ಆದರೆ ರಾತ್ರಿ ಮ್ಯಾಚ್‌ ನೋಡಿ ಬೆಳಿಗ್ಗೆ ಎದ್ದು ಧೋನಿದ್ದು ಏನು ಆಟ ಕಣ್ರೀ ಅಂತಾಳಲ್ಲ, ಆಗ ಮನಸ್ಸಿಗೆ ತುಂಬಾ ಕುರ್‌ಕುರೆಯಾಗ್ತದೆ. ಒಮೊಮೆ ವಿನಾ ಕಾರಣ ನನ್ನನ್ನು ಕ್ರಿಕೆಟಿಗರಿಗೆ ಹೋಲಿಸುವಾಗಲಂತೂ ಮೈ ಉರಿದುಬಿಡುತ್ತದೆ. ಅದ್ಯಾಕ್ರೀ ಶ್ರೀಶಾಂತ್‌ ಥರ ಸಿಡುಕುತ್ತೀರಿ, ಸಚಿನ್‌ ಥರ ಉಗುರು ಕಚ್ಕೊತ್ತೀರಿ.. ಹೀಗೆ ನನ್ನನ್ನು ಅವರಿಗೆಲ್ಲ ಹೋಲಿಸಿಬಿಟ್ಟಾಗ ಶಾಂತವಾಗಿ ಹೇಳ್ತೀನಿ- ನೋಡು ಕಣೇ, ಹಾಗೆಲ್ಲ ಕಂಪೇರ್‌ ಮಾಡಬೇಡ. ನಾನು ನಾನೇ ಅಂತ. ತಕ್ಷಣ ಬ್ಯಾಟ್‌ ಮಾಡುತ್ತಾಳೆ- ಅಬ್ಬಾ, ಈಗ ದ್ರಾವಿಡ್‌ ಥರ ಕಾಣಿಸ್ತಾ ಇದ್ದೀರಿ, ಎಷ್ಟು ಕೂಲ್‌.. ಅಂತ!
ಎಷ್ಟೋ ಸಲ ರಾತ್ರಿ ಊಟಕ್ಕೂ ತತ್ವಾರ. ಏನೋ ಪಾಪ ಮ್ಯಾಚ್‌ ನೋಡ್ತಾ ಇದ್ದಾಳೆ ಅಂತ ಅಡುಗೆ ಮಾಡೋಕೆ ಹೋದ್ರೆ ಅಲೂ ್ಲಎಡವಟ್ಟು. ಬೇಳೆಯೋ, ಉಪ್ಪೋ ಇರುವುದೇ ಇಲ್ಲ. ಆಕೆಯ ಕ್ರಿಕೆಟ್‌ ಸಹವಾಸ- ನಮಗೆಲ್ಲ ಉಪವಾಸ ಎಷ್ಟೋ ದಿನ. ಕೇಳಿದ್ರೆ, ಕ್ರಿಕೆಟ್‌ ಎನ್ನೋದು ಧರ್ಮ; ವರ್ಲ್ಡ್‌ಕಪ್‌ ಎನ್ನೋದು ವ್ರತ ಎಂದು ಏನೇನೋ ಬಡಬಡಿಸುತ್ತಿದ್ದಳು.
ನನ್‌ ಬಾಳು ಒಂಥರಾ ಕ್ರಿಕೆಟ್‌ ಬಾಲ್‌ ಥರಾನೇ ಆಗೋಯಿತು. ಯಾರು ಗೆಲ್ತಾರೋ, ಯಾರು ಸೋಲ್ತಾರೋ ನಾನಂತೂ ಹೊಡೆಸಿಕೊಳ್ಳೋದೇ ಆಗೋಯಿತು.
ಇವಳ ಕ್ರಿಕೆಟ್‌ ಹುಚ್ಚು ಅತಿರೇಕಕ್ಕೆ ಹೋಗುತ್ತಿರುವುದನ್ನು ನೋಡಿ ಯಾವುದಾದರೂ ಸೈಕ್ರಿಯಾಟಿಸ್ಟ್‌ ಹತ್ತಿರ ಕರೆದುಕೊಂಡು ಹೋಗಬೇಕು ಎಂದು ತೀರ್ಮಾನಿಸಿದೆ. ಹಗಲು ರಾತ್ರಿ ಕ್ರಿಕೆಟ್‌ ಧ್ಯಾನ ನಿಲ್ಲಿಸದಿದ್ದರೆ ಮುಂದೆ ಅಪಾಯ ಇದೆ ಎಂದು ನನಗೆ ಗೊತ್ತಾಯಿತು. ಫೇಮಸ್ಸು ಡಾಕ್ಟು ನಳಿನಿ ಬಳಿ ಒಮೆ ಕರೆದುಕೊಂಡು ಹೋದೆ. ಥರೋ ಪರೀಕ್ಷೆ ಮಾಡಿ, ಪ್ರಾಬ್ಲಂ ಏನೂ ಇಲ್ಲ. ಸುಮನಿದ್ದು ಬಿಡಿ ಎಂದು ಸಲಹೆ ಕೊಟ್ಟರು. ನನ್ನ ಕಷ್ಟ ಅವರಿಗೆ ಎಲ್ಲಿ ಅರ್ಥವಾಗಬೇಕು? ಅವರು ಗಂಡಸ್ಸಾಗಿದ್ದು, ಇಂಥ ಹೆಂಡತಿ ಇದ್ರೆ ಗೊತ್ತಾಗ್ತ ಇತ್ತೇನೋ?
ಮೊದ ಮೊದಲು ಮಕ್ಕಳ ಜತೆ, ಪಕ್ಕದ ಮನೆ ರೀನಾ ಜತೆ ಕ್ರಿಕೆಟ್‌ ಬಗ್ಗೆ ಚರ್ಚೆ ಮಾಡುತ್ತಿದ್ದ ಈಕೆ ಈಗ ಫೋನಿನಲ್ಲೂ ಸ್ನೇಹಿತರ ಜತೆ ಕ್ರಿಕೆಟ್‌ ಬಗ್ಗೆ ಮಾತಾಡಲು ಶುರು ಮಾಡಿದಳು. ಒಂದು ದಿನ ಅರ್ಧಗಂಟೆಯಾದರೂ ಫೋನ್‌ ಇಟ್ಟಿರಲಿಲ್ಲ, ಬರೇ ಇದೇ ಡಿಸ್ಕಷನ್‌. . . ಏನು ಶಾಟ್‌ ಅದು, ಅವನ ಸ್ಕೇರ್‌ ಕಟ್‌ ಸೂಪರ್‌ ಆಗಿತ್ತು. ಈ ಸ್ಕೋರ್‌ನ ಚೇಸ್‌ ಮಾಡ್ಲಿಲ್ಲ ಅಂದ್ರೆ ಇನ್ನ್ಯಾಕ್ರೀ ಆಡಬೇಕು.. ಹೀಗೆ ಆಕ್ರೋಶಭರಿತ ಮಾತುಗಳು. ಫೋನಿಟ್ಟ ಮೇಲೆ ಕೇಳ್ದೆ- ಯಾರ ಜತೆಗೆ ಇಷ್ಟೊತ್ತು ಕ್ರಿಕೆಟ್‌ ಆಡ್ತಾ ಇದ್ದೆ ಅಂತ. ಅದೇ ಕಣ್ರೀ ಅವತ್ತು ಕರ್ಕೊಂಡು ಹೋಗಿದ್ರಲ್ಲ, ಸೈಕ್ರಿಯಾಟಿಸ್ಟ್‌ ಡಾ. ನಳಿನಿ ಅಂತ ಹೇಳಿದಾಗ ನಾನು ಇಂಡಿಯಾದ ಪಿಚ್ಚಾಗಿಬಿಟ್ಟೆ!
ಬಹುಶಃ ನನ್ನ ಹಾಗೆಯೇ ಎಷ್ಟು ಜನ ಹೀಗೆ ಒದ್ದಾಡುತ್ತಿರಬಹುದೋ ಎಂದು ನನಗೆ ಆಗಾಗ್ಗೆ ಕಾಡುತ್ತಿತ್ತು. ಈ ಬಗ್ಗೆ ಸಾಕಷ್ಟು ಸಲ ಗಂಭೀರವಾಗಿ (ಗೌತಮ್‌ ಗಂಭೀರವಾಗಿ ಅಲ್ಲ) ಯೋಚನೆ ಮಾಡಿದ್ದೆ. ಕ್ರಿಕೆಟ್‌ಪೀಡಕರ ಸಂಘವೊಂದನ್ನು ಕಟ್ಟುವ ಬಗ್ಗೆಯೂ ಯೋಚನೆ ಮಾಡಿದ್ದೆ. ಈ ಐಡಿಯಾವನ್ನು ನನ್ನ ಮಿತ್ರನೊಬ್ಬನಿಗೆ ಹೇಳಿದೆ.
ಅವನಿಗೋ ಆಶ್ಚರ್ಯ! ಅಲ್ಲ ಕಣಪ್ಪ, ಯಾವಾಗಲೂ ಡಕ್‌ಗೆ ಔಟ್‌ ಆಗೋನು ಸೆಂಚುರಿ ಬಾರಿಸಿದಂಗಾಯ್ತಲ್ಲೋ, ನಿನಗೂ ಐಡಿಯಾ ಬಂದಿದೆ ಅಂತ ಕುಟುಕಿದ. ಅದೆಲ್ಲ ಇರಲಿ, ಸಂಘ ಆರಂಭಿಸೋದ ಅಂತ ನೇರವಾಗಿ ಕೇಳ್ದೆ.
ನೋಡು, ಅದೆಲ್ಲ ಓಕೆ. ಸಂಘ ಸ್ಥಾಪಿಸಿ ನಿಮ ಹಿತಾಸಕ್ತಿ ಬಗ್ಗೆ ಹೋರಾಡೋದು ಎಲ್ಲ ಗುಡ್‌ ಐಡಿಯಾನೇ. ಆದರೆ ಒಂದು ಎಡವಟ್ಟು ಆಗಬೋದು..
ನೋಡು, ಸಾಮಾನ್ಯವಾಗಿ ಕ್ರಿಕೆಟ್‌ನ್ನು ಇಷ್ಟಪಡದ ಗಂಡಸರು ಭಾಳ ಕಡಿಮೆ. ಹೀಗಾಗಿ, ನಿನಗೆ ಏನೋ ಐಬಿದೆ ಅಂತ ಜನ ತಿಳ್ಕೊಂಡ್ರೆ ಎಂದು ನೇರವಾಗಿ ನನ್ನ ಪೌರುಷಕ್ಕೇ ಸವಾಲು ಹಾಕಿದ. ಮತ್ತೊಮೆ ಪಿಚ್ಚಾಗಿಬಿಟ್ಟೆ!
ಕ್ರಿಕೆಟ್‌ ವಿರುದ್ಧ ಆಡೋದಕ್ಕಿಂತ ಅಡ್ಜಸ್ಟ್‌ ಆಗಿಬಿಡೋದೇ ವಾಸಿ ಅಂತ ತೀರ್ಮಾನಕ್ಕೆ ಬಂದುಬಿಟ್ಟೆ.
ಇನ್ನೊಂದು ಸಲ, ನನ್ನ ಮಗ ಶಾಲೆಯಿಂದ ಬಂದೋನೇ ಬ್ಯಾಗನ್ನು ಮೂಲೆಗೆ ಎಸೆದು, ಇವರಿಗೆಲ್ಲರಿಕ್ಕಿಂತ ನಮ್‌ ಇಂಡಿಯಾ ಕ್ರಿಕೆಟ್‌ ಟೀಮೇ ಬೆಸ್ಟ್‌ ಅನ್ಸುತ್ತೆ ಅಂತ ಗೊಣಗೋಕೆ ಶುರು ಮಾಡಿದ.
ಅಪ್ಪನ ಕರುಳು ಚುರ್‌ಕ್‌ ಅಂತು. ಕೇಳ್ದೆ, ಏಕೋ, ಏನಾಯಿತೋ ಅಂತ.
ಅಲ್ಲ, ಮನೇಲಿ ನೀನು, ಅಮ ಹೊಡೀತೀರಿ. ಸ್ಕೂಲಲ್ಲಿ ಮೇಷ್ಟ್ರು ಹೊಡೀತಾರೆ. ಇವರೆಲ್ಲರಿಗಿಂತ ನಮ್‌ ಟೀಮೇ ಬೆಟರ್‌ ಅಲ್ವಾ? ಅಂತಂದ.
ಅಮನ ಕ್ರಿಕೆಟ್‌ ಜೀನ್‌ ಮಗನಿಗೂ ಟ್ರಾನ್ಸ್‌ಫರ್‌ ಆಗಿರುವುದು ಕನ್‌ಫರ್ಮ್‌ ಆಯಿತು.

Monday, October 11, 2010

ಆರ್ಟಿಐ ಸುಳಿವು
ಅಕ್ರಮದ 'ಅರಿವು'

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಇಂದಿಗೆ (ಅ.12) ಐದು ವರ್ಷ. ಐದು ವರ್ಷಗಳಲ್ಲಿ  ಆರ್ಟಿಐ ಕಾಯ್ದೆ ಅದೆಷ್ಟು ಸಮರ್ಪಕವಾಗಿ ಬಳಕೆಯಾಗಿದೆ ಎನ್ನುವ ಬಗ್ಗೆ ದೇಶದಲ್ಲಿ ಜಿಜ್ಞಾಸೆ ನಡೆಯುತ್ತಿದೆ. ಹಲವೆಡೆ ಅಧಿಕಾರಿಶಾಹಿಗಳು ಈ ಹಕ್ಕನ್ನು ದಮನ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಆರ್ಟಿಐ ಕಾರ್ಯಕರ್ತರ ಕೊಲೆಗೂ ಇಳಿದ ಪ್ರಕರಣಗಳು ನಡೆದಿವೆ. ಆರ್ಟಿಐ ಕಾಯ್ದೆಯನ್ನು ಬಳಸಿಕೊಂಡು ಜನಸಾಮಾನ್ಯರೊಬ್ಬರು ಎಂಥ ಬದಲಾವಣೆ ತರಬಹುದು ಎನ್ನಲು ಇಲ್ಲಿದೆ ನೋಡಿ ಒಂದು ಉದಾಹರಣೆ. ಇಂಥ ಬದಲಾವಣೆ ಎಲ್ಲೆಡೆ ನಡೆದರೆ? 

  •  ವೆಂಕಟರಾಯಪ್ಪ ಕಳೆದ ವರ್ಷ ತೀರಿಕೊಂಡಿದ್ದಾರೆ. ಆದರೆ ಮೊನ್ನೆ ಮೊನ್ನೆ ಅವರ ಹೆಸರಲ್ಲಿ ಇನ್ನಾರೋ ಸಣ್ಣ ರೈತರಿಗೆ ಸರಕಾರ ನೀಡುವ ಸಹಾಯಧನ ಪಡೆದಿದ್ದು ಬಹಿರಂಗವಾಗಿ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಭಾರಿ ಗದ್ದಲವಾಗಿದೆ.
  •   ಹೈಸ್ಕೂಲ್ ಮಕ್ಕಳೆಲ್ಲ ತಮಗೆ ಸ್ಕಾಲರ್ಶಿಪ್ ಬಂದಿದೆಯೇ ಎಂದು ಹೆಸರನ್ನು ಹುಡುಕುತ್ತಿದ್ದಾರೆ. ಎಷ್ಟೋ ಸಲ, ಸ್ಕಾಲರ್ಶಿಪ್ ಮಂಜೂರಾಗಿದ್ದರೂ ಅವರ ಕೈಗೆ ಸೇರಿರುವುದೇ ಇಲ್ಲ.  ಇನ್ನಾರೋ ಗುಳುಂ ಮಾಡಿರುತ್ತಾರೆ. ಈಗ ಸ್ಕಾಲರ್ಶಿಪ್ ಮಂಜೂರಾದ ವಿದ್ಯಾರ್ಥಿಗಳ ಪಟ್ಟಿಯೇ ಪ್ರಕಟವಾಗುತ್ತದೆ!
 ಇದೆಲ್ಲವೂ ಚಿಂತಾಮಣಿಯ ಜಿ.ವಿ. ಮಂಜುನಾಥ್ ಕರಾಮತ್ತು. ಆ ತಾಲ್ಲೂಕಿನಲ್ಲಿ ಅಕ್ರಮ ಬಹಿರಂಗ ಮಾಡಲು ಅವರೇನು ಒಂದು ದಿನದ ಮುದಲ್ವನ್' ಆಗಿಲ್ಲ.  ಮಾಹಿತಿ ಹಕ್ಕು ಕಾಯ್ದೆ ಮೂಲಕ ಎಲ್ಲವನ್ನೂ ಬಹಿರಂಗಪಡಿಸುತ್ತಿದ್ದಾರೆ. ಅದೂ ಒಂದು ಪತ್ರಿಕೆಯ ಮೂಲಕ.
ಭ್ರಷ್ಟತೆ ಕಂಡಾಗ ಸಿಡಿದೆದ್ದು  ಪ್ರತಿಭಟನೆ ಮಾಡಿಕೊಂಡಿದ್ದ ಮಂಜುನಾಥ್ ಎದುರಿಸಿದ ಆಪತ್ತು ಒಂದೆರಡಲ್ಲ. ಸಮಾನಮನಸ್ಕರನ್ನು ಒಗ್ಗೂಡಿಸಿಕೊಂಡು ವೇದಿಕೆ ರೂಪಿಸಿಯೂ ಹೋರಾಡಿದರು. ಅಲ್ಲೂ ಬೆದರಿಕೆ ಕರೆ, ಕ್ಷಣಕ್ಷಣಕ್ಕೆ ಅಪಾಯ...
ಕೊನೆಗೆ ಅವರು ರೂಪಿಸಿದ ಹೋರಾಟದ ಹೊಸ ಹಾದಿ ಫಲ ಕೊಟ್ಟಿತು.
`ಅರಿವು' ಎಂಬ ದ್ವೈಮಾಸಿಕ ಪತ್ರಿಕೆ ಆರಂಭಿಸಿದರು. ಚಿಂತಾಮಣಿ ತಾಲ್ಲೂಕಿಗೆ ಸೀಮಿತವಾದ ಈ ಪತ್ರಿಕೆಯಲ್ಲಿ ಸುದ್ದಿಗಳಿರುವುದಿಲ್ಲ, ಜಸ್ಟ್ ಮಾಹಿತಿಗಳು. ಮಾಹಿತಿ ಹಕ್ಕು ಕಾಯ್ದೆಯಡಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ  ಕಾರ್ಯಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುವ ಮಂಜುನಾಥ್ ಅದನ್ನು  ಪತ್ರಿಕೆಯಲ್ಲಿ ಪ್ರಕಟಿಸಲು ಆರಂಭಿಸಿದರು. ಇದರಿಂದ ತಾಲ್ಲೂಕಿನಲ್ಲಿ ನಡೆಯುವ ಹಲವು ಅಕ್ರಮಗಳು ಕಚೇರಿಯ ನಾಲ್ಕು ಗೋಡೆಯಿಂದ ಹೊರಗೆ ದಾಟಿ ಬಂದಿವೆ.
ಎರಡು ತಿಂಗಳಿಗೊಮ್ಮೆ ಹೊರಬರುವ ಈ ಪತ್ರಿಕೆಯಲ್ಲಿ ಪ್ರಕಟವಾಗುವ ಒಂದೊಂದು ಸುದ್ದಿಯೂ ರೋಚಕ, ಸೆನ್ಸೇಷನಲ್!  ಈ ಮೂಲಕ ಅವರು ಅಕ್ರಮದ ವಿರುದ್ಧ ಹೋರಾಡುತ್ತಿದ್ದಾರೆ. ಆ ಸ್ಯಾಂಪಲ್ಗಳನ್ನು ನೋಡಿ.
* ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಪಡೆದ ಮಾಹಿತಿ ಅನ್ವಯ 12ನೇ ಹಣಕಾಸು ಆಯೋಗದ ಅನುದಾನದ ಹಂಚಿಕೆಯನ್ನು ಪತ್ರಿಕೆಯಲ್ಲಿ ಮಂಜುನಾಥ್ ಪ್ರಕಟಿಸಿದರು. ಅದರ ಪ್ರಕಾರ 25 ಕಾಮಗಾರಿಗಳಿಗೆ 19 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಕ್ರಿಯಾಯೋಜನೆಯ ಪೂತರ್ಿ ವಿವರ ಪ್ರಕಟವಾಯಿತು.
-ಮರುದಿನ ತಾಪಂ ಕಚೇರಿಗೆ ಜನರೇ ಮುಗಿಬಿದ್ದರು, ನಮ್ಮೂರಿನಲ್ಲಿ ಅಂಗನವಾಡಿ ಕಟ್ಟಡವೇ ಇಲ್ಲ. ಅದರ ದುರಸ್ತಿಗೆ 78 ಸಾವಿರ ಕೊಟ್ಟಿದ್ದೀರಿ. ಈ ಹಣ ಏನು ಮಾಡುತ್ತೀರಿ ಎಂಬ ಪ್ರಶ್ನೆ. ಮತ್ತೊಬ್ಬರು- ನಮ್ಮೂರಿನ ಅಂಗನವಾಡಿಗೆ ಸುಣ್ಣ ಬಳಿಯಲು ಖಚರ್ಾಗಿದ್ದು 3,000 ರೂಪಾಯಿ. ಇಷ್ಟೊಂದು ದೊಡ್ಡ ಮೊತ್ತ ತೋರಿಸಿದ್ದೀರಿ.  ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆ.
ಸಿಡಿದೆದ್ದ ಜನರಿಗೆ ಹೆದರಿದ ತಾಲ್ಲೂಕು ಪಂಚಾಯಿತಿ ಅಂಥ ಕಾಮಗಾರಿಗಳನ್ನು ಕೈ ಬಿಟ್ಟರು, 13 ಲಕ್ಷ ರೂಪಾಯಿ ಉಳಿಯಿತು. ನುಂಗಣ್ಣರು ಬೆಪ್ಪಣ್ಣರಾದರು!
* ಸಣ್ಣ ರೈತರಿಗೆ ಸಕರ್ಾರ ನೀಡುವ 1,000 ರೂಪಾಯಿ ಸಹಾಯಧನ ಈ ವರ್ಷ ಯಾರ್ಯಾರಿಗೆ ಸಂದಿದೆ ಎನ್ನುವ ಮಾಹಿತಿಯನ್ನು ಅರಿವು ಪ್ರಕಟಿಸಿತು.
ಆ ಪಟ್ಟಿಯಲ್ಲಿ  ಮಾಜಿ ಶಾಸಕರ ಸಂಬಂಧಿ, ದೊಡ್ಡ ರೈತರ ಹೆಸರೂ ಇತ್ತು, ನಿಧನರಾದ ರೈತರ ಹೆಸರೂ ಇತ್ತು ಅರ್ಹ ರೈತರು ರೊಚ್ಚಿಗೆದ್ದರು.
* ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡ ವಿದ್ಯಾಥರ್ಿಗಳ ಪಟ್ಟಿ ಒಮ್ಮೆ ಪ್ರಕಟವಾಯಿತು.
ಅಚ್ಚರಿಯ ಸುರಿಮಳೆ. ಎಷ್ಟೊ ಮಂದಿ ವಿದ್ಯಾಥರ್ಿಗಳೇ ಅಲ್ಲ. ಫೋರ್ಜರಿ ಸಹಿಗೆಲ್ಲ ವಿದ್ಯಾಥರ್ಿ ವೇತನ. ಈ ಹಗರಣದ ವಿರುದ್ಧ ಈಗಲೂ ವಿದ್ಯಾರ್ಥಿಗಳೂ ಹೋರಾಟ ಮಾಡುತ್ತಿದ್ದಾರೆ.
* ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಬೇಕಾದರೆ ನಿಜವಾದ ಶುಲ್ಕ 1,926 ರೂಪಾಯಿ. ಆದರೆ ಚಿಂತಾಮಣಿಯ ಹಲವು ಗ್ಯಾಸ್ ಏಜೆನ್ಸಿಗಳಲ್ಲಿ 5,000ಕ್ಕೂ ಹೆಚ್ಚು ಹಣ ಪಡೆಯುತ್ತಿದ್ದರು, ಈ ಬಗ್ಗೆ ಹೋರಾಡಿದರು ಮಂಜುನಾಥ್. ದುಬಾರಿ ಹಣ ಕೊಟ್ಟು ಕೈ ಸುಟ್ಟುಕೊಂಡ ಜನರ ದಂಡೇ ಏಜೆನ್ಸಿ ಮುಂದೆ ಜಮಾಯಿಸಿತು, ಈಗ ಎಲ್ಲವೂ ಸರಿ ಹೋಗಿದೆ.
* ಪ್ರಕೃತಿ ವಿಕೋಪ ನಿಯಡಿ ಶೆಟ್ಟಿಹಳ್ಳಿಯಲ್ಲಿ ಜುಟ್ಟುವಿನ ಕೆರೆ ಏರಿ ದುರಸ್ತಿಗೆ 2 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಬಿತ್ತರವಾಯಿತು,
-ಮುಂದಿನ ಸಂಚಿಕೆಯಲ್ಲಿ ಆ ಊರಿನ ಓದುಗರು ಪತ್ರ ಬರೆದರು- ನಮ್ಮೂರಲ್ಲಿ ಆ ಹೆಸರಿನ ಕೆರೆಯೇ ಇಲ್ಲವಲ್ಲ ಎಂದು!
ಇವೆಲ್ಲ ಸ್ಯಾಂಪಲ್ಗಳಷ್ಟೇ.
ಮಂಜುನಾಥ್ ಬರೇ ಪತ್ರಿಕೆಯಲ್ಲಿ ಮಾಹಿತಿ ಹಾಕಿ ಸುಮ್ಮನೆ ಕೂರೋದಿಲ್ಲ. ಅನ್ಯಾಯದ ವಿರುದ್ಧ ಹೋರಾಡಲು ಜನರಿಗೆ ಮಾರ್ಗದರ್ಶನವನ್ನೂ ನೀಡುತ್ತಾರೆ. ಇದಕ್ಕಾಗಿ `ಮಾಹಿತಿ ಕೇಂದ್ರ'ವನ್ನೂ ಆರಂಭಿಸಿದ್ದಾರೆ.
ಈ ಪತ್ರಿಕೆಯ ಪ್ರಕಾಶಕರಾದ ಶ್ರೀನಿವಾಸಪುರದ ಪಿ.ಎಸ್.ರೆಡ್ಡಿ ಇಂಥ ಪತ್ರಿಕೆಯನ್ನು ಕೋಲಾರ ಜಿಲ್ಲಾ ಮಟ್ಟದಲ್ಲಿ  ತರಲು ಉದ್ದೇಶಿಸಿದ್ದಾರೆ.
`ಜನರಿಗೆ ತಿಳುವಳಿಕೆ ಬಂದು ಅವರೇ ಹೋರಾಡುವಂತಾಗಬೇಕು. ಹಾಗಾದಾಗ ಮಾತ್ರ ಭ್ರಷ್ಟಾಚಾರ ತೊಡೆಯಲು ಸಾಧ್ಯ' ಎನ್ನುತ್ತಾರೆ ಮಂಜುನಾಥ್. ಈಗ ಚಿಂತಾಮಣಿಯಲ್ಲಿ ಕೊಂಚ ಮಟ್ಟಿಗೆ ಪಾರದರ್ಶಕತೆ ಬಂದಿದೆ.



Wednesday, October 6, 2010

ಅಳುವುದು ಸುಲಭ; ಆಳುವುದು ಕಷ್ಟ!
-ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು
-ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ
ಇದು ಬಹುಶಃ  ರಾಜಕೀಯ ದುರಂತ ಇರಬೇಕು. ಒಬ್ಬ ವ್ಯಕ್ತಿಗೇ ಇಂಥ ಎರಡೆರಡು ವಿರೋಧಾಭಾಸದ `ಬಿರುದಾಂಕಿತ'!
ಸಮರ್ಥ ವಿರೋಧ ಪಕ್ಷದ ನಾಯಕನೊಬ್ಬ ಸಮರ್ಥ ಆಡಳಿತಗಾರನಾಗಲಾರ ಎನ್ನುವ ವಿಪರ್ಯಾಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ  ಸಾಬೀತುಪಡಿಸಿಬಿಟ್ಟಿದ್ದಾರೆ. ಅವರೊಬ್ಬ ದುರ್ಬಲ ಮುಖ್ಯಮಂತ್ರಿ ಎನ್ನುವುದನ್ನು  ವಿರೋಧಿಗಳು ಹೇಳಿದ್ದರೆ ಅದು ಸಹಜ ಟೀಕೆ ಎಂದು ತಳ್ಳಿಹಾಕಬಹುದಿತ್ತು. ಆದರೆ ಇದನ್ನು ಅವರ ಪಕ್ಷದವರೇ ಒಳಗೊಳಗೆ ಹೇಳಿಕೊಳ್ಳುತ್ತಿರುವುದರಿಂದ ಇದೊಂದು ನಿರ್ವಿವಾದ ಅಂಶ.
ಯಾವುದಾದರೂ ಸಂಕಟಕ್ಕೆ ಸಿಕ್ಕಿಹಾಕಿಕೊಂಡಾಗಲೆಲ್ಲ  `ಇದು ನನಗೆ ಇನ್ನೊಂದು ಅಗ್ನಿ ಪರೀಕ್ಷೆ' ಎಂದು ಹೇಳುತ್ತಿದ್ದ ಯಡಿಯೂರಪ್ಪ ತಮ್ಮ ರಾಜಕೀಯ ಪ್ರಬುದ್ಧತೆ ತೋರಲು ಅಡಿಗಡಿಗೆ ಸೋತರು. ಒಮ್ಮೆಯೂ ಅವರು ತನ್ನ  ಧೋರಣೆಯಲ್ಲಿ ಇರಬಹುದಾದ ಸಮಸ್ಯೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲೂ ಹೋಗಲಿಲ್ಲ. ವಿರೋಧ ಪಕ್ಷದ ಸ್ಥಾನಕ್ಕೆ ಹೇಗೆ ಭಾವುಕತೆ, ರೊಚ್ಚು ತುಂಬಿದರೋ ಅದನ್ನೇ ಮುಖ್ಯಮಂತ್ರಿ ಸೀಟಿಗೂ ಅಂಟಿಸಿದರೆ ಸಾಕು ಸುಲಭವಾಗಿ ಐದು ವರ್ಷ ಆಡಳಿತ ನಡೆಸಬಹುದು ಎಂದು ತಿಳಿದುಕೊಂಡಿದ್ದರೋ ಏನೋ. ಆದರೆ ಆ ಸೀಟು ಡಿಮಾಂಡ್‌ ಮಾಡುವುದೇ ಬೇರೆಯ ಸ್ವಭಾವವನ್ನು ಎಂಬುದನ್ನು  ಮರೆತೇಬಿಟ್ಟರು.ಕೆಟ್ಟದ್ದಾಗಿ ಅಳುವುದರಿಂದ ಸಿಂಪಥಿ ಗಳಿಸಬಹುದು; ಆದರೆ ಕೆಟ್ಟದ್ದಾಗಿ ಆಳುವುದರಿಂದ ಅಲ್ಲ;
ಬಿಡಿಸಿ ನಿವಾಳಿಸಿ ಎಸೆಯಬಹುದಾಗಿದ್ದ ಬಲೆಯಲ್ಲೂ  ಯಡಿಯೂರಪ್ಪ ಬಿದ್ದು  ತೊಳಲಾಡಿಬಿಟ್ಟರು. ಇಲ್ಲದಿದ್ದರೆ ಯಾವುದೇ ಬಲ ಇಲ್ಲದ ರೇಣುಕಾಚಾರ್ಯರಂಥ ಶಾಸಕರೊಬ್ಬರ ಮರ್ಜಿಗೆ ಸರ್ಕಾರ ಬೀಳಬೇಕಿತ್ತೇ? ಜಸ್ಟ್‌ ತಮಗೆ ಮಂತ್ರಿಗಿರಿ ಬೇಕೆನ್ನುವ ಕಾರಣದಿಂದ ರೆಸಾರ್ಟ್‌ಗಳಲ್ಲಿ ಅಡಗಿ ಕುಳಿತು ಅವರು ಸರ್ಕಾರವನ್ನು ಹೆದರಿಸುತ್ತಾರೆಂದರೆ... ಅದು ರೇಣುಕಾಚಾರ್ಯ ಅವರ ಸಾಮರ್ಥ್ಯವಂತೂ ಖಂಡಿತಾ ಅಲ್ಲ. ಮುಖ್ಯಮಂತ್ರಿ ದೌರ್ಬಲ್ಯವಲ್ಲವೇ?
2009ರಲ್ಲಿ  ನೆರೆ ಕಂಡ ಒಂದೇ ತಿಂಗಳಲ್ಲಿ  ರೆಡ್ಡಿ ಸೋದರರ ಬಂಡಾಯಕ್ಕೆ ಮುಖ್ಯಮಂತ್ರಿ ಕಡಿವಾಣ ಹಾಕಿದ್ದರೆ ಇಷ್ಟೊಂದು ಅಧ್ವಾನ ಎದುರಿಸುವ ಅಗತ್ಯವಂತೂ ಇರುತ್ತಿರಲಿಲ್ಲ. ಆದರೆ ಅಲ್ಲಿಂದ ಅವರು ಹೆಜ್ಜೆ ಹೆಜ್ಜೆಗೆ ಮಂಡಿಯೂರುತ್ತಲೇ ಬಂದರು. ಸ್ವಾಭಿಮಾನಕ್ಕಿಂತ ಅಧಿಕಾರದ ಕುರ್ಚಿ ದೊಡ್ಡದ್ದು ಎನ್ನುವ ತಮ್ಮ ಅಂತರಾಳದ ಅಭಿಮತವನ್ನು ಜಗಜ್ಜಾಹೀರು ಮಾಡಿಬಿಟ್ಟರು.
ಯಾವುದೇ ಒಬ್ಬ  ಸ್ಟ್ರಾಂಗ್‌ ಮುಖ್ಯಮಂತ್ರಿ ತಮ್ಮದೇ ಪಕ್ಷದ ಶಾಸಕರಿಗೆ ಅಂಜಿಕೊಂಡು ಕೂರುವ ಅಗತ್ಯ ಹೇಗೆ ಇಲ್ಲವೋ ಹಾಗೆಯೇ ಶಾಸಕರನ್ನು ಪೂರ್ಣ ಕಡೆಗಣಿಸಿ ದೌಲತ್ತು ಮಾಡುವುದೂ ಅಸಂಬದ್ಧ. ಇದೇ ಯಡಿಯೂರಪ್ಪ ಅವರ ದ್ವಂದ್ವ. ಒಂದು ಕಡೆ ತಮ್ಮ ಪಕ್ಷದ ಶಾಸಕರನ್ನು ಪೂರ್ಣ ಕಡೆಗಣಿಸಿ ನಿರಂಕುಶ ಪ್ರಭು ಆಗಿಬಿಟ್ಟರೆ, ಇನ್ನೊಂದು ಕಡೆ ಕೆಲವರ ಬ್ಲಾಕ್‌ಮೇಲ್‌ಗೆ ಬೆದರಿ ಅವರು ಹೇಳಿದ್ದಕ್ಕೆಲ್ಲ ಸಹಿ ಹಾಕಿಬಿಡುವ ಕಾರಕೂನರಾಗಿಬಿಟ್ಟರು. ಇದೆರಡನ್ನೂ ಸರಿದೂಗಿಸಿಕೊಂಡು ಹೋಗದೇ ಇದ್ದುದೇ ಇಂದು ಯಡಿಯೂರಪ್ಪ ಸಂಕಟಕ್ಕೆ ಕಾರಣ.
ಸಂಪುಟ ಪುನರ್ರಚನೆ ಬೇಡ ಎಂದು ಯಾರೋ ಶಾಸಕ ಬಹಿರಂಗ ಹೇಳಿಕೆ ನೀಡುತ್ತಾನೆ ಎಂದರೆ, ನನಗೆ ಮಂತ್ರಿಗಿರಿ ಕೊಡದಿದ್ದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದು ಇನ್ನೊಬ್ಬ ಶಾಸಕ ಕತ್ತಿ ಝಳಪಿಸುತ್ತಾನೆ ಎಂದರೆ, ಅದೆಲ್ಲಿಂದಲೋ ಕುಳಿತು ಈ ಸರ್ಕಾರ ನೆಟ್ಟಗಿಲ್ಲ ಎಂದು ಒಬ್ಬ ಶಾಸಕ ಮಾಧ್ಯಮಕ್ಕೆ ಬೈಟ್‌ ಕೊಡುತ್ತಾನೆ ಎಂದರೆ, ಅಧಿಕಾರಿ ಟ್ರಾನ್ಸ್‌ಫರ್‌ನ್ನು  ಇನ್ನೊಬ್ಬ ಮಂತ್ರಿ ಕ್ಯಾನ್ಸಲ್‌ ಮಾಡಿಸುತ್ತಾನೆ ಎಂದರೆ, ಭಾರಿ ಹಗರಣದಡಿ ಸಿಲುಕಿಯೂ ಬಚಾವಾಗುತ್ತಾರೆ ಎಂದರೆ... ಅದು ಮುಖ್ಯಮಂತ್ರಿಯ ಅಸಹಾಯಕತೆಯನ್ನಲ್ಲದೆ ಇನ್ನೇನನ್ನು ಹೇಳೀತು?
ಬಿಜೆಪಿ `ಸಹಿಷ್ಣುತೆ'
ಇನ್ನೊಂದು ದುರಂತ ಎಂದರೆ: ಶಿಸ್ತನ್ನು ಗುತ್ತಿಗೆಗೆ ಪಡೆದುಕೊಂಡಿದ್ದೇವೇನೋ ಎನ್ನುವ ಪೋಸ್‌ ಕೊಡುತ್ತಿದ್ದ ಬಿಜೆಪಿ ಯಡಿಯೂರಪ್ಪ ಸರ್ಕಾರದ ಇಷ್ಟೊಂದು ಅಶಿಸ್ತು- ಅಪಸ್ಯವಗಳನ್ನು  ಸಹಿಸಿಕೊಂಡಿವೆ. ಅಂದರೆ, ಸಂಘಟನೆ  `ಸಹಿಷ್ಣುತೆ'ಯನ್ನು ಮೈಗೂಡಿಸಿಕೊಂಡಿದೆ ಎಂದು ವ್ಯಾಖ್ಯಾನಿಸಿಕೊಳ್ಳಬಹುದೇ?
ಬಿಜೆಪಿಯಂಥ ಒಂದು ರಾಷ್ಟ್ರೀಯ ಪಕ್ಷ ಅನಾಯಕತ್ವಕ್ಕೆ ಈಡಾದರೆ ಏನಾಗಬಲ್ಲುದು ಎಂಬುದಕ್ಕೆ ಕರ್ನಾಟಕದ ಪೊಲಿಟಿಕ್ಸ್‌ಗಿಂತ ಬೇರೆ ನಿದರ್ಶನ ಏಕೆ ಬೇಕು? ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡ ಬಿಜೆಪಿ ಧುರೀಣರು ಇವತ್ತು ಅವರದ್ದೇ ಪಕ್ಷದ ಶಾಸಕರಿಂದ ಅದೇ ಹೆಬ್ಬಾಗಿಲು ಮುಚ್ಚುತ್ತಿರುವುದನ್ನು ನೋಡಿ ಸುಮ್ಮನೆ ಕೂತುಬಿಟ್ಟಿದ್ದಾರೆ.
ಆಪರೇಷನ್‌ ಕಮಲದಂಥ ಚಟುವಟಿಕೆಯನ್ನು  ಒಂದಷ್ಟು  ಜನ ಒಪ್ಪಿಕೊಳ್ಳಬಹುದು. ಆದರೆ, ಆ ಒಪ್ಪಿಗೆ ಲಕ್ಷ್ಮಣ ರೇಖೆಯನ್ನು  ದಾಟಿದಾಗಲೂ ಪಕ್ಷದ ಹೈಕಮಾಂಡ್‌ ಸುಮ್ಮನಿತ್ತು. ರೆಡ್ಡಿ ದೂಳು ಇಡೀ ಕರ್ನಾಟಕವನ್ನು ಮುಚ್ಚಿಕೊಂಡಾಗಲೂ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದರು. ಹಗರಣಗಳ ಮೇಲೆ ಹಗರಣ ಸುರಿದಾಗಲೂ ಶಿಸ್ತಿನ ಪಕ್ಷದ ಸುಮ್ಮನಿತ್ತು, ಭ್ರಷ್ಟಾಚಾರ ತಾರಕಕ್ಕೆ ಹೋದಾಗಲೂ ಬಿಜೆಪಿ ಗಪ್‌ಚುಪ್‌... ಆ ಮೌನಗಳೇ ಇವತ್ತು ಬಿಜೆಪಿಯನ್ನು ಇಷ್ಟೊಂದು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಜೆಪಿ ನಾಯಕರು ಈಗ ಕಾಂಗ್ರೆಸ್‌-ಜೆಡಿಎಸ್‌ ನಾಯಕರನ್ನು ಬಯ್ಯಬಹುದು. ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಈ ನಾಯಕರು ಕೈ ಹಾಕಿದ್ದೂ ನಿಜ. ಆದರೆ, ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದನ್ನು ಮರೆಮಾಚಲಾಗದು. ಬಿಜೆಪಿ ಮತ್ತು ಯಡಿಯೂರಪ್ಪ  ಈಗ ಕನ್ನಡಿ ಮುಂದೆ ನಿಂತುಕೊಂಡರೆ ರಾಜ್ಯಕ್ಕೆ ಒಳಿತು.

Friday, October 1, 2010

ಭೂ ಹಗರಣದ ಸುದ್ದಿ ಓದಿ ದಣಿದವರಿಗೆ ಈ ಜೋಕ್‌..
`ನಾನು ಮುಖ್ಯಮಂತ್ರಿಯಾಗಲಾ?
ಬ್ರಹ್ಮ ಸೃಷ್ಟಿ ಕಾರ್ಯ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಒಂದಷ್ಟು ಜನರ ಗುಂಪೊಂದು ಆತನ ಬಳಿ ಬಂತು.
`ಅರೆ ಏನಾಯಿತು ನಿಮಗೆಲ್ಲ. ನಿಮ್ಮನ್ನು ಅವತ್ತೇ ಮ್ಯಾನುಫ್ಯಾಕ್ಚರ್‌ ಮಾಡಿ ಕಳಿಸಿದೆನಲ್ಲ?'
ಆ ಗುಂಪು ಹೇಳಿತು- `ಕ್ವಾಲಿಟಿ ಚೆಕ್‌ನಲ್ಲಿ ರಿಜೆಕ್ಟ್‌ ಆಗಿ ಬಂದಿದ್ದೇವೆ ಸರ್‌. ಏನು ಮಾಡೋದು?'
ಬ್ರಹ್ಮನಿಗೆ  ಫುಲ್‌ ತಲೆಬಿಸಿ. ಮತ್ತೊಮ್ಮೆ ಎಲ್ಲರನ್ನೂ ಪರೀಕ್ಷಿಸಿದ.
`ಓಹೋ, ನಿಮಗೆ ಐರನ್‌ ಕಂಟೆಂಟ್‌ ಕೊರತೆ ಇದೆ. ಹೋಗಿ ನೀವು ಕಬ್ಬಿಣ ತಿಂದು ಬದುಕಿ' ಎಂದು ಕಳುಹಿಸಿಕೊಟ್ಟ. ಅವರು ಬಳ್ಳಾರಿ ಮಂತ್ರಿಗಳಾದರು.
'ಇದೊ ನಿಮಗೆ ಸೈಟ್‌ ಸಮಸ್ಯೆ ಇದ್ದ ಹಾಗಿದೆ. ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಮಾಡಿಕೊಂಡು ಬದಕ್ಕಳಿ' ಎಂದ. ಅವರೆಲ್ಲ  ಸೈಟ್‌ ವ್ಯಾಪಾರ ಮಾಡಿಕೊಂಡು ಬೆಂಗಳೂರಿನ ಮಂತ್ರಿಗಳಾದರು.
'ಅಯ್ಯಯ್ಯೋ, ನಿಮ್‌ ಮೇಲೆ ನಿಮಗೆ ಕಂಟ್ರೋಲ್‌ ಇರಲ್ಲವಲ್ಲ.. ನಿಮಗೇನು ಮಾಡ್ಲಿ...?' ಎಂದು ಬ್ರಹ್ಮ ಚಿಂತೆ ಮಾಡುವಷ್ಟರಲ್ಲೇ ಆ ವ್ಯಕ್ತಿ ಅಂದ- `ನಾನು ಮುಖ್ಯಮಂತ್ರಿಯಾಗಲಾ?' ಅಂತ.

Sunday, September 26, 2010

ಹನಿ... ಹನಿ... ಹನಿ...

ಬೆಂದಕಾಳೂರು ತೊಯ್ದು ತೊಪ್ಪೆಯಾಗಿದೆ. ಭೋರನೆ ಸುರಿದ ಮಳೆಯ ಸಂಕಷ್ಟದ ನಡುವೆಯೂ ಅಲ್ಲೊಂದು ಇಲ್ಲೊಂದು ಬಿದ್ದ ಹನಿ ಇಲ್ಲಿದೆ.
*    *    *   
ಅಂದು..
ಸರ್‌, ಕಾರ್ಪೊರೇಷನ್ನಾ?
ಹೌದ್ರೀ
ನಮನೇಲಿ ಮೂರು ದಿನದಿಂದ ನೀರಿಲ್ಲ.
ಇಂದು..
ಸರ್‌, ಕಾರ್ಪೋರೇಷನ್ನಾ
ಹೌದ್ರೀ
ನಮನೆ ತುಂಬಾ 3 ದಿನದಿಂದ ನೀರಿದೆ!
* * *   
ಹೀಗೊಂದು ಸುದ್ದಿ- ಬೆಂಗಳೂರಲ್ಲಿ ಭಾರಿ ಮಳೆ. "ಬಾವಿ'ಗಿಳಿದು ಮಹಾ"ಸಾಗರ'ದ ಪ್ರತಿಪಕ್ಷಗಳ ಧರಣಿ.
*    *    *
ಮನೆ ಮಾಲೀಕ : ಎಲ್ಲ ಅನುಕೂಲಾನೂ ಇದೆ. 24 ಅವರ್‌ ವಾಟರ್‌. ಚೆನ್ನಾಗಿ ಗಾಳಿ ಬರುತ್ತೆ. ಪಾರ್ಕಿಂಗ್‌ ನೋ ಪ್ರಾಬ್ಲಂ. ಅಕ್ಕಪಕ್ಕದವರು ತುಂಬಾ ಸೈಲೆಂಟ್‌. ಬಸ್‌ಗಳು ಬೇಕಷ್ಟಿವೆ. ಕೂಲ್‌ ಏರಿಯಾ.
ಬಾಡಿಗೆದಾರ: ಸರ್‌, ಮನೆ ತಂಕ ದೋಣಿ ಬರುತ್ತಾ?
*    *    *   
ಕೊನೆಗೂ "ಸಿಲಿಕಾನ್‌ ಕಣಿವೆ' ಹೆಸರು ಸಾರ್ಥಕವಾಯಿತು. ಈಗ "ಕಣಿವೆ' ತುಂಬಾ ನೀರು!
*    *    *
ದಾರಿಹೋಕ (ಅಡ್ರೆಸ್‌ ಚೀಟಿ ತೋರಿಸಿ) ಸರ್‌, ಸ್ವಲ್ಪ ಅಡ್ರೆಸ್‌ ಹೇಳ್ತೀರಾ?
"ಸೀದಾ ಹೋಗಿ. ಮುಂದೆ ಸಿಗ್ನಲ್‌ ಇರುತ್ತೆ. ಬರೀ ನೀರಿರುತ್ತೆ. ಗಾಬ್ರಿಯಾಗಬೇಡಿ. ಪ್ಯಾಂಟನ್ನು ಮಡಚಿ ಶೂವನ್ನು ಬಿಚ್ಚಿ, ನಿಧಾನವಾಗಿ ಮುಂದೆ ಹೋಗಿ. ಎಡಬಲದಲ್ಲಿ ನಿಂತ ಬಸ್ಸಿರುತ್ತೆ. ಅದಕ್ಕೆ ಹತ್ತಬೇಡಿ. ಅದು ಎಲ್ಲಿಗೂ ಹೋಗಲ್ಲ. ಮತ್ತೆ ಬಲಕ್ಕೆ ತಿರುಗಿ. ಈಗ ನೀರು ಆಳ ಜಾಸ್ತಿಯಾಗಿರುತ್ತೆ. ಈಜೋದೇ ಗತಿ. ಹಾಗೇನೇ ಎರಡೂವರೆ ಕಿಮೀ ಈಜಿ. ಅಲ್ಲಿ ಅಪಾರ್ಟ್‌ಮೆಂಟ್‌ನ 4ನೇ ಮಾಡಿ ಸಿಗುತ್ತೆ. ಅಲ್ಲಿ "ಇಳಿ'ಯಬೇಡಿ. ಮುಂದೆ ಹೋಗಿ, ಅಲ್ಲಿ ಇನ್ನೊಂದು ಸರ್ಕಲ್‌ ಸಿಗುತ್ತೆ. ಅಲ್ಲೇ ಎಡಕ್ಕೆ ಈಜಿ. ಅದೇ ಕ್ರಾಸ್‌ನಲ್ಲಿ ನಿಮ ಅಡ್ರೆಸ್‌ ಇದೆ. ಮನೆ ಇದ್ರೆ ಅದೃಷ್ಟ. ಗುಡ್‌ಲಕ್‌..!
*    *    *
ಬೆಂಗಳೂರಿನ ಹುಡುಗನ ಜತೆ ಮದುವೆ ಫಿಕ್ಸ್‌ ಆಗಿದೆ ಎಂದಾಕ್ಷಣ ಗುಲ್ಬರ್ಗ ಹುಡುಗಿ ನಾಚಿ "ನೀರಾದಳು"
*    *    *
ಹೀಗೊಂದು ಸುದ್ದಿ: ಜಲನಗರದಲ್ಲಿ ರಸ್ತೆಗಳೆಲ್ಲ ತುಂಬಿ ಹರಿಯುತ್ತಿರುವುದರಿಂದ ಎರಡು ಬೋಟ್‌ಗಳ ನಡುವೆ ಡಿಕ್ಕಿಯಾಗಿ ನಾಲ್ವರು ಮುಳುಗಿದ್ದಾರೆ.
(ಇದು 2006ರಲ್ಲಿ ಪ್ರಜಾವಾಣಿಯಲ್ಲಿ  ಪ್ರಕಟವಾದ ಲೇಖನ. ಈಗಲೂ ಪರಿಸ್ಥಿತಿ ಬದಲಾಗಿಲ್ಲ ಬಿಡಿ)

Friday, September 24, 2010

ಅರೆ ಇಸ್ಕಿ


ನಾವೂ ಬರ್ತೀವಿ ಕಲೆಕ್ಷನ್‌ಗೆ...
ಬಡ್ಡಿಕುಮಾರನ ಬಗ್ಗೆ  `ಇಂಟ್ರೆಸ್ಟ್‌ ' ಇದ್ದರೆ ಈ ಕತೆ ಓದಿ.
ದಿನಾ ತಿರುಗಾಟದಲ್ಲಿರುವ ಬಡ್ಡಿಕುಮಾರ ಅವತ್ತು ಸ್ವಲ್ಪ ಬೇಗ ಮನೆಗೆ ಬಂದ. ಬಡ್ಡಿ ಕಲೆಕ್ಷನ್‌ಗೆ ಹೋಗ್ತಾನೆ. ಎಷ್ಟೊತ್ತಿಗೋ ಮನೆಗೆ ಬರ್ತಾನೆ. ಅವನ ಕಾಲಲ್ಲಿ ಚಕ್ರ ಇದೆ ಅಂತ ಮನೆಯವರು ಹೇಳಿದರೆ, ಅವನ ಕೈಯಲ್ಲಿ ಚಕ್ರಬಡ್ಡಿ ಇದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದರು.  ತಿರುಗಾಟ ಆತನ ಹುಟ್ಟುಗುಣವಾದ್ದರಿಂದ ಮನೆಯಲ್ಲಿದ್ದವರೂ ಸಹ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅವತ್ತು ಹಾಗಾಗಲಿಲ್ಲ. ಮನೆಗೆ ಬಂದು ನೋಡುತ್ತಾನೆ.. ಎಲ್ಲ  ಉಲ್ಟಾ ಪಲ್ಟಾ.
ಹಾಲ್‌ನಲ್ಲಿ  ಕುರ್ಚಿ ಅಡಿಮೇಲಾಗಿದೆ; ಟೀಪಾಯಿ ಒಡೆದುಹೋಗಿದೆ. ಒಂದಷ್ಟು ಹುಡುಗರು ಅಲ್ಲೆಲ್ಲೋ ಮೂಲೆಯಲ್ಲಿ ಕೂತು ಮಾತಾಡುತ್ತಿದ್ದಾರೆ. ಗುಸು.. ಗುಸು...
ಕುಪಿತನಾದ ಬಡ್ಡಿಕುಮಾರನ ಪಿತ್ತ ನೆತ್ತಿಗೇರಿತು.
`ಯಾರೋ ಅದು, ನಾನೂ ಬಂದ್ರೂ ಸುಮ್ನೆ ಇದ್ದೀರಲ್ಲ?' ಅಂತ ಕಿರುಚಿದ
ಉಹುಂ ನೋ ರಿಪ್ಲೈ..
ಅವಿಭಕ್ತ ಕುಟುಂಬದಲ್ಲಿ ಬಡ್ಡಿಕುಮಾರನೇ ಹಿರೀಕ. ಈವರೆಗೆ ಅವನಿಗೆ ಇಂಥ ಅನುಭವ ಆಗಿರಲೇ ಇಲ್ಲ. ಮನೆಯಲ್ಲಿರುವ ಎಲ್ಲರೂ ತಲೆಬಾಗಿ ನಿಂತುಕೊಳ್ಳೋರು. ಈಗ ನೋಡಿದರೆ, ಒಬ್ಬೊಬ್ಬರ ಮುಖ ಒಂದೊಂದು ಕಡೆ.
ಮಧ್ಯಮನನ್ನು ಕರೆದು ಕೇಳಿದ `ಏನೋ ರಾಮಿ, ಗರ ಬಡ್ದಿದೆಯೇನು?
ತಲೆಬೋಳಿಸಿಕೊಂಡಿದ್ದ ರಾಮಿ ಸ್ಲೋ ಮೋಷನ್‌ನಲ್ಲಿ ಕತ್ತು ಎತ್ತಿದ. ತೆಲುಗು ಸೀರಿಯಲ್‌ಪ್ರಿಯನಾದ ಅತ ಸೀರಿಯಲ್‌ನಂತೆಯೇ ಮುಖದಲ್ಲಿ ಒಂದಷ್ಟು ಭಾವನೆ ತೋರಿಸಿ ಸ್ಲೋ ಆಗಿ ಬಾಯಿಬಿಟ್ಟ.. 'ಅಲ್ಲಾ, ನೀನ್ಯಾಕೋ ಒಂದಲ್ಲ ಒಂದು ತಪ್ಪು ಮಾಡ್ತಾ ಇದ್ದೀಯ. ಚಂದ್ರಣ್ಣ ಮೋಸ ಲೆಕ್ಕ ಮಾಡ್ದ ಅಂತ ಬಡ್ಡಿ ವ್ಯವಹಾರದಿಂದ ಕಿತ್ತು ಹಾಕಿದ್ದೀರಿ. ಈಗ ಮತ್ತೆ ಕರ್ಕಬಂದಿದ್ದೀರಿ. ನಾವೆಲ್ಲ ಗಲಾಟೆ ಮಾಡಿದ್ದಕ್ಕೆ ಶೀಬಾಕ್ಕನ ಕಿತ್ತು ಹಾಕಿದ್ರಿ. ಈಗ ಮತ್ತೆ ಪವರ್‌ ಕೊಡ್ತೀರಿ. ನೀವು ವ್ಯವ್ಹಾರದಾಗೆ ಲಾಸ್‌ ಆದಾಗ ಬಡ್ಡಿ ಕಲೆಕ್ಷನ್‌ ಮಾಡ್ಕೊಟ್ಟ ಶಿವೀಗೆ ಈಗ ವ್ಯವಹಾರಕ್ಕೆ ತಲೆ ಹಾಕ್ಬೇಡ ಅಂತೀರಿ. ಇದೆಲ್ಲಾ ಸರೀನಾ?'
ಬಡ್ಡಿಕುಮಾರನಿಗೆ ವಿಷಯ ಅರ್ಥವಾಗುತ್ತಾ ಬಂತು. ಬಡ್ಡಿ ಕಲೆಕ್ಷನ್‌ ಮಾಡೋಕೆ ಕುಮಾರ ಒಬ್ಬೊಬ್ಬರನ್ನು ಒಂದೊಂದು ಲೈನ್‌ಗೆ ಕಳಿಸ್ತಾನೆ. ಇದರಲ್ಲೇ ಯಡವಟ್ಟಾಗಿದ್ದು ಅನ್ನೋದು ಗೊತ್ತಾಯಿತು.
ರಾಮಿ ಹೇಳೋದ್ರಲ್ಲಿ ನಿಜಾ ಇದೆ. ನಾವು ಇನ್ವೆಸ್ಟ್‌ ಮಾಡಿಲ್ಲಾಂದ್ರೆ ನೀವು ಹೆಂಗೆ ವ್ಯವಹಾರ ಮಾಡ್ತಾ ಇದ್ರೀ? ಲಾಭ ಬಂತೂಂತ ನಮನ್ನೇ ಮರೆಯೋದಾ? ಅಲ್ಲೆಲ್ಲೋ ಮೂಲೆಯಲ್ಲಿದ್ದ ಜನ್ನು ಬಂದು ಪ್ರಶ್ನೆ ಒಗಾಯಿಸಿದ.
ಏನು ಉತ್ತರ ಕೊಡೋದು ಗೊತ್ತಾಗದೆ, ಬಡ್ಡಿಕುಮಾರ ತತ್ತರಿಸಿಬಿಟ್ಟ.
"ಅಲ್ಲ.. ಅಲ್ಲ.. ಹಂಗಲ್ಲ. ಇದರಲ್ಲಿ ನಂದೇನಿಲ್ಲ' ಅಂತ ತಡವರಿಸುತ್ತಿರುವಾಗಲೇ ಬ್ಲೇಡಪ್ಪ ಬಂದ. ಬಡ್ಡಿ ಕುಮಾರನ ಸೋದರ ಈ ಬ್ಲೇಡಪ್ಪ. ಒಮೊಮೆ ಇವರಿಬ್ಬರು ಜಗಳ ಮಾಡ್ತಾರೆ. ಲಾಭ ಸರಿ ಸಿಕ್ಕಾಗ ಜತೆಯಾಗಿಬಿಡುತ್ತಾರೆ. ಯಾವಾಗಲೂ ಬ್ಲೇಡ್‌ ಹಿಡಿದುಕೊಂಡೇ ಓಡಾಡುತ್ತಾನೆ. ನಾಲಿಗೆ ಕತ್ತರಿಸ್ತೀನಿ ಅಂತಾ ಇರ್ತಾನೆ. (ನಿಜವಾಗಿಯೂ ನಾಲಿಗೆ ಕತ್ತರಿಸಿದ್ದಾನೋ ಅಂತ ಗೊತ್ತಿಲ್ಲ)
"ನೋಡ್ರೀ, ನಿಮ್ದೇನು ಸಮಸ್ಯೆ? ವಾರ ವಾರ ನಿಮ್ಗೆ ಕಲೆಕ್ಷನ್‌ ಸರಿಯಾಗಿ ಸಿಕ್ತಾ ಇದೆಯೋ, ಇಲ್ವೋ ಹೇಳಿ. ಯಾರ್ನ ಕಲೆಕ್ಷನ್‌ಗೆ ಕಳ್ಸಬೇಕೂಂತ ನಾವು ಡಿಸೈಡ್‌ ಮಾಡ್ತೀವಿ. ಇಲ್ಲಾಂದ್ರೆ ನಿಮ್‌ ದಾರಿ ನೋಡ್ಕೊಳ್ಳಿ ಅಂತಂದುಬಿಟ್ಟ ಬ್ಲೇಡಪ್ಪ.
ಒಂದು ನಿಮಿಷ ಇಡೀ ಮನೆಯಲ್ಲಿ ಮೌನ. ಬ್ಲೇಡಪ್ಪನ ಮಾತಿಂದ ಹೆದರಿದ್ದು ಬಡ್ಡಿಕುಮಾರ. ಅಷ್ಟರಲ್ಲಿ, ಕಣ್ಣಲ್ಲಿ ನೀರುತುಂಬಿಕೊಂಡು ಅದರ ಮೇಲೆ ಕನ್ನಡಕ ಹಾಕಿಕೊಂಡು ಚೇಳೂರಪ್ಪ ಬಂದ. ಅದೇನ್ರಿ ಹಂಗಂತೀರಿ. ಸರಿ ಬಿಡಿ, ನಮ್‌ ದಾರಿ ನೋಡ್ಕೊತ್ತೀವಿ. ನಾನು ನಾಳೇನೇ ಮನೆ ಬಿಟ್ಟು ಹೋಗ್ತೀನಿ. ಅದೇನು ಮಾಡ್ಕತ್ತೀರೋ ಮಾಡ್ಕಳಿ. ನನ್ನ ಕಲೆಕ್ಷನ್‌ ಲೈನ್‌ಗೆ ಕಳಿಸ್ತೀರೋ ಇಲ್ವೊ ಹೇಳಿ ಅಂದ. ಇವನ ಜತೆ ಮುತ್ತಪ್ಪನೂ ಸೇರಿಕೊಂಡ.
ತಕ್ಷಣ ಚೇಳೂರಪ್ಪನ ಹೆಗಲ ಮೇಲೆ ಕೈ ಹಾಕಿದ ಕುಮಾರ ದೂರ ಕರ್ಕೊಂಡು ಹೋಗಿ ಅದೇನು ಕಲೆಕ್ಷನ್‌ ಮೋಡಿ ಮಾಡಿದ್ನೋ ಗೊತ್ತಿಲ್ಲ. ಚೇಳೂರಪ್ಪ ಸುಮನಾಗಿಬಿಟ್ಟ.
ಅಷ್ಟರಲ್ಲಿ ಸರವಿಂದನ ಮೊಬೈಲ್‌ಗೆ ಕಾಲೊಂದು ಬಂತು. ಜೋರಾಗಿ ಕೂಗಿ ಹೇಳಿದ ಆತ "ಓಹೋ.. ಇದು ಮನಂತಕುಮಾರನ ಫೋನ್‌. ಸುಮ್ನಿರಿ.. ಶ್‌..!
ಮೊಬೈಲ್‌ನ್ನು ಹಿಡಿದುಕೊಂಡು ಗತ್ತಿನಿಂದ ದೂರಕ್ಕೆ ಹೋಗಿ ಹುಂ, ಹುಂ.. ಹುಂ.. ಎನ್ನಲಾರಂಭಿಸಿದ.
ಬಡ್ಡಿಕುಮಾರನಿಗೂ ಮನಂತಕುಮಾರನಿಗೂ ಮೊದಲಿನಿಂದಲೂ ಆಗೊಲ್ಲ. ಬಡ್ಡಿ ಕಲೆಕ್ಷನ್‌ ಇನ್‌ಚಾರ್ಜ್‌ ತಗೋಬೇಕು ಅಂತ ಮನಂತ ಭಾಳಾನೇ ಟ್ರೈ ಮಾಡಿ ಸೋತಿದ್ದ.
ಮನೆಯಲ್ಲಿ ಇನ್ನೊಂದು ಡ್ರಾಮಾ ನಡೀತಾ ಇರೋದನ್ನ ನೋಡಿದ ಬಡ್ಡಿಕುಮಾರ ಹೇಳಿಯೇಬಿಟ್ಟ.. ನೋಡ್ರಿ, ಇದು ಫೈನಲ್‌. ನಾನು ಈಗ ಸರವಿಂದ, ಗೋಳಪ್ಪ, ಶಿವಿ ಇವರನ್ನ ಕಲೆಕ್ಷನ್‌ನಿಂದ ತೆಗೀತಾ ಇದ್ದೀನಿ. ಶೀಬಾ, ಸೀಮಣ್ಣ, ನಾಗಾಯಣ, ರಾಮಪ್ಪ, ಶಂಕರಪ್ಪ, ಪೋಥೇಲ ಇವರನ್ನು ಕಲೆಕ್ಷನ್‌ಗೆ ಸೇರಿಸಿಕೊಳ್ತಾ ಇದ್ದೀನಿ.. ಅಂತ ಹೇಳಿ ಹೊರಟೇ ಬಿಟ್ಟ.. ಕಲೆಕ್ಷನ್‌ಗೆ.
ಗೋಳಪ್ಪನ ಗೋಳು ಮನೆ ಇಡೀ ತುಂಬಿಕೊಂಡಿತು. ಅಯ್ಯಯ್ಯೋ.. "ನಂಗೆ ಮೋಸ ಮಾಡಿಬಿಟ್ರು, ನನ್‌ ಕಲೆಕ್ಷನ್‌ ಪೂರ್ತಿಯಾಗಲೇ ಇಲ್ಲ., ಅಷ್ಟು ಬೇಗ ಕಿತ್ತು ಹಾಕಿಬಿಟ್ರಲ್ಲ. ನಾನು ಆತಹತ್ಯೆ ಮಾಡ್ಕೊತ್ತೀನಿ" ಅಂತ ಹೇಳಿ ಮನೆಯಲ್ಲೆಲ್ಲ ಹೊರಳಾಡಿ ಕಣ್ಣೀರು ಹಾಕಿಬಿಟ್ಟ.
ಯಾವಾಗಲೂ ಗಲಾಟೆ ಮಾಡ್ತಾ ಇದ್ದ ಜನ್ನು, ಮುತ್ತಪ್ಪ ಸೈಲೆಂಟಾಗಿಬಿಟ್ರು.
ಬ್ಲೇಡಪ್ಪ ಎಲ್ಲರಿಗೂ ಕಲೆಕ್ಷನ್‌ ಬೀದಿ ಹಂಚಿದ. ಶೀಬಾಗೆ ಪ್ರತ್ಯೇಕವಾಗಿ ಕರ್ದು ಹೇಳ್ದ.. ನೋಡು- ನಿಂಗೆ ಕೊಟ್ಟ ಬೀದಿ ಬಿಟ್ಟು ಬೇರೆ ಕಡೆ ತಲೆಹಾಕಿದಿಯೋ ಹುಷಾರ್‌ ಅಂತ.
ಸೀಮಪ್ಪನ ಕರ್ದು ಬ್ಲೇಡಪ್ಪ.. ನಿಂಗೆ ಆಹಾರ ಬೀದಿ ಕೊಟ್ಟಿದ್ದೀನಿ. ಲಾಸ್ಟ್‌ ಟೈಮ್‌ ವೀರಪ್ಪನ ತರ ಮಾಡಬೇಡ.. ಅಂತ ಹೇಳಿ ನಕ್ಕ.
ಆ ನಗು ಇಡೀ ಮನೆಯಲ್ಲಿ ಪ್ರತಿಧ್ವನಿಸಿತು.
ಲೈನ್‌ ಸಿಗದವರು ಹ್ಯಾಪ್‌ ಮೋರೆ ಹಾಕಿಕೊಂಡು ಅಟ್‌ಲೀಸ್ಟ್‌ ನಮಗೆ ಕಲೆಕ್ಷನ್‌ಗೆ ಒಂದು ಕ್ರಾಸ್‌ ಆದ್ರೂ ಕೊಡ್ರೀಪ ಅಂತ ಗುಟ್ಟುಗುಟ್ಟಾಗಿ ಕೇಳಲು ಶುರುಮಾಡಿದರು. ಲೈನ್‌ ಸಿಕ್ಕವರೆಲ್ಲ ಬ್ಯಾಗ್‌ ಹೆಗಲೇರಿಸಿಕೊಂಡು ಹೊರಟೇಬಿಟ್ಟರು ಕಲೆಕ್ಷನ್‌ಗೆ!

Monday, September 20, 2010

ಉತ್ತರ ಕರ್ನಾಟಕದ ನೆರೆಗೆ ಒಂದು ವರ್ಷ..





ನೆರೆ- ಹೊರೆಯ ಹತ್ತು ಚಿತ್ರಗಳು

                                      ಭರವಸೆಯ ಕಂಗಳು                                                      
ರಾಯಚೂರಿನ ಕಟಕನೂರಿನ ಇದೇ ಶೆಡ್‌ ಒಂದು ವರ್ಷದಿಂದ ಇವರಿಗೆಲ್ಲ ಅರಮನೆ!
ಈ ಹುಡುಗನ ಕಾತರ ಕ್ಯಾಮೆರಾಕ್ಕೆ ಸೆರೆಯಾಗಿದ್ದು ಹೀಗೆ...

ಯಾರ್ಯಾರದೋ ಬದುಕಿನ ಬದುವಿನ ಮೇಲೆ ಸೊಟ್ಟ ಸೊಟ್ಟನೆ ಹರಿದು ಹೋದ ನದಿ ಈಗ ತಣ್ಣಗಾಗಿದ್ದಾಳೆ. ನನಗೇನೂ ಗೊತ್ತಿಲ್ಲ ಎಂಬಂತೆ ಸೈಲೆಂಟಾಗಿಬಿಟ್ಟಿದ್ದಾಳೆ. ಆದರೆ ಇವರೆಲ್ಲರ ಬದುಕೇ ಹರಿದು ಹೋಗಿದೆ. ಹಾಸಿಗೆ ಹಿಡಿದ ಅಮ್ಮನನ್ನು ಬಿಟ್ಟು ದುಡಿಯಲು ಹೋದ ಮಗ ಬರುವುದೇ ಎರಡು ತಿಂಗಳಿಗೊಮ್ಮೆ; ಶೀಟಿನ ಮನೆಯ ತೊಪ್ಪೆ ನೆಲಕ್ಕಿಂತಲೂ ಸುಂದರವಾದ ಜಗತ್ತೊಂದು ಹೊರಗೆ ಇದೆ ಎನ್ನುವ ಅರಿವು ಆ ಪುಟಾಣಿಗಿಲ್ಲ; ಬೆಂಗಳೂರಿಗೆ ಕೆಲಸಕ್ಕೆಂದು ಹೋದ ಗಂಡ ಮತ್ತೆ ಮನೆಗೆ ಬರುತ್ತಾನೆ ಎನ್ನುವ ನಂಬಿಕೆಯೂ ಕಂಕುಳಲ್ಲಿ ಹಸುಳೆ ಹೊತ್ತುಕೊಂಡ ಆಕೆಗೆ ಇಲ್ಲ; ನಾಳೆ ಕೆಲಸ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ; ರಾತ್ರಿ ಹೊಟ್ಟೆ ತುಂಬುತ್ತದೆ ಎಂಬ ಭರವಸೆಯೂ ಇಲ್ಲ . ಒಂದು ವರ್ಷದ ಇಂಥ ಛಿದ್ರ ಬದುಕಿನ ಇಲ್ಲಗಳ ಮಧ್ಯೆ ಉಳಿದಿರುವುದು ಬದುಕುವ ಛಲ ಮಾತ್ರ. ಒಡೆದುಹೋದ ಬದುವನ್ನು ಮತ್ತೆ ಕಟ್ಟಿ ಜೀವನದಲ್ಲಿ ಪಚ್ಚೆ ಕಾಣುವ ಕನಸು ಮಾತ್ರ. 
ಗದಗ, ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ  ಕಂಡುಬಂದ ಅಂಥ ಹರಿದ ಹತ್ತು ಚಿತ್ರಗಳು ಇಲ್ಲಿವೆ...

1
ಮುರಿದುಹೋದ ಹಗ್ಗದ ಮಂಚದಲ್ಲಿ ಮಲಗಿದ್ದ ರಾಧಾಗೆ ಇನ್ನೂ ವರ್ಷ ತುಂಬಿಲ್ಲ. ಬರ್ತ್‌ಡೇ ಯಾವಾಗ ಎಂದು ಕೇಳಿದರೆ ಅವಳ ಅಮ್ಮನ ಕಂಗಳಲ್ಲಿ ನೀರು ತುಂಬುತ್ತದೆ. ಮಲಪ್ರಭ ಇಡೀ ಊರಿಗೆ ಊರನ್ನೇ ನುಂಗಿದಾಗ ರಾಧಾ ಹುಟ್ಟಿದ್ದಳಂತೆ.
ಇಡೀ ಊರು ಉಳಿಯಲು ಚಡಪಡಿಸುತ್ತಿರಬೇಕಾದರೆ ಹುಲಿಯಮ್ಮಳ ಗರ್ಭದಲ್ಲಿ ಕದಲಿಕೆ. ಮಣ್ಣಿನ ಮನೆ ಕಣ್ಣಮುಂದೆ ಕರಗುತ್ತಿರುವಾಗಲೇ ಕರುಳಬಳ್ಳಿಗೆ ಜನುಮ ನೀಡಿದಳು. ನೀರಿನ ನಡುವೆಯೇ ಕಂದಮ್ಮನನ್ನು ಸೆರಗಲಿ ಕಾಪಿಕೊಂಡು ಬಂದ ಆಕೆ ಸೇರಿದ್ದು  ಬಿ.ಎಸ್‌.ಬೇಲೇರಿ ನಿರಾಶ್ರಿತರ ಕ್ಯಾಂಪಿಗೆ (ಗದಗದ ರೋಣ ತಾಲ್ಲೂಕು). ದಾರಿಯಲ್ಲಿ ಬರುವಾಗ ಕೂಸು ಒಮ್ಮೆ ನೀರಿಗೂ ಬಿದ್ದಿತ್ತು. ಅದೃಷ್ಟಕ್ಕೆ ರಾಧಾ ಬದುಕುಳಿದಳು.
ನೆರೆ ಬಂದದ್ದಕ್ಕೆ ಸಾಕ್ಷಿಯಾಗಿ ಕಣ್ಣಿನಲ್ಲೇ ಕತೆ ಹೇಳುವ ಪುಟಾಣಿಗೆ ಈಗ ಹನ್ನೊಂದು ತಿಂಗಳು. ಅಮ್ಮ- ಅಜ್ಜಿ ಹೆಸರುಕಾಳು ಹೊಲದಲ್ಲಿ ದುಡಿದು ಹೊಟ್ಟೆ ತುಂಬಿಸುತ್ತಾರೆ. ಹಾಗೆ ದುಡಿದರೆ ಸಂಜೆ ಊಟ; ಇಲ್ಲದಿದ್ದರೆ ಉಹುಂ ಏನೂ ಇಲ್ಲ. ರಾಧಾಳಂಥ ಎಲ್ಲ ಮಕ್ಕಳಿಗೂ ಇಲ್ಲಿ ಅದೇ ಗತಿ. ಇನ್ನು ಸ್ಕೂಲೆಲ್ಲಿ ಬಂತು?
ಈ ಸ್ಥಿತೀಲಿ ಹ್ಯಾಂಗ್ರೀ ಈ ಮಕ್ಕಳನ್ನು ಸಾಕೋದು? ಬೇಕಾದ್ರೆ ಒಯ್ಯಿರಿ.. ನೀವೇ ಸಾಕಿಕೊಳ್ಳಿ ಹೀಗಂತ ಕ್ಯಾಂಪಿಗೆ ಬರುವ ಪ್ಯಾಟಿ ಜನಕ್ಕೆಲ್ಲ ಬಿಸಲಮ್ಮ ಆಫರ್‌ ಇಡುತ್ತಾಳೆ!
ಅದಾವುದೂ ಗೊತ್ತಾಗದ ಮಗು ಸುಮ್ಮನೆ ನಕ್ಕುಬಿಡುತ್ತದೆ.

2
ಅಲ್ಲಿ ನಗುವ ಮಗು. ಇಲ್ಲೊಂದು ಕಡೆ ಮಗು ಸದಾ ಅಳುತ್ತಿರುತ್ತದೆ.
ಹಡೆದವ್ವ ಬಿಟ್ಟು ಕೆಲಸಕ್ಕೆ ದೂರಕ್ಕೆ ಹೋಗಿದ್ದಾಳೆ. ಎಲ್ಲಿ ಹೋಗಿದ್ದಾಳೋ ಯಾರಿಗೆ ಗೊತ್ತು? ಮಗುವಂತೂ ರಾಯಚೂರಿನ ತಲಮಾರಿ ಕ್ಯಾಂಪಿನಲ್ಲಿ ಅಳುತ್ತಿದೆ. ಆತನ ಹೆಸರು ಇಶಾಕ್‌. ವಯಸ್ಸು ಒಂದು ದಾಟಿದೆ.
ಇಡೀ ಕ್ಯಾಂಪಿನಲ್ಲಿ ಓರಗೆಯ ಮಕ್ಕಳೆಲ್ಲ ಆಡುತ್ತಿರಬೇಕಾದರೆ ಈತನಿಗೆ ಅದೆಲ್ಲ ಬೇಡ. ಮೈ ಇಡೀ ಕಜ್ಜಿ. ಎರಡೂ ಕೈಗಳಲ್ಲಿ ತುರಿಸಿಕೊಳ್ಳಲೂ ಟೈಮಿಲ್ಲ. ಯಾರಾದರೂ ಕೊಟ್ಟ ತಿಂಡಿ ತಿಂದುಕೊಂಡು ಕಾಲು ಕೆರೆದುಕೊಂಡು ಕೂತಿರುತ್ತಾನೆ. ತಲಮಾರಿಯ ಈ ಶೆಡ್‌ಗಳೇ ಹಾಗಿದೆ. ಸಂಜೆಯಾಯಿತೆಂದರೆ ಸೊಳ್ಳೆಗಳ ದಾಳಿ. ಹಾವು, ಚೇಳುಗಳಿಗೂ ಇದು ನಿರಾಶ್ರಿತರ ಶಿಬಿರ! `ನಮಗೋ ದಿನಾ ಚೇಳು ಹಿಡಿದು ಕೊಲ್ಲುವುದೇ ಕೆಲಸ' ಎಂದು ಈರಮ್ಮ ಭುಸುಗುಡುತ್ತಾಳೆ.
ಆದರೇನು, ಅಲ್ಲಿನ ಜನನಾಯಕರಿಗೆ ಈ ಕೋಪದ ಭುಸ್‌ ತಟ್ಟುವುದೇ ಇಲ್ಲ.

3
ಹಾವು-ಚೇಳುಗಳ ಸಿಟ್ಟೆಲ್ಲ ಸಾಮಾನ್ಯ ಜನರ ಮೇಲೆಯೇ!
ಈ ಅಮಾಯಕರ ಮೇಲೆ ಆ ಹಾವಿಗೆ ಏನು ಕೋಪವೋ? ತಲಮಾರಿಯ ಅಭದ್ರ ಶೆಡ್‌ಗೆ ನುಸುಳಿಬಂದ ಹಾವೊಂದು ತಾಯಪ್ಪನನ್ನು ಕಚ್ಚಿ ಹಾಗೆಯೇ ಹರಿದುಹೋಯಿತು. ಈಗ ಆತನ ಹೆಂಡತಿ ಬಸಮ್ಮ, ಮಗಳು ಭೀಮೇಶಮ್ಮ, ಮಗ ನಾಗರಾಜ್‌ ಅನಾಥರು. ಜಲಪ್ರಳಯದಿಂದ ಪಾರಾಗಿ ಸಾವನ್ನು ಗೆದ್ದೇಬಿಟ್ಟೆವಲ್ಲ ಎಂದು ನಿಡಿದು ಉಸಿರು ಬಿಟ್ಟ ಜನರೇ ಈಗ ಉಸಿರು  ಹಿಡಿದು ನಿಂತುಕೊಂಡಿದ್ದಾರೆ! ಅದೇ ತಾಯಪ್ಪನ ಪಕ್ಕದ ಮನೆಯಲ್ಲಿ ಅನಾಥವಾಗಿ ಮಲಗಿರುವ ನರಸಿಂಹುಡು ಊಟ ಬಿಟ್ಟಿದ್ದಾನೆ. ಆಸ್ತಮಾದಿಂದ ಉಸಿರಾಡಲೂ ಆಗುತ್ತಿಲ್ಲ. ಮೂಳೆಗಳ ಹಂದರವಾದ ಆತ ಅಷ್ಟೇ ದುರ್ಬಲವಾದ ಶೆಡ್‌ನ ನೆಲದ ಮೇಲೆ ಬಿದ್ದಿದ್ದಾನೆ.. ತಮ್ಮನನ್ನು ಉಳಿಸಿಕೊಡಿ ಎಂದು ಅವನ ಅಣ್ಣ ಬಂದವರಲ್ಲೆಲ್ಲ ಗೋಗರೆಯುತ್ತಿದ್ದಾನೆ.
ಕ್ಯಾಂಪಿನ ಮೇಲೆ ಗಿಡುಗ ಸುತ್ತುತ್ತಲೇ ಇದೆ!

4
ಇಷ್ಟಾದರೂ ಒಂದಷ್ಟು ಕನಸುಗಳನ್ನು ಹಿಡಿಯಲ್ಲಿಟ್ಟುಕೊಂಡು ಸಂಧ್ಯಾಜೀವಿಗಳು ಆಕಾಶ ನೋಡುತ್ತಿವೆ. ಮತ್ತೆ ತಮ್ಮ ಜೀವಿತ ಕಾಲದಲ್ಲಿ ಅಂಥ ಮಳೆ ಬರಲಾರದು ಎನ್ನುವ ನಂಬಿಕೆ ಅವರದು. 
ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ಶೆಡ್‌ನಲ್ಲಿ ಇಂಥ ಹಲವು ಜೀವಗಳು ಹೊಸಬದುಕಿಗೆ ಹಪಹಪಿಸುತ್ತಿವೆ. ಮಹ್ಮದ್‌ ಆಲಿ ಹಾಸಿಗೆ ಬಿಟ್ಟೇಳುವ ಸ್ಥಿತಿಯಲ್ಲಿಲ್ಲ. ಆದರೂ, ಹೊರಗಿನವರು ಯಾರೇ ಬರಲಿ. ನಮ್ಮ ಜನರಿಗೆ ಸೌಕರ್ಯ ಕೊಡಿ. ನೀರಿಲ್ಲ, ಕರೆಂಟಿಲ್ಲ, ಮನೆ ಇಲ್ಲ ಎಂದು ಸಮಸ್ಯೆಗಳನ್ನು ಪಟ್ಟಿ ಮಾಡಿಕೊಡುತ್ತಾರೆ.
ಈ ಕ್ಯಾಂಪಿಗೆ ಯಾರೇ ಹೋಗಲಿ, ಸಾಲುಸಾಲಾಗಿ ವೃದ್ಧಜೀವಗಳೆಲ್ಲ ಬಂದು ನಿಂತುಕೊಂಡುಬಿಡುತ್ತಾರೆ. ಹೊಸ ಬದುಕು ಕಾಣಬಹುದೋ ಎನ್ನುವ ನಿರೀಕ್ಷೆ. ಪರಿಹಾರ ಸಿಗಬಹುದೋ ಎಂಬ ಆಸೆ. ಅದು ಕಣ್ಣು ಕಾಣದ ನರಸಮ್ಮಳ ಕಣ್ಣಲ್ಲೂ ಇದೆ. ವೃದ್ಧರಾದ ಶಬ್ದಾಜ್‌ ಆಲಿ ಸಾಬ್‌, ಕಾಯಮ್ಮ, ಕರಿತಾಯಮ್ಮ, ಬಳ್ಳಾರಿಗೆ ಕೆಲಸಕ್ಕೆ ಹೋಗಿರುವ ಮಕ್ಕಳ ಕಾತರದಲ್ಲಿರುವ ಬುರುಗಮ್ಮ, ಎಲ್ಲೋ ಹೋದ ಗಂಡನನ್ನು ಕಾಯುತ್ತಿರುವ ಬಾಲೆ ತಿಮ್ಮವ್ವರ ಕಣ್ಣಲ್ಲೂ ಅದೇ ಆಸೆ.

5
ಕಾಯುವುದು ಈ ಸಂತ್ರಸ್ತರ ದಿನಚರಿ. ಅದು ಪರಿಹಾರಕ್ಕೆ ಇರಬಹುದು, ದೂರದೂರಿಗೆ ಕೆಲಸಕ್ಕೆ ಹೋದ ತಮ್ಮವರಿಗೆ ಇರಬಹುದು ಇಲ್ಲವೇ ನಾಳೆ ಸಿಗುವ ಮನೆಗೇ ಇರಬಹುದು..ಅಥವಾ ಆ ರಾತ್ರಿಯ ಊಟಕ್ಕೂ ಆಗಿರಬಹುದು.
ಸುರಪುರದ ಬಂಡೊಳ್ಳಿಯ ಶಿವಮ್ಮಳ ವಯಸ್ಸು ಈಗ 18. ರೋಣದ ಬಿಎಸ್‌ ಬೇಲೇರಿಯ ಹುಲಿಯಮ್ಮಳ ವಯಸ್ಸು ಈಗ 19. ಇಬ್ಬರ ಕಂಕುಳಲ್ಲೂ ಮಕ್ಕಳಿವೆ. ಆದರೆ ಗಂಡ ಎಲ್ಲಿ ಎಂದು ಕೇಳಿದರೆ ಉತ್ತರ ಇಲ್ಲ. ಕೆಲಸಕ್ಕೆ ಹೋಗಿದ್ದಾನೋ, ಕೆಲಸ ಮುಗಿಸಿ ಹೋಗಿದ್ದಾನೋ? ಸ್ವಲ್ಪ ವಿಚಾರಿಸಿದರೆ ಸಾಕು- ಎಲ್ಲಾದರೂ ಗಂಡನ ಮನೆ ಸಿಕ್ರೆ ನೋಡ್ತೀರಾ? ಎಂದು ಅತ್ಯಂತ ಡೀಸೆಂಟಾಗಿ ಹಿರಿಯರು ಮಾತುಕತೆಗೆ ರೆಡಿಯಾಗುತ್ತಾರೆ.
ಪರಿಹಾರದ ಪಟ್ಟೀನಲ್ಲೂ ನಮ್ಮ ಹೆಸರಿಲ್ಲ. ಮನೆಯಂತೂ ಕನಸೇ, ನಾವೇನು ಮಾಡೋದು? ಎಂದು ಹೇಳುವ ಶಿವಮ್ಮ ಮಗುವಿನತ್ತ ನೋಡುತ್ತಾಳೆ. ಅಲ್ಲೇ ಕೈಯಲ್ಲಿ ಗುಂಡಿ ತೋಡುತ್ತಿದ್ದ ಆ ಮಗು ನೀರು ಸಿಗುತ್ತದೋ ಎಂದು ನೋಡುತ್ತದೆ. ಇಲ್ಲಿ, ಅಮ್ಮನ ಕಂಗಳಲ್ಲಿ ನೀರು ಬರುತ್ತದೆ.


 6
ಕಣ್ತುಂಬಾ ನೀರನ್ನೇ ತುಂಬಿಕೊಂಡ ಚೀಕಲಪರ್ವಿ ಶೆಡ್‌ನ ಹೆಣ್ಣುಮಕ್ಕಳು ರಾತ್ರಿ ಮಲಗುವ ಮೊದಲು ನೀರು ಕುಡಿಯೋದಿಲ್ಲ!
ನಡುರಾತ್ರಿ ಮೂತ್ರಬಂದರೆ ಹೊರಗೆ ಹೋಗಲು ಭಯ. ಕರೆಂಟಿಲ್ಲ. ಪಕ್ಕದಲ್ಲಿ ಶೌಚಾಲಯವಿಲ್ಲ. ನೀರಿಂದಲೇ ಈ ಗತಿ ಬಂದರೂ ಈಗ ಕುಡಿಯಲಿಕ್ಕೇ ಸರಿಯಾದ ನೀರಿಲ್ಲ.
ಒಂದೊಂದು ಊರಿನ ಒಂದೊಂದು ಶೆಡ್‌ಗಳು ಒಂದೊಂದು ಕತೆ ಹೇಳುತ್ತವೆ. ಟಿನ್‌ನ ಈ ಶೀಟ್‌ನಲ್ಲಿ ಕೆಲವೆಡೆ ಮನೆ ಕಟ್ಟಿಕೊಂಡಿದ್ದರೆ, ಇನ್ನು ಕೆಲವೆಡೆ ಬಿದಿರಿನ ತಟ್ಟಿಯೇ ಗೋಡೆ.  ಚೀಕಲಪರ್ವಿಯಲ್ಲಿ ಬಿದಿರಿನ ಶೀಟ್‌ ಹಾರಿಹೋಗಿದೆ. ರಾಯಚೂರಿನ ಕಟಕನೂರಿನ ಮನೆಗಳು ಬೆಂಗಳೂರಿನ ಧನಿಕರ ಮನೆಯ ನಾಯಿಗೂಡಿಗಿಂತಲೂ ಚಿಕ್ಕದ್ದು. ಇಲ್ಲಿ ಅಡುಗೆ ಮನೆ ಹೊರಗೆ! ಕೆಸರಿನ ನಡುವೆ ಈ ಜನರ ಅರಮನೆ!
ಬಾಗಲಕೋಟೆ ಸಿಮೆಂಟ್‌ನಲ್ಲಿ ಮನೆ ಕಟ್ಟುವ ಕನಸು ಕಟ್ಟಿಕೊಂಡಿದ್ದರು. ಅದೇ ಜನ ಈಗ ಅದೇ ಬಾಗಲಕೋಟೆ ಸಿಮೆಂಟ್‌ನ ಚೀಲದಲ್ಲಿ ಮನೆ ಕಟ್ಟಿಕೊಂಡಿದ್ದಾರೆ!
ಮಳೆಗಾಳಿ ಬಂದರೆ ಕಣ್ಮುಚ್ಚಿಕೊಂಡು ದೇವರ ಚಿತ್ರ ಇರುವ ಕ್ಯಾಲೆಂಡರ್‌ಗೆ ನಮಿಸುತ್ತಾರೆ. ಕಣ್ಣು ತೆರೆದಾಗ ಶೆಡ್‌ ಬೀಳದೇ ಇದ್ದರೆ ಇನ್ನೊಮ್ಮೆ ನಮಿಸುತ್ತಾರೆ!

7   
ಊರಿಡೀ ಕೊಚ್ಚಿ ಹೋದರೂ ಎಷ್ಟೋ ಕಡೆ ದೇವಸ್ಥಾನಗಳು ಮಾತ್ರ ಭದ್ರವಾಗಿವೆ. ಈಗಲೂ ಈ ದೇವರೇ ಈ ಜನರಿಗೆ ಹೊಸ ಭರವಸೆ ತುಂಬಿಸಬಲ್ಲವರು.
ಮಹಾಮಳೆಗೆ ಕಟಕನೂರು ಪೂರಾ ಕೊಚ್ಚಿಹೋಗಿತ್ತು. ಆದರೆ ಅಲ್ಲಿನ ಆಂಜನೇಯ ದೇವಸ್ಥಾನ ಮಾತ್ರ ಉಹುಂ ಜಪ್ಪೆನ್ನಲಿಲ್ಲ. ಮನೆಕಳಕೊಂಡ ಜನರೆಲ್ಲ ಈಗ ಊರ ಹೊರವಲಯದಲ್ಲಿ  ತಾತ್ಕಾಲಿಕ ಶೆಡ್‌ನಲ್ಲಿದ್ದಾರೆ. ಊರೊಳಗೆ ಆಂಜನೇಯ ಮಾತ್ರ. ಆದರೆ ಜನ ದೇವರನ್ನು ಬಿಟ್ಟಿಲ್ಲ. ಪ್ರತಿ ಶನಿವಾರ ಇಲ್ಲಿ  ಈಗಲೂ ಪೂಜೆ ನಡೆಯುತ್ತದೆ. ಜನ ಸೇರುತ್ತಾರೆ. ಆ ಊರಿನ ಹಿರಿ ಮಹಿಳೆ ಹನುಮಕ್ಕ ದಿನಕ್ಕೆ ಎರಡು ಸಲ ಬಂದು ಪೂಜೆ ಮಾಡಿ ಹೋಗುತ್ತಾಳೆ. ನನಗೆ ಮನೆ ಕೊಡಿಸಪ್ಪ ಎಂದು ಮೊರೆ ಇಡುತ್ತಾಳೆ. ದೇವರಿಗೆ ಕೇಳಿಸಿತೋ ಇಲ್ಲವೋ ಗೊತ್ತಿಲ್ಲ. ಅಧಿಕಾರಿಗಳಿಗೆ ಮಾತ್ರ ಈ ಮೊರೆ ಕೇಳಿಸಿಲ್ಲ. ಹನುಮಕ್ಕನ ಇಬ್ಬರು ಗಂಡುಮಕ್ಕಳಿಗೆ ಮನೆ ಕೊಡಿಸಿದ್ದಾರೆ. ಹನುಮಕ್ಕನಿಗೆ ಇಲ್ಲ.
ಆದರೂ ನಂಬಿಕೆ ಬಿಟ್ಟಿಲ್ಲ. ನಂಗೆ ಪ್ರತ್ಯೇಕ ಮನೆ ಕೊಡಿಸು ಎಂದು ದಿನವೂ ಮೊರೆ ಇಡುತ್ತಾಳೆ.
ರೋಣ ತಾಲ್ಲೂಕಿನ ಬಸರೋಡಿನಲ್ಲಿ ಹಲವರಿಗೆ ದೇವಳವೇ ಮನೆ. ಅಲ್ಲಿನ ಸಿದ್ದರಾಮ ಹಿರೇಮಠ ಬಿದ್ದುಹೋದ ತಮ್ಮ ಮನೆ ರಿಪೇರಿ ಮಾಡಿಸುವ ಬದಲು ದೇವರಿಗೆ.. ಅಲ್ಲಲ್ಲ.. ದೇವಸ್ಥಾನಕ್ಕೇ ಮೊರೆ ಹೋಗಿದ್ದಾನೆ!

8
ತಗಡು ಶೀಟಿನ ಮನೆಗೊಂದು ನಂಬರ್‌ : 1019
ಕಳೆದ ಮೂರು ವರ್ಷಗಳಿಂದ ನರಗುಂದದ ಹಾಡಗೋಳಿಯ ನಿವಾಸಿ ಅಂಗವಿಕಲ ನಿಂಗಪ್ಪ ವಲಚಾದಿ ವಿಳಾಸ ಇದು. 1997ರಲ್ಲಿ  ಮಲಪ್ರಭ ನದಿ ಪ್ರವಾಹ ಬಂದು ಮನೆ ಮಠ ಕಳೆದುಕೊಂಡ ಇವರಿಗೆ ಸರ್ಕಾರ ಟೆಂಪರರಿ ಶೆಡ್‌ ಕಟ್ಟಿಸಿಕೊಟ್ಟಿತ್ತು. ಈಗಲೂ ಅಲ್ಲೇ ಇದ್ದಾರೆ. ನಿರ್ಮಾಣವಾಗುತ್ತಿರುವ ಹೊಸಮನೆ ಕನಸು ಕಟ್ಟಿಕೊಂಡಿದ್ದಾರೆ.
ನದಿ ಬದುಕಿಗೂ ಇವರಿಗೂ ಜನುಮ ಜನುಮದ ಸಂಬಂಧ. `15 ವರ್ಷ ಹಿಂದೆ ಹಿಂದೆ ಗಂಗವ್ವ ಬಂದಿದ್ಳು. ಒಂದಷ್ಟು ದಿನ ಊರ ಹೊರ ಹೋಗಿ ಮತ್ತೆ ವಾಪಾಸಾಗುತ್ತಿದ್ದೊ. 2007ರಲ್ಲಿ  ಮತ್ತೆ ನೆರೆ ಬಂದಾಗ ಸರ್ಕಾರ ಶೆಡ್‌ ಹಾಕಿಸಿಕೊಟ್ಟಿತು' ಎಂದು ಬಾಳವ್ವ ತಲವಾರಿ ಹೇಳುವಾಗ ಆಕೆಯ ಕಣ್ಣಲ್ಲಿ ಹೊಸಮನೆಯೇ ನಲಿಯುತ್ತಿತ್ತು. ನೋಡ್ರೀ, ನಮಗೆ ಅಗ್ದೀ ತ್ರಾಸ ಐತೆ. ಅಳು ಬರ್ತೈತಿ ಆದರೂ ನಕ್ಕೊಂಡೇ ಹೇಳ್ತೀವಿ ಎನ್ನುತ್ತಲೇ ಆಕೆ ನೋವನ್ನೆಲ್ಲ ಬಿಚ್ಚಿಡುತ್ತಾಳೆ.

9
ಗೋಡೆಯಲ್ಲಿ ದೊಡ್ಡ ಬಿರುಕಿದೆ. ಇತ್ತಲಿಂದ ನೋಡಿದರೆ ಆಚೆಗಿನ ಬೆಳಕು ಕಾಣಿಸುತ್ತದೆ. ಕಂಬ ಸೊಟ್ಟಗಾಗಿದೆ. ಒಂದು ಗಾಳಿ ಮಳೆ ಬಂದರೆ ಮನೆ ಜೀಕುತ್ತದೆ. ಮನೆಸೂರಿನಲ್ಲಿ ಕಟ್ಟಿದ ಜೇಡರ ಬಲೆ ಬಿಡಿಸಲು ಧೈರ್ಯ ಇಲ್ಲ. ಮುಟ್ಟಿದರೆ ಎಲ್ಲಿ ಮನೆ ಬೀಳುತ್ತದೋ ಎಂಬ ಭಯ.
ಇಷ್ಟಾದರೂ ಅಲ್ಲೇ ಸಂಸಾರ.
ನರೇಗಲ್‌ನ `ಕೆಲ' ಸಂತ್ರಸ್ತರ ಧೈರ್ಯ. ನೆರೆಯಿಂದ ಹಾನಿಯಾದ ಮನೆ ಬಿಟ್ಟು ದೂರ ಹೋಗಲು ರೆಡಿ ಇಲ್ಲ. `ಏನೋ ಒಂದು ವರ್ಷ ಮಳೆ ಬಂತು. ಪ್ರತಿವರ್ಷ ಬರುತ್ತೇನ್ರೀ' ಎನ್ನುವ `ಕೆಲವರ' ಪ್ರಶ್ನೆಯಲ್ಲಿ  ಧೈರ್ಯ ಇದೆಯೋ, ಭಂಡತನ ಇದೆಯೋ ಗೊತ್ತಿಲ್ಲ. ಬೇರೆ ಊರಿನಲ್ಲಿ ಪುನರ್ವಸತಿ ಬಯಸುವ ಜನರೂ ಈಗ ಸೈಲೆಂಟಾಗಿಬಿಟ್ಟಿದ್ದಾರೆ. ಇವರಿಗೆ `ಕೆಲವರ' ವಿರುದ್ಧ ಮಾತನಾಡುವ ಧೈರ್ಯವಂತೂ ಇಲ್ಲ!
ರಾಯಚೂರಿನ ತುಂಗಭದ್ರಾದ ಜನಕ್ಕೆ ಪುನರ್ವಸತಿ ಕಾಣಲು ಮನಸ್ಸಿದ್ದರೂ ಅವರಿಗೆ ಸೂಕ್ತ ಜಾಗವೇ ಇನ್ನೂ ಸಿಕ್ಕಿಲ್ಲ.

10

ಹರಿದುಹೋದ ಜಿಂಕ್‌ಶೀಟ್‌ ನಡುವೆ ಮಳೆ ನೀರು ಜಿನುಗುತ್ತಿದೆ. ಇರುಳ ಆಕಾಶದಲ್ಲಿ ಚಂದಿರ ಇಲ್ಲ; ಬರಿ ಕರಿಮೋಡ. ಅದರೆ ಶೆಡ್‌ ಒಳಗೆ ಹಸಿ ಹಸಿ ನೆಲದ ಮೇಲೆ ಗೋಣಿ ತಾಟಿನಲ್ಲಿ ಮಲಗಿದ ನವಜೋಡಿ ಚಂದಿರನ ಕಾಣುತ್ತಿದೆ.
ಬದುಕು ಬರಿದಾದರೂ ಬಯಕೆ ಬರಿದಲ್ಲವಲ್ಲ. ಈ ಕಷ್ಟದ ಸಂಕೋಲೆಯ ಶೆಡ್‌ನಲ್ಲಿ  ಎಲ್ಲ ಸಂಭ್ರಮ ನಡೆಯುತ್ತದೆ. ಹಾಡಗೋಳಿ ಕ್ಯಾಂಪಿನಲ್ಲಿ  ಒಂದು ವರ್ಷದಲ್ಲಿ ಮೂರು ಮದುವೆಯಾಗಿದೆ. ಈಗ ಅಲ್ಲಿ   ಎಂಟು ಮಂದಿ ಗರ್ಭಿಣಿಯರು ಇದ್ದಾರೆ. ಈಚೆಗೆ ಮೂರು ಡೆಲಿವರಿಯಾಗಿದೆ. ಬಿ.ಎಸ್‌.ಬೇಲೇರಿ ಕ್ಯಾಂಪ್‌ನಲ್ಲಿ  ಇಬ್ಬರು ಹಸಿ ಬಾಣಂತಿಯರಿದ್ದಾರೆ. ಚೀಕಲಪರ್ವಿಯಲ್ಲಿ  ಮೂವರು ಗರ್ಭಿಣಿಯರಿದ್ದಾರೆ.
ಮಕ್ಕಳು ಪಕ್ಕದ ಮನೆಯ ಡಿಷ್‌ ಟಿವಿ ಮೂಲಕ ಹೊಸ ಲೋಕ ನೋಡುತ್ತಿದ್ದಾರೆ. ಜನ ಬವಣೆ ಮರೆತು ಹೊಸ `ಮನೆ' ಕಟ್ಟುತ್ತಿದ್ದಾರೆ. ಸರ್ಕಾರ ಕೊಟ್ಟಿತೋ, ಬಿಟ್ಟಿತೋ ಜನರ ಮನದಲ್ಲಿ  ಹೊಸ ಹಾದಿ ಹುಡುಕುವ ಛಲ ಇದೆ. ಹಾವು ಕಚ್ಚಿ ಸತ್ತ ತಾಯಪ್ಪನ ಮಗಳು ಟೈಲರಿಂಗ್‌ ಮಾಡುತ್ತಿದ್ದಾಳೆ. ಕಟಕನೂರಿನಿಂದ ಹತ್ತು ಜನ ಬೆಂಗಳೂರಿಗೆ ಕೂಲಿಗೆ ಹೋಗಿದ್ದಾರೆ; ಗಂಡ ಬರುತ್ತಾನೋ ಎಂದು ಕಾಯುತ್ತಿರುವ ಹುಲಿಯಮ್ಮ ಹೆಸರುಕಾಳು ಕೊಯಿಲು ಮಾಡುತ್ತಿದ್ದಾಳೆ...
(August‌ 27ರ ವಿಜಯnext ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)